ಕೆಲವು ವಸ್ತುಗಳ, ರಚನೆಗಳ ವಿಶೇಷತೆಯು ಹೇಗಿರುತ್ತದೆಂದರೆ ಅವುಗಳ ಮಾದರಿಗಳನ್ನು ಕೂಡ ಮಾಡಲು ಮನುಷ್ಯ ಹಂಬಲಿಸುತ್ತಾನೆ. ಇದಕ್ಕೆ ಸಾಮಾನ್ಯವಾದ ಕಾರಣವೆಂದರೆ ಅಷ್ಟೊಂದು ಸೊಗಸಾಗಿ ಅಂತಹ ವಸ್ತುಗಳು ಅಥವಾ ರಚನೆಗಳು ರಚಿಸಲ್ಪಟ್ಟಿರುತ್ತವೆ. ಉದಾಹರಣೆಗೆಂದರೆ ಬೆಂಗಳೂರಿನಲ್ಲಿರುವ ಬೆಂಗಳೂರು ಅರಮನೆಯನ್ನು ಬಹುತೇಕರು ಇಂಗ್ಲೆಂಡಿನಲ್ಲಿರುವ ವಿಂಡ್ಸರ್ ಕ್ಯಾಸಲ್ ನ ತದ್ರೂಪವೆಂದೆ ತಿಳಿದಿದ್ದಾರೆ. ಆದರೆ ಇದು ನಿಜವಲ್ಲ. ಅದೇನೆ ಇರಲಿ ಒಮ್ಮೆ ಇತಿಹಾಸವನ್ನು ಗಮನಿಸಿದಾಗ ಇಂತಹ ಕೆಲವು ನೈಜ ಆಸಕ್ತಿಭರಿತ ಉದಾಹರಣೆಗಳು ನಮಗೆ ತಿಳಿದು ಬರುತ್ತವೆ.
ಈ ಲೇಖನದ ಮೂಲ ಉದ್ದೇಶ ಭಾರತದಲ್ಲಿ ಕಂಡುಬರುವ ಅಂತಹ ಕೆಲವು ಆಸಕ್ತಿಭರಿತ ರಚನೆಗಳ ಪರಿಚಯ ಮಾಡಿಸುತ್ತದೆ. ಇಲ್ಲಿ ನೀಡಲಾದ ತದ್ರೂಪ ರಚನೆಗಳನ್ನು ಮೂಲ ರಚನೆಗಳೊಂದಿಗೆ ಹೋಲಿಕೆ ಮಾಡಿದಾಗ ಅದರ ಬಾಹ್ಯ ರಚನೆಯು ಮೂಲ ರಚನೆಗೆ ಎಷ್ಟೊಂದು ಸಮರೂಪವಾಗಿರುವುದೆಂದು ತಿಳಿಯುತ್ತದೆ. ಆದರೆ ಮೂಲ ರಚನೆಗಳ ಗುಣಲಕ್ಷಣಗಳು ಇವುಗಳಲ್ಲಿ ಅಷ್ಟೊಂದಾಗಿ ಕಂಡುಬರುವುದಿಲ್ಲ. ಆದ್ದರಿಂದ ಇವುಗಳನ್ನು ಕೌತುಕಮಯ ಭಾವದಿಂದ ಆ ಮೂಲ ರಚನೆಗಳ ಡುಪ್ಲಿಕೇಟ್ ಗಳೆಂದು ಕೂಡ ತಿಳಿಯಬಹುದು.
