
ಹಿಂದೂಗಳಲ್ಲಿ ಅಮರನಾಥ ಯಾತ್ರೆಯು ಮಹತ್ವದ್ದಾಗಿದೆ. ಈ ಪ್ರಯಾಣವನ್ನು ತುಂಬಾ ಕಷ್ಟಕರವೆಂದು ಪರಿಗಣಿಸಲಾಗಿದೆಯಾದರೂ, ಶಿವನ ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಅಮರನಾಥ ಯಾತ್ರೆಗೆ ತೆರಳಲು ಬಯಸುತ್ತಾರೆ. ನೀವೂ ಕೂಡಾ ಈ ಬಾರಿ ಅಮರನಾಥ ಯಾತ್ರೆ ಮಾಡಬೇಕೆಂದಿದ್ದರೆ ಇದು ಸೂಕ್ತ ಸಮಯ. ಈಗಲೇ ಸಿದ್ಧತೆಗಳನ್ನು ಆರಂಭಿಸಿ.

46 ದಿನಗಳ ಯಾತ್ರೆ
ಯಾಕೆಂದರೆ ಈ ಬಾರಿಯ ಅಮರನಾಥ ಯಾತ್ರೆಗೆ ನೋಂದಣಿ ಪ್ರಾರಂಭವಾದೆ. ಈ ಪ್ರಯಾಣ ಜುಲೈ 1 ರಂದು ಪ್ರಾರಂಭವಾಗುತ್ತದೆ. ಅಮರನಾಥ ಯಾತ್ರೆ ಪ್ರಯಾಣವು 46 ದಿನಗಳ ಕಾಲ ನಡೆಯಲಿದೆ. ಶ್ರೀ ಅಮರನಾಥ ಕ್ಷೇತ್ರದ ಅಧಿಕಾರಿಗಳ ಪ್ರಕಾರ, ಇಲ್ಲಿಗೆ ಭೇಟಿ ನೀಡಬೇಕಾದರೆ ಪ್ರಯಾಣದ ಪರವಾನಿಗೆ ಅಗತ್ಯವಾಗಿರುತ್ತದೆ. ನಿರ್ದಿಷ್ಟ ದಿನ ಮತ್ತು ಮಾರ್ಗಕ್ಕಾಗಿ ಪರವಾನಿಗೆ ಮಾನ್ಯವಾಗಿರುತ್ತದೆ. ಪರವಾನಗಿ ಇಲ್ಲದೆ ಭೇಟಿ ಸಾಧ್ಯವಿಲ್ಲ. ನೋಂದಣಿ ನಂತರ ಅನುಮತಿಗಳನ್ನು ನೀಡಲಾಗುತ್ತದೆ.

ನೋಂದಣಿ ಆರಂಭ
ಪ್ರಯಾಣದ ನೋಂದಣಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 440 ಶಾಖೆಗಳಲ್ಲಿ, ಜಮ್ಮು-ಕಾಶ್ಮೀರ ಬ್ಯಾಂಕ್ ನಲ್ಲಿ ಮಾಡಬಹುದು. ನೋಂದಾಯಿಸುವಾಗ ಯಾತ್ರಿಕರು ಆರೋಗ್ಯ ಪ್ರಮಾಣಪತ್ರವನ್ನು (CHC) ನೀಡಬೇಕು, ಇದು ಬಹಳ ಮುಖ್ಯ.
ಅಮರನಾಥ ಯಾತ್ರೆಯ ಪ್ರಯಾಣದ ಸಿದ್ಧತೆಗಳನ್ನು ಮುಂಚಿತವಾಗಿ ಪ್ರಾರಂಭಿಸಬೇಕು. ಇದು ಕಠಿಣ ಪ್ರಯಾಣವಾಗಿದ್ದರಿಂದ ಇದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಈಗಲೇ ಪರಿಶೀಲಿಸಬೇಕು.

ಗಮನದಲ್ಲಿಟ್ಟುಕೊಳ್ಳಿ
ಇದು ಕಟ್ಟುನಿಟ್ಟಾಗಿ ಪರ್ವತ ಪ್ರದೇಶದವಾಗಿದ್ದು,ಈ ಮಾರ್ಗದಲ್ಲಿ ಅನೇಕ ನಿಯಮಗಳನ್ನು ಅನುಸರಿಸಬೇಕು. ಹಾಗಾಗಿ ಅಮರನಾಥ ಯಾತ್ರೆಗೆ ಹೋಗುವವರು ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು

ಈ ವಸ್ತುಗಳನ್ನು ಇಟ್ಟುಕೊಳ್ಳಿ
ಇಲ್ಲಿ ಹವಾಮಾನ ಬದಲಾಗುತ್ತಾ ಇರುತ್ತದೆ. ಹಾಗಾಗಿ ರೈನ್ಕೋಟ್, ಜಲನಿರೋಧಕ ಚಾರಣ ಜಾಕೆಟ್, ಬ್ಯಾಟರಿ, ಮಂಕಿ ಕ್ಯಾಪ್, ಕೈಗವಸುಗಳು, ಜಾಕೆಟ್, ಉಣ್ಣೆಯ ಬಟ್ಟೆ, ಜಲನಿರೋಧಕ ಪ್ಯಾಂಟ್, ಇತ್ಯಾದಿಯನ್ನು ಇಟ್ಟುಕೊಳ್ಳಿ. ನಿಮಗೆ ಬೇಕಾಗುವಷ್ಟು ಬಟ್ಟೆಗಳನ್ನು ಇಟ್ಟುಕೊಳ್ಳುವುದರ ಜೊತೆಗೆ ತಲೆಗೆ ಇಲಾಸ್ಟಿಕ್ನ ಸಣ್ಣ ಛತ್ರಿಇಟ್ಟುಕೊಳ್ಳಿ.

