ಪಂಚಕುಲ ಭಾರತದಲ್ಲಿ ಯೋಜಿತ ರೀತಿಯಲ್ಲಿ ರೂಪಿಸಲಾಗಿರುವ ನಗರಗಳಲ್ಲಿ ಒಂದು ಮತ್ತು ಇದು ಚಂಡೀಗಢದ ಉಪನಗರಗಳಲ್ಲೊಂದು. ಪಂಚಕುಲ ಜಿಲ್ಲೆಯ ಐದು ಜನಗಣತಿ ನಗರಗಳಲ್ಲೊಂದು. ಪಂಚಕುಲವು ಪಂಜಾಬಿನ ಮೊಹಾಲಿಯೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಭಾರತೀಯ ಸೇನೆಯ ಮುಖ್ಯ ಕೇಂದ್ರಕಛೇರಿ ಚಂಡಿಮಂದಿರ ಕಂಟೋನ್ಮೆಂಟ್ ಪಂಚಕುಲದಲ್ಲಿದೆ.
ಪಂಚಕುಲ ಎನ್ನುವ ಹೆಸರು ಇಲ್ಲಿನ ಐದು ನೀರಾವರಿ ಕಾಲುವೆಗಳಿಂದಾಗಿ ಬಂದಿದೆ. ಈ ನಾಲೆಗಳಿಗೆ ನೀರನ್ನು ಘಗ್ಗರ್ ನದಿಯಿಂದ ಹರಿಸಲಾಗುತ್ತದೆ. ಇದರ ಮೂಲಕ ನದಾ ಸಾಹಿಬ್ ಮತ್ತು ಮಾನಸ ದೇವಿ ಪ್ರದೇಶಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಈ ನಾಲೆಗಳು ಸ್ಥಳೀಯರಿಗೆ ಬಹಳ ಅನುಕೂಲಗಳನ್ನು ಮಾಡಿಕೊಟ್ಟಿದೆ ಮತ್ತು ಈ ನಾಲೆಗಳ ನಿರ್ವಹಣೆಯನ್ನು ಹಳ್ಳಿಯವರೇ ಮಾಡುತ್ತಾರೆ.
ಹಿಮಾಚಲ ಪ್ರದೇಶವು ಪಂಚಕುಲದ ಪೂರ್ವ ಮತ್ತು ಉತ್ತರ ಪ್ರದೇಶಗಳನ್ನು ಸುತ್ತುವರೆದಿದೆ, ಪಂಜಾಬ್ ಮತ್ತು ಚಂಡೀಗಢಗಳು ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿದೆ. ಪಂಚಕುಲದಲ್ಲಿ ಘಗ್ಗರ್ ನದಿಯು ಹರಿಯುತ್ತದೆ. ಆದರೆ ಇದು ಮಳೆಗಾಲದಲ್ಲಿ ಮಾತ್ರ ಮೈತುಂಬಿರುತ್ತದೆ. ಅಂತರ್ಜಲ ನೀರಿನ ಮಟ್ಟ ಉತ್ತಮವಾಗಿರುವುದರಿಂದ ಜನರಿಗೆ ದೈನಂದಿನ ಅಗತ್ಯಗಳಿಗೆ ಮತ್ತು ನೀರಾವರಿಗೆ ಅನುಕೂಲಕರವಾಗಿದೆ.