ತಾಜ್ ಮಹಲ್:
ಆಗ್ರಾ ಪಟ್ಟಣದಲ್ಲಿರುವ ಈ ಭವ್ಯ ಪ್ರೇಮ ಸ್ಮಾರಕವು ವಿಶ್ವ ಪ್ರಖ್ಯಾತವಾಗಿರುವುದು ಅಲ್ಲದೆ ಜಗತ್ತಿನ ಏಳು ಅದ್ಭುತಗಳಲ್ಲೂ ಕೂಡ ಒಂದಾಗಿದೆ. ಮುಘಲ್ ವಾಸ್ತುಶಿಲ್ಪದ ಅತ್ಯುನ್ನತ ಕೊಡುಗೆಯಾಗಿರುವ ಈ ಸ್ಮಾರಕವನ್ನು ಮುಘಲ್ ಚಕ್ರವರ್ತಿ ಶಹಜಹಾನನು ತನ್ನ ಪತ್ನಿಯಾದ ಮಮ್ತಾಜಳ ನೆನಪಿನಾರ್ಥವಾಗಿ ನಿರ್ಮಿಸಿದ್ದಾನೆ.
ಚಿತ್ರಕೃಪೆ: amaldla
ಬಿಬಿ ಕಾ ಮಕ್ಬರಾ:
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿರುವ ಬಿಬಿ ಕಾ ಮಕ್ಬರಾ ರಚನೆಯು ತಾಜ್ ಮಹಲ್ ಗೆ ಹತ್ತಿರವಾದ ಸಾಮ್ಯತೆಯನ್ನು ಹೊಂದಿದೆ. ಆದ್ದರಿಂದ ಇದನ್ನು "ದಖ್ಖನಿನ ತಾಜ್" ಎಂದು ಕೂಡ ಕರೆಯಲಾಗುತ್ತದೆ. ಔರಂಗಜೇಬ್ ಚಕ್ರವರ್ತಿಯಿಂದ ನಿರ್ಮಿಸಲಾದ ಈ ಸ್ಮಾರವನ್ನು ವಾಸ್ತುಶಿಲ್ಪಿ ಅತಾವುಲ್ಲ ವಿನ್ಯಾಸಿಸಿದ್ದು ಹನ್ಸ್ಪತ್ ರಾಯ್ ಇದರ ಮೇಲ್ವಿಚಾರಕರಾಗಿದ್ದರು. ಅತಾವುಲ್ಲಾ ಪ್ರಖ್ಯಾತ ತಾಜ್ ಮಹಲ್ ನ ವಿನ್ಯಾಸಗಾರನಾದ ಉಸ್ತಾದ್ ಅಹಮದ್ ಲಾಹೌರಿಯ ಮಗ ಎಂಬುದು ವಿಶೇಷ.
ಚಿತ್ರಕೃಪೆ: Aur Rang Abad
ಅಕ್ಷರಧಾಮ:
ಗುಜರಾತ್ ರಾಜ್ಯದ ದೊಡ್ಡ ದೇವಸ್ಥಾನಗಳ ಪೈಕಿ ಒಂದಾಗಿರುವ ಈ ಅಕ್ಷರಧಾಮ ದೇವಸ್ಥಾನವು 23 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿದೆ. ಗಾಂಧಿನಗರದಲ್ಲಿರುವ ಈ ಸ್ಮಾರಕವು ಗುಜರಾತಿನ ಒಂದು ಭವ್ಯ ಪ್ರವಾಸಿ ಆಕರ್ಷಣೆಯಾಗಿದೆ.
ಚಿತ್ರಕೃಪೆ: Harsh4101991
ಅಕ್ಷರಧಾಮ:
ದೆಹಲಿಗೆ ಬರುವ ಪ್ರವಾಸಿಗರಲ್ಲಿ ಶೇಕಡ 70 ರಷ್ಟು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಧಾರ್ಮಿಕ ಸಂಸ್ಥೆಯೊಂದರ ಮುಖ್ಯಸ್ತರಾದ ಪ್ರಮುಖ್ ಸ್ವಾಮಿ ಮಹಾರಾಜ ಎಂಬುವವರು ಈ ಧಾಮವನ್ನು ನಿರ್ಮಿಸಿದ್ದಾರೆ. ಗುಜರಾತಿನಲ್ಲಿರುವ ಅಕ್ಷರಧಾಮದೊಂದಿಗೆ ಸಾಮ್ಯತೆಯನ್ನು ಪಡೆದಿದೆ.
