ಆಂಧ್ರಪ್ರದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಿ ನೆಲ್ಲೂರು. ಇನ್ನೊಂದು ಸತ್ಯವೆಂದರೆ ರಾಜ್ಯದ ಜನಪ್ರಿಯ ನಗರಗಳ ಪೈಕಿ ಇದಕ್ಕೆ ಆರನೇ ಸ್ಥಾನ ಇದೆ. ಪೊಟ್ಟಿ ಶ್ರೀರಾಮುಲು ನೆಲ್ಲೂರು ಜಿಲ್ಲಾ ಕೇಂದ್ರವೂ ಹೌದು. ಜಿಲ್ಲೆಯ ಹೆಸರೂ ಇದೇ ಆಗಿದೆ. ಇಲ್ಲಿ ಸಾಕಷ್ಟು ಜನಪ್ರಿಯ ದೇವಾಲಯಗಳಿವೆ. ಅಲ್ಲದೇ ಇದು ಪ್ರಮುಖ ವ್ಯವಸಾಯ ಕೇಂದ್ರವೂ ಹೌದು. ಪೆನ್ನಾ ನದಿ ದಡದಲ್ಲಿ ನೆಲ್ಲೂರು ಜಿಲ್ಲೆ ಇದೆ. ಈ ಭಾಗದಲ್ಲಿ ಹಲವು ಬಗೆಯ ಬೆಳೆಯನ್ನು ಬೆಳೆಯಲಾಗುತ್ತದೆ. ಇದೊಂದು ವಾಣಿಜ್ಯ ಹಾಗೂ ವ್ಯಾಪಾರ ಚಟುವಟಿಕೆಯ ತಾಣ ಎಂದರೂ ತಪ್ಪಾಗಲಾರದು. ವಿಶೇಷ ಎಂದರೆ ಇದು ವಿಜಯವಾಡಾ ಹಾಗೂ ತಮಿಳುನಾಡಿನ ರಾಜಧಾನಿ ಚೆನ್ನೈ ಅನ್ನು ಸಂಪರ್ಕಿಸುವ ಹೆದ್ದಾರಿಗೆ ಹೊಂದಿಕೊಂಡೇ ಇದೆ. ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಸರ್ವತೋಮುಖ ಪ್ರಗತಿಗೆ ನೆಲ್ಲೂರು ಜಿಲ್ಲೆಯ ಕೊಡುಗೆ ಅಪಾರವಾಗಿದೆ. ನೆಲ್ಲೂರು ಭಾಗ ಈ ಹಿಂದೆ ಸಾಕಷ್ಟು ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಅತಿ ಪುರಾತನ ಮಾಹಿತಿ ಕಲೆ ಹಾಕಿದಾಗ ಈ ಪ್ರದೇಶ ಮೌರ್ಯ ರಾಜರ ಅಧಿನದಲ್ಲಿತ್ತು ಎಂದು ತಿಳಿದುಬರುತ್ತದೆ. ಇದು ಅಶೋಕನ ದಂಡಯಾತ್ರೆ ಸಂದರ್ಭ ಅಂದರೆ ಮೂರನೇ ಶತಮಾನದ ಹೊತ್ತಿಗೆ ಅನ್ನುವುದು ಗಮನಾರ್ಹ. ಪಲ್ಲವರು, ತೆಲುಗು ಚೋಳರು, ಶಾತವಾಹನರು ಹಾಗೂ ಇತರೆ ಆಡಳಿತ ನಡೆಸಿದವರ ಅಧಿನದಲ್ಲಿ ಜಿಲ್ಲೆ ಇತ್ತು. ಇವರು ಇಲ್ಲಿ ಆಳ್ವಿಕೆ ನಡೆಸಿದ್ದರು ಎಂಬುದನ್ನು ತೋರಿಸುವ ಹಾಗೂ ಅವರ ಪ್ರಭಾವವನ್ನು ಬಿಂಬಿಸುವ ಅನೇಕ ದೇಗುಲಗಳು ಇಲ್ಲಿವೆ. ಇದರೊಂದಿಗೆ ಈ ಭಾಗವು ವ್ಯವಸಾಯ ಹಾಗೂ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲೂ ಇದು ರಕ್ಷಿಸಲ್ಪಟ್ಟಿತ್ತು.
