ಬಲಂಗೀರ್ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಒಂದು ಪ್ರಮುಖ ವಾಣಿಜ್ಯ ನಗರವಾಗಿದೆ. ಈ ಸ್ಥಳವು ಅನೇಕ ಹಳೆಯ ದೇವಾಲಯ, ಗುಡಿಗಳು ಮತ್ತು ಬುಡಕಟ್ಟು ಜನಾಂಗದ ಸೊಬಗನ್ನು ಹೊಂದಿದ ಜನಪ್ರಿಯ ನಗರವಾಗಿದೆ. ಒಂದೊಮ್ಮೆ ವೈಭವಯುತ ರಾಜ್ಯವಾದ ಪಟ್ನಾಗಡ್ ದ ರಾಜಾಧಾನಿಯಾಗಿದ್ದ ಈ ಸ್ಥಳವು ಇಂದಿಗೂ ಹಳೆಯ ವೈಭವದ ಮೋಡಿಯನ್ನು ಕಾಪಾಡಿಕೊಂಡು ಬಂದಿದೆ. ಬಲಂಗೀರ್ ನ 19 ನೇ ರಾಜನಾದ ಬಲರಾಮ್ ದೇವ್ ನಿಂದ ನಿರ್ಮಿಸಲಾದ ಬಲರಾಮ್ಗಡ್ ಕೋಟೆಯ ಕಾರಣವಾಗಿ ಇದಕ್ಕೆ ಬಲಂಗೀರ್ ಎಂಬ ಹೆಸರು ಬಂದಿದೆ.
ಬಲಂಗೀರ್ ಹತ್ತಿರದ ಪ್ರವಾಸಿ ಸ್ಥಳಗಳು
ಬಲಂಗೀರ್ ಪ್ರವಾಸೋದ್ಯಮ ತನ್ನಲ್ಲಿರುವ ವಿಹಂಗಮ ಸ್ಥಳಗಳಿಂದಾಗಿ ಹೆಸರುವಾಸಿಯಾಗಿದೆ. ಜಲಿಯ ಇಲ್ಲಿನ ದಟ್ಟ ಕಾಡುಗಳ ನಡುವೆ ಇರುವ ಒಂದು ಸುಂದರ ಹಳ್ಳಿ. ಈ ಹಳ್ಳಿಯು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ. ಈ ಸುಂದರ ಹಳ್ಳಿಯ ನಡುವೆ ಹರಿಯುವ ನದಿಯು ಪಿಕ್ನಿಕ್ ಸ್ಥಳಕ್ಕೆ ಇನ್ನಷ್ಟು ಮೆರಗನ್ನು ನೀಡುತ್ತದೆ. ಜಲಿಯ ಹಳ್ಳಿಯು ಬಲಂಗೀರ್ ನಿಂದ 20 ಕಿ ಮೀ ಅಂತರದಲ್ಲಿದೆ. ಬಲಂಗೀರ್ ಗೆ ಹತ್ತಿರದ ಇನ್ನೊಂದು ಪ್ರಸಿದ್ಧ ಪ್ರವಾಸಿ ತಾಣವೆಂದರೆ ಗೈಖಾಯ್. ಇದು ಸುಂದರ ಕಣಿವೆಯ ಜೊತೆಗೆ 3 ಬದಿಗಳಲ್ಲಿ ಆಕರ್ಷಕ ಬೆಟ್ಟಗಳನ್ನು ಹೊಂದಿದೆ. ಇದು ಕ್ಯಾಂಪಿಂಗ್ ಮತ್ತು ಪಿಕ್ನಿಕ್ ಗೆ ಪರಿಪೂರ್ಣವಾದ ಸ್ಥಳವಾಗಿದೆ.
ಬಲಂಗೀರ್ ಗೆ ಭೇಟಿ ನೀಡಿದವರು ಪಟ್ನಾಗರ್, ರಾಣಿಪುರ, ಝಾರಿಯಲ್, ಸೈಂತಾಲಾ ತೆಂಟುಲಿಕುಂಟಿ ಮರ್ಸಿಂಗ್ ಮತ್ತು ಜಲ ಮಹಾದೇವ್ ಇವುಗಳನ್ನು ಭೇಟಿ ನೀಡಲೇಬೇಕು. ಸುಖ್ತೆಲ್ ನದಿಗೆ ಕಟ್ಟಲಾದ ಸುಖ್ತೆಲ್ ಆಣೆಕಟ್ಟು ಒಂದು ಸುಂದರ ಪ್ರವಾಸಿ ಯೋಗ್ಯ ಸ್ಥಳ ಎನ್ನಬಹುದು. ಬಲಂಗೀರ್ ಪ್ರವಾಸೋದ್ಯಮ ಆಕರ್ಷಕ ಪ್ರವಾಸಿ ಸ್ಥಳಗಳನ್ನು ಒದಗಿಸುತ್ತದೆ. ಈ ನಗರದಲ್ಲಿ ಬೇರೆ ಬೇರೆ ಧರ್ಮಕ್ಕೆ ಸೇರಿದ ಆಶ್ರಮ, ಉದ್ಯಾನವನ, ಸರೋವರ, ಅರಮನೆಗಳು, ದೇವಾಲಯ ಮತ್ತು ಗುಡಿಗಳನ್ನು ಕಾಣಬಹುದು.
