ಹೌದು, ರಾಜಸ್ಥಾನ ರಾಜ್ಯದಲ್ಲಿರುವ ಏಕೈಕ ಗಿರಿಧಾಮ ಪ್ರದೇಶವಾಗಿದೆ ಈ ಸುಂದರ ಸ್ಥಳ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ರಾಜಸ್ಥಾನ ರಾಜ್ಯವು ಬಹುತೇಕವಾಗಿ ಮರಭೂಮಿ ಪ್ರದೇಶಗಳಿಂದ ಕೂಡಿರುವ ಭೂಮಿ. ಗಿಡ ಮರಗಳು ಅಪರೂಪವೆಂಬಂತಿರುವ ಈ ಉಷ್ಣಮಯ ರಾಜ್ಯದಲ್ಲಿ ಹಿತಕರವಾದ ವಾತಾವರಣ ಹೊಂದಿದ್ದು, ಗಿರಿ ಶಿಖರಗಳಿಂದ ಶೋಭಾಯಮಾನವಾಗಿದ್ದು, ದಟ್ಟ ಹಸಿರಿನ ಹಾಸಿಗೆಯಿಂದ ಸಿಂಗರಿಸಲ್ಪಟ್ಟ, ನದಿ, ತೊರೆ, ಜಲಪಾತಗಳಿಂದ ಮೈತುಂಬಿಕೊಂಡ ಸ್ಥಳವಿದೆ ಎಂದರೆ ಅಚ್ಚರಿಯಾಗದೆ ಇರಲಾರದು.
ವಿಶೇಷ ಲೇಖನ : ಸಮರ್ಥ ರಾಮದಾಸರ ಶಿವಥರಘಳ
ಚಿತ್ರಕೃಪೆ: Andreas Kleemann
ಹೌದು, ಈ ಗಿರಿಧಾಮ ಪ್ರದೇಶವೇ ಅರ್ಬುದ ಬೆಟ್ಟ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಇಂದಿನ ಮೌಂಟ್ ಅಬು. ಮೌಂಟ್ ಅಬುವನ್ನು ಪ್ರೀತಿಯಿಂದ "ಮರಳುಗಾಡಿನ ಓಯಾಸಿಸ್" ಎಂತಲೂ ಸಹ ಕರೆಯುವದುಂಟು. ರಾಜಸ್ಥಾನದಲ್ಲಿ ಕಂಡುಬರುವ ಸುಂದರವಾದ ಗಿರಿಶಿಖರಗಳಿಂದ ಕಂಗೊಳಿಸುವ ಈ ಸ್ಥಳವು ರಾಜ್ಯದ ಏಕೈಕ ಸುಂದರ ಗಿರಿಧಾಮ ಪ್ರದೇಶ ಎಂಬ ಖ್ಯಾತಿಗೂ ಸಹ ಪಾತ್ರವಾಗಿದೆ. ಪುರಾಣ, ಪುಣ್ಯ ಕಥೆಗಳಲ್ಲೂ ಸಹ ಈ ಸ್ಥಳದ ಕುರಿತು ಉಲ್ಲೇಖಿಸಲಾಗಿದ್ದು, ಇದನ್ನು ಅರ್ಬುದಾರಣ್ಯ ಎಂಬ ಹೆಸರಿನಿಂದ ಕರೆಯಲಾಗಿದೆ.
ವಿಶೇಷ ಲೇಖನ : ರಾಮಾಯಣ ಮಹಾಭಾರತದ ಪ್ರಮುಖ ಸ್ಥಳಗಳು
ಚಿತ್ರಕೃಪೆ: Antoine Gady
ಪುರಾಣ ಕಥೆಗಳ ಪ್ರಕಾರ, ಈ ಒಂದು ಸ್ಥಳದಲ್ಲೆ ವಸಿಷ್ಠ ಮುನಿಯು ವಿಶ್ವಾಮಿತ್ರರ ಮೇಲೆ ಇರುಸು ಮುರುಸು ಉಂಟಾದಾಗ ಏಕಾಂತ ಬಯಸಿ ನೆಲೆಸಿದ್ದರು. ಅಲ್ಲದೆ ಮತ್ತೊಂದು ದಂತಕಥೆಯ ಪ್ರಕಾರ, ಅರ್ಬುದ ಎಂಬ ಸರ್ಪವು ಶಿವನ ವಾಹನವಾದ ನಂದಿಯನ್ನು ಈ ಸ್ಥಳದಲ್ಲೆ ರಕ್ಷಿಸಿತ್ತು ಎನ್ನಲಾಗಿದೆ. ಆದ್ದರಿಂದ ಇದಕ್ಕೆ ಅರ್ಬುದ ಬೆಟ್ಟ ಎಂಬ ಹೆಸರು ಬಂದು ಕಾಲಕ್ರಮೇಣ ಈ ಪದವು ಅಪಭ್ರಂಶವಾಗಿ ಅಬು ಎಂದು ಕರೆಯಲ್ಪಟ್ಟಿತು. ರಾಜಸ್ಥಾನ ರಾಜ್ಯದ ಸಿರೋಹಿ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಯಲ್ಲಿ ಮೌಂಟ್ ಅಬು ನೆಲೆಸಿದೆ.
