ಜನಪ್ರಿಯವಾಗಿ 'ಬಡವರ ಊಟಿ' ಎಂದು ಕರೆಯಲ್ಪಡುವ ಕರ್ನಾಟಕ ರಾಜ್ಯದ ಹಾಸನವು ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 183 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಇತ್ತೀಚಿನ ಕೆಲಸಮಯದಿಂದ ಈ ನಗರವು ತನ್ನಲ್ಲಿರುವ ಹಾಸನಾಂಬೆಯ ದೇವಸ್ಥಾನದಿಂದಾಗಿ ಖ್ಯಾತಿ ಪಡೆಯುತ್ತಿದೆ. ಅಲ್ಲದೆ, ಈ ನಗರಕ್ಕೆ ಹಾಸನವೆಂಬ ಹೆಸರೂ ಕೂಡ ಇಲ್ಲಿರುವ ಶಕ್ತಿಮಾತೆಯ ಸಂಕೇತವಾದ ಹಾಸನಾಂಬೆಯಿಂದಲೆ ಬಂದಿದುದಾಗಿದೆ. ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ತೆರೆಯುವ ಈ ದೇವಾಲಯವು ಭಕ್ತ ಸಮೂಹದಲ್ಲಿ ಅಪಾರವಾದ ಮಹತ್ವವನ್ನು ಪಡೆದಿದೆ.
ಪ್ರತಿ ವರ್ಷ ಹಿಂದೂ ಕ್ಯಾಲೆಂಡರಿನ ಅನುಸಾರ ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ದೇವಾಲಯದ ಬಾಗಿಲನ್ನು ತೆರೆದು ಬಲಿ ಪಾಡ್ಯಮಿಯ ದಿನದಂದು ಮುಚ್ಚಲಾಗುತ್ತದೆ. ಈ ವರ್ಷದ ಅಂದರೆ 2014 ರ ಹಾಸನಾಂಬೆಯ ಜಾತ್ರೆಯು ಅಕ್ಟೋಬರ್ 16, ಗುರುವಾರದಿಂದ ಪ್ರಾರಂಭವಾಗುತ್ತಿದೆ. ಹಿಂದಿನ ವರ್ಷ ಮುಚ್ಚುವ ದಿನದಲ್ಲಿ ದೇವಿಗೆ ಏರಿಸಲಾದ ಹೂವುಗಳು, ಹಚ್ಚಿಡಲಾದ ದೀಪ ಮುಂದಿನ ವರ್ಷದಲ್ಲಿ ತೆರೆಯುವ ದಿನದವರೆಗೆ ತಾಜಾ ಹಾಗು ಇನ್ನೂ ಊರಿಯುತ್ತಿರುವುದನ್ನು ನೋಡಲು ಜನ ಕಾತುರರಾಗಿರುತ್ತಾರೆ.

ಹಾಸನದ ಹಿಂದಿನ ಸ್ವಾರಸ್ಯಕರ ಕಥೆ:
ಒಂದೊಮ್ಮೆ ಸಪ್ತ ಮಾತೃಕೆಯರಾದ ಬ್ರಾಹ್ಮಿ ದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಹಾಗು ಚಾಮುಂಡಿಯರು ವಾಯು ವಿಹಾರಾರ್ಥ ಚಲಿಸುತ್ತ ಇಲ್ಲಿಗೆ ಬಂದು ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿ ಅವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿಯರು ದೇವಾಲಯದಲ್ಲಿ ಹೂತ್ತದ ರೂಪದಲ್ಲಿಯೂ, ಬ್ರಾಹ್ಮಿ ದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿಯೂ ಹಾಗು ಚಾಮುಂಡಿ, ವರಾಹಿ, ಇಂದ್ರಾಣಿ ದೇವಿಯರು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆ ಹೊಂಡದಲ್ಲಿಯೂ ನೆಲೆಸಿದರು ಎಂದು ಹೇಳುತ್ತದೆ ಇಲ್ಲಿನ ಸ್ಥಳಪುರಾಣ. ಹಾಸನಾಂಬೆ ದೇಗುಲದ ಸ್ಥಳ ಪುರಾಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಕೌತುಕಮಯ ವಿಷಯಗಳು:
ಅತ್ತೆಮನೆ ಸೊಸೆ:
ಪ್ರತಿನಿತ್ಯ ದೇವಿಯ ದರುಶನ ಪಡೆಯಲೆಂದು ಬರುತ್ತಿದ್ದ ಸೊಸೆಯನ್ನು ಒಮ್ಮೆ ಅತ್ತೆಯು ಹಿಂಬಾಲಿಸುತ್ತ ಬಂದು ಅವಳು ದೇವಾಲಯದಲ್ಲಿ ದೇವಿಯ ಭಕ್ತಿ ಮಾಡುತ್ತಿದ್ದುದನ್ನು ಕಂಡು ಕುಪಿತಳಾದಳು. ಮನೆ ಕೆಲಸಕ್ಕಿಂತ ದೇವಿಯ ದರ್ಶನ ಹೇಚ್ಚಾಯಿತೇ ಎಂದು ಅಲ್ಲಿದ್ದ ಒಂದು ಜಡ ವಸ್ತುವಿನಿಂದ ಆಕೆಯ ತಲೆಗೆ ಏಟು ಕೊಟ್ಟಳು. ನೋವನ್ನು ಸಹಿಸಲಾರದೆ ಸೊಸೆಯು ಅಮ್ಮಾ ಹಾಸನಾಂಬೆ ಎಂದು ಕೂಗಿದಾಗ ಸ್ವತಃ ಹಾಸನಾಂಬೆ ದೇವಿಯು, ಆಕೆ ತನ್ನಿಂದ ಎಂದಿಗೂ ದೂರವಾಗಬಾರದೆಂದು ಅನುಗ್ರಹಿಸಿ ಆಕೆಯನ್ನು ಶಿಲೆಯನ್ನಾಗಿ ಪರಿವರ್ತಿಸಿದಳು.
ಪ್ರತಿ ವರ್ಷವು ಒಂದು ಭತ್ತದ ಕಣಜದಷ್ಟು ಚಲಿಸುತ್ತ ದೇವಿಗೆ ಹತ್ತಿರವಾಗುತ್ತಿರುವ ಈ ಶಿಲೆಯು ಯಾವಾಗ ದೇವಿಯ ಪಾದಕ್ಕೆ ಸೇರುವುದೊ ಆವಾಗ ಕಲಿಯುಗದ ಅಂತ್ಯ ಎನ್ನುತ್ತದೆ ಇಲ್ಲಿನ ಪುರಾಣ.