ಹೆಸರಿನ ಹಿಂದಿರುವ ಸತ್ಯ
ಬ್ರಿಟಿಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ನೆಲ್ಲೂರು ಅತ್ಯಂತ ಶಕ್ತಿಶಾಲಿ ಹಾಗೂ ಶಾಂತ ತಾಣವಾಗಿ ಬಿಂಬಿತವಾಗಿತ್ತು. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಪ್ರದೇಶ ಪ್ರಮುಖ ರಾಜಕೀಯ ಬದಲಾವಣೆಯ ಕೇಂದ್ರವಾಗಿ ಜನಪ್ರಿಯವಾಗಿತ್ತು. 1953ರ ಅಕ್ಟೋಬರ್ 1ರವರೆಗೂ ಇದು ಮದ್ರಾಸ್ ರಾಜ್ಯದ ಅಧಿನದಲ್ಲಿತ್ತು. ಆದರೆ ನಂತರ ಅಂದರೆ 1956 ರ ನವೆಂಬರ್ 1 ರಂದು ಇದು ಆಂಧ್ರಪ್ರದೇಶ ರಾಜ್ಯಕ್ಕೆ ಸೇರ್ಪಡೆ ಆಯಿತು. ಆಂಧ್ರಪ್ರದೇಶ ರಾಜ್ಯದ ಪ್ರಗತಿಯಲ್ಲಿ ನೆಲ್ಲೂರಿನ ಕೊಡುಗೆ ಅಪಾರವಾಗಿದೆ. ಸ್ವಾತಂತ್ರ್ಯ ಕಹಳೆ ಮೂಡಿಸಿದ ಈ ತಾಣ ತೆಲುಗು ಮೂಲದ ವ್ಯಕ್ತಿ ಹಾಗೂ ದೇಶಭಕ್ತ ಪೊಟ್ಟಿ ಶ್ರೀರಾಮುಲು ಅವರಿಂದ ಮೂಲ ರೂಪ ಪಡೆದಿದೆ. ಇವರಿಂದಲೇ ಈ ರೂಪವನ್ನು ನೆಲ್ಲೂರು ಪಡೆದಿದ್ದು, ಅವರ ಹೆಸರಿನಿಂದಲೇ ಗುರುತಿಸಲಾಗಿದೆ.
ಜನಪ್ರಿಯ ತಾಣ ಹಾಗೂ ಸುತ್ತಮುತ್ತ
ಶ್ರೀ ರಂಗನಾಥಸ್ವಾಮಿ ದೇವಾಲಯ ಇಲ್ಲಿನ ಅತ್ಯಂತ ಜನಪ್ರಿಯ ಹಾಗೂ ಮುಖ್ಯ ಆಕರ್ಷಣೆಯ ಕೇಂದ್ರ. ಇದು ಕೂಡ ನಗರ ವ್ಯಾಪ್ತಿಯಲ್ಲಿಯೇ ಇದೆ. ಸರಿಸುಮಾರು 600 ವರ್ಷ ಹಳೆಯದಾದ ದೇವಾಲಯ ಇದು ಎನ್ನುವುದು ಇನ್ನೊಂದು ವಿಶೇಷ. ಅತ್ಯಂತ ಜನಪ್ರಿಯ ಹಾಗೂ ಅತಿ ಸುಲಭವಾಗಿ ದೇವಾಲಯವನ್ನು ಪತ್ತೆಹಚ್ಚಲು ಅನುಕೂಲವಾಗುವ ಗುರುತು 70 ಅಡಿ ಎತ್ತರವಾದ ಗಾಳಿಗೋಪುರ. ಇದು ವಿಂಡ್ ಟವರ್ ಎಂಬ ಶಬ್ಧದ ಅರ್ಥವನ್ನು ನೀಡುತ್ತದೆ. ಗಾಳಿ ಗೋಪುರದ ಮೇಲೆ ಇರುವ 10 ಚಿನ್ನದ ಲೇಪನ ಒಳಗೊಂಡ ಕಲಶಗಳು ಅತ್ಯಾಕರ್ಷಕವಾಗಿವೆ. ನೋಡುಗರಲ್ಲಿ ದೇವಾಲಯದ ಬಗ್ಗೆ ಹೆಮ್ಮೆ ಹೆಚ್ಚಿಸುವ ಜತೆಗೆ ಹರ್ಷವನ್ನು ಉಂಟು ಮಾಡುತ್ತವೆ. ನೆಲ್ಲೂರು ಸಾಕಷ್ಟು ನೈಸಗರ್ಗಿಕ ಸಂಪತ್ತನ್ನೂ ಕೂಡ ಒಳಗೊಂಡಿದೆ. ಇದರಲ್ಲಿ ಮುಖ್ಯವಾದವೆಂದರೆ ಮೈಪಾಡು ಕಡಲತೀರ ಹಾಗೂ ಪುಲಿಕಟ್ ಕೆರೆ ಮುಖ್ಯವಾದುದು. ಇದರ ಜತೆ ನೆಲಪಾಡು ಪಕ್ಷಿಧಾಮಕ್ಕೂ ಸಮೀಪದಲ್ಲಿದೆ. ಇಲ್ಲಿ ಸಾಕಷ್ಟು ವಿಧದ ಅಪರೂಪದ ಪಕ್ಷಿ ಸಂಕುಲಗಳನ್ನು ಕಾಣಬಹುದು. ಐತಿಹಾಸಿಕ ಪ್ರಸಿದ್ಧ ಹಾಗೂ ಜನಪ್ರಿಯವಾಗಿರುವ ಅನೇಕ ದೇವಾಲಯಗಳು ಈ ವ್ಯಾಪ್ತಿಯಲ್ಲಿರುವುದು ಇನ್ನೊಂದು ವಿಶೇಷ. ನರಸಿಂಹಸ್ವಾಮಿ ದೇವಾಲಯ ಇದರಲ್ಲಿ ಒಂದು. ನಗರ ಕೇಂದ್ರದಿಂದ ಕೇವಲ 13 ಕಿ.ಮೀ. ದೂರದಲ್ಲಿದೆ. ಇದಲ್ಲದೇ ಇನ್ನೂ ಅನೇಕ ದೇವಾಲಯಗಳು ಇಲ್ಲಿ ಗಮನ ಸೆಳೆಯುತ್ತವೆ. ಅಪಾರ ಸಂಖ್ಯೆಯ ಭಕ್ತರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ನೆಲ್ಲೂರಿಗೆ ಸಮೀಪದಲ್ಲಿರುವ ಇನ್ನೊಂದು ತಾಣ ಸೋಮಶಿಲಾ. ಇದು ಪಿಕ್ನಿಕ್ಗೆ ತೆರಳುವವರಿಗೆ ಸೂಕ್ತ ಸ್ಥಳ. ಇದು ಅತ್ಯಂತ ಶಾಂತ ಹಾಗೂ ತೀರ ಪ್ರದೇಶವಾಗಿದೆ. ನೋಡಿ ಬಂದ ಬಹು ಸಮಯದವರೆಗೆ ಮನಸ್ಸಿನಲ್ಲಿ ಉಳಿದುಕೊಳ್ಳುವ ಸುಂದರ ಸ್ಥಳ. ನೆಲ್ಲೂರು ಸುತ್ತಲಿನ ನಾನಾ ಭಾಗಗಳಲ್ಲಿ ವಾತಾವರಣ ವಿಚಿತ್ರವಾಗಿ ಇರುತ್ತದೆ. ಸಾಮಾನ್ಯವಾಗಿ ಇದು ವರ್ಷವಿಡೀ ಗಮನಿಸಿದಾಗ ಬಿಸಿ ಹಾಗೂ ತೇವಾಂಶಭರಿತವಾಗಿ ಇರುತ್ತದೆ. ತಾಪಮಾನ ಅತಿ ಹೆಚ್ಚು ಅಂದರೆ 41 ಡಿಗ್ರಿ ಸೆಲ್ಶಿಯಸ್ವರೆಗೂ ತಲುಪುತ್ತದೆ. ಇದು ಮೇ ತಿಂಗಳಲ್ಲಿ ಅನ್ನುವುದು ಗಮನದಲ್ಲಿರಲಿ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬಿಸಿ ಗಾಳಿ ವಿಪರೀತ ಇರುತ್ತದೆ. ಚಳಿಗಾಲ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ. ಪಕ್ಕದ ರಾಜ್ಯ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಕೊಂಚ ಸಮೀಪವೇ ಇದೆ. ಇಲ್ಲಿಂದ ಚೆನ್ನೈ 200 ಕಿ.ಮೀ. ದೂರ ಅಷ್ಟೆ. ನೆಲ್ಲೂರಿನಿಂದ ಹೈದ್ರಾಬಾದ್ ಸುಮಾರು 450 ಕಿ.ಮೀ. ದೂರ ಆಗುತ್ತದೆ.