ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ಪುಣ್ಯಭೂಮಿ ನಮ್ಮ ಭಾರತ. ವೈವಿಧ್ಯತೆಯೇ ಭಾರತದ ವಿಶೇಷತೆ. ನಮ್ಮ ದೇಶದಲ್ಲಿನ ಪ್ರತಿಯೊಂದು ರಾಜ್ಯಗಳು ಕೂಡಾ ಭಿನ್ನ ವಿಭಿನ್ನವಾದ ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಹೊಂದಿದೆ. ಪ್ರತಿ ರಾಜ್ಯದಲ್ಲೂ ಕಂಡುಬರುವಂತಹ ಆಚರಣೆಗಳು, ಜೀವನ ಶೈಲಿ ಒಂದಕ್ಕೊಂದು ಭಿನ್ನವಾಗಿವೆ.
ಈ ಎಲ್ಲಾ ರಾಜ್ಯಗಳ, ಪ್ರದೇಶಗಳ ವೈವಿಧ್ಯತೆಗಳು ಮಿಶ್ರವಾಗಿ, ಭಾರತವನ್ನು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವನ್ನಾಗಿ ಮಾರ್ಪಡಿಸಿದೆ. ಭಾರತದ ಪ್ರತಿಯೊಂದು ರಾಜ್ಯಗಳು ಕೂಡಾ ಒಂದಲ್ಲ ಒಂದು ರೀತಿಯಲ್ಲಿ ದೇಶದ ಪಾಕೃತಿಕ, ನೈಸರ್ಗಿಕ ಸಂಪತ್ತಿಗೆ ಕೊಡುಗೆಗಳನ್ನು ನೀಡುತ್ತಾ ಬಂದಿವೆ. ಇಂತಹ ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸ್ಗಢ ಕೂಡಾ ಒಂದು.
ಹೌದು, ಭಾರತದಲ್ಲಿರುವ ರಾಜ್ಯಗಳ ಪೈಕಿ ಛತ್ತೀಸ್ಗಢವೂ ಒಂದು. ಛತ್ತೀಸ್ಗಢದಲ್ಲಿ ಅನೇಕ ಪ್ರವಾಸಿ, ಯಾತ್ರಾ ಸ್ಥಳಗಳಿವೆ. ಇವುಗಳ ಪೈಕಿ ’ದುರ್ಗ್’ ಕೂಡಾ ಒಂದು. ಇದು ಛತ್ತೀಸ್ಗಢದ ಪ್ರಮುಖ ನಗರಗಳ ಪೈಕಿ ಅಗ್ರಸ್ಥಾನದಲ್ಲಿದೆ. ಛತ್ತೀಸ್ಗಢದ ಮೂರನೇ ದೊಡ್ಡ ನಗರ ಎನ್ನುವ ಹೆಗ್ಗಳಿಕೆ ’ದುರ್ಗ್’ನದ್ದು. ಇದು ಈ ರಾಜ್ಯದ ಪ್ರಮುಖ ಕೃಷಿ ಮತ್ತು ಕೈಗಾರಿಕಾ ಕೇಂದ್ರ ಕೂಡಾ ಹೌದು. ಬಹಳಷ್ಟು ಪ್ರಮಾಣದ ಜನಸಂಖ್ಯೆಯನ್ನು ಕೂಡಾ ಇದು ಹೊಂದಿದ್ದು, ಅಪಾರ ಪ್ರಮಾಣದ ಖನಿಜ ಸಂಪತ್ತನ್ನು ಕೂಡಾ ತನ್ನ ಒಡಲಲ್ಲಿ ಹೊಂದಿದೆ.
ಭೌಗೋಳಿಕ ಹಿನ್ನೆಲೆ
ದುರ್ಗ್ ನಗರವು ಜಿಲ್ಲೆಯಲ್ಲಿ ಹರಿಯುತ್ತಿರುವ ಪ್ರಮುಖ ನದಿಯಾದ ಶಿವನಾಥ್ ನದಿಯ ಪೂರ್ವ ಭಾಗದಲ್ಲಿದೆ. ಶಿವನಾಥ್ -ಮಹಾನದಿ ಕಣಿವೆಯ ದಕ್ಷಿಣ ಭಾಗದಲ್ಲಿರುವ ಈ ದುರ್ಗ್ ಪ್ರದೇಶವನ್ನು ಭೌಗೋಳಿಕವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು.