ತಿಂಡಿ ತಿನಿಸು ಇರಲಿ
ಮಹಿಳೆಯರಿಗೆ ಅಷ್ಟು ದೂರ ಸೀರೆಯಲ್ಲಿ ನಡೆಯುವುದು ಕಷ್ಟವಾಗುತ್ತದೆ ಹಾಗಾಗಿ ಚೂಡಿದಾರ ಇಲ್ಲವಾದರೆ ಟ್ರ್ಯಾಕ್ ಸೂಟ್ ಧರಿಸಿ, ಇಲ್ಲವಾದಲ್ಲಿ ನಿಮಗೆ ಕಂಫರ್ಟೇಬಲ್ ಇರುವಂತಹ ಬಟ್ಟೆಯನ್ನು ಧರಿಸಿ. ದಾರಿಯಲ್ಲಿ ತಿನ್ನಲು ಬಿಸ್ಕೆಟ್, ತಿಂಡಿ, ಚಿಪ್ಸ್ ಮುಂತಾದ ತಿಂಡಿಗಳು, ನೀರಿನ ಬಾಟಲಿಗಳನ್ನು ಇಟ್ಟುಕೊಳ್ಳಿ.

ನಿಯಮಗಳನ್ನು ಪಾಲಿಸಿ
ಕಟ್ಟುನಿಟ್ಟಾಗಿ ಅಮರನಾಥ ದೇವಸ್ಥಾನದ ಮಂಡಳಿಯ ನಿಯಮದಲ್ಲಿ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸಿ. ನಿಮ್ಮ ತುರ್ತುಸ್ಥಿತಿಗಾಗಿ ಪ್ರಥಮ ಚಿಕಿತ್ಸೆ ಬಾಕ್ಸ್, ಜ್ವರದ ಔಷಧಿಗಳನ್ನು ಇಟ್ಟುಕೊಳ್ಳಿ.

ಅಮರಾವತಿ ನದಿ ಸ್ನಾನ
ಅಮರನಾಥ್ ಗುಹೆಗೆ ಪ್ರವೇಶಿಸುವ ಮೊದಲು, ಭಕ್ತರು ಅಮರಾವತಿ ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದು ದೇವಲೋಕದ ನದಿ ಎಂದು ಪರಿಗಣಿಸಲಾಗುತ್ತದೆ. ಗುಡ್ಡಗಳ ನಡುವೆ ಹರಿಯುವ ಬಿಳಿ ನೀರನ್ನು ಭಕ್ತರು ಶಿವನ ಪ್ರಸಾದ ಎಂದು ತಿಳಿದು ಭಕ್ತರು ತಮ್ಮ ದೇಹದ ಮೇಲೆ ಸಿಂಪಡಿಸುತ್ತಾರೆ. ಇದು ಆರೋಗ್ಯ ವೃದ್ಧಿಸುತ್ತದೆ ಎಂದು ನಂಬಲಾಗುತ್ತದೆ.

ಶಕ್ತಿ ಪೀಠಗಳಲ್ಲಿ ಒಂದು
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅಮರನಾಥ ಧಾಮವು ಶಿವನ ಹನ್ನೆರಡು ಜ್ಯೋತಿರ್ಲಿಂಗಳಲ್ಲಿ ಸೇರಿಸಲಾಗಿಲ್ಲ ಆದರೂ ಪ್ರತಿವರ್ಷ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ತಮ್ಮ ಪ್ರಾಣದ ಹಂಗು ತೊರೆದು ಆಗಮಿಸುತ್ತಾರೆ. ಈ ಗುಹೆಯಲ್ಲೇ ಶಿವನು ಪಾರ್ವತಿಗೆ ಅಮರಳಾಗಿರುವ ವರವನ್ನು ನೀಡಿದ್ದಂತೆ . ಈ ಗುಹೆಯ ಇನ್ನೊಂದು ವಿಶೇಷತೆ ಎಂದರೆ ಇದು ೫೧ ಶಕ್ತಿ ಪೀಠಗಳಲ್ಲಿ ಒಂದಾಗಿದೆ.

ಹಿಮಲಿಂಗ
ಅಮರನಾಥ ಗುಹೆಯಲ್ಲಿ ಶಿವನ ಹಿಮಲಿಂಗದ ಬಳಿಯೇ ಹಿಮದ ಗುಡ್ಡೆಯ ರೂಪದಲ್ಲಿ ಸತಿಯ ದರ್ಶನವೂ ಆಗುತ್ತದೆ. ಇಲ್ಲಿನ ಶಿವಲಿಂಗದ ದರ್ಶನದಿಂದ ಮನುಷ್ಯರಿಗೆ ಮುಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ.