ವಾರದ ರಜೆಯನ್ನು ಮನೆಯಲ್ಲಿ ಕುಳಿತು ವೇಸ್ಟ್ ಮಾಡೋ ಬದ್ಲು, ಎಲ್ಲಾದರೂ ಲಾಂಗ್ ಡ್ರೈವ್ ಹೋಗ್ಬೇಕು ಅನ್ನೋ ಹಂಬಲ ಮನಸ್ಸನ್ನು ಕಾಡುತ್ತಿದ್ದರೆ, ಹಿಂದೆ-ಮುಂದೆ ಯೋಚನೆ ಮಾಡದೆ ಸೀದಾ ಆವಲ ಬೆಟ್ಟ ಹಾಗೂ ಗುಡಿಬಂಡೆ ಕೋಟೆ ಕಡೆ ಪ್ರಯಾಣ ಬೆಳೆಸಿ. ನಗರದ ರಗಳೆಯನ್ನೆಲ್ಲಾ ಮರೆತು ಒಂದು ದಿನಪೂರ್ತಿ ಖುಷಿಯಲ್ಲಿ ಇರಬಹುದು. ಮನಸ್ಸಿಗೊಂದಿಷ್ಟು ಸಾಂತ್ವನ, ಹೊಸ ಹುರುಪು ನೀಡಬಲ್ಲ ಈ ಜಾಗದ ಬಗ್ಗೆ ತಿಳಿಯೋಣ.
ಊರಿನ ಪರಿಚಯ
ಚಿಕ್ಕಬಳ್ಳಾಪುರ ಮೊದಲು ಕೋಲಾರ ಜಿಲ್ಲೆಯ ಒಂದು ತಾಲೂಕಾಗಿತ್ತು. ಇದೀಗ ಒಂದು ಜಿಲ್ಲೆಯಾಗಿದೆ. ಬೆಂಗಳೂರಿನಿಂದ 56 ಕಿ.ಮೀ ದೂರದಲ್ಲಿರುವ ಈ ಜಿಲ್ಲೆ ಅನೇಕ ಪ್ರವಾಸಿತಾಣಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಅದರಲ್ಲಿ ಆವಲ ಬೆಟ್ಟ ಹಾಗೂ ಗುಡಿಬಂಡೆಯೂ ಒಂದು. ತನ್ನದೇ ಆದ ಐತಿಹಾಸಿಕ ಇತಿಹಾಸವನ್ನು ಹೊಂದಿರುವ ಈ ಸ್ಥಳಗಳು ಪ್ರವಾಸಿಗನ ಮನಸ್ಸನ್ನು ಸೂರೆಗೊಳಿಸುತ್ತವೆ.
ಆವಲ ಬೆಟ್ಟ
ಹಳ್ಳಿಗಳಿಂದ ಬಹಳ ದೂರವಿರುವ ಈ ಬೆಟ್ಟ ನೈಸರ್ಗಿಕ ಸೌಂದರ್ಯವನ್ನು ಕಾಯ್ದುಕೊಂಡಿದೆ. ಇಲ್ಲಿಗೆ ಬರಬೇಕೆಂದರೆ ಮುಂಚಿತವಾಗಿ ಯೋಚಿಸಿಯೇ ಬರಬೇಕು. ಹಾಗೊಮ್ಮೆ ಯಾವುದೇ ಪೂರ್ವ ತಯಾರಿ ಇಲ್ಲದೆ ಬಂದರೆ ಯಾವುದು ನೋಡಬೇಕು, ಯಾವುದು ಬಿಡಬೇಕು ಎನ್ನುವ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಬೆಟ್ಟದ ತುದಿಯನ್ನು ಮುಟ್ಟಬೇಕೆಂದರೆ ಬೆಳಗ್ಗೆ 6.30 ರಿಂದ 7.30ರ ಒಳಗೆ ಬರಬೇಕು. ಇಲ್ಲವಾದರೆ ಸೂರ್ಯನ ಬಿಸಿ ಹೆಚ್ಚಾದಂತೆ ಬೆಟ್ಟ ಹತ್ತಲು ಹೆಚ್ಚು ಆಯಾಸ ಆಗುವುದು. ಗುಡ್ಡದ ತುದಿಯಲ್ಲಿ ಲಕ್ಷ್ಮಿ ನರಸಿಂಹ ದೇಗುಲವಿದೆ.
