ಮಗನಿಂದಲೆ ತಂದೆಗೆ ಶಿಕ್ಷಣ ಜ್ಞಾನ ಬೋಧನೆಯಾದರೆ ಹೇಗಿರುತ್ತದೆ? ಎಲ್ಲ ತಂದೆಗೂ ತನ್ನ ಮಗನ ಮೇಲೆ ಅಪಾರ ಗೌರವ, ಪ್ರೀತಿ ಉಂಟಾಗುವುದು ಸಹಜವೆ ಅಲ್ಲವೆ. ಅದೇ ರೀತಿಯಾಗಿ ಶಿವನೂ ಸಹ ಇಂತಹ ಒಂದು ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾನೆಂದರೆ ಅಚ್ಚರಿಯಾದರೂ ಸತ್ಯ. ಶಿವನಿಗೆ ಆ ಜ್ಞಾನ ಬೋಧೆ ಮಾಡಿದವನೆ ಅವನ ಪುತ್ರನಾದ ಮುರುಗನ್ ಅಥವಾ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯ ಸ್ವಾಮಿ.
ಷಣ್ಮುಖ ತಾನೆ ಬಯಸಿ ನೆಲೆಸಿರುವ ಶೃಂಗಗಿರಿ
ಈ ಸುಬ್ರಹ್ಮಣ್ಯ ನೆಲೆಸಿರುವ ದೇವಾಲಯವೆ ಸ್ವಾಮಿನಾಥ ಸ್ವಾಮಿ ದೇವಾಲಯ. ಇದು ತಂಜಾವೂರು ಜಿಲ್ಲೆಯ ಸ್ವಾಮಿಮಲೈ ಪಟ್ಟಣದಲ್ಲಿರುವ ಬಾಲ ಮುರುಗನ ಒಂದು ಪ್ರಸಿದ್ಧ ದೇವಾಲಯವಾಗಿದೆ. ಮತ್ತೊಂದು ಪುಣ್ಯಕ್ಷೇತ್ರವಾದ ಕುಂಭಕೋಣಂನಿಂದ ಕೇವಲ ಐದು ಕಿ.ಮೀ ದೂರದಲ್ಲಿರುವ ಸ್ವಾಮಿಮಲೈ ಮುರುಗನ್ ದೇವಾಲಯ ತಮಿಳುನಾಡಿನ ಆರುಪಡೈವೀಡು ಎಂದು ಹೇಳಲಾಗುವ ಆರು ಪವಿತ್ರ ಮುರುಗನ ದೇವಾಲಯಗಳ ಪೈಕಿ ಒಂದಾಗಿದೆ. ಹಾಗಾಗಿ ಧರ್ಮಿಕ ಮಹತ್ವ ಪಡೆದ ಕ್ಷೇತ್ರವಾಗಿ ಸ್ವಾಮಿಮಲೈ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Jothi Balaji
ಕಾವೇರಿ ನದಿ ತಟದಲ್ಲಿರುವ ಸ್ವಾಮಿಮಲೈನ ಚಿಕ್ಕ ಬೆಟ್ಟವೊಂದರ ಮೇಲೆ ಸ್ಥಿತವಿರುವ ಮುರುಗನ ಈ ದೇವಾಲಯವು ಆರು ಹಾಗೂ ಅದರ ಗುಣಲಬ್ಧದ ಸಂಖೆಯೊಂದಿಗೆ ವಿಶೇಷವಾದ ನಂಟನ್ನೆ ಹೊಂದಿದೆ ಎಂದು ಹೇಳಬಹುದು. ಏಕೆಂದರೆ, ಈ ದೇವಾಲಯ ಸ್ಥಿತವಿರುವ ಬೆಟ್ಟ 60 ಅಡಿಗಳಷ್ಟು ಎತ್ತರವಿದ್ದರೆ, ಹತ್ತಲು 60 ಮೆಟ್ಟಿಲುಗಳಿವೆ. ಮುರುಗನ ವಿಗ್ರಹ ಆರು ಅಡಿಯಿದ್ದರೆ ದೇವಾಲಯದಲ್ಲಿ ನಿತ್ಯ ಆರು ವಿಧಿ ವಿಧಾನಗಳು ನಡೆಯುತ್ತವೆ.
ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Jalakandapuram
ದಂತಕಥೆಯ ಪ್ರಕಾರ, ಹಿಂದೊಮ್ಮೆ ಬ್ರಹ್ಮನು ಲೋಕದಲ್ಲಿ ಜೀವಿಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ನಿರತನಾದಾಗ ಕೈಲಾಸಕ್ಕೆ ಭೇಟಿ ನೀಡುವ ಸಂದರ್ಭ ಒದಗಿ ಬರುತ್ತದೆ. ಹಾಗೆ ಕೈಲಾಸಕ್ಕೆ ಬಂದ ಬ್ರಹ್ಮ ಅಲ್ಲಿದ್ದ ಮುರುಗನನ್ನು ಅಲಕ್ಷಿಸಿ ಮುಂದೆ ಹೋಗುತ್ತಾನೆ. ಇದರಿಂದ ಕೋಪಗೊಂಡ ಸುಬ್ರಹ್ಮಣ್ಯ ಬ್ರಹ್ಮನನ್ನು ತಡೆದು ಯಾವ ರಿತಿಯಾಗಿ ಜೀವಿಗಳನ್ನು ಸೃಷ್ಟಿಸುತ್ತಿರುವೆ ಎಂದು ಕೇಳುತ್ತಾನೆ. ಅದಕ್ಕೆ ಬ್ರಹ್ಮನು ವೇದಗಳನುಸಾರವಾಗಿ ಜೀವಿಗಳ ಸೃಷ್ಟಿ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದಾಗ, ಸುಬ್ರಹ್ಮಣ್ಯನು ಬ್ರಹ್ಮನಿಗೆ ವೇದಗಳನ್ನು ಉಚ್ಛರಿಸುವಂತೆ ನಿವೇದಿಸಿಕೊಳ್ಳುತ್ತಾನೆ.