ಸಿ.ಜಿ ಬಯಲುಸೀಮೆ ಮತ್ತು ದಕ್ಷಿಣ ಪ್ರಸ್ಥಭೂಮಿ ಎಂಬ ಎರಡು ವಿಧದಲ್ಲಿ ದುರ್ಗ್ ವಿಭಾಗಿಸಲ್ಪಟ್ಟಿದೆ. ಇನ್ನು ಇಲ್ಲಿ ಹರಿಯುತ್ತಿರುವ ಪ್ರಮುಖ ನದಿಯಾದ ಶಿವನಾಥ್ ಅಥವಾ ಶಿಯೋನಾಥ್ ನದಿಯು ಮಹಾನದಿಯ ಉಪನದಿಯಾಗಿದೆ. ಈ ನದಿಯು ಸುಮಾರು 345 ಕಿ.ಮೀ ಉದ್ದವನ್ನು ಹೊಂದಿದ್ದು, ಈ ನದಿಗೂ ತಾಂಡುಲಾ ಎನ್ನುವ ಉಪನದಿಯಿದೆ. ಇವೆರಡು ಅಲ್ಲದೆ ಖಾರ್ಖರಾ ಎನ್ನುವ ಮತ್ತೊಂದು ನದಿ ಕೂಡಾ ದುರ್ಗ್ನಲ್ಲಿ ಹರಿಯುತ್ತಿದೆ.
ಇತಿಹಾಸ
ಇತಿಹಾಸದ ಪ್ರಕಾರ ದುರ್ಗ್ ಜಿಲ್ಲೆಯು ಹಿಂದೆ ದಕ್ಷಿಣ ಅಥವಾ ಕೋಸಲ ರಾಜ್ಯದ ಭಾಗವಾಗಿತ್ತು. ಅಶೋಕ ಮಹಾರಾಜನ ಆಳ್ವಿಕೆಗೆ ಒಳಪಟ್ಟ ಕುರಿತು ಕೂಡಾ ಸಾಕ್ಷ್ಯಗಳು ಲಭ್ಯವಾಗಿವೆ. ಬಳಿಕ ಮರಾಠರ ಆಳ್ವಿಕೆಗೆ ಬಂದ ಈ ಪ್ರದೇಶವು ಬಳಿಕ ಬ್ರಿಟೀಷ್ ಆಳ್ವಿಕೆಗೆ ಒಳಪಟ್ಟಿತು. ಬಳಿಕ ಸುಮಾರು 1906 ರ ಸುಮಾರಿಗೆ ಈ ಪ್ರದೇಶವು ಬೇರ್ಪಟ್ಟು, ಒಂದು ಜಿಲ್ಲೆಯಾಗಿ ರೂಪುಗೊಂಡಿತು. ಇದೀಗ ಸಂಪೂರ್ಣವಾಗಿ ಬೆಳೆದ ದುರ್ಗ್ 2001 ರ ಜನಗಣತಿಯ ಪ್ರಕಾರ ಸುಮಾರು 2,31,182 ಜನಸಂಖ್ಯೆಯನ್ನು ಹೊಂದಿದೆ.
ಸಂಸ್ಕೃತಿ
ಇಲ್ಲಿನ ಸಂಸ್ಕೃತಿ ಬಹಳ ಶ್ರೀಮಂತವಾಗಿದೆ. ಪರಂಪರಾಗತವಾಗಿ ಬಂದ ಸಂಸ್ಕೃತಿಯು ಬಹಳ ವಿಭಿನ್ನ, ವಿಶಿಷ್ಟತೆಯನ್ನು ಹೊಂದಿದೆ. ಸುಮಾರು ೩೫ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳು ಈ ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಹಲವು ಬಗೆಯ ಸಂಸ್ಕೃತಿಯನ್ನು ತಮ್ಮಲ್ಲಿ ಹುದುಗಿಸಿಕೊಂಡಿವೆ. ಜಾನಪದ ನೃತ್ಯ, ಸಂಗೀತ ಮತ್ತು ನಾಟಕ ಹೀಗೆ ಹತ್ತು ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು, ಆಚರಣೆಗಳನ್ನು ಕೂಡಾ ಹೊಂದಿದೆ.
