ಪಂಚಕುಲದ ಹಿಂದೂ ಯಾತ್ರಾ ಸ್ಥಳಗಳಲ್ಲಿ ಮಾನಸ ದೇವಿ ದೇವಾಲಯವು ಒಂದು. ಇದು ಮಾನಸ ದೇವಿ ಅಥವ ಶಕ್ತಿಗೆ ಸೇರಿದ್ದು. ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ 100 ಎಕರೆ ಪ್ರದೇಶದಲ್ಲಿ ಈ ದೇವಾಲಯವಿದೆ. ಭಕ್ತರು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಮುಖ್ಯವಾಗಿ ನವರಾತ್ರಿ ಸಮಯದಲ್ಲಿ ಭೇಟಿ ನೀಡುತ್ತಾರೆ.
ಈ ದೇವಾಲಯವನ್ನು ಮಹಾರಾಜ ಗಪ್ಲಾ ಸಿಂಗ್ 1811-1815ರಲ್ಲಿ ಕಟ್ಟಿಸಿದ. ಇದು ಹಿಮಾಲಯದ ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕವಾಗಿದೆ. ಹಿಮಾಲಯವನ್ನು ಶಿವ ಮತ್ತು ಶಕ್ತಿಯ ಆವಾಸ ಸ್ಥಾನವೆಂದು ಹೇಳಲಾಗುತ್ತದೆ. ಈ ದೇವಾಲಯವನ್ನು ಹೊರತು ಪಡಿಸಿ ಪಂಚಕುಲದ ಸುತ್ತ ಇನ್ನೂ ಹಲವು ದೇವಾಲಯಗಳಲ್ಲಿ ಶಕ್ತಿ ದೇವತೆಯನ್ನು ಪೂಜಿಸಲಾಗುತ್ತದೆ. ಈ ಭಾಗದಲ್ಲಿ ಸಿಕ್ಕಿರುವ ಪುರಾತತ್ವ ಅವಶೆಷಗಳು ಕ್ರಿ.ಪೂದಲ್ಲಿದ್ದ ಜನರ ಸಂಪ್ರದಾಯ ಮತ್ತು ಸಂಸ್ಕೃತಿಗಳನ್ನು ತೋರಿಸುತ್ತದೆ. ಭಾರತದ ಈ ಭಾಗದಲ್ಲಿ ಶಕ್ತಿಪಂಥಕ್ಕೆ ಸೇರಿದವರು ಆ ಪಂಥದ ಆರಾಧಕರನ್ನು ಕಾಣಬಹುದಾಗಿದೆ. ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುವಂತಹವಳು ಎಂದೇ ಮಾನಸ ದೇವಿಯು ಪ್ರಸಿದ್ಧಳಾಗಿದ್ದಾಳೆ.
ನವರಾತ್ರಿಯನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆ ಒಂಭತ್ತು ದಿನಗಳ ಕಾಲ ಭಕ್ತಾದಿಗಳು ಇಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆಯುತ್ತಾರೆ. ಈ ಸಮಯದಲ್ಲಿ ಹರಿಯಾಣ ಪ್ರವಸೋದ್ಯಮವು ಜಟಾಯು ಎನ್ನುವ ಯಾತ್ರಿಕವನ್ನು ಆಯೋಜಿಸುತ್ತದೆ. ಶರದಿಯ ನವರಾತ್ರಿ ಮೇಳವು ಆಶ್ವಿಜ ಮತ್ತು ಚೈತ್ರ ಮಾಸಗಳಲ್ಲಿ ನಡೆಯುತ್ತದೆ.
