ದಕ್ಷಿಣ ಭಾರತವು ಸಾಕಷ್ಟು ಧಾರ್ಮಿಕ ಆಕರ್ಷಣೆಗಲಿಂದ ಕೂಡಿರುವ ಪ್ರದೇಶವಾಗಿದೆ. ಇಲ್ಲಿನ ಎಲ್ಲ ರಾಜ್ಯಗಳಲ್ಲೂ ಉತ್ಕೃಷ್ಟವಾದ ಹಾಗೂ ಸಾಕಷ್ಟು ಮಹತ್ವ ಪಡೆದ ತೀರ್ಥ ಯಾತ್ರಾಕೇಂದ್ರಗಳನ್ನು ಕಾಣಬಹದು. ಅದರಲ್ಲೂ ವಿಶೇಷವಾಗಿ ದೇವಾಲಯಗಳ ರಾಜ್ಯ ತಮಿಳುನಾಡು ಸಾಕಷ್ಟು ಧಾರ್ಮಿಕ ಮಹತ್ವ ಪಡೆದ ರಾಜ್ಯವಾಗಿದೆ.
ತಮಿಳುನಾಡಿನಲ್ಲಿ ಬಹಳಷ್ಟು ಮಹತ್ವದ ದೇವಾಲಯ ಪಟ್ಟಣಗಳಿವೆ. ಅದರಲ್ಲೊಂದಾಗಿದೆ ಮದುರೈ. ಮದುರೈ ಸಹ ಹಲವು ದೇವಾಲಯಗಳನ್ನು ಹೊಂದಿರುವ ನಗರವಾಗಿದ್ದರೂ ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇವಾಲಯಕ್ಕೆ ಭಾರತದಲ್ಲೆ ಹೆಚ್ಚು ಪ್ರಸಿದ್ಧಿ ಪಡೆದಿದೆ ಎಂದರೆ ತಪ್ಪಾಗಲಾರದು.
ತಮಿಳುನಾಡಿನ ದೇವಿಗೆ ಮುಡಿಪಾದ ಪ್ರಮುಖ ದೇವಾಲಯಗಳು
ಶಿವನ ಮಡದಿಯಾದ ಪಾರ್ವತಿ ದೇವಿಗೆ ಮುಡಿಪಾಗಿರುವ ಈ ದೇವಸ್ಥಾನದಲ್ಲಿ ಪಾರ್ವತಿಯು ಮೀನಾಕ್ಷಿಯಾಗಿ ನೆಲೆ ನಿಂತಿದ್ದರೆ ಶಿವನು ಸುಂದರೇಶ್ವರನಾಗಿ ನೆಲೆಸಿದ್ದು ದರ್ಶನ ಕೋರಿ ಬರುವ ಭಕ್ತರನ್ನು ಹರಸುತ್ತಿದ್ದಾರೆ. ಜಗತ್ತಿನ ಅತಿ ಪ್ರಾಚೀನ ಪಟ್ಟಣಗಳ ಪೈಕಿ ಮದುರೈ ಸಹ ಒಂದು. 2,500 ವರ್ಷಗಳಷ್ಟು ಇತಿಹಾಸವಿರುವ, ಎಂದಿಗೂ ನಿದ್ರಿಸಲಾರದ ಎಂಬ ಬಿರುದು ಪಡೆದ್ರುವ ಈ ನಗರದ ಮುಖ್ಯ ಹೆಗ್ಗುರುತಾಗಿದೆ ಮೀನಾಕ್ಷಿ ಅಮ್ಮನವರ ದೇವಾಲಯ. ಅಲ್ಲದೆ ತಮಿಳಿನ ಅತಿ ಪುರಾತನ ಸಾಹಿತ್ಯದಲ್ಲಿ ಈ ದೇವಾಲಯದ ಕುರಿತು ಉಲ್ಲೇಖವಿದೆ. ಹೀಗಾಗಿ ತಮಿಳಿಗರಿಗೆ ಸಾಕಷ್ಟು ಮಹತ್ವವಾಗಿದೆ ಈ ದೇವಾಲಯ. ಬನ್ನಿ ಮೀನಾಕ್ಷಿ ಅಮ್ಮನವರ ಕಥೆ ತಿಳಿಯೋಣ.

