ರಾಮಯಾಣ ನಮ್ಮ ಪವಿತ್ರವಾದ ಗ್ರಂಥವಾಗಿದೆ. ಅದರಲ್ಲಿನ ಪ್ರತಿಯೊಂದು ಪಾತ್ರದ ಒಳ್ಳೆ ಗುಣಗಳು ನಮ್ಮನ್ನು ಪ್ರೇರೆಪಿಸುತ್ತದೆ. ಇದರಲ್ಲಿ ಮುಖ್ಯವಾಗಿ ಶ್ರೀರಾಮಚಂದ್ರನ ಮಡದಿ ಸೀತಾ ಮಾತೆಯು ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಸ್ತ್ರೀ, ಸ್ತ್ರೀತನದ ದೈವತ್ವವಾಗಿಯೂ ಸಾರಿ ಹೇಳಲಾಗುತ್ತದೆ.
ಈಕೆ ಸುಖಕ್ಕಿಂತ ತನ್ನ ಜೀವನದಲ್ಲಿ ದುಃಖವೇ ಹೆಚ್ಚಾಗಿ ಅನುಭವಿಸಿದ ಸಾಧ್ವಿಯಾಗಿದ್ದಾಳೆ. ಈಕೆಯ ತಾಳ್ಮೆ, ಮಮತೆ, ಪ್ರೀತಿಯನ್ನು ನಾವು ಮೆಚ್ಚಲೇಬೇಕು. ಇಂದಿಗೂ ಸೀತಾ ಮಾತೆಯನ್ನು ಆದರ್ಶ ಪತ್ನಿಯಾಗಿ, ಆದರ್ಶ ಮಗಳಾಗಿ ಹಾಗು ಆದರ್ಶ ಸ್ತ್ರೀಯಾಗಿ ಪರಿಗಣಿಸಲಾಗುತ್ತದೆ. ಸೀತಾ ದೇವಿಯನ್ನು ಒಂದು ದೇವತೆಯಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಲೇಖನದಲ್ಲಿ ಸೀತಾ ಮಾತೆಗೆ ಮುಡಿಪಾದ ಕೆಲವು ಧಾರ್ಮಿಕ ತಾಣಗಳ ಬಗ್ಗೆ ತಿಳಿಯೊಣ.
ಮಿಥಿಲಾ
ಇಂದಿನ ನೇಪಾಳ ದೇಶದ ಮಿಥಿಲಾ ಪ್ರದೇಶದಲ್ಲಿರುವ ಈ ಭವ್ಯವಾದ ದೇವಾಲಯವು ಜಾನಕಿ ಮಾತೆ ಅಂದರೆ ಸೀತಾ ದೇವಿಗೆ ಮುಡಿಪಾದ ಒಂದು ಅದ್ಭುತವಾದ ದೇವಾಲಯವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಹಿಂದೆ ಈ ಪ್ರದೇಶವನ್ನು ಜನಕ ಮಹಾರಾಜನು ಆಳುತ್ತಿದ್ದನು. ಪ್ರಸ್ತುತ ಇಲ್ಲಿ ಸೀತಾ ದೇವಾಲಯವಾಗಿದೆ.
ವಾಸ್ತುಶೈಲಿ
ಇಂದು ಈ ಭವ್ಯವಾದ ಅರಮನೆಯು ಅದ್ಭುತವಾಗಿ ಕಂಗೊಳಿಸುತ್ತಿದೆ. ವಿಶೇಷವೆನೆಂದರೆ ರಜಪೂತ ಶೈಲಿಯ ಈ ವಾಸ್ತುಶೈಲಿಯು ಕಣ್ಣಿಗೆ ಕಟ್ಟುವಂತೆ ಇದೆ. ಇದು ರಾಜಪೂತರ ಅತ್ಯಂತ ಸುಂದರವಾದ ವಾಸ್ತುಶಿಲ್ಪ ಶೈಲಿ ಎಂದು ಪರಿಗಣಿಸಲಾಗಿದೆ.
ವಿವಾಹ ಪಂಚಮಿ
ಈ ಸುಂದರವಾದ ವಿವಾಹ ಪಂಚಮಿಯು ರಾಮನವಮಿ ಮತ್ತು ಇತರೆ ಕೆಲವು ಪ್ರಮುಖ ಉತ್ಸವಗಳ ಸಮಯದಲ್ಲಿ ವಿಜೃಭಣೆಯಿಂದ ಆಚರಿಸಲಾಗುತ್ತದೆ. ಇದು ವಿವಾಹ ಪಂಚಮಿ ಅಂದರೆ ಇಲ್ಲಿ ಸೀತಾ ದೇವಿಯ ಮದುವೆಯಾಗುತ್ತದೆ. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಆ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಮದುವೆಯಾದ ಸ್ಥಳ
ಇದು ಭಾರತ ದೇಶಕ್ಕೆ ಹೊಂದಿಕೊಂಡಿದೆ. ಅಂದರೆ ನೇಪಾಳ ಹಾಗು ಭಾರತದ ಸರಿಹದ್ದುವಿನಲ್ಲಿ ಈ ದೇವಾಲಯವಿದೆ. ಹಾಗಾಗಿಯೇ ಈ ದೇವಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ಈ ದೇವಾಲಯದ ಸ್ಥಳದಲ್ಲಿಯೇ ತನ್ನ ಶ್ರೀರಾಮಚಂದ್ರನನ್ನು ಸೀತಾ ಮಾತೆಯು ಸ್ವಯಂವರದ ಮೂಲಕ ಆಯ್ದು ವಿವಾಹವಾದಳು ಎಂದು ಅಲ್ಲಿನ ಸ್ಥಳ ಪುರಾಣ ಹೇಳುತ್ತದೆ.