ನವರಾತ್ರಿ ಸಮಯದಲ್ಲಿ ವಸತಿ ಮತ್ತಿತರ ವ್ಯವಸ್ಥೆಗಳನ್ನು ದೇವಾಲಯದ ಟ್ರಸ್ಟ್ ವತಿಯಿಂದಲೇ ಮಾಡಲಾಗುತ್ತದೆ. ಟೆಂಟುಗಳು, ಹೊದಿಕೆಗಳು, ತಾತ್ಕಾಲಿಕ ಶೌಚಾಲಯಗಳು, ಸ್ನಾನಗೃಹಗಳನ್ನು ನಿರ್ಮಿಸಲಾಗುತ್ತದೆ. ಮೇಳಕ್ಕಾಗಿಯೇ ವಿಶೇಷ ಪೋಲಿಸ್ ವ್ಯವಸ್ಥೆ ಮತ್ತು ವಿಶೇಷ ಲೈನ್ ವ್ಯವಸ್ಥೆಗಳನ್ನು ಕೂಡ ಮಾಡಲಾಗುತ್ತದೆ. ಭಕ್ತಾದಿಗಳಿಗೆ ತೊಂದರೆಯಾಗದಂತೆ ಕಟ್ಟೆಚ್ಚರವನ್ನು ವಹಿಸಲಾಗುತ್ತದೆ.
ಈ ದೇವಾಲಯಕ್ಕೆ ಪುರಾತತ್ವ ಮತ್ತು ಪೌರಾಣಿಕ ಮಹತ್ವವಿರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಇವರುಗಳ ಅನುಕೂಲಕ್ಕಾಗಿ ಹರಿಯಾಣ ಸರ್ಕಾರವು ದೇವಾಲಯದಲ್ಲಿನ ಮೂಲಭೂತ ಸೌಕರ್ಯಗಳು, ನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಸುತ್ತಲ ಭೂಮಿ ಮತ್ತು ಕಟ್ಟಡಗಳನ್ನು ಕೂಡ ಈ ನಿಟ್ಟಿನಲ್ಲಿ ಗಮನಿಸಲಾಗಿದೆ. ಇದನ್ನು ಈ ಪ್ರದೇಶದ ಮುಖ್ಯ ಸಾಂಸ್ಕೃತಿಕ ಸ್ಥಳವೆಂದೇ ಗುರುತಿಸಿ ಕಾಪಾಡಲಾಗಿದೆ.
ಈ ದೇವಾಲಯವನ್ನು 38 ಗೋಡೆ ಚಿತ್ರಗಳಿಂದ ಅಲಂಕರಿಸಲಾಗಿದೆ. ಕಮಾನುಗಳು ಮತ್ತು ಛಾವಣಿಯನ್ನು ಹೂವಿನ ವಿನ್ಯಾಸಗಳಿಂದ ಅಲಂಕರಿಸಲಾಗಿದೆ. ಅವು ಹೆಚ್ಚು ಕಲಾತ್ಮಕವಾಗಿ ಇಲ್ಲವಾದರೂ ವಿವಿಧ ವಸ್ತುವಿಷಯಗಳನ್ನು ಬಿಂಬಿಸುತ್ತವೆ. ಮುಖ್ಯ ದೇವಾಲಯದ ವಾಸ್ತುವಿನ್ಯಾಸವು ಮೊಗಲ್ ವಾಸ್ತುಕಲೆಯನ್ನು ಹೋಲುತ್ತದೆ. ಇಲ್ಲಿ ಗುಮ್ಮಟಗಳು ಮತ್ತು ಸ್ತಂಭಗೋಪುರಗಳನ್ನು ಕಾಣಬಹುದು.
ಚಂಡಿಗಢದಿಂದ ಈ ದೇವಾಲಯವು 10 ಕಿಮೀ ದೂರದಲ್ಲಿದೆ ಮತ್ತು ಪಂಚಕುಲದಿಂದ 4ಕಿಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ಸ್ಥಳೀಯ ಬಸ್ಸುಗಳು ಮತ್ತು ಆಟೋಗಳು ಸಿಗುತ್ತವೆ. ನವರಾತ್ರಿಯ ಸಮಯದಲ್ಲಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರೈಲು ಅಥವ ವಿಮಾನದ ಮೂಲಕ ಪ್ರಯಾಣಿಸುವವರು ಚಂಡಿಗಢಕ್ಕೆ ಬಂದು ಅಲ್ಲಿಂದ ಈ ದೇವಾಲಯಕ್ಕೆ ಹೋಗಬಹುದು.