ಪಾರ್ವತಿಯ ಅವತಾರವಾದ ಶಕ್ತಿ, ದುರ್ಗೆ, ಕಾಳಿ, ಅಂಬಿಕೆ ಎಂತೆಲ್ಲ ಕರೆಯಲ್ಪಡುತ್ತಾಳೆ ಈ ದೇವಿ. ದಂತ ಕಥೆಯೊಂದರ ಪ್ರಕಾರ, ಈ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಕೇರಳದ ಒಂದು ಪ್ರಸಿದ್ಧ ದೇವಾಲಯದಲ್ಲಿ ಭಕ್ತರನ್ನು ಹರಸಿ ನಂತರದ ಸಮಯದಲ್ಲಿ ಕರ್ನಾಟಕದಲ್ಲಿರುವ ತನ್ನ ತವರು ನೆಲೆಗೆ ಬಂದು ನೆಲೆಸುತ್ತಾಳೆ.
ಹಾಗಾಗಿ ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ರಾಜ್ಯದಿಂದಲೂ ಸಹ ಭಕ್ತಾದಿಗಳು ಈಕೆಯ ದರ್ಶನ ಕೋರಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಷ್ಟೆ ಅಲ್ಲ, ಗಾನ ಗಂಧರ್ವ ನಾಮಾಂಕಿತ, ಕೇರಳದ ಮಲಯಾಳಂ ಭಾಷೆಯ ಸಾಂಸ್ಕೃತಿಕ ಪ್ರತಿನಿಧಿ ಎಂದೆ ಬಿಂಬಿತವಾಗಿರುವ, ಅದ್ಭುತ ಸಂಗೀತಗಾರ ಹಾಗೂ ಗಾಯಕ ಕೆ.ಜೆ ಯೇಸುದಾಸ್ ಅವರೂ ಸಹ ಈ ದೇವಿಯ ಅಭಿಮಾನಿ.
ಹಾಗಾದರೆ, ಬಹುಶಃ ನಿಮಗೂ ಗೊತ್ತಾಗಿರಬೇಕಲ್ಲವೆ ಈ ದೇವಿ ಯಾರು ಹಾಗೂ ಈಕೆ ನೆಲೆಸಿರುವ ಈ ಕ್ಷೇತ್ರ ಯಾವುದೆಂದು? ಹೌದು, ಇದು ಪರಮ ಪವಿತ್ರ ದೇವಿಯಾದ ದೇವಿ ಮೂಕಾಂಬಿಕಾ ಹಾಗೂ ಈಕೆ ನೆಲೆಸಿರುವ ಶ್ರೀಕ್ಷೇತ್ರವೆ ಕೊಲ್ಲೂರು. ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಒಂದು ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿ ಕರ್ನಾಟಕದಲ್ಲೆ ಸಾಕಷ್ಟು ಪ್ರಸಿದ್ಧಿಯನ್ನು ಗಳಿಸಿದೆ.
ಪ್ರಸ್ತುತ ಲೇಖನದ ಮೂಲಕ ಈ ದೇವಿಯು ಬೆಳಗಿನ ಸಮಯದಲ್ಲಿ ತೆರಳುವ ಕೇರಳದ ದೇವಾಲಯ ಹಾಗೂ ಕರ್ನಾಟಕದ ಮೂಕಾಂಬಿಕೆಯ ದೇವಾಲಯ ಮತ್ತು ಕ್ಷೇತ್ರಗಳ ಕುರಿತು ಮಾಹಿತಿ ನೀಡುತ್ತದೆ. ಅವಕಾಶ ದೊರೆತರೆ ಒಮ್ಮೆ ಖಂಡಿತವಾಗಿಯೂ ಈ ಎರಡೂ ದೇವಾಲಯಗಳಿಗೊಮ್ಮೆ ಭೇಟಿ ನೀಡಿ.
ಮೂಕಾಂಬಿಕಾ ಸನ್ನಿಧಿ
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು ಶ್ರೀಕ್ಷೇತ್ರವು ತನ್ನಲ್ಲಿರುವ ಪಾರ್ವತಿಯ ಅವತಾರವಾದ ಮೂಕಾಂಬಿಕೆಯ ದೇವಿಯ ಸನ್ನಿಧಿಯಿಂದಾಗಿ ಸಾಕಷ್ಟು ಮಹತ್ವಗಳಿಸಿದೆ. ವರ್ಷಪೂರ್ತಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಿಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: syam
ಹೇಗೆ ತಲುಪಬಹುದು?
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಚಿಕ್ಕ ದೇವಾಲಯ ಪಟ್ಟಣವಾದ ಕೊಲ್ಲೂರು ಕುಂದಾಪುರ ತಾಲೂಕು ಕೇಂದ್ರದಿಂದ 38 ಕಿ.ಮೀ, ಉಡುಪಿ ನಗರ ಕೇಂದ್ರದಿಂದ 75 ಕಿ.ಮೀ ಹಾಗೂ ಬೆಂಗಳೂರಿನಿಂದ 458 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ. ಬೆಂಗಳೂರಿನಿಂದ ಮೂಕಾಂಬಿಕಾ ರಸ್ತೆಯವರೆಗೆ ರೈಲು ಲಭ್ಯವಿದ್ದು, ಬೆಂಗಳೂರು, ಉಡುಪಿ ಹಾಗೂ ಕುಂದಾಪುರಗಳಿಂದ ಬಸ್ಸುಗಳೂ ಸಹ ದೊರೆಯುತ್ತವೆ.
ಚಿತ್ರಕೃಪೆ: vivek raj
ಶ್ರೀಚಕ್ರದ ದೇವಿ
ಕೊಲ್ಲೂರಿನಲ್ಲಿ ದೇವಿ ಮೂಕಾಂಬಿಕೆಯು ಶಿವಲಿಂಗ ರೂಪದಲ್ಲಿ ನೆಲೆಸಿದ್ದು ಶಿವ ಹಾಗೂ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆ. ಅಲ್ಲದೆ ಇಲ್ಲಿರುವ ಶ್ರೀ ಚಕ್ರದ ಮೇಲಿನ ಪಂಚಲೋಹದ ಮೂಕಾಂಬಿಕೆಯ ವಿಗ್ರಹವನ್ನು ಅದ್ವೈತ ಗುರು ಶ್ರೀ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ.
ಚಿತ್ರಕೃಪೆ: wikimedia
ಇತರೆ ದೇಗುಲಗಳು
ತ್ರಿಗುಣಂ ತ್ರಿಗುಣಾಕಾರಂ ಎನ್ನುವಂತೆ ಈ ದೇವಿಯು ಮೂರು ರೂಪಗಳನ್ನು ಪ್ರತಿನಿಧಿಸುವ ಪ್ರಭಾವಶಾಲಿ ದೇವಿ ಎನ್ನಲಾಗಿದ್ದು ಭಕ್ತರಿಗೆ ಶೀಘ್ರವಾಗಿ ಒಲಿಯುತ್ತಾಳೆಂಬ ನಂಬಿಕೆ ಇಲ್ಲಿನ ಜನರದ್ದು. ಮೂಕಾಂಬಿಕೆಯ ಸನ್ನಿಧಿಯಲ್ಲಿ ಇತರೆ ದೇವರುಗಳ ಸನ್ನಿಧಿಯಿರುವುದನ್ನೂ ಸಹ ಕಾಣಬಹುದು.
ಚಿತ್ರಕೃಪೆ: Iramuthusamy
ಹೀಗಿದೆ ಸ್ಥಳಪುರಾಣ
ಇನ್ನೂ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಂತ ಕಥೆಯೊಂದು ಹೀಗಿದೆ. ಹಿಂದೆ ಈ ಪ್ರದೇಶದಲ್ಲಿ ಕೌಮಾಸುರನೆಂಬ ದೈತ್ಯನು ವಾಸಿಸುತ್ತಿದ್ದನು. ತನ್ನ ಅಪಾರವಾದ ಮಾಯಾ ಶಕ್ತಿಗಳಿಂದ ಎಲ್ಲರಿಗೂ ಹಿಂಸಿಸುತ್ತಿದನು. ದೇವತೆಗಳನ್ನೂ ಸಹ ಬಿಟ್ಟಿರಲಿಲ್ಲ. ಇವನ ಶಕ್ತಿಯನ್ನು ಎದುರಿಸಲಾಗದೆ ದೇವತೆಗಳು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದರು.