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಮೀನು ಹಾಗೂ ಅಕ್ಷಿಗಳ ಸಮಾಗಮದಿಂದ ವ್ಯುತ್ಪತ್ತಿಯಾದ ಮೀನಾಕ್ಷಿ ಪದವು ಮೀನಿನಂತೆ ಕಣ್ಣುಗಳುಳ್ಳ ಎಂಬ ವಿವರಣೆಯನ್ನು ನೀಡುತ್ತದೆ. ಅಂದರೆ ಮೀನಾಕ್ಷಿ ದೇವಿಯು ಮೀನಿನಂತೆ ಕಣ್ಣುಗಲಿಂದ ಕಂಗೊಳಿಸುವ ಸುಂದರ ಸ್ತ್ರೀಯಾಗಿ ಕಂಡುಬರುತ್ತಾಳೆ. ಅಲ್ಲದೆ ಇಲ್ಲಿ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುವಂತೆ ಶಿವನು ಮುಖ್ಯ ದೇವನಾಗಿರದೆ ಮೀನಾಕ್ಷಿ ದೇವಿಯೆ ಪ್ರಧಾನ ದೇವತೆಯಾಗಿರುವುದು ವಿಶೇಷ.
ಚಿತ್ರಕೃಪೆ: Saba rathnam

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಕಥೆಯ ಪ್ರಕಾರ, ಹಿಂದೆ ಮಲಯಧ್ವಜ ಪಾಂಡ್ಯ ರಾಜನ ಪತ್ನಿಯಾದ ಕಂಚನಮಲೈಳಿಗೆ ಹಿಂದಿನ ಜನ್ಮದಲ್ಲಿ ಕನಸೊಂದರಲ್ಲಿ ಸ್ವತಃ ಪಾರ್ವತಿಯೆ ಪ್ರತ್ಯಕ್ಷಳಾಗಿ ಅವಳು ಮುಂದಿನ ಜನ್ಮದಲ್ಲಿ ದೇವಿಯೊಬ್ಬಳ ತಾಯಿಯಾಗುತ್ತಾಳೆಂದು ಹೇಳಿದ್ದಳಂತೆ.
ಚಿತ್ರಕೃಪೆ: Ashok666

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಅದರಂತೆ ಮುಂದೆ ಕಾಂಚನಮಲೈ ಮಲಯಧ್ವಜನ ಮಡದಿಯಾಗಿ ಸಂತಾನ ಬಯಸುತ್ತಿರುವಾಗ ರಾಜನು ಪುತ್ರ ಕಾಮೇಷ್ಠಿ ಯಜ್ಞವನ್ನು ನಡೆಸುತ್ತಾನೆ. ಆ ಯಜ್ಞ ನಡೆಸುತ್ತಿರುವಾಗ ಅಗ್ನಿಯಿಂದ ಪಾರ್ವತಿ ದೇವಿಯು ಹುಡುಗಿಯ ರೂಪದಲ್ಲಿ ಹೊರಬರುತ್ತಾಳೆ. ವಿಚಿತ್ರವೆಂದರೆ ಆ ಹುಡುಗಿಗೆ ಎರಡರ ಬದಲು ಮೂರು ಸ್ತನಗಳಿರುತ್ತವೆ.

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಇದನ್ನು ಕಂಡು ರಾಜ ಅಚ್ಚರಿ ಪಡುವಾಗ, ಅಶರೀರವಾಣಿಯೊಂದು ಆಗಸದಿಂದ "ಎಲೈ ರಾಜನೆ ಹುಡುಗಿಯ ಈ ರೀತಿಯ ಅಸ್ವಾಭಾವಿಕ ದೇಹರಚನೆಗೆ ಚಿಂತಿಸಬೇಕಾಗಿಲ್ಲ, ಅವಳು ತನ್ನ ಬಾಳಿನ ಪತಿಯನ್ನು ಕಂಡೊಡನೆಯೆ ಮೂರನೇಯ ಸ್ತನ ತನ್ನಿಂದ ತಾನೆ ಅಳಿಸಿ ಹೋಗುತ್ತದೆ". ಹೀಗಾಗಿ ರಾಜ ಯಾವ ಚಿಂತೆ ಮಾಡದೆ ಪುತ್ರಿಗೆ ತಡಾತಗೈ ಎಂಬ ನಾಮಕರಣ ಮಾಡಿ ಅತಿ ಪ್ರೀತಿಯಿಂದ ಬೆಳೆಸುತ್ತಾನೆ.
ಚಿತ್ರಕೃಪೆ: Jorge Royan

