ದೇವರೆಂದರೆ ಮೂಗು ಮುರಿಯುವ ನಾವು ದೇವರಿಂದ ಹಲವಾರು ನಿರೀಕ್ಷೆಗಳನ್ನು ಹೊತ್ತು ಜೀವನವನ್ನು ಸಾಗಿಸುತ್ತೇವೆ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕಾಲಕಾಲಕ್ಕೆ ನಿವಾರಿಸಲೆಂದೇ ದೇವರಲ್ಲಿ ಹಲವಾರು ಬೇಡಿಕೆಗಳನ್ನು ಇಡುತ್ತೇವೆ. ಹೀಗೆ ಹಲವಾರು ಭಕ್ತರು ಬಂದು ತಮ್ಮ ಬೇಡಿಕೆಗಳನ್ನು ಇಡುವ ಸ್ಥಳವೇ ಗುಡಿಯಿರದ ದೇವಿ ಉಡುಸಲಮ್ಮ. ಬನ್ನಿ ಈ ದೇವಸ್ಥಾನದ ಮಹಿಮೆ, ಈ ದೇವಾಲಯದ ವಿಶೇಷ, ಇಲ್ಲಿನ ಹರಕೆಗಳು ಮತ್ತು ಇಲ್ಲಿಗೆ ತಲುಪುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯೋಣ.
ಉಡುಸಲಮ್ಮ ದೇವಿ :
ನಾವೆಲ್ಲಾ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತೇವೆ, ಅಲ್ಲಿನ ದೇವಾಲಯವ ಕಂಡು ಬೆರಗಾಗುತ್ತೇವೆ. ದೇವಾಲಯದ ನಿರ್ಮಾಣ ಮತ್ತು ಆಸುಪಾಸಿನ ಸೌಂದರ್ಯವನ್ನು ಸವಿಯುತ್ತೇವೆ. ಆದರೆ ಈ ದೇವಾಲಯದಲ್ಲಿ ಬೆರಗಾಗುವ ಸಂಗತಿಯೆಂದರೆ ಈ ದೇವಿಗೆ ಯಾವುದೇ ಗುಡಿಯನ್ನು ನಿರ್ಮಿಸಲಾಗಿಲ್ಲ.
ದೇವಿಗೆ ಗುಡಿಯಿಲ್ಲ :
ಗುಡಿಯಿರದ ದೇವಿ ಉಡುಸಲಮ್ಮನಿಗೆ ಗುಡಿ ಕಟ್ಟಲು ಈ ಮುಂಚೆ ಹಲವಾರು ಭಾರಿ ಪ್ರಯತ್ನವನ್ನು ಕೈಗೊಳ್ಳಲಾಗಿದೆ. ಆದರೆ ಒಂದು ದಿನ ರಾತ್ರಿ ಕಟ್ಟಿದ ಗುಡಿಯು ಬೆಳಿಗ್ಗೆದ್ದು ನೋಡಿದರೆ ಗುಡಿಯು ಬಿದ್ದು ಹೋಗಿತ್ತು, ಆ ತಾಯಿ ಬಂದು ನನಗೆ ಕಟ್ಟಬೇಡಿ ಎಂದು ಹೇಳಿದಳು ಹಾಗಾಗಿ ಈ ದೇವಿಗೆ ಗುಡಿಯಿಲ್ಲ ಎಂದು ಇಲ್ಲಿನ ಜನರು ಹೇಳುತ್ತಾರೆ.
ಮಂಗಳವಾರ ಮತ್ತು ಶುಕ್ರವಾರ ಭಕ್ತಾದಿಗಳ ಭೇಟಿ :
ಈ ದೇವಿಯನ್ನು ಕಾಣಲು ಅನೇಕ ಭಕ್ತಾದಿಗಳು ಪ್ರತಿದಿನವೂ ಆಗಮಿಸುತ್ತಾರೆ. ಆದರೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿ, ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ತಮ್ಮ ಹರಕೆಗಳನ್ನು ಸಲ್ಲಿಸುತ್ತಾರೆ.
ಉಡುಸಲಮ್ಮ ದೇವಿ ಮಹಿಮೆ :
ಉಡುಸಲಮ್ಮ ದೇವಿಯು ಬೇಡಿದವರಿಗೆ ಒಲಿಯುವ ತಾಯಿ. ಆ ತಾಯಿಯು ಮನಸ್ಸಾರೆ ಬೇಡಿದರೆ ಎಂತಹದ್ದೇ ಹರಕೆಯಿದ್ದರೂ ನೂರಕ್ಕೆ ನೂರರಷ್ಟು ಈಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ. ಈ ದೇವಿಯ ಸನ್ನಿಧಿಯಲ್ಲಿ ಅಲ್ಲಿರುವ ಕಲ್ಲಿನ ಮೇಲೆ ನೀವು ಕುಳಿತು ಕಟ್ಟಿಕೊಂಡ ಹರಕೆಯು ಈಡೇರುವುದಾದರೆ ಆ ಕಲ್ಲು ತಿರುಗುತ್ತದೆ ಎಂಬುವ ನಂಬಿದೆ ಇದೆ.
ಉಡುಸಲಮ್ಮ ದೇವಾಲಯದ ವಿಶೇಷ :
ಈ ದೇವಾಲಯದಲ್ಲಿ ಯಾವುದೇ ಅರ್ಚಕರು ಮತ್ತು ಕಾಣಿಕೆ ಹುಂಡಿ ಇಲ್ಲದೇ ಇರುವುದು ಈ ದೇವಾಲಯದ ವಿಶೇಷ. ಈ ದೇವಿಯಲ್ಲಿ ಹರಕೆ ಕಟ್ಟಿಕೊಂಡು ನೆರವೇರಿದ ಭಕ್ತಾದಿಗಳು ಕುರಿ, ಕೋಳಿ ಮತ್ತು ಮೊಸರನ್ನವನ್ನು ದೇವಿಗೆ ನೀಡುವ ಮೂಲಕ ತಮ್ಮ ಹರಕೆಯನ್ನು ದೇವಿಗೆ ಸಲ್ಲಿಸುತ್ತಾರೆ.
ಎಲ್ಲಿದೆ ಈ ಜಾಗ ಮತ್ತು ತಲುಪುವುದು ಹೇಗೆ ? :
ಚಿತ್ರದುರ್ಗ ಹೈವೆ ಶಿರಾ ಇಂದ 10 ಕಿ.ಮೀ ದೂರವಿರುವ ಗ್ರಾಮ ದ್ವಾರಾಳು ನಲ್ಲಿ ತಾಯಿ ಉಡುಸಲಮ್ಮ ನೆಲೆಸಿದ್ದಾಳೆ. ಈ ದೇವಿಯ ಸನ್ನಿಧಿಗೆ ಭೇಟಿ ನೀಡಲು ಸಾರ್ವಜನಿಕ ಅಥವಾ ವೈಯಕ್ತಿಕ ವಾಹನಗಳಲ್ಲಿ ಕೂಡ ಆಗಮಿಸಬಹುದು.