ಚಿತ್ರಕೃಪೆ: Stanislav Sedov and Dmitriy Moiseenko
ಹರ್ಮಿಂದರ್ ಸಾಹಿಬ್ ಗುರುದ್ವಾರಾ:
"ಗೋಲ್ಡನ್ ಟೆಂಪಲ್" ಎಂತಲೆ ಜನಪ್ರಿಯವಾಗಿರುವ ಪಂಜಾಬಿನ ಅಮೃತಸರ್ ಪಟ್ಟಣದಲ್ಲಿರುವ ಈ ಸಿಖ್ ಗುರುದ್ವಾರವು ಸಿಖ್ ಸಮುದಾಯದವರ ಅತಿ ಪವಿತ್ರವಾದ ಮಂದಿರವಾಗಿದೆ. ಸಿಖ್ಖರ ಐದನೆಯ ಗುರುವಾದ ಗುರು ಅರ್ಜನ್ ಅವರಿಂದ 16 ನೆಅಯ ಶತಮಾನದಲ್ಲಿ ಈ ರಚನೆಯ ನಿರ್ಮಾಣವಾಗಿದೆ.
ಚಿತ್ರಕೃಪೆ: Ken Wieland
ದುರ್ಗಿಯಾನಾ ದೇವಾಲಯ:
ಅಮೃತಸರ್ ಪಟ್ಟಣದಲ್ಲೆ ಇರುವ ದುರ್ಗಾ ದೇವಿಗೆ ಸಮರ್ಪಿತವಾದ ಈ ಹಿಂದು ದೇವಾಲಯವನ್ನು ಇದೆ ಪಟ್ಟಣದ ಪ್ರಖ್ಯಾತ ಗೋಲ್ಡನ್ ಟೆಂಪಲ್ ನ ಮಾದರಿಯಲ್ಲೆ ನಿರ್ಮಿಸಲಾಗಿದೆ. ಲೋಹ್ಗಡ್ ದ್ವಾರ ಪ್ರದೇಶದಲ್ಲಿ ಸ್ಥಿತವಿರುವ ಈ ದೇವಾಲಯವನ್ನು 1908 ರಲ್ಲಿ ಹರಸಾಯ್ ಮಲ್ ಕಪೂರ್ ಎಂಬುವವರಿಂದ ನಿರ್ಮಿಸಲಾಗಿದೆ.
ಚಿತ್ರಕೃಪೆ: Guilhem Vellut
ಜಗನ್ನಾಥ ಪುರಿ ದೇವಾಲಯ:
ಹಿಂದುಗಳ ಪವಿತ್ರ ನಾಲ್ಕು ಧಾಮಗಳ ಪೈಕಿ ಒಂದಾಗಿರುವ ಒಡಿಶಾ ರಾಜ್ಯದ ಜಗನ್ನಾಥ್ ಪುರಿ ಕ್ಷೇತ್ರವು ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿದೆ. ಒಡಿಶಾ ರಾಜಧಾನಿ ಭುವನೇಶ್ವರದ ದಕ್ಷಿಣಕ್ಕೆ ಸುಮಾರು 60 ಕಿ.ಮೀ ದೂರದಲ್ಲಿರುವ ಈ ದೇವಾಲಯವು ಕೃಷ್ಣ ಭಗವಂತನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾಗಿದೆ.