ಆವಲ ಹಿನ್ನೆಲೆ
ಆರು ಲಕ್ಷ ವರ್ಷಗಳ ಹಿಂದೆ ಈ ಪ್ರದೇಶವು ಪ್ರವಾಹದಿಂದ ಕೂಡಿತ್ತು. ಆ ಸಂದರ್ಭದಲ್ಲಿ ಈ ಬೆಟ್ಟ ದ್ವೀಪದಂತೆ ಇತ್ತು ಎಂದು ಹೇಳಲಾಗುತ್ತದೆ. ಇಲ್ಲಿಯ ಸ್ಥಳೀಯರು ತಾವು ಸಾಕಿರುವ ಹಸುವಿನ ಮೊದಲ ಹಾಲನ್ನು ಬೆಟ್ಟದ ಮೇಲಿರುವ ದೇವರಿಗೆ ಅರ್ಪಿಸುತ್ತಾರೆ.
ಆವಲ ಬೆಟ್ಟದ ಒಳಗೆ
ಈ ಬೆಟ್ಟಕ್ಕೆ ಬಂದರೆ ದೇವರ ದರ್ಶನದ ಜೊತೆಗೆ ಪರಿಸರ ಸೌಂದರ್ಯವನ್ನು ವೀಕ್ಷಿಸಬಹುದು. ಇದು ಜನರ ಸಂಪರ್ಕದಿಂದ ದೂರ ಇರುವುದರಿಂದ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಪ್ರವಾಸ ಬೆಳೆಸುವುದು ಉತ್ತಮ. ಒಂಟಿಯಾಗಿ ಬರುವುದು ಅಷ್ಟು ಸೂಕ್ತವಲ್ಲ. ಇಲ್ಲಿ ಯಾವುದೇ ಪೊಲೀಸ್ ವ್ಯವಸ್ಥೆ ಇಲ್ಲದಿರುವುದರಿಂದ ಬೆಟ್ಟ ಹತ್ತುವ ಇಳಿಯುವ ಜವಾಬ್ದಾರಿಯನ್ನು ನೀವೆ ಹೊತ್ತಿಕೊಳ್ಳಬೇಕು. ಗಾರ್ಡ್ ಒಬ್ಬ ಇರುತ್ತಾನೆ ಅಷ್ಟೆ.
ಗುಡಿಬಂಡೆ ಇತಿಹಾಸ
ಚಿಕ್ಕಬಳ್ಳಾಪುರ ಆವೃತ್ತಿಯಲ್ಲೇ ಬರುವ ಈ ಗುಡಿಬಂಡೆ 17ನೇ ಶತಮಾನದ್ದು. ಈ ಕೋಟೆಯನ್ನು ಚೀಫ್ತೈನ್ ಬೈರೇ ಗೌಡ ಎನ್ನುವವರು 400 ವರ್ಷಗಳ ಹಿಂದೆ ನಿರ್ಮಿಸಿದ್ದರು.
PC Courtesy: Flickr.com
ಗುಡಿಬಂಡೆ ಕೋಟೆ
ಅನೇಕ ಮೆಟ್ಟಿಲನ್ನು ಹತ್ತಿ ಈ ಕೋಟೆಯ ಒಳಗೆ ಬಂದರೆ ಶಿವನ ದೇಗುಲವಿದೆ. 108 ಜ್ಯೋತೀರ್ಲಿಂಗದಲ್ಲಿ ಈ ದೇಗುಲವೂ ಒಂದು. ಇಲ್ಲಿಯ ಮುಖ್ಯ ಆಕರ್ಷಣೆಯೆಂದರೆ ಸುತ್ತಲು ಶಿಲೆಯ ಬಂಡೆಗಳಿಂದ ಆವೃತ್ತವಾಗಿರುವುದು ಮತ್ತು ಮಳೆ ನೀರು ಕೊಯ್ಲಿಗಾಗಿ ಶಿಲೆಯಲ್ಲಿ ಕೊರೆದ 19 ವಿವಿಧ ಗಾತ್ರದ ಗುಂಡಿಗಳಿರುವುದು.
PC: wikipedia.org