ಇನ್ನು ಇಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಹೇಳುವುದಾದರೆ ಬಹಳ ಹೆಸರುವಾಸಿಯಾದ ನೃತ್ಯಪ್ರಕಾರವೊಂದು ಇಲ್ಲಿ ಕಂಡುಬರುತ್ತದೆ. ಅದುವೇ ಪಂದ್ವಾಣಿ. ಇದು ಒಂದು ಪ್ರಕಾರದ ಜಾನಪದ ಹಾಡಾಗಿದ್ದು, ಮಹಾಭಾರತದ ಕತೆಯನ್ನು ಬಹಳ ಸೂಚ್ಯವಾಗಿ ತಿಳಿಸುತ್ತವೆ. ಹೆಚ್ಚಾಗಿ ಮಹಾಭಾರತ ಕಾಲದ ಪಾಂಡವರ ಕತೆಗಳನ್ನೇ ಈ ಪಂದ್ವಾಣಿಯ ಮೂಲಕ ಹೇಳಲಾಗುತ್ತದೆ. ಈ ಕಲಾ ಪ್ರಕಾರದಲ್ಲಿ ಹಾಡುಗಾರರು ಹಾಡನ್ನು ಹಾಡುತ್ತಾ, ಕುಣಿದು, ಅಭಿನಯಿಸುತ್ತಾರೆ.
ಇಲ್ಲಿ ಕಂಡುಬರುವ ಇನ್ನೊಂದು ನೃತ್ಯ ಪ್ರಕಾರವೆಂದರೆ ರಾವುತ್ ನಾಚಾ. ಇದು ಇನ್ನೊಂದು ಬಗೆಯ ಜಾನಪದ ಕಲೆಯಾಗಿದ್ದು, ಯಾದವರೆಂದು ಕರೆಯಲ್ಪಡುವ ಕುರುಬರು ಹಾಗೂ ಗೊಲ್ಲರಲ್ಲಿ ಕಂಡುಬರುವಂತಹ ಭಗವಾನ್ ಶ್ರೀ ಕೃಷ್ಣನನ್ನು ಪೂಜಿಸುವ ಪೂಜಾ ವಿಧಾನವಾಗಿದೆ.
ಪ್ರವಾಸಿ ಸ್ಥಳಗಳು
ದುರ್ಗ್ ಜಿಲ್ಲೆಯ ಆಸುಪಾಸಿನಲ್ಲಿ ಹಲವಾರು ಪ್ರವಾಸಿ, ಯಾತ್ರಾ ತಾಣಗಳಿವೆ. ನಾಗಪುರದ ಶ್ರೀ ಉವಾಸಗ್ಗಹರಂ ಪಾರ್ಶ್ವ ತೀರ್ಥ, ಚಂಡೀ ದೇವಾಲಯ, ಗಂಗಾ ಮೈಯ್ಯಾ ದೇವಾಲಯ, ದಿಯೋಬಲೋಡಾ ಜೈನ ದೇವಾಲಯಗಳು ಇಲ್ಲಿನ ಪ್ರಮುಖ ತೀರ್ಥ ಯಾತ್ರಾ ತಾಣಗಳಾಗಿವೆ.
ಹಿಂದೀ ಭವನ, ಪಟಾಣ್, ಪ್ರಾಚೀನ್ ಕಿಲಾ ಬಲೋಡ್, ತಾಂಡುಲಾ ಹೀಗೆ ಹಲವಾರು ಪ್ರವಾಸಿ ತಾಣಗಳಿವೆ. ಇಷ್ಟೆಲ್ಲಾ ಆದಮೇಲೂ, ಭೇಟಿ ಕೊಡಲು ಮರೆಯಲೇಬಾರದಂತಹ ತಾಣವೊಂದಿದೆ. ಅದೇ ಮೈತ್ರಿ ಬಾಗ್ ಪ್ರಾಣಿ ಸಂಗ್ರಹಾಲಯ. ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವಂತಹ ನೂರಾರು ತಾಣಗಳು ಇಲ್ಲಿದ್ದು, ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿವೆ.
ಹವಾಮಾನ
ದುರ್ಗ್ ಪ್ರದೇಶದಲ್ಲಿ ಬಹುತೇಕ ಉಷ್ಣವಲಯದ ವಾತಾವರಣ ಕಂಡುಬರುತ್ತದೆ.