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಮೊದಲೆ ಹುಡುಗಿಯು ಪಾರ್ವತಿಯ ಮರು ಅವತಾರ. ಹೀಗಾಗಿ ಸಕಲ ಶಸ್ತ್ರಾದಿಗಳನ್ನು, ಯುದ್ಧ ವಿದ್ಯೆಗಳನ್ನು ಅತಿ ಸರಾಗವಾಗಿ ಹಾಗೂ ಅಷ್ಟೆ ಪರಿಣಾಮಕಾರಿಯಾಗಿ ಕಲೆಯುತ್ತಾಳೆ. ಹೀಗೆ ಬೆಳೆದ ತಡಾತಗೈ ನಾಲ್ಕು ಲೋಕಗಳಾದ ಬ್ರಹ್ಮಲೋಕ, ವೈಕುಂಠ, ಅಮರಾವತಿ ಹಾಗೂ ಕೈಲಾಸಗಳನ್ನು ವಶಪಡಿಸಿಕೊಳ್ಳುಲು ಮುನ್ನುಗುತ್ತಾಳೆ.
ಚಿತ್ರಕೃಪೆ: எஸ். பி. கிருஷ்ணமூர்த்தி

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ತಡಾತಗೈ ಪಾರ್ವತಿಯ ಅವತಾರವೆ ಆಗಿರುವುದರಿಂದ ಎಲ್ಲ ಮೂರು ಲೋಕಗಳನ್ನು ಅತಿ ಸುಲಭವಾಗಿ ಗೆದ್ದು ಕೊನೆಯದಾಗಿ ಕೈಲಾಸಕ್ಕೆ ತೆರಳುತ್ತಾಳೆ. ಅಲ್ಲಿಯೂ ಸಹ ಭೂತ ಗಣರನ್ನು, ನಂದಿಯನ್ನು ಬಲು ಸುಲಭವಾಗಿ ಸೋಲಿಸುತ್ತಾಳೆ. ಕೊನೆಯದಾಗಿ ಶಿವನನ್ನು ಗೆಲ್ಲಲು ಅವನ ಹತ್ತಿರ ತೆರಳಿದಾಗ....
ಚಿತ್ರಕೃಪೆ: Rengeshb

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಅವಳಿಗೆ ಏನೂ ಮಾಡಲಾಗದೆ ಶಿವನಲ್ಲಿ ಪ್ರೀತಿಯುಂಟಾಗಿ ನಾಚಿಕೊಂಡು ಬಿಡುತ್ತಾಳೆ. ತತ್ ಕ್ಷಣವೆ ಅವಳ ಮೂರನೇಯ ಸ್ತನವು ಮಾಯವಾಗಿ ಹೋಗುತ್ತದೆ. ಇದರಿಂದ ಶಿವನೆ ತನ್ನ ಪತಿಯೆಂಬ ಸತ್ಯ ತಿಳಿದು ಶಿವನೊಡನೆ ಮದುವೆಯಾಗಲು ಮದುರೈಗೆ ಆಗಮಿಸುತ್ತಾಳೆ ತಡಾತಗೈ.
ಚಿತ್ರಕೃಪೆ: Bernard Gagnon