ಕಳ್ಳಪ್ಪನಗುಡಿ:
ಒಂದೊಮ್ಮೆ ದೇವಿ ವಿಗ್ರಹದ ಆಭರಣಗಳನ್ನು ಕದಿಯಲೆಂದು ನಾಲ್ಕು ಜನ ಕಳ್ಳರು ದೇವಾಲಯಕ್ಕೆ ಪ್ರವೇಶಿಸಿದರು. ಇದರಿಂದ ಕುಪಿತಳಾದ ದೇವಿಯು ಅವರಿಗೆ ಶಾಪಕೊಟ್ಟು ಕಲ್ಲುಗಳನ್ನಾಗಿ ಪರಿವರ್ತಿಸಿದಳು. ಅಂದಿನಿಂದ ಇದು ಕಳ್ಳಪ್ಪನಗುಡಿ ಎಂದೆ ಪ್ರಸಿದ್ಧವಾಗಿದೆ.
ಸಿದ್ಧೇಶ್ವರ ದೇವಾಲಯ:
ಹಾಸನಾಂಬೆ ದೇವಾಲಯವನ್ನು ಪ್ರವೇಶಿಸಿದ ತಕ್ಷಣವೆ ಕಾಣುವ ದೇವಾಲಯ ಈ ಸುಂದರ ಸಿದ್ಧೇಶ್ವರ ದೇವಾಲಯ. ಲಿಂಗ ರೂಪದ ಈ ಉದ್ಭವ ಮೂರ್ತಿಯು ಈಶ್ವರನು ಅರ್ಜುನನಿಗೆ ಪಾಶುಪತಾಸ್ತ್ರ ಕೊಡುವ ರೀತಿಯಲ್ಲಿದೆ. ಪ್ರತಿ ಅವಮಾಸ್ಯೆಯಂದು ರಾವಣೋತ್ಸವ ಬಲಿಪಾಡ್ಯಮಿ ಚಂದ್ರ ಮಂಡಲ ರಥೋತ್ಸವವನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯಗಳ ಅಭಿವೃದ್ಧಿಗೆ ಇಲ್ಲಿನ ಪಟೇಲ್ ವಂಶಸ್ಥರ ಕೊಡುಗೆಯು ಅಮೂಲ್ಯವಾದದ್ದು.
ಮಾತೃರೂಪವಾದ ಹಾಸನಾಂಬೆಯ ದರ್ಶನ ಪಡೆದು ನೀವು ಆಕೆಯ ಕೃಪೆಗೆ ಪಾತ್ರರಾಗಿ ಹಾಗು ಹಾಸನಕ್ಕೆ ಪ್ರವಾಸ ಹೊರಡಲು ಯೋಜನೆ ಹಾಕಿಕೊಳ್ಳಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ.

ತಲುಪುವ ಬಗೆ:
ಬೆಂಗಳೂರಿನಿಂದ:
ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣದಿಂದ ಹಾಸನಕ್ಕೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಮಯ :
12:15 13:47 14:31 18:31 20:17 20:30 20:45 22:00 22:33
ರಾಜಹಂಸ ಬಸ್ಸುಗಳು ಹೊರಡುವ ಸಮಯ:
12:05 12:29 13:01 19:00 23:00 23:30
ಹಾಸನದಿಂದ ಬೆಂಗಳೂರಿಗೆ ತೆರಳುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಸಮಯ :
15:40 16:30 18:30 23:30
ರಾಜಹಂಸ ಬಸ್ಸುಗಳು ಹೊರಡುವ ಸಮಯ:
15:25 15:30 16:30
ರೈಲುಗಳು:
ಹಾಸನಕ್ಕಿರುವ ರೈಲು ವೇಳಾಪಟ್ಟಿಯನ್ನು ತಿಳಿಯಲು ಈ ಕೊಂಡಿಯನ್ನು ಕ್ಲಿಕ್ ಮಾಡಿ.


Click it and Unblock the Notifications

















