ದಟ್ಟಕಾಡಿನ ಸುತ್ತ ಸುತ್ತುವರೆದಿರುವ ದೇವರಾಯನದುರ್ಗದ ಬೆಟ್ಟಗಳು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರ ಮೈ ಮನಸ್ಸುಗಳಿಗೆ ಮುದ ನೀಡುತ್ತದೆ. ಇಲ್ಲಿನ ವಾಯುಗುಣ ಚೇತೋಹಾರಿಯಿಂದ ಕೂಡಿದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ದೇವರಾಯನ ದುರ್ಗವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ನೆಲೆಸಿದೆ. ಈ ಸ್ಥಳವು ಇಲ್ಲಿನ ದೇವಾಲಯಗಳಿಗೆ, ಕಾಡುಗಳಿಗೆ, ಅದ್ಭುತ ವಾಯುಗುಣಕ್ಕೆ ಹಾಗು ನಯನ ಮನೋಹರ ಪ್ರಾಕೃತಿಕ ದೃಶ್ಯ ವೈಭವಗಳಿಗೆ ಹೆಸರಾಗಿದೆ.
ಈ ಸ್ಥಳವನ್ನು ಮೊದಲಿಗೆ ಇಲ್ಲಿನ ಸ್ಥಳೀಯ ನಾಯಕನಾದ ಜಡಕ ಎಂಬುವನು ಆಳುತ್ತಿದ್ದನು. ಮುಂದೆ ಜಡಕನನ್ನು ಒಡೆಯರ್ ಮನೆತನದ ಚಿಕ್ಕ ದೇವರಾಜ ಒಡೆಯರ್ ಸೋಲಿಸಿ ಈ ಪ್ರದೇಶವನ್ನು ತನ್ನ ವಶಪಡಿಸಿಕೊಂಡು ಈ ಸ್ಥಳಕ್ಕೆ ದೇವರಾಯನದುರ್ಗ ಎಂದು ಹೆಸರಿಟ್ಟರು.
ದೇವರಾಯನದುರ್ಗದಲ್ಲಿ ನೋಡಬೇಕಾದ ಸ್ಥಳಗಳು.
ಈ ಬೆಟ್ಟದ ಮೂರು ವಿಭಿನ್ನ ಎತ್ತರಗಳಲ್ಲಿ ಭೋಗ ನರಸಿಂಹ, ಯೋಗ ನರಸಿಂಹ ಮತ್ತು ಲಕ್ಷ್ಮಿ ನರಸಿಂಹ ಎಂಬ ಮೂರು ದೇವಾಲಯಗಳಿವೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿದೆ. ಯೋಗನರಸಿಂಹ ದೇವಾಲಯವು ಬೆಟ್ಟದ ತುದಿಯಲ್ಲಿ ಇದೆ. ಲಕ್ಷ್ಮಿ ನರಸಿಂಹ ದೇವಾಲಯವು ಬೆಟ್ಟದ ಮೊದಲ ಭಾಗದಲ್ಲಿ ಕಂಡು ಬರುತ್ತದೆ.
ಇಲ್ಲಿನ ಮತ್ತೊಂದು ಆಕರ್ಷಣೆ ನಾಮದ ಚಿಲುಮೆ. ಸ್ಥಳೀಯ ದಂತಕತೆಗಳ ಪ್ರಕಾರ ಶ್ರೀ ರಾಮನು ತನ್ನ ಬಿಲ್ಲಿನಿಂದ ಬಿಟ್ಟ ಬಾಣದಿಂದ ಚಿಮ್ಮಿದ ಚಿಲುಮೆಯೆ ಇದಂತೆ. ಭಕ್ತಾಧಿಗಳ ಪ್ರಕಾರ ಚಿಲುಮೆಯ ಬಳಿಯಲ್ಲಿ ಶ್ರೀ ರಾಮನ ಹೆಜ್ಜೆಗುರುತು ಇದೆಯಂತೆ. ಇಲ್ಲಿನ ಕಾಡಿನಲ್ಲಿನ ನರ್ಸರಿಯಲ್ಲಿ ಅಪರೂಪದ ಅಯುರ್ವೇದಿಕ ಗಿಡ ಮೂಲಿಕೆಗಳನ್ನು ಬೆಳೆಯಲಾಗಿದೆ. ಇಲ್ಲಿ ಶ್ರೀ ನರಸಿಂಹ ಜಯಂತಿ ಮತ್ತು ರಥೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾರೆ.
ದೇವರಾಯನದುರ್ಗವು ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ರೈಲು ನಿಲ್ದಾಣವು ತುಮಕೂರಿನಲ್ಲಿದೆ. ಈ ಸ್ಥಳಕ್ಕೆ ಬಸ್ಸುಗಳ ಸೌಕರ್ಯವು ಉತ್ತಮವಾಗಿದೆ.