ಒಂದು ಕಾಲದಲ್ಲಿ ಬಲಂಗೀರ್ ರಾಜಮನೆತನ ನೆಲೆಸಿದ್ದ ಸೈಳಶ್ರೀ ಅರಮನೆ ಒಡಿಶಾದಲ್ಲೇ ಅತಿ ಉತ್ತಮ ಅರಮನೆ ಎಂದು ಹೆಸರು ಪಡೆದಿದೆ. ಅಧ್ಯಾತ್ಮಿಕ ಅನುಭವದ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದ್ದಲ್ಲಿ ನಗರದಿಂದ ಕೇವಲ 5 ಕಿ ಮೀ ಅಂತರದಲ್ಲಿರುವ ಕುಜೆಂಪಲಿಯ ಆನಂದ ನಿಕೇತನಕ್ಕೆ ಭೇಟಿ ನೀಡಲೇಬೇಕು. ರಾಜೇಂದ್ರ ಉದ್ಯಾನವನವು ಇಲ್ಲಿರುವ ಶತಮಾನದ ಹಳೆಯ ಉದ್ಯಾನವನವಾಗಿದ್ದು ವಿವಿಧ ರೀತಿಯ ಗುಲಾಬಿ ಹೂವುಗಳನ್ನು ಇಲ್ಲಿ ಕಾಣಬಹುದು.
ಒಡಿಶಾದ ಹಳೆಯ ಸರೋವರಗಳಲ್ಲಿ ಒಂದಾದ ಕರಂಗ ಕಾಟಾ ಕೂಡ ಒಂದು ಸುಂದರ ಪಿಕ್ನಿಕ್ ಸ್ಥಳವಾಗಿದೆ. ಇಲ್ಲಿ ಬಲಂಗೀರ್ ಪುರಸಭೆ ಮಂಡಳಿಯು, ಪ್ರವಾಸೋದ್ಯಮ ಸೌಲಭ್ಯ ಅಥವಾ ಮಹತ್ವ ಹೆಚ್ಚಿಸಲು ಬೋಟಿಂಗ್ ವ್ಯಯಸ್ಥೆ ಮಾಡಿದ್ದು, ಸುತ್ತಲೂ ಉದ್ಯಾನವನದ ಆನಂದಕರ ನೋಟವನ್ನು ಸವಿಯಬಹುದು. ಈ ಸರೋವರದ ಹತ್ತಿರದಲ್ಲಿಯೇ ಬಲಂಗೀರ್ ನ ದುರ್ಗಾ ದೇವಿ ಮಂದಿರವಿದೆ.
ಧಾರ್ಮಿಕ ಸ್ಥಳಗಳು
ಪಟ್ನಾಗರದ ಮಾ ಪತನೇಶ್ವರಿ ದೇವಾಲಯವು ಸ್ಥಳದ ದೇವಿಯಾದ ಪತನೇಶ್ವರಿ ದೇವಿಗೆ ಸಮರ್ಪಿತವಾಗಿದೆ. ಹತ್ತಿರದಲ್ಲಿರುವ ಗೋಪಾಲ ಮತ್ತು ಲಕ್ಷ್ಮೀ ನಾರಾಯಣ ದೇವಾಲಯವು ಕೃಷ್ಣ ಮತ್ತು ಲಕ್ಷ್ಮಿಯ ದೇವಾಲಯವಾಗಿದೆ. ಹೆ ಶಂಕರ್ ದೇವಸ್ಥಾನ, ಮಾ ಸಮಾಲೆಶ್ವರಿ ದೇವಾಲಯ, ನರಸಿಂಗ ದೇವಸ್ಥಾನ, ಸಂತೋಷಿ ದೇವಸ್ಥಾನ, ಲೋಕನಾಥ ಬಾಬಾ ದೇವಾಲಯ, ಶೀತಲ ಮಾತಾ ದೇವಾಲಯ, ಭಾಗ್ವತ್ ದೇವಾಲಯ, ಜಗನ್ನಾಥ ದೇವಾಲಯ, ಮೌಸಿ ಮಾ ದೇವಸ್ಥಾನ, ರಾಮ್ಜಿ ಮಂದಿರ, ಶ್ಯಾಮ ಕಾಳಿದೇವಾಲಯ, ಸಾಯಿಬಾಬ ದೇವಾಲಯ ಇನ್ನು ಕೆಲವು ದೇವಾಲಯಗಳನ್ನು ಇಲ್ಲಿ ಕಾಣಬಹುದು.