ಚಿತ್ರಕೃಪೆ: GaneshSB
ಎಲ್ಲೆಲ್ಲೂ ಕೋಲಾಹಲ
ಹೀಗಿರುವಾಗ ಕೌಮಾಸುರನ ಅಂತ್ಯ ಸಮೀಪಿಸುತ್ತಿದೆ ಎಂಬ ಸುದ್ದಿಯು ಎಲ್ಲೆಡೆ ಆವರಿಸಿ ದೇವತೆಗಳು ಅತ್ಯಂತ ಸಂತಸಪಟ್ಟರು. ಇದರಿಂದ ವಿಚಲಿತನಾದ ದೈತ್ಯ ಹೇಗಾದರೂ ಮಾಡಿ ಸಾವನ್ನು ಗೆಲ್ಲಬೇಕೆಂಬ ಉತ್ಕಟ ಮನೋಭಾವನೆಯಿಂದ ಅತ್ಯಂತ ಘೋರ ತಪಸ್ಸಾಚರಿಸಿ ಶಿವನನ್ನು ಮೆಚ್ಚಿಸಿಕೊಂಡನು.
ಚಿತ್ರಕೃಪೆ: Ashok Prabhakaran
ದೇವತೆಗಳಿಗೆ ಸಮಾಧಾನ
ಇತ್ತ ದೇವತೆಗಳು ತ್ರಿಮೂರ್ತಿಗಳ ಮೊರೆ ಹೋಗಲು ಸರಸ್ವತಿ ದೇವಿಯು ಅವರಿಗೆ ತನ್ನ ಅಭಯ ಹಸ್ತ ನೀಡಿ ಸಮಾಧಾನ ಪಡಿಸಿದಳು ಹಾಗೂ ಶಿವನು ಪ್ರತ್ಯಕ್ಷನಾಗಿ ಕೌಮಾಸುರನಿಗೆ ವರ ಕೇಳಲು ಹೇಳಿದಾಗ ಸರಸ್ವತಿಯು ಆತನನ್ನು ಮೂಕನನ್ನಾಗಿ ಮಾಡಿ ಏನು ಮಾತನಾಡಲು ಬಾರದಂತೆ ಮಾಡಿದಳು. ಹಾಗಾಗಿ ಶಿವನಿಂದ ಯಾವ ವರದಾನವನ್ನೂ ಕೇಳಲು ದೈತ್ಯ ವಿಫಲನಾಗಿ ಮೂಕಾಸುರನೆಂದು ಹೆಸರುಗಳಿಸಿದನು. ಶ್ರೀಕ್ಷೇತ್ರ ಕೊಲ್ಲೂರಿಗೆ ಸ್ವಾಗತ!
ಚಿತ್ರಕೃಪೆ: Vinayaraj
ಹೆಸರು ಬರಲು ಕಾರಣ
ದೈತ್ಯನು ಮೂಕಾಸುರನಾದರೂ ಶಕ್ತಿಗೇನೂ ಕಮ್ಮಿ ಇರಲಿಲ್ಲ. ಕೋಪಾವೇಶಗಳಿಂದ ಎಲ್ಲರಿಗೂ ಇನ್ನಷ್ಟು ಕಿರುಕುಳ ನೀಡಲಾರಂಭಿಸಿದನು. ಹೀಗಿರುವ ದೇವಿಯರು ಒಂದೆಡೆ ಕಲೆತು ತಮ್ಮೆಲ್ಲ ಶಕ್ತಿಯನ್ನು ಒಂದೆಡೆ ಕ್ರೋಢಿಕರಿಸಿ ಇನ್ನೊಂದು ಶಕ್ತಿ ದೇವಿಯ ಅವತಾರಕ್ಕೆ ಕಾರಣರಾದರು. ಹೀಗೆ ರೂಪಗೊಂಡ ದೇವಿಯು ಮೂಕಾಸುರನನ್ನು ಸಂಹರಿಸಿ, ಮೂಕಾಂಬಿಕೆ ದೇವಿಯಾಗಿ ಇಲ್ಲಿ ನೆಲೆಸಿದಳು.
