ಪ್ರಪಂಚದಲ್ಲಿ ಅತಿವೇಗವಾಗಿ ಓಡುವುದು ಮನಸ್ಸು. ಒಮ್ಮೊಮ್ಮೆ ಈ ಮನಸ್ಸು ಏನೇನೋ ಬಯಕೆಯನ್ನು ಹುಟ್ಟಿಸುತ್ತದೆ. ಕಳೆದವಾರ ಹಾಗೇ ಆಯಿತು. ಹಾಗೆ ಸುಮ್ಮನೆ ಕುಳಿತಿರುವಾಗ ಮಹಾಬಲಿಪುರಂಗೆ ಹೋಗಬೇಕು ಎಂಬ ಹಂಬಲ ಹೆಚ್ಚಾಗ ತೊಡಗಿತು. ಪ್ರವಾಸೋದ್ಯಮ ಇಲಾಖೆಯಲ್ಲಿರುವ ನನ್ನ ಸ್ನೇಹಿತನೊಬ್ಬನ ಮಾರ್ಗದರ್ಶನ ಪಡೆದು ಮಹಾಬಲಿಪುರಂ ಪ್ರವಾಸಕ್ಕೆ ಅಣಿಯಾದೆ. ಜೊತೆಗೆ ಒಂದಿಷ್ಟು ಸ್ನೇಹಿತರನ್ನೂ ಆಹ್ವಾನಿಸಿದ್ದೆ...
ಸದಾ ಕೆಲಸದ ಒತ್ತಡದಲ್ಲೇ ಇರುವ ಸ್ನೇಹಿತರು ಉತ್ಸಾಹದಲ್ಲಿ ಬಂದಿದ್ದು ನನಗೊಂದು ಆನೆ ಬಲ ಬಂದಂತಾಯಿತು. ನಾವು ಹೋಗಬೇಕೆಂದುಕೊಂಡ ಪ್ರವಾಸದ ರಸ್ತೆಮಾರ್ಗ ಹೀಗಿತ್ತು...
ಬೆಂಗಳೂರು-ಕಾಮನ್ದೊಡ್ಡಿ-ಚಿನ್ನಾರ್-ಕೃಷ್ಣಗಿರಿ-ಪೊಗಾ-ಕೊನ್ನವಟ್ಟಮ್-ಪೂಂಜೇರಿ-ಮಹಾಬಲಿಪುರಂ. ಒಟ್ಟು ಆರು ತಾಸುಗಳ ಲಾಂಗ್ ಡ್ರೈವ್, 349.5 ಕಿ.ಮೀ. ದೂರ.
PC: en.wikipedia.org
ಬೆಳಗಿನಜಾವದಲ್ಲೇ ಬೆಂಗಳೂರಿನಿಂದ ನಮ್ಮ ಪ್ರಯಾಣ ಆರಂಭವಾಯಿತು. ತಂಪು ವಾತಾವರಣ, ನಗರವೆಲ್ಲಾ ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ... ಹಾಗಾಗಿ ನಮ್ಮ ಪಯಣವೂ ವಾಹನ ದಟ್ಟಣೆಯ ಸಮಸ್ಯೆಯಿಂದ ಮುಕ್ತವಾಗಿತ್ತು. ಸೂರ್ಯನ ತಾಪ ಇನ್ನೇನು ಹೆಚ್ಚಲು ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲೆಲ್ಲಾ ಮಹಾಬಲಿ ಪುರಂ ಎನ್ನುವ ಪ್ರಾಚೀನ ನಗರಕ್ಕೆ ಕಾಲಿಟ್ಟಿದ್ದೆವು.
ಪಲ್ಲವರ ಆಳ್ವಿಕೆಯ ಇತಿಹಾಸವನ್ನು ಹೊಂದಿರುವ ಈ ಊರಿನಲ್ಲಿ ಅನೇಕ ಐತಿಹಾಸಿಕ ತಾಣಗಳಿವೆ ಎನ್ನುವುದು ಮೊದಲೇ ತಿಳಿದಿದ್ದುದರಿಂದ ಇಲ್ಲಿ ನೋಡಬೇಕಾದ ಐದು ಪ್ರಮುಖ ಸ್ಥಳಗಳ ಪಟ್ಟಿ ನಮ್ಮಲ್ಲಿ ಇತ್ತು. ವಿಶ್ವಪರಂಪರೆಯ ತಾಣ ಎಂದು ಗುರುತಿಸಿಕೊಂಡ ಈ ಸ್ಥಳಗಳ ಭೇಟಿ ರಮ್ಯ ಅನುಭವ ನೀಡಿತ್ತು. ಇಲ್ಲಿಗೆ ಬರುವ ಮೊದಲೇ ಮುಂಚಿತವಾಗಿ ವಸತಿ ವ್ಯವಸ್ಥೆಯನ್ನು ಕೈಗೊಂಡಿದ್ದುದರಿಂದ ಯಾವುದೇ ಸಮಸ್ಯೆಯಿಲ್ಲದೆ ಕಾಯ್ದಿರಿಸಿದ್ದ ಹೋಟೆಲ್ ಒಂದರಲ್ಲಿ, ಫ್ರೆಶ್ ಆಗಿ ಅರ್ಜುನನ ತಪಸ್ಸು ವಿಗ್ರಹದ ಕಡೆಗೆ ನಡೆದೆವು...