ಬಲಂಗೀರ್ ನಿಂದ 25 ಕಿ ಮೀ ಅಂತರದಲ್ಲಿರುವ ಜೋಗಿಸಂದ್ರ ಎಂಬ ಸ್ಥಳವು ಜೋಗೇಶ್ವರ ಶಿವ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯಕ್ಕೆ ಪ್ರತಿವರ್ಷ ನೂರಾರು ಭಕ್ತರು ಭೇಟಿ ನೀಡುತ್ತಾರೆ. ಹತ್ತಿರದಲ್ಲೆ ತಿಕ್ರಪರ ಎಂಬಲ್ಲಿ ಸುನ್ನಿ ಮಸೀದಿ, ರುಗುಡಿ ಪಡ ಎಂಬಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚ್, ಆದರ್ಶ ಪಡ ಎಂಬಲ್ಲಿ ಪ್ರೊಟೆಸ್ಟೆಂಟ್ ಚರ್ಚ್ ಇದೆ. ಹಿಂದೂ ಗುಜರಾತಿ ಜನಾಂಗದವರಿಗೆ ಪೂಜಿಸಲು ಜಲರಾಂ ದೇವಾಲಯ, ಸಿಂಧಿ ಜನಾಂಗದವರಿಗೆ ಜುಲೇಲಾಲ್ ದೇವಾಲಯಗಳನ್ನು ಇಲ್ಲಿ ಕಾಣಬಹುದು.
ಶಾಪಿಂಗ್ ಮತ್ತು ಆಹಾರ
ಬಲಂಗೀರ್ ಪ್ರವಾಸೋದ್ಯಮದ ಜೊತೆಗೆ ಸಂಬಲಪುರ್ ಸೀರೆ, ಡ್ರೆಸ್ ಮೆಟೀರಿಯಲ್, ಬೆಡ್ ಶೀಟ್ ಮುಂತಾದವುಗಳಿಗೆ ಹೆಸರುವಾಸಿಯಾಗಿದೆ. ಸಿಹಿ ಪ್ರಿಯರಿಗೆ ಬಲಂಗೀರ್ ನಲ್ಲಿ ಲಬಂಗಲಾಟ, ಚೆನ ಗಾಜಾ, ಅರಿಸ ಪೀಟಾ ಮತ್ತು ಚನಾ ಪೇಡಾ ದೊರೆಯುತ್ತದೆ. ಬಾಯಲ್ಲಿ ನೀರೂರಿಸುವ ಸ್ನಾಕ್ಸ್ ಗಳಾದ ಚಕುಲಿ, ಪೇಠಾ, ಪಿತು ಭಾಜಾ, ಗುಲ್ಗುಲಾ ಮತ್ತು ಚೌಲಾ ಬಾರಾ ಇವುಗಳನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ.
ಬಲಂಗೀರ್ ಭೇಟಿಗೆ ಉತ್ತಮ ಕಾಲ
ಚಳಿಗಾಲ ಅಂದರೆ ಅಕ್ಟೋಬರ್ ನಿಂದ ಫೆಬ್ರವರಿವರೆಗಿನ ಸಮಯವು ಬಲಂಗೀರ್ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ.
ಬಲಂಗೀರ್ ತಲುಪುವುದು ಹೇಗೆ?
ಬಲಂಗೀರ್ ರೈಲ್ವೆ ನಿಲ್ದಾಣದ ಮೂಲಕ ರೈಲು ಮಾರ್ಗದಲ್ಲಿ ತಲುಪಬಹುದು. ಒಡಿಶಾದ ಇತರ ನಗರಗಳಿಂದ ರಾಜ್ಯ ಸರ್ಕಾರಿ ಬಸ್ಸುಗಳು ಕೂಡ ಸಂಚರಿಸುತ್ತವೆ. ಈ ಸ್ಥಳದಲ್ಲಿ ವಿಮಾನ ನಿಲ್ದಾಣವಿಲ್ಲ.ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರ್.