ಚಿತ್ರಕೃಪೆ: Yogesa
ಚಂದ್ರಮೌಳೀಶ್ವರ ಸನ್ನಿಧಿ
ದೇವಿಯು ಮೂಕಾಸುರನನ್ನು ವಧಿಸಿದ ಸ್ಥಳವು ಇಂದಿಗೂ ಇಲ್ಲಿದ್ದು ಅದನ್ನು ಮರಣ ಕಟ್ಟೆ ಎಂದೆ ಕರೆಯುತ್ತಾರೆ. ಮೂಕಾಂಬಿಕೆಯ ಸನ್ನಿಧಿಯಲ್ಲಿ ಇತರೆ ದೇಗುಲಗಳೂ ಸಹ ಇದ್ದು ಶಿವನ ಚಂದ್ರಮೌಳೀಶ್ವರನಾಗಿ ನೆಲೆಸಿರುವ ಸನ್ನಿಧಿಯು ಸಾಕಷ್ಟು ಪ್ರಾಮುಖ್ಯತೆಗಳಿಸಿದೆ ಕಾರಣ ಚಂದ್ರಮೌಳೀಶ್ವರನ ವಿಗ್ರಹವನ್ನು ಶ್ರೀ ಶಂಕರರೆ ಖುದ್ದಾಗಿ ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ.
ಚಿತ್ರಕೃಪೆ: Yogesa
ಸರಸ್ವತಿ ಪ್ರತ್ಯಕ್ಷ
ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಇನ್ನೊಂದು ದಂತಕಥೆಯ ಪ್ರಕಾರ, ಒಂದೊಮ್ಮೆ ಜ್ಞಾನದಾಯಿನಿಯಾದ ಸರಸ್ವತಿ ಮಾತೆಯ ಯಾವ ದೇವಾಲಯವು ಕೇರಳ ಪ್ರಾಂತದಲ್ಲಿರದಿದ್ದುದನ್ನು ಮನಗಂಡ ಶಂಕರರು ಅತ್ಯಂತ ಭಕ್ತಿ ಶೃದ್ಧೆಗಳಿಂದ ಧ್ಯಾನ ತಪಸ್ಸು ಮಾಡಿ ಸರಸ್ವತಿಯನ್ನು ಮೆಚ್ಚಿಸಿದರು. ಇದರಿಂದ ಪ್ರಸನ್ನಳಾದ ದೇವಿಯು ಶಂಕರರನ್ನು ಕುರಿತು ಬೇಡಲು ಕೇಳಿದಾಗ, ಶಂಕರರು ತನ್ನೊಡನೆ ತನ್ನೂರಿಗೆ ಬಂದು ನೆಲೆಸುವಂತೆ ಪ್ರಾರ್ಥಿಸಿದನು.
ಚಿತ್ರಕೃಪೆ: Yogesa
ಒಪ್ಪಿ ನಡೆದ ಬಗೆ
ಅದಕ್ಕೆ ದೇವಿಯು ಒಪ್ಪಿದರೂ ಒಂದು ಶರತ್ತನ್ನು ಹಾಕಿದಳು. ಆ ಪ್ರಕಾರವಾಗಿ ಶಂಕರರು ಮುಂದೆ ನಡೆಯುತ್ತ ಸಾಗಬೇಕು ಹಾಗೂ ಆಕೆಯು ಶಂಕರರ ಹಿಂದೆಯೆ ಅವರನ್ನು ಅನುಸರಿಸುತ್ತ ಬರುವವಳೆಂದೂ, ಯಾವುದೆ ಕಾರಣಕ್ಕೂ ತಿರುಗಿ ನೋಡಬಾರದೆಂದೂ, ಆದಾಗ್ಯೂ ಶಂಕರರು ಹಿಂತಿರುಗಿ ನೋಡಿದ್ದಲ್ಲಿ ತಾನು ಎಲ್ಲಿರುವಳೊ ಅಲ್ಲೆ ಶಾಶ್ವತವಾಗಿ ನೆಲೆಸಿ ಬಿಡುವೆನೆಂದಳು. ಇದಕ್ಕೆ ಒಪ್ಪಿದ ಶಂಕರರು ಮುನ್ನಡೆಯುತ್ತ ಸಾಗಿದರು.
ಚಿತ್ರಕೃಪೆ: Yogesa
ಹೀಗೆ ನೆಲೆನಿಂತ ದೇವಿ
ದೇವಿಯು ಅವರ ಹಿಂದೆಯೆ ನಡೆಯತೊಡಗಿದಳು. ಹೀಗೆ ದೇವಿಯು ನಡೆಯುತ್ತಿರಲು ಅವಳ ಕಾಲಿನಿಂದುಂಟಾಗುತ್ತಿದ್ದ ಗೆಜ್ಜೆಯ ಸದ್ದು, ಶಂಕರರಿಗೆ ದೇವಿಯು ಹಿಂದೆಯೆ ಬರುತ್ತಿದ್ದುದರ ಸೂಚನೆ ನೀಡುತ್ತಿತ್ತು. ಹೀಗೆ ಕೊಡಚಾದ್ರಿಯ ಬೆಟ್ಟಗಳಲ್ಲಿ ನಡೆಯುತ್ತಿದ್ದಾಗ ಒಂದೊಮ್ಮೆ ಗೆಜ್ಜೆಯ ಸದ್ದು ಆಕಸ್ಮಿಕವಾಗಿ ನಿಂತು ಹೋಯಿತು. ಇದರಿಂದ ವಿಚಲಿತರಾದ ಶಂಕರರು ದೇವಿಯು ಇರುವಳೊ, ಇಲ್ಲವೊ ಎಂದು ಹಿಂತಿರುಗಿ ನೋಡಿಯೆ ಬಿಟ್ಟರು.