PC: en.wikipedia.org
ಅರ್ಜುನ ತಪಸ್ಸು ವಿಗ್ರಹ
ಇದೊಂದು ಏಕಶಿಲಾ ಉಬ್ಬು ವಿಗ್ರಹ. 43 ಅಡಿ ಎತ್ತರ ಹೊಂದಿರುವ ಈ ವಿಗ್ರಹ 7ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಅರ್ಜುನನು ಗಂಗೆಗಾಗಿ ತಪಸ್ಸು ಮಾಡಿದ ಸ್ಥಳವೆಂದು ಇತಿಹಾಸ ಹೇಳುತ್ತದೆ. ಇಲ್ಲಿ ನೂರಕ್ಕೂ ಹೆಚ್ಚು ದೇವತೆಗಳ ಕೆತ್ತನೆಗಳಿವೆ. ಇಲ್ಲಿರುವ ಎರಡು ಬಂಡೆಗಳ ನಡುವೆ ಗಂಗಾನದಿಯು ದೇವಲೋಕದಿಂದ ಭೂಮಿಗೆ ಬಂದ ಸ್ಥಳವೆಂದು ಹೇಳಲಾಗುತ್ತದೆ. ಇಲ್ಲಿಯ ಐತಿಹಾಸಿಕ ಹಿನ್ನೆಲೆ ಹಾಗೂ ಕೆಲವು ಚಿತ್ರಗಳನ್ನು ಸೆರೆ ಹಿಡಿದು ನಂತರ ತಿರುಕಡಲ್ಮಲ್ಲೈ ದೇಗುಲದತ್ತ ಹೆಜ್ಜೆ ಹಾಕಿದೆವು.
PC: en.wikipedia.org
ತಿರುಕಡಲ್ಮಲ್ಲೈ ದೇವಸ್ಥಾನ
8ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲ ಪವಿತ್ರ ಕ್ಷೇತ್ರ ಎಂದು ಹೇಳಲಾಗುತ್ತದೆ. ವಿಷ್ಣುವನ್ನು ಆರಾಧಿಸುವ ಈ ದೇಗುಲದ ವಾಸ್ತುಶಿಲ್ಪವು ದ್ರಾವೀಡರ ಶೈಲಿಯಲ್ಲಿದೆ. ಬಿಳಿ ಬಣ್ಣದ ಗೋಪುರವನ್ನು ಹೊಂದಿರುವ ಈ ದೇಗುಲ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಕಷ್ಟ ಎಂದು ಬಂದವರ ಸಮಸ್ಯೆಯು ಪರಿಹಾರವಾಗುತ್ತದೆ. ಇಲ್ಲಿಯ ವಾತಾವರಣ ಪ್ರತಿಯೊಬ್ಬರಲ್ಲೂ ಭಕ್ತಿಯ ಭಾವನೆಯನ್ನು ಹುಟ್ಟಿಸುತ್ತದೆ. ಜೊತೆಗೆ ಮನಸ್ಸಿನ ಒತ್ತಡಗಳೆಲ್ಲಾ ಕಳೆದು ನಿರಾಳ ಭಾವ ಉಂಟಾಗುವಂತೆ ಮಾಡುತ್ತದೆ. ಈ ಸುಂದರ ಅನುಭವಗಳನ್ನು ಅನುಭವಿಸಿದ ಮೇಲೆ ಹತ್ತಿರದಲ್ಲೇ ಇರುವ ಹೋಟೆಲ್ ಒಂದರಲ್ಲಿ ಊಟವನ್ನು ಮುಗಿಸಿ ನಂತರ ರೂಮ್ಗೆ ತೆರಳಿದೆವು. ಸ್ವಲ್ಪ ದಣಿವೂ ಆಗಿದ್ದರಿಂದ ಮನಸ್ಸು ಸ್ವಲ್ಪ ವಿಶ್ರಾಂತಿ ಬಯಸುತ್ತಿತ್ತು...