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಕೊನೆಯಲ್ಲಿ ಇವರಿಬ್ಬರ ಮದುವೆಯು ಸಕಲ ದೇವರುಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ವಿಷ್ಣು ಮೀನಾಕ್ಷಿಯ ತಮ್ಮನಾಗಿ ಈ ಮದುವೆಯನ್ನು ನಡೆಸಿಕೊಡುತ್ತಾನೆ. ನಂತರ ಶಿವನು ಸುಂದರೇಶ್ವರನಾಗಿಯೂ, ತಡಾತಗೈ ಮೀನಾಕ್ಷಿಯಾಗಿಯೂ ಮದುರೈನಲ್ಲಿ ನೆಲೆಸುತ್ತಾರೆ. ಇಂದಿಗೂ ಪ್ರತಿ ದಿನ ರಾತ್ರಿ ದೇವಾಲಯ ಮುಚ್ಚುವ ಮೊದಲು ಸುಂದರೇಶ್ವರನ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಿಯ ಕೊಣೆಗೆ ಕೊಂಡೊಯ್ಯಲಾಗುತ್ತದೆ. ಇದು ಅವರಿಬ್ಬರ ಮಿಲನದ ಸಂಕೇತವಾಗಿದೆ. ನಂತ್ರ ಮರು ದಿನ ನಸುಕಿನ ಜಾವದಲ್ಲಿ ಸುಂದರೇಶ್ವರನನ್ನು ದೇವಿಯ ಕೋಣೆಯಿಂದ ಮತ್ತೆ ಮರಳಿ ತರಲಾಗುತ್ತದೆ.
ಚಿತ್ರಕೃಪೆ: Suresh, Madurai

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ವರ್ಷದಲ್ಲಿ ಇವರಿಬ್ಬರ ಕಲ್ಯಾಣ ಮಹೋತ್ಸವವನ್ನು ಬಲು ಸಡಗರದಿಂದ ಆಚರಿಸಲಾಗುತ್ತದೆ. ಈ ಉತ್ಸವ ಸಾಮಾನ್ಯವಾಗಿ ಎಪ್ರಿಲ್-ಮೇ ಸಂದರ್ಭದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ.
ಚಿತ್ರಕೃಪೆ: Jorge Royan

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಪುರಾಣ ಕಥೆಗಳ ಪ್ರಕಾರವಾಗಿ ಈ ದೇವಾಲಯವು ಸ್ವತಃ ಇಂದ್ರನಿಂದಲೆ ನಿರ್ಮಿಸಲ್ಪಟ್ಟಿದೆಯಂತೆ. ಆದಾಗ್ಯೂ ಸ್ಥಳ ಪುರಾಣದ ಪ್ರಕಾರ ಈ ದೇವಾಲಯದ ನಿರ್ಮಾಣ ಕುಮಾರಿ ಕಂಡಮ್ ಮುಳುಗಿ ಹೋದ ನಂತರ ಉಳಿದ ಆ ಖಂಡದ ಜನರು ಈ ದೇವಾಲಯ ನಿರ್ಮಿಸಿದ್ದಾರಂತೆ.
ಚಿತ್ರಕೃಪೆ: Surajram

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಆದರೆ ಪ್ರಸ್ತುತ ದೇವಾಲಯ ರಚನೆಯು 1623-1655 ಮಧ್ಯದಲ್ಲಿ ನಿರ್ಮಿಸಲ್ಪಟ್ಟ ರಚನೆಯಾಗಿದೆ. ಹದಿನಾಲ್ಕನೇಯ ಶತಮಾನದಲ್ಲಿ ಮುಘಲ್ ದೊರೆ ಮಲಿಕ್ ಕಫೂರ್ ನಿಂದ ಸಾಕಷ್ಟು ಹಾನಿ ಹಾಗೂ ಲೂಟಿಗೊಳಗಾಗಿದ್ದ ಈ ದೇವಾಲಯ ನಂತರ ಹದಿನಾರನೇಯ ಶತಮಾನದಲ್ಲಿ ವಿಶ್ವನಾಥ ನಾಯಕರ್ ರಾಜನಿಂದ ತನ್ನ ವೈಭವ ಮತ್ತೆ ಪಡೆಯಿತು. ಬಂಗಾರದ ಕಮಲವಿರುವ ಕೆರೆ.
ಚಿತ್ರಕೃಪೆ: Iramuthusamy