ಚಿತ್ರಕೃಪೆ: Yogesa
ಪಟ್ಟು ಬಿಡದ ಶಂಕರರು
ಆದರೆ ದೇವಿ ಹಿಂದೆಯೆ ಇದ್ದಳು. ಇದರಿಂದ ಆಕೆಯು ವಿಧಿಸಿದ್ದ ಶರತ್ತು ಮುರುದಿದ್ದುದರಿಂದ ದೇವಿಯು ಅಲ್ಲೆ ನೆಲೆಸಿದಳು ಹಾಗೂ ಆ ಕ್ಷೇತ್ರವೆ ಇಂದಿನ ಕೊಲ್ಲೂರು ಎಂದು ಹೇಳಲಾಗುತ್ತದೆ. ಆದರೆ ಶಂಕರರು ಅಷ್ಟು ಸುಲಭವಾಗಿ ಬಿಟ್ಟು ಕೊಡುವ ಜಾಯಮಾನದವರಲ್ಲ! ವಿಧ ವಿಧವಾಗಿ ದೇವಿಯನ್ನು ಪ್ರಾರ್ಥಿಸಿ, ಕ್ಷಮಾಪಣೆ ಕೇಳಿದರು.
ಚಿತ್ರಕೃಪೆ: Vedamurthy.j
ದೇವಿಯ ವರದಾನ
ಅವರ ಮನೋಸ್ಥೈರ್ಯ ಹಾಗೂ ಭಕ್ತಿಗೆ ಪ್ರಸನ್ನಳಾದ ದೇವಿಯು ಶಂಅಕರರನ್ನು ಕುರಿತು ನೀನು ಹೇಳುವ ಸ್ಥಳದಲ್ಲಿ ಬೆಳಿಗ್ಗೆ ಸಮಯದಲ್ಲಿ ಬಂದು ಭಕ್ತರಿಗೆ ದರ್ಶನ ನೀಡಿ ಮತ್ತೆ ಮಧ್ಯಾಹ್ನದ ನಂತರ ಕೊಲ್ಲೂರಿಗೆ ಮರುಳುವುದಾಗಿ ಹೇಳಿದಳು. ಇದಕ್ಕೆ ಶಂಕರರು ಹರುಶಗೊಂಡು ದೇವಿಯನ್ನು ಕೊಂಡಾಡಿದರು.
ಚಿತ್ರಕೃಪೆ: Yogesa
ಬೆಳಿಗ್ಗೆ ಸರಸ್ವತಿ
ಹೀಗೆ ಪ್ರತೀತಿಯಂತೆ ಮೂಕಾಂಬಿಕೆ ದೇವಿಯು ಬೆಳಿಗ್ಗೆಯ ಸಮಯದಲ್ಲಿ ಭಕ್ತರನ್ನು ಹರಸಲು ತೆರಳುವ ದೇವಾಲಯವೆ ಇಂದು ಕೇರಳ ರಾಜ್ಯದಲ್ಲಿರುವ ಚೊಟ್ಟನಿಕ್ಕರಾ ಭಗವತಿ ದೇವಾಲಯ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿರುವ ಚೊಟ್ಟನಿಕ್ಕರಾ ಎಂಬ ಚಿಕ್ಕ ಹಾಗೂ ಪ್ರಸಿದ್ಧವಾದ ದೇವಾಲಯ ಪಟ್ಟಣದಲ್ಲಿ ಈ ದೇವಾಲಯವಿದೆ.