ಚಿತ್ರಕೃಪೆ: பா.ஜம்புலிங்கம்
ಅದರಂತೆ ಬ್ರಹ್ಮನು ಮೊದಲನೇಯದಾಗಿ ಓಂ ಎಂದು ಹೇಳುತ್ತಲೆ ಸುಬ್ರಹ್ಮಣ್ಯನು ಪ್ರಣವನಾದ "ಓಂ" ಶಬ್ದದ ಅರ್ಥ ಮಹತ್ವ ವಿವರಿಸುವಂತೆ ಕೇಳುತ್ತಾನೆ. ಆಗ ಬ್ರಹ್ಮನು ಅಚ್ಚರಿಗೊಂಡು ವಿವರಿಸಲಾಗದೆ ಅಸಹಾಯಕನಾಗಿಬಿಡುತ್ತಾನೆ. ಕೋಪದಿಂದಿದ್ದ ಸುಬ್ರಹ್ಮಣ್ಯನು ಬ್ರಹ್ಮನಿಗೆ ಶಿಕ್ಷಿಸಿ ಅವನಿಂದ ಜೀವ ಸೃಷ್ಟಿ ಕಾರ್ಯ ತಾನೆ ಕೈಗೊಂಡು ಪ್ರಾರಂಭಿಸುತ್ತಾನೆ. ಇದರಿಂದ ಗೊಂದಲಗೊಂಡ ದೇವ ದೇವತೆಯರು ವಿಷ್ಣುವಿನನ್ನು ಬೇಡಿಕೊಳ್ಳುತ್ತಾರಾದರೂ ಯಾವ ಸಫಲತೆಯು ದೊರೆಯುವುದಿಲ್ಲ. ಕೊನೆಗೆ ಸ್ವತಃ ಶಿವನೆ ಮಗನನ್ನು ಈ ಕಾರ್ಯ ಕೈಬಿಡುವಂತೆ ತಿಳಿ ಹೇಳಲು ಕಾರ್ತಿಕೇಯನ ಹತ್ತಿರ ಬರುತ್ತಾನೆ.
ಚಿತ್ರಕೃಪೆ: பா.ஜம்புலிங்கம்
ಹೀಗೆ ಬಂದ ಶಿವನಿಗೆ ಸ್ವತಃ ಅವನ ಪುತ್ರನೆ ಆದ ಮುರುಗನು ಪ್ರಣವನಾದವಾದ "ಓಂ" ಶಬ್ದದ ವಿವರಣೆಯನ್ನು, ರಹಸ್ಯವನ್ನು ಹಾಗೂ ಅದರ ಮಹತ್ವವನ್ನು ಅಚ್ಚುಕಟ್ಟಾಗಿ ಬೋಧಿಸುತ್ತಾನೆ. ಈ ಸಂದರ್ಭದಲ್ಲಿ ಮಗನ ಅಪಾರ ಜ್ಞಾನಕ್ಕೆ ಮೂಕವಿಸ್ಮಿತನಾದ ಶಿವನು ಸಾಕ್ಷಾತ್ ಶಿಷ್ಯನಂತೆಯೆ ಕುಳಿತು ಸುಬ್ರಹ್ಮಣ್ಯನು ಗುರುವಿನ ಸ್ಥಾನ ಅಲಂಕರಿಸುವಂತೆ ಮಾಡುತ್ತಾನೆ. ಹಾಗಾಗಿಯೆ ಇಲ್ಲಿ ನೆಲೆಸಿರುವ ಮುರುಗನಿಗೆ ಸ್ವಾಮಿನಾಥಸ್ವಾಮಿ ಅಂದರೆ ಶಿವನಿಗೆ ಗುರುವಾಗಿರುವ ಸ್ವಾಮಿ ಎಂಬ ಹೆಸರು ಬಂದಿದೆ.
ಶತ್ರುಭಯ ನಿವಾರಿಸುವ ಸುಬ್ರಹ್ಮಣ್ಯನ ಸನ್ನಿಧಿ!
ಇಂದಿಗೂ ಗುರು ಸ್ಥಾನ ಉನ್ನತದಲ್ಲಿರುವಂತೆ ಬೆಟ್ಟದ ಮೇಲೆ ಸ್ವಾಮಿನಾಥಸ್ವಾಮಿ ನೆಲೆಸಿದ್ದರೆ ಕೆಳಗೆ ಶಿವ ಹಾಗೂ ಮೀನಾಕ್ಷಿಯರ ದೇವಾಲಯವಿದೆ. ಇನ್ನೂ ಐತಿಹಾಸಿಕವಾಗಿ ತಿಳಿದುಬರುವ ವಿಚಾರವೆಂದರೆ ಈ ದೇವಾಲಯವು ಸಂಗಮರ ಕಾಲದಿಂದಲೂ ಅಂದರೆ ಎರಡನೇಯ ಶತಮಾನದಿಂದಲೂ ಪ್ರಚಲಿತದಲ್ಲಿದೆ ಎಂದು ಹೇಳಲಾಗುತ್ತದೆ.