PC: en.wikipedia.org
ಕೃಷ್ಣ ಗುಹಾಲಯ
ಮುಂಜಾನೆ ಬೇಗ ಎದ್ದು ಉಳಿದ ಪ್ರದೇಶಗಳನ್ನು ನೋಡಬೇಕು ಎನ್ನುವ ನಿಲುವಿದ್ದುದರಿಂದ, ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಕೃಷ್ಣ ಗುಹಾಲಯದ ಕಡೆ ಹೊರಟು, ಸುಂದರವಾದ ಸೂರ್ಯೋದಯದ ಚಿತ್ರವನ್ನು ಸೆರೆಹಿಡಿದು, ಒಂದಿಷ್ಟು ಖುಷಿಯನ್ನು ಅನುಭವಿಸಿದೆವು... ಈ ಕೃಷ್ಣ ಗುಹಾಲಯುವು ಒಂದು ವಿಶೇಷ ದೇಗುಲ. ಕಲ್ಲಿನ ಮೇಲೆ ಪುರಾಣ ಕಥೆಗಳನ್ನು ಉಬ್ಬು ಕೆತ್ತನೆಯ ರೂಪದಲ್ಲಿ ಕೆತ್ತಲಾಗಿದೆ. 7ನೇ ಶತಮಾನದ ಇತಿಹಾಸ ಹೊಂದಿರುವ ಈ ಗುಹಾಲಯ ಒಂದು ಅದ್ಭುತ ಐತಿಹಾಸಿಕ ಸ್ಥಳ ಎನಿಸಿಕೊಂಡಿದೆ.
PC: en.wikipedia.org
ಸಮುದ್ರ ತೀರದ ದೇಗುಲ
ಬಂಗಾಳಕೊಲ್ಲಿಯ ತೀರದಲ್ಲಿರುವ ಈ ದೇಗುಲ ಕ್ರಿ.ಶ. 700 ರಿಂದ 728ರ ಸುಮಾರಿಗೆ ನಿರ್ಮಿಸಲಾಗಿದೆ. ವಿಶ್ವಪಾರಂಪರಿಕ ತಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಈ ದೇಗುಲ ಅತ್ಯುತ್ತಮ ಶಿಲಾದೇವಸ್ಥಾನ. ಇಲ್ಲಿ ಬಗೆ ಬಗೆಯ ವಿನ್ಯಾಸದ ಕೆತ್ತನೆಗಳನ್ನು ನೋಡಬಹುದು. ಈ ದೇಗುಲದಲ್ಲಿ ಕೆತ್ತನೆಗಳನ್ನು ನೋಡುವುದೇ ಒಂದು ವಿಶೇಷ. ವಿಷ್ಣು ದೇವರನ್ನು ಆರಾಧಿಸುವ ಇಲ್ಲಿ, ಶಿವಲಿಂಗ ಇರುವುದನ್ನು ನೋಡಬಹುದು. ಈ ವಿಷ್ಮಯ ದೇಗುಲವನ್ನು ನೋಡಿಕೊಂಡು ಮಧ್ಯಾಹ್ನದ ಊಟ ಮುಗಿಸಿದೆವು. ಸ್ವಲ್ಪ ಹೊತ್ತು ಅಲ್ಲಿ-ಇಲ್ಲಿ ಅಡ್ಡಾಡಿ ಪಂಚ ರಥ ದೇಗುಲದ ಕಡೆಗೆ ಹೊರಟೆವು...
ಪಂಚ ರಥಗಳು
ಕಡಲ ತೀರದಲ್ಲಿ ಇರುವ ಬಂಡೆಗಳನ್ನು ಸೂಕ್ಷ್ಮ ಕೆತ್ತನೆಗಳಿಂದ ಕೆತ್ತಲಾದ ದೇಗುಲವೇ ಪಂಚ ರಥಗಳು. ದ್ರಾವೀಡ ಶೈಲಿಯಲ್ಲಿರುವ ಈ ಕೆತ್ತನೆಗಳು ಮಹಾಭಾರತದ ಪಂಚಪಾಂಡವರ ಕಥೆಯನ್ನು ಹೇಳುತ್ತದೆ. ಇಲ್ಲಿರುವ ಕಲಾಕೃತಿ ಹಾಗೂ ವಿಶೇಷತೆಗಳನ್ನು ಕೇಳಿದಷ್ಟು ಇನ್ನೂ ಕೇಳಬೇಕು ಎನ್ನಿಸುತ್ತದೆ. ನೋಡಿದಷ್ಟು ಮತ್ತೂ ನೋಡಬೇಕು ಅನ್ನಿಸುತ್ತದೆ. ಈ ಸುಂದರ ತಾಣವನ್ನು ಬಿಟ್ಟು ಹೊರಡುವ ಮನಸ್ಸೇ ಇರಲಿಲ್ಲ. ಮರುದಿನದ ಅದೇ ಆಫೀಸ್ ಕೆಲಸಕ್ಕೆ ಬರಲೇ ಬೇಕಲ್ಲಾ... ಎನ್ನುತ್ತಾ ಇಲ್ಲದ ಮನಸ್ಸಿಂದ ಬೆಂಗಳೂರು ದಾರಿ ಹಿಡಿದೆವು.