ಗರೊ ಬೆಟ್ಟದ ಮಂಕಚಾರ್ ಬಳಿಯಿರುವ ರಂಗಪನಿಯಲ್ಲಿ ಈ ಮೀರ್ ಜುಮ್ಲರವರ ಗೋರಿಯೊಂದು ನೆಲೆಗೊಂಡಿದೆ. ಈ ಗೋರಿಯು ಒಂದು ಸಣ್ಣ ದಿಬ್ಬದ ಮೇಲೆ ನೆಲೆಗೊಂಡಿದೆ. ಇದನ್ನು ಸುಮಾರು ಶತಮಾನಗಳಿಂದ ಸ್ಥಳೀಯ ಮುಸ್ಲಿಂ ಸಂಘಗಳವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಈ ಗೋರಿಯು ತುಂಬಾ ಉದ್ದವಾಗಿದೆ. ಇದು ಮೀರ್- ಜುಮ್ಲರವರು ಉದ್ದವಾಗಿದ್ದರು ಎಂಬುದನ್ನು ಸೂಚಿಸುತ್ತದೆ. ಮೀರ್ ಜುಮ್ಲನು ಮೊಘಲ್ ಸೇನೆಯಲ್ಲಿ ಸೇನಾಧಿಪತಿಯಾಗಿದ್ದನು.
ನಂತರ ಇವನನ್ನು ಚಕ್ರವರ್ತಿ ಔರಂಗಜೇಬನು ಬೆಂಗಾಲಿನ ಗವರ್ನರ್ ಆಗಿ ನೇಮಿಸಿದನು.ಮುಂದೆ ಮೀರ್ ಜುಮ್ಲನು ಅಸ್ಸಾಂನ ಸ್ಥಳೀಯ ರಾಜನ ಮೇಲೆ ತನ್ನ ದೊಡ್ಡದಾದ ಮೊಘಲ್ ಸೇನೆಯನ್ನು ಬಳಸಿಕೊಂಡು ದಾಳಿ ಮಾಡಿದನು.ಏಕೆಂದರೆ ಈ ಅಸ್ಸಾಂನ ರಾಜನು ಕೆಲವು ಮಂದಿ ಸೈನಿಕರನ್ನು ಮತ್ತು ಮೊಘಲ್ ಸಾಮ್ರಾಜ್ಯಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ತನ್ನ ವಶದಲ್ಲಿಟ್ಟು ಕೊಂಡಿದ್ದನಂತೆ.
ಹೀಗೆ ಮೀರ್ ಜುಮ್ಲನು ತನ್ನ ಆರಂಭಿಕ ಆಡಳಿತಾವಧಿಯಲ್ಲಿ ಭಾರೀ ಯಶಸ್ಸನ್ನು ಸಂಪಾದಿಸಿದನು. ಆದರೆ ನಂತರದ ದಿನಗಳಲ್ಲಿ ದುರ್ಗಮವಾದ ರಸ್ತೆಗಳು ಮತ್ತು ಮಲೇರಿಯಾಕಾರಕ ಹವಾಮಾನವು ಮೊಘಲ್ ಸೈನ್ಯವನ್ನು ಹಿಂಡಿ ಹಿಪ್ಪೆ ಮಾಡಿತು. ಈ ಎಲ್ಲಾ ಕಾರಣಗಳು ಮೀರ್ ಜುಮ್ಲಾನನ್ನು ಅಸ್ಸಾಂನಿಂದ ಕಾಲ್ತೆಗೆಯುವಂತೆ ಮಾಡಿತು. ಹೀಗಾಗಿ ಆತನು ಅಸ್ಸಾಂ ಅನ್ನು ಸಂಪೂರ್ಣವಾಗಿ ಗೆಲ್ಲಲಾರದೆ ಹಿಂತಿರುಗುವಂತೆ ಮಾಡಿತು. ಆನಂತರ ಮೀರ್ ಜುಮ್ಲನು ಬೆಂಗಾಲಕ್ಕೆ ಬಂದನು. ಆದರೆ ಬರುವ ಮೊದಲು ಅವನು ಮಲೇರಿಯಾದಿಂದ ಜರ್ಜರಿತನಾಗಿದ್ದನು. ಇದೇ ಸ್ಥಿತಿಯಲ್ಲಿ ಆತ ಕೊನೆಯುಸಿರೆಳೆದನು. ಆನಂತರ ಅವನ ಸ್ಮರಣಾರ್ಥವಾಗಿ ರಂಗಪನಿಯಲ್ಲಿ ಒಂದು ಗೋರಿಯನ್ನು ನಿರ್ಮಾಣ ಮಾಡಲಾಯಿತು. ಇದು ಟುರದಿಂದ 40 ಕಿ.ಮೀ ದೂರದಲ್ಲಿದೆ. ಟುರದಿಂದ ಪ್ರವಾಸಿ ವಾಹನದ ಮೂಲಕ ಇಲ್ಲಿಗೆ ಭೇಟಿ ನೀಡಬಹುದು.


Click it and Unblock the Notifications