ಚಿತ್ರಕೃಪೆ: Loveless
ಜಗನ್ನಾಥ ದೇವಾಲಯ:
ತಮಿಳುನಾಡಿನ ಚೆನ್ನೈ ನಗರದ ಹೊರವಲಯದಲ್ಲಿರುವ ಕಣತ್ತೂರ್ ಪ್ರದೇಶದಲ್ಲಿರುವ ಕೃಷ್ಣನಿಗೆ ಸಮರ್ಪಿತವಾದ ಈ ಜಗನ್ನಾಥ ದೇವಾಲಯದ ಗೋಪುರವು ಪುರಿ ಜಗನ್ನಾಥ ದೇವಾಲಯದ ಗೋಪುರದ ಹಾಗೆ ಕಂಡುಬರುತ್ತದೆ. ಈ ದೇವಸ್ಥಾನದಲ್ಲಿ ಜಗನ್ನಾಥನೊಂದಿಗೆ ಬಲಭದ್ರ ಹಾಗು ಸುಭದ್ರಳ ಮೂರ್ತಿಗಳನ್ನೂ ಕಾಣಬಹುದು.
ಗುರುವಾಯೂರಪ್ಪನ ದೇವಸ್ಥಾನ:
ಕೇರಳದ ಗುರುವಾಯುರಿನಲ್ಲಿರುವ ಈ ದೇವಸ್ಥಾನವು ಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ದೇವಸ್ಥಾನದಲ್ಲಿ ನಾಲ್ಕು ಕೈಗಳುಳ್ಳ, ಪಾಂಚಜನ್ಯ ಶಂಖುವನ್ನು ಹಿಡಿದಿರುವ ಕೃಷ್ಣನ ಮೂರ್ತಿಯನ್ನು ಕಾಣಬಹುದು.
ಚಿತ್ರಕೃಪೆ: Aruna
ಉತ್ತರ ಗುರುವಾಯೂರಪ್ಪನ ದೇವಸ್ಥಾನ:
ದೆಹಲಿಯ ಉತ್ತರ ಭಾಗದಲ್ಲಿ ಕೃಷ್ಣನಿಗಾಗಿ ನಿರ್ಮಿಸಿರುವ ದೇವಾಲಯವಿದೆ, ಅದನ್ನು ಶ್ರೀ ಉತ್ತರ ಗುರುವಾಯೂರಪ್ಪನ ದೇವಾಲಯ ಎಂದು ಕರೆಯುತ್ತಾರೆ. 1983 ರಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಮಯೂರ ವಿಹಾರದಲ್ಲಿದ್ದು, ದೆಹಲಿ ವಾಸಿಗಳು ಹಾಗೂ ಸುತ್ತಲಿನ ಜನರು ಯಾವಾಗಲೂ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಶಬರಿಮಲೆ:
ದಟ್ಟಾರಣ್ಯದ ನಡುವೆ ನೆಲೆ ನಿಂತಿರುವ ಶಬರಿಮಲೆ ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆ ನಿಂತಿರುವ ಶಬರಿಮಲೆ, ಸದಾ ಜುಳು ಜುಳು ಹರಿಯುವ ತೊರೆ ಮತ್ತು ಪಂಪಾ ನದಿಯ ಕಾಳಜಿಯಿಂದಾಗಿ ತನ್ನ ನೈಜ ಸೌಂದರ್ಯವನ್ನು ಉಳಿಸಿಕೊಂಡಿದೆ. ಮಲಯಾಳಂ ಕ್ಯಾಲೆಂಡರ್ ಪ್ರಕಾರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಪವಿತ್ರ ಮಂಡಲಕಾಲ ಸಮಯದಲ್ಲಿ ಲಕ್ಷಾಂತರ ಭಕ್ತರು ಹಿಂಡು ಹಿಂಡಾಗಿ ಇಲ್ಲಿ ಸೇರುವುದನ್ನು ಕಾಣಬಹುದು.
ಚಿತ್ರಕೃಪೆ: AnjanaMenon
ಮಿನಿ ಶಬರಿಮಲೆ:
ಮುಂಬೈ ನಗರದ ಎನ್.ಸಿ.ಹೆಚ್ ಕಾಲೋನಿ, ಕಂಜೂರ್ ಮಾರ್ಗದಲ್ಲಿದೆ ಮಿನಿ ಶಬರಿಮಲೆ.