ರಾಣಿ ನಿರ್ಮಾಣ ಮಾಡಿದ್ದಾಳೆ
1910 ರಲ್ಲಿ ಈ ಸುಂದರವಾದ ದೇವಾಲಯವನ್ನು ಭಾರತದ ತಿಕಂಗಡ್ ಸಾಮ್ರಾಜ್ಯದ ರಾಣಿ ವೃಷಭಾನು ಎಂಬುವವಳು ನಿರ್ಮಾಣ ಮಾಡಿದಳು ಎಂಬ ಇತಿಹಾಸವಿದೆ. ಈ ದೇವಾಲಯವನ್ನು " ನೌ ಲಖಿಯಾ ದೇವಾಲಯ" ಎಂದು ಸಹ ಕರೆಯುತ್ತಾರೆ. ಏಕೆಂದರೆ ಈ ದೇವಾಲಯದ ನಿರ್ಮಾಣಕ್ಕೆ ಆದ ಖರ್ಚು 9 ಲಕ್ಷ 9 ಸಾವಿರ ರೂ.
ವಯನಾಡ್
ಇಲ್ಲಿ ಸೀತಾ ದೇವಿ ಹಾಗು ಆಕೆಯ ಮಕ್ಕಳಾದ ಲವ-ಕುಶರಿಗೆ ಮೀಸಲಾದ ದೇವಾಲಯಗಳು ಇದು. ಇದನ್ನೇ ಸೀತಾ ಮಾತೆಯ ದೇವಾಲಯ ಅಥವಾ ಸೀತಾ ಲವ-ಕುಶ ದೇವಾಲಯ ಎಂದು ಕರೆಯುತ್ತಾರೆ. ಇದು ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ವಯನಾಡ್ ಜಿಲ್ಲೆಯಲ್ಲಿದೆ.
ಕೇವಲ 10 ಕಿ.ಮೀ
ವಯನಾಡ್ ಜಿಲ್ಲೆಯ ಆಡಳಿತ ಪಟ್ಟಣವಾದ ಕಲ್ಪೆಟ್ಟಾದಿಂದ ಸುಮಾರು 35 ಕಿ.ಮೀ ಗಳಷ್ಟು ದೂರದಲ್ಲಿರುವ ಪುಲ್ಪಲ್ಲಿ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. ಈ ಸ್ಥಳವು ಕರ್ನಾಟಕದ ಗಡಿಗೆ ಹತ್ತಿರದಲ್ಲಿದೆ. ಅಂದರೆ ಕೇವಲ 10 ಕಿ.ಮೀ ದೂರದಲ್ಲಿ ಮಾತ್ರ.
ಪುಲ್ಪಲ್ಲಿ
ಈ ವಿಶೇಷ ದೇವಾಲಯವನ್ನು ಕಾಣಬೇಕು ಎಂಬ ಹಂಬಲ ನಿಮ್ಮಲ್ಲಿ ಇದ್ದರೆ ಒಮ್ಮೆ ವಯನಾಡಿನ ಕಲ್ಪೆಟ್ಟಾಗೆ ತಲುಪಿ ಅಲ್ಲಿಂದ ದೊರೆಯುವ ಬಸ್ಸುಗಳ ಮೂಲಕ ಅಥವಾ ಬಾಡಿಗೆ ಟ್ಯಾಕ್ಸಿಗಳ ಮೂಲಕ ಪುಲ್ಪಲ್ಲಿ ಗ್ರಾಮವನ್ನು ಸುಲಭವಾಗಿ ತಲುಪಬಹುದಾಗಿದೆ.
ವಿಶೇಷ ಉತ್ಸವ
ಈ ದೇವಾಲಯದಲ್ಲಿ ವಿಷೇಶವಾಗಿ ಜನವರಿ ತಿಂಗಳಿನಲ್ಲಿ ವಿಜೃಂಬಣೆಯಿಂದ ಉತ್ಸವಗಳನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯದಲ್ಲಿ ನಡೆಯುವ ಉತ್ಸವಕ್ಕೆ ಪಾಲ್ಗೋಳ್ಳುತ್ತಾರೆ. ಕೇರಳ ರಾಜ್ಯದ ಅತಿರಥ ಮಹಾರಥ ರಾಜನೆಂದು ಕರೆಯಲ್ಪಡುವ ಕೇರಳದ ವರ್ಮ ಪಾಳಸ್ಸಿ ರಾಜ ಈ ದೇವಾಲಯವನ್ನು ನಿರ್ಮಾಣ ಮಾಡಿದ ಎನ್ನಲಾಗಿದೆ.