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ನಾಯಕ ದೊರೆ ವಿಶ್ವನಾಥ ನಾಯಕರ್ ಈ ದೇವಾಲಯವನ್ನು ಶಿಲ್ಪಶಾಸ್ತ್ರಕ್ಕನುಗುಣವಾಗಿ ನಿರ್ಮಿಸಿದ. ಈ ದೇವಾಲಯ ಸಂಕೀರ್ಣದಲ್ಲಿ ಒಟ್ಟು 14 ಗೋಪುರಗಳಿದ್ದು ಅತಿ ಎತ್ತರದ ರಾಜಗೋಪುರ 170 ಅಡಿಗಳಷ್ಟು ಎತ್ತರವಾಗಿದೆ. ಸಾವಿರ ಖಂಬಗಳ ಸ್ಥಳ ಹಾಗೂ ಖಂಬಗಳು ಅದ್ಭುತವಗಿ ಕಾಣುತ್ತವೆ.
ಚಿತ್ರಕೃಪೆ: எஸ். பி. கிருஷ்ணமூர்த்தி

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಮುಖ್ಯ ದೇವರುಗಳು ಗರ್ಭಗೃಹದ ಮೇಲೆ ಸುವರ್ಣದಿಂದ ಮಾಡಲಾದ ಕಳಶ ಅಥವಾ ವಿಮಾನಗಳಿವೆ. ಅಂದಾಜಿನ ಪ್ರಕಾರ ದೇವಾಲಯ ಆವರಣದಲ್ಲಿ ಸುಮಾರು 33000 ಶಿಲ್ಪಕಲಾಕೃತಿಗಳಿವೆ ಎನ್ನಲಾಗಿದೆ. ವಿಶಾಲ ಪ್ರಾಂಗಣ, ಅದ್ಭುತ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯವು ಜಗತ್ತಿ ಹೊಸ ಏಳು ಅದ್ಭುತಗಳು ಸ್ಪರ್ಧೆಗೆ ನಾಮನಿರ್ದೇಶಿತವಗಿರುವ 30 ಸೋಜಿಗಗಳ ಪೈಕಿ ಒಂದಾಗಿದೆ.
ಚಿತ್ರಕೃಪೆ: BishkekRocks

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ಏನಿಲ್ಲವೆಂದರೂ ಈ ದೇವಾಲಯಕ್ಕೆ ಪ್ರತಿನಿತ್ಯ 15000 ಗಳಷ್ಟು ಜನರು ಭೇಟಿ ನೀಡುತ್ತಾರೆ. ಶುಕ್ರವಾರಗಳಂದು ಈ 25000 ದಾಟಿ ಹೋಗಿರುತ್ತದೆ. ತಮಿಳುನಾಡಿನ ಶ್ರೀಮಂತ ದೇವಾಲಯಗಳ ಪೈಕಿ ಒಂದಾದ ಮೀನಾಕ್ಷಿ ಅಮ್ಮನವರ ದೇವಾಲಯದಿಂದ ವರ್ಷಕ್ಕೆ ಆರು ಕೋಟಿ ರುಪಾಯಿಗಳಷ್ಟು ಆದಾಯ ಬರುತ್ತದೆ.
ಚಿತ್ರಕೃಪೆ: Brad Coy

ಅದ್ಭುತ ದಂತಕಥೆಯ ಮೀನಾಕ್ಷಿ ದೇವಾಲಯ:
ವೈಗೈ ನದಿ ತಟದಲ್ಲಿರುವ ಮದುರೈ ತಮಿಳುನಾಡಿನ ಪ್ರಮುಖ ನಗರವಾಗಿದ್ದು ಭಾರತದ ಹಲವು ಪ್ರಮುಖ ಸ್ಥಳಗಳಿಂದ ಸುಲಭವಾಗಿ ತಲುಪಬಹುದು. ಚೆನ್ನೈ, ಬೆಂಗಳೂರು, ಕೊಯಮತ್ತೂರುಗಳಿಂದ ನಿಯಮಿತವಾಗಿ ಬಸ್ಸುಗಳು ಮದುರೈಗೆ ದೊರೆಯುತ್ತವೆ. ಬೆಂಗಳೂರಿನಿಂದ ಮದುರೈ 435 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Pablo Necochea


Click it and Unblock the Notifications
