ಚಂಡೀಗಢದ ಪಶ್ಚಿಮಕ್ಕೆ ಪಂಚಕುಲದ ನಗರವಿದೆ. ಈ ಪಟ್ಟಣವು ಹೊಸದಾಗಿ ನಿರ್ಮಾಣಗೊಂಡಿದೆ. ಇದನ್ನು ವಸತಿ ಮತ್ತು ಕೈಗಾರಿಕಾ ಪ್ರದೇಶಗಳು, ಉದ್ಯಾನ ಮತ್ತಿತರ ಮನೋರಂಜನಾ ಸ್ಥಳಗಳು, ಸರಕಾರಿ ಮತ್ತು ಅರೆ ಸರಕಾರಿ ಸಂಸ್ಥೆಗಳೆಂದು ವಿಭಜಿಸಲಾಗಿದೆ. ಪಂಚಕುಲ ನಗರದ ಹಿನ್ನೆಲೆಯಲ್ಲಿ ಶಿವಾಲಿಕ್ ಬೆಟ್ಟಗಳು ಮತ್ತು ಘಗ್ಗರ್ ನದಿಯನ್ನು ಕಾಣಬಹುದಾಗಿದೆ. ಇದು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸಿದೆ. ತೌ ದೇವಿ ಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಗಾಲ್ಫ ಕೋರ್ಸ್ ಮೈದಾನವನ್ನು ಇಲ್ಲಿ ಕಾಣಬಹುದಾಗಿದೆ. ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಅನ್ನು ಐಸಿಎಲ್ ಟೂರ್ನಮೆಂಟ್ಗಾಗಿ ನವೀಕರಿಸಲಾಯಿತು. ಪಿಂಜೋರೆಯ ಕೈಗಾರಿಕಾ ಪ್ರದೇಶದಲ್ಲ್ಲಿ ಹೆಚ್ಎಂಟಿ ಕೈಗಾರಿಕೆಯಿದೆ. ಇಲ್ಲಿಯೇ ಭಾರತ್ ಎಲೆಕ್ಟ್ರಾನಿಕ್ಸ್ ಲಿ., ಕೈಗಾರಿಕೆಯಿದ್ದು ಹಲವರಿಗೆ ಉದ್ಯೋಗವನ್ನು ಒದಗಿಸಿದೆ.
ಪಂಚಕುಲದಲ್ಲಿ ಪಂಜಾಬಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ. ಹರಿಯಾನ್ವಿ ಈ ರಾಜ್ಯದ ರಾಜ್ಯ ಭಾಷೆ. ಇಲ್ಲಿ ಮೆಟ್ರೋ ಮಾರ್ಗವನ್ನು ಜನರ ಅನುಕೂಲಕ್ಕಾಗಿ ಯೋಜಿಸಲಾಗಿದೆ.
ಪಂಚಕುಲದ ಸುತ್ತಮುತ್ತಲ ಪ್ರವಾಸಿ ತಾಣಗಳು
ಪಂಚಕುಲದ ಏಕೈಕ ಗಿರಿಧಾಮ ಮೋರಿನಿ ಬೆಟ್ಟ. ಇದು ಹರಿಯಾಣದ ಎತ್ತರದ ಪ್ರದೇಶ. ಇದು ಶಿವಾಲಿಕ್ ಬೆಟ್ಟಗಳ ಒಂದು ಭಾಗ. ಇಲ್ಲಿ ಮೊಗಲರ ಉದ್ಯಾನದಂತೆ ನವೀರಕರಿಸಲಾದ ಪಿಂಜೊರೆ ಉದ್ಯಾನವಿದೆ. ಇದನ್ನು ಯಾದವಿಂದ್ರ ಉದ್ಯಾನವನ ಎಂದು ಕೂಡ ಕರೆಯುತ್ತಾರೆ. ಪಂಚಕುಲದಿಂದ ಹಿಮಾಚಲ ಪ್ರದೇಶದ ಕಸೌಲಿಗೆ 30 ನಿಮಿಷಗಳ ಹಾದಿ.
ಚಕಿಮೊದ್ನಲ್ಲಿ ವಸಂತ ವೈಭವವನ್ನು ಕಾಣಬಹುದು. ಟಿಂಬರ್ ಟ್ರೈಲ್ನ ಕೇಬಲ್ ಕಾರಿನಲ್ಲಿ ಪಯಣಿಸಿದರೆ ಪಂಚಕುಲ ಮತ್ತು ಚಂಡಿಗಢದ ಅದ್ಭುತ ನೋಟವನ್ನು ನೋಡಬಹುದು. ಇದು ಪ್ರವಾಸಿಗರನ್ನು ಬೆಟ್ಟದ ಮೇಲಕ್ಕೆ ಕರೆದುಕೊಂಡು ಹೋಗುತ್ತದೆ. ಬೆಟ್ಟದ ಮೇಲೆ ಒಂದು ರೆಸಾರ್ಟ್ ಇದೆ. ಇಲ್ಲಿ ಹಲವು ಮನೋರಂಜನಾತ್ಮಕ ಚಟುವಟಿಕೆಗಳಿವೆ. ಘಗರ್ ನದಿ ದಂಡೆಯಲ್ಲಿ ಗುರುದ್ವಾರ ನದಾ ಸಾಹಿಬ್ ಇದೆ. ಇದಕ್ಕೆ ನದಾ ಷಾನಿಂದ ಹೆಸರು ಬಂದಿದೆ. ಈತ ಭಂಗಾನಿ ಯುದ್ಧದಿಂದ ಹಿಂತಿರುಗಿದ ಗುರು ಗೋವಿಂದ ಸಿಂಗರ ಸೇವೆಯನ್ನು ಮಾಡಿದ್ದನಂತೆ. ಮಾನಸ ದೇವಿ ಎನ್ನುವ ಹಿಂದೂ ದೇವಾಲಯವು ಚಂಡಿಗಢದಿಂದ 8 ಕಿಮೀ ದೂರದಲ್ಲಿದೆ. ಇದನ್ನು ಕ್ರಿಶ 1815ರಲ್ಲಿ ನಿರ್ಮಿಸಲಾಗಿದೆ. ಈ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ.