ಸೀತಾಮಡಿ
ಈ ಸೀತಾಮಡಿ ಇರುವುದು ಬಿಹಾರ ರಾಜ್ಯದ ಸೀತಾಮಡಿ ಜಿಲ್ಲೆಯ ಸೀತಾಮಡಿ ಪಟ್ಟಣದಲ್ಲಿ ಇಲ್ಲಿ ಪವಿತ್ರವಾದ ಕೊಳವಿದೆ. ಹಿಂದೆ ಇದೇ ಸ್ಥಳದಲ್ಲಿ ಜನಕ ಮಹಾರಾಜನು ಮಳೆ ತರಿಸುವ ಉದ್ದೇಶದಿಂದ ಇಂದ್ರನನ್ನು ಪ್ರಸನ್ನಗೊಳಿಸಲು ಭೂಮಿಯನ್ನು ಊಳುತ್ತಿರುವಾಗ ಮಣ್ಣಿನ ಮಡಕೆಯೊಂದರಲ್ಲಿ ಸೀತೆ ದೊರಕಿದಳು. ತದನಂತರ ಇಲ್ಲಿ ಕೊಳವನ್ನು ನಿರ್ಮಾಣ ಮಾಡಲಾಯಿತು. ಇದೊಂದು ಪವಿತ್ರವಾದ ಜಲವಾಗಿದ್ದು, ಸದಾ ಇಲ್ಲಿನ ನೀರು ಬಿಸಿಯಾಗಿರುತ್ತದೆ.
ಒಡಿಶಾ
ಒಡಿಶಾ ರಾಜ್ಯದ ಮಯೂರ್ಭಂಜ್ ಜಿಲ್ಲೆಯ ಬರಿಪಾಡಾ ಪಟ್ಟಣದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಸೀತಾ ಕುಂಡ ಇದಾಗಿದೆ. ಜಲಪಾತದಂತೆ ಧುಮುಕುತ್ತ ಕೊಳದಲ್ಲಿ ಶೇಖರಣೆಯಾಗುತ್ತದೆ. ಸೀತಾ ದೇವಿಗೆ ಮುಡಿಪಾದ ಕೊಳ ಇದಾಗಿದ್ದು, ಇದನ್ನು ಸೀತಾ ಕುಂಡ ಎಂದು ಕರೆಯುತ್ತಾರೆ.
ಕರ್ನಾಲ್
ಹರಿಯಾಣ ರಾಜ್ಯದ ಕರ್ನಾಲ್ ಜಿಲ್ಲೆಯ ಕರ್ನಾಲ್ ಪಟ್ಟಣದಲ್ಲಿರುವ ಉತ್ತರ ಭಾರತದ ಏಕೈಕ ಸೀತಾ ಮಾತೆಯ ದೇವಾಲಯವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಶ್ರೀಲಂಕಾ
ಹಿಂದಿನ ಸೀಲಾನ್ ಅಂದರೆ ಇಂದಿನ ಶ್ರೀಲಂಕಾ ದೇಶದ ಮಧ್ಯ ಭಾಗದಲ್ಲಿರುವ ನುವಾರ್ ಇಲಿಯಾ ಎಂಬ ನಗರದಿಂದ ಸುಮಾರು 5 ಕಿ.ಮೀ ದೂರದಲ್ಲಿ ಸೀತಾ ಮಾತೆಗೆ ಮುಡಿಪಾದ ಪ್ರಾಚೀನವಾದ ದೇವಾಲಯ ಇದಾಗಿದೆ. ಶ್ರೀಲಂಕಾಗೆ ಭೇಟಿ ನೀಡುವ ಭಾರತ ಪ್ರವಾಸಿಗರು ಈ ದೇವಾಲಯಕ್ಕೆ ಸಾಮಾನ್ಯವಾಗಿ ಭೇಟಿ ನೀಡುತ್ತಾರೆ.
ಲಂಕ
ಈ ಒಂದು ಸ್ಥಳದಲ್ಲಿಯೇ ಸೀತಾ ದೇವಿಯನ್ನು ರಾವಣನು ಅಪಹರಿಸಿ ಇಡಲಾಗಿತ್ತು ಎನ್ನಲಾಗಿದೆ. ಇಲ್ಲಿನ ಪರಿಸರವು ಸಾಕಷ್ಟು ರಮಣೀಯವಾಗಿದ್ದು, ಅದ್ಭುತವಾದ ಕಾಡು ಪ್ರದೇಶಗಳಿಂದ ಸುತ್ತುವರೆದಿದೆ. ಇಲ್ಲಿರುವ ನೀರಿನ ಮೂಲದ ಬಳಿ ದೊಡ್ಡ ವೃತ್ತಾಕಾರದ ಗುರುತುಗಳಿದ್ದು ಇವು ರಾವಣನ ಆನೆಗಳ ಹೆಜ್ಜೆಯ ಗುರುತು ಎನ್ನಲಾಗಿದೆ.