ಚಿತ್ರಕೃಪೆ: Roney Maxwell
ವಿಶ್ವಕರ್ಮ ಸ್ಥಪತಿಯ ಶೈಲಿ
ಕೇರಳ ರಾಜ್ಯದಲ್ಲೆ ಪ್ರಖ್ಯಾತ ಹಾಗೂ ಹೆಸರುವಾಸಿಯಾದ ದೇವಾಲಯಗಳಲ್ಲಿ ಒಂದಾಗಿ ಪರಿಗಣಿಸಲಾಗುವ ಈ ದೇವಾಲಯವು ವಿಶ್ವಕರ್ಮ ಸ್ಥಪತಿಯ ವಾಸ್ತುಶೈಲಿಗೆ ಹೆಸರುವಾಸಿಯಾದ ದೇವಾಲಯ ರಚನೆಯೂ ಸಹ ಆಗಿದೆ. ವಿಶ್ವಕರ್ಮ ಸ್ಥಪತಿಯಲ್ಲಿ ಕಟ್ಟಿಗೆಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾಗುವ ರಚನೆಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Ssriram mt
ಧಾರ್ಮಿಕ ಮಹತ್ವಗಳಿಸಿದ ದೇಗುಲ
ಈ ಭಗವತಿ ದೇವಿ ಅಂತಿಂಥ ಸಾಮಾನ್ಯ ದೇವಿಯಲ್ಲ. ದಿನದ ಮೂರು ಹೊತ್ತಿನಲ್ಲಿ ಮೂರು ವಿವಿಧ ಶಕ್ತಿ ದೇವಿಯರ ಅವತಾರವಾಗಿ ಭಕ್ತರನ್ನು ಹರಸುವಾಕೆ ಈ ದೇವಿ. ಬೆಳಿಗ್ಗೆ ಸಮಯದಲ್ಲಿ ಶ್ವೇತ ವರ್ಣದ ಸೀರೆಯಿಂದ ಕಂಗೊಳಿಸುವ ಸರಸ್ವತಿ ದೇವಿಯಾಗಿ ಭಕ್ತರನ್ನು ಹರಸುತ್ತಾಳೆ. ಅದನ್ನೆ ಮೂಕಾಂಬಿಕೆ ದೇವಿಯನ್ನಾಗಿ ಆರಾಧಿಸಲಾಗುತ್ತದೆ.
ಚಿತ್ರಕೃಪೆ: Ssriram mt
ಅಲಂಕಾರಗಳೂ ವಿಭಿನ್ನ!
ಅದೆ ಮಧ್ಯಾಹ್ನದ ಸಮಯ ಬಂತೆಂದರೆ ಸಾಕು, ಕಡುಗೆಂಪು ವರ್ಣದ ವೈಭವಯುತವಾದ ಸೀರೆ ಹಾಗೂ ಅದ್ಭುತ ಆಭರಣಗಳ ಅಲಂಕಾರದಿಂದ ಕಂಗೊಳಿಸುತ್ತ ಲಕ್ಷ್ಮಿಯಾಗಿ ಭಕ್ತರ ದಾರಿದ್ರ್ಯವನ್ನು ನಿವಾರಿಸುತ್ತಾಳೆ. ಇನ್ನೂ ಸಂಜೆಯ ಸಮಯದಲ್ಲಿ ನೀಳ ವರ್ಣದ ವಸ್ತ್ರ ಧರಿಸಿ ಸಾಕ್ಷಾತ್ ಶಕ್ತಿಯ ಅವತಾರವಾದ ದುರ್ಗಾದೇವಿಯಾಗಿ ಭಕ್ತರ ತೊಂದರೆಗಳನ್ನು ನಿವಾರಿಸುತ್ತಾಳೆ.
ಚಿತ್ರಕೃಪೆ: Ssriram mt
ಭೂತ-ಪ್ರೇತಗಳ ಕಾಟವೂ ಮಾಯವಾಗುವುದಂತೆ!
ಈ ದೇವಾಲಯದ ಇನ್ನೊಂದು ವಿಶೇಷವೆಂದರೆ, ಮಾನಸಿಕವಾಗಿ ಅಸ್ವಸ್ಥರಾಗಿರುವವರು ಹಾಗೂ ಭೂತ-ಪ್ರೇತಾತ್ಮಗಳ ಕಾಟದಿಂದ ಬಳಲುತ್ತಿರುವವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ಎಲ್ಲ ತೊಂದರೆಗಳು ನಿವಾರಣೆಯಾಗುತ್ತದೆಂದು ಹೇಳಲಾಗುತ್ತದೆ.
ಚಿತ್ರಕೃಪೆ: Ssriram mt