ಇಲ್ಲಿನ ಕ್ಯಾಕ್ಟಸ್ ಉದ್ಯಾನವು ಏಷ್ಯಾದಲ್ಲೇ ಅತಿ ದೊಡ್ಡದಾದು. ಇಲ್ಲಿ ಹಲವು ಅಪರೂಪದ ತಳಿಗಳನ್ನು ಕಾಣಬಹುದಾಗಿದೆ. 360 ವರ್ಷಗಳ ಹಿಂದೆ ಚಂಡೆಲ ಆಳ್ವಕೆದಾರರಿಂದ ಆಳಲ್ಪಟ್ಟ ರಾಮಗಢ ಕೋಟೆಯು ಇಲ್ಲಿದೆ. ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ ಹಲವು ದೇವಾಲಯಗಳಿವೆ.
ಚಂಡಿ ಮಂದಿರವು ಮಾನಸ ದೇವಿ ದೇವಾಲಯದಿಂದ 10 ಕಿಮೀ ದೂರದಲ್ಲಿದೆ. ಚಂಡೀಗಢಕ್ಕೆ ಆ ಹೆಸರು ಬರಲು ಕಾರಣ ಈ ದೇವಾಲಯ. ಇದು ರಾಷ್ಟ್ರೀಯ ಹೆದ್ದಾರಿ 22ರಲ್ಲಿದೆ. ಪಿಂಜೋರೆಯಲ್ಲಿ ಪಾಳುಬಿದ್ದ ಭೀಮಾ ದೇವಿ ದೇವಾಲಯವಿದೆ. ಇದು ಕೂಡ ಶಿವಾಲಿಕ ಬೆಟ್ಟದ ತಪ್ಪಲಿನಲ್ಲಿದೆ. ಪುರಾತತ್ವ ಇಲಾಖೆಯ ಪ್ರಕಾರ ಈ ದೇವಾಲಯವು 11ನೆಯ ಶತಮಾನಕ್ಕೆ ಸೇರಿದ್ದು ಇದು ಪಂಚಾಯತನ ಶೈಲಿಯನ್ನು ಹೋಲುತ್ತದೆ.
ಪ್ರವಾಸಕ್ಕೆ ಸೂಕ್ತ ಸಮಯ
ಪಂಚಕುಲದಲ್ಲಿ ಉಪೋಷ್ಣವಲಯದ ಹವಾಮಾನವಿರುತ್ತದೆ. ಇಲ್ಲಿ ಬೇಸಿಗೆಗಳು ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಚಳಿಗಾಲಗಳು ತಂಪಾಗಿ ಮತ್ತು ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಅಕ್ಟೋಬರ್-ನವಂಬರ್ ಪಂಚಕುಲಕ್ಕೆ ಭೇಟಿ ನೀಡಲು ಉತ್ತಮ ಸಮಯ.
ತಲುಪುವುದು ಹೇಗೆ?
ಪಂಚಕುಲವು ಉತ್ತಮ ರಸ್ತೆ ಮತ್ತು ರೈಲು ಸೌಲಭ್ಯವನ್ನು ಹೊಂದಿದೆ. ಚಂಡಿಗಢ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವನ್ನು ಹೊಂದಿದೆ.