ಚಿತ್ರಕೃಪೆ: Selmer van Alten
ಅರಾವಳಿ ಪರ್ವತ ಶ್ರೇಣಿಯ ಈ ಎತ್ತರದ ಮೈದಾನ ಪ್ರದೇಶವು ಸುಮಾರು 22 ಕಿ.ಮೀ ಗಳಷ್ಟು ಉದ್ದವಿದ್ದು 9 ಕಿ.ಮೀ ಗಳಷ್ಟು ಅಗಲವನ್ನು ಹೊಂದಿದೆ. ಇಲ್ಲಿರುವ ಗುರುಶಿಖರವು ಪ್ರದೇಶದ ಅತಿ ಎತ್ತರದ ಶಿಖರ ಶೃಂಗವಾಗಿದ್ದು ಸಮುದ್ರ ಮಟ್ಟದಿಂದ ಸುಮಾರು 5,650 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ. ಈ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಅಲ್ಲಲ್ಲಿ, ಸುಂದರವಾದ ಕೆರೆ ತೊರೆಗಳು, ಜಲಪಾತಗಳು ಹಾಗೂ ನಿತ್ಯ ಹರಿದ್ವರ್ಣದ ಕಾಡುಗಳನ್ನು ನೋಡಬಹುದಾಗಿದ್ದು ಭೇಟಿ ಪ್ರವಾಸಿಗರ ಮನ ಸೆಳೆಯುತ್ತದೆ.
ಚಿತ್ರಕೃಪೆ: Koshy Koshy
ಸಾಮಾನ್ಯವಾಗಿ ರಾಜಸ್ಥಾನ ಹಾಗೂ ಪಕ್ಕದ ಗುಜರಾತ್ ರಾಜ್ಯಗಳಲ್ಲಿ ಬೇಸಿಗೆಯ ಸಮಯವನ್ನು ಕಳೆಯುವುದು ಬಹಳ ಕಷ್ಟದಾಯಕ. ಏಕೆಂದರೆ ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣದಲ್ಲಿ ಅತ್ಯಧಿಕ ಉಷ್ಣಾಂಶ ವಿರುತ್ತದೆ ಹಾಗೂ ಗಿಡ ಮರಗಳ ಸಂಖ್ಯೆಗಳೂ ಸಹ ಕಡಿಮೆ. ಆದರೆ ಇದಕ್ಕೆ ವರ್ಜ್ಯ ಎಂಬಂತೆ ಮೌಂಟ್ ಅಬು ಈ ಸಮಯದಲ್ಲಿ ಸಾಕಷ್ಟು ಹಿತಕರವಾದ ವಾತಾವರಣವನ್ನು ಹೊಂದಿದ್ದು ಗುಜರಾತ್ ಹಾಗೂ ರಾಜಸ್ಥಾನ ಜನರ ಪಾಲಿಗೆ ರಜೆ ಸಮಯವನ್ನು ಆನಂದದಾಯಕವಾಗಿ ಕಳೆಯಬಹುದಾದ ಆದರ್ಶ ತಾಣವಾಗಿ ಜನಪ್ರೀಯವಾಗಿದೆ.
ವಿಶೇಷ ಲೇಖನ : ಮೋಡಿ ಮಾಡುವ ಮೋದಿ ನಾಡು
ಚಿತ್ರಕೃಪೆ: CorrectKnowledge
ಇನ್ನುಳಿದಂತೆ ಮೌಂಟ್ ಅಬುವಿನಲ್ಲಿ ಜೈನ ದೇವಾಲಯಗಳನ್ನು ಕಾಣಬಹುದಾಗಿದೆ.11 ಮತ್ತು 13ನೇ ಶತಮಾನದಲ್ಲಿ ನಿರ್ಮಾಣಗೊಂಡಂತಹ ದಿಲ್ವಾರ ದೇವಾಲಯಗಳು ಬಹು ಆಕರ್ಷಕವಾಗಿದ್ದು ಬಿಳಿ ಅಮೃತಶಿಲೆಯಿಂದ ರಚನೆಗೊಂಡಿವೆ. ಅಲ್ಲದೆ ಇವುಗಳ ವಾಸ್ತುಶಿಲ್ಪವು ಅತ್ಯಂತ ಸಂಕೀರ್ಣ ರಚನೆ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿರುವುದನ್ನು ಗಮನಿಸಬಹುದಾಗಿದೆ. ಇವುಗಳ ಪೈಕಿ ವಿಮಲ್ ವಾಸಾಹಿ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು,1031ರಲ್ಲಿ ವಿಮಲ್ ಷಾ ಎಂಬುವವನಿಂದ ನಿರ್ಮಿತವಾಗಿದ್ದು ಮೊದಲ ಜೈನ ತೀರ್ಥಂಕರ ವೃಷಭನಾಥನಿಗೆ ಅರ್ಪಿಸಲಾಗಿದೆ.
ವಿಶೇಷ ಲೇಖನ : ಬೇಲೂರಿನಷ್ಟೆ ಸುಂದರ ಸೋಮನಾಥಪುರದ ಚೆನ್ನಕೇಶವ
ಚಿತ್ರಕೃಪೆ: Kondephy
ನಕ್ಕಿ ಸರೊವರ, ಮೌಂಟ್ ಅಬುವಿನಲ್ಲಿರುವ ಪ್ರವಾಸಿಗರು ನೋಡಲು ಬಯಸುವ ಪ್ರೇಕ್ಷಣೀಯ ಸ್ಥಳ. ಈ ಕೆರೆಯ ಹತ್ತಿರವಿರುವ ಬೆಟ್ಟವೊಂದರ ಮೇಲೆ ಕಪ್ಪೆಗಲ್ಲನ್ನು ಕಾಣಬಹುದು. ಅಂದರೆ ಇದನ್ನು ಒಂದು ಕೋನದಿಂದ ನೋಡಿದಾಗ ಬೃಹದಾಕಾರದ ಮಂಡೂಕ ಅಥವಾ ಕಪ್ಪೆಯ ಹಾಗೆ ಕಾಣುವುದರಿಂದ ಇದಕ್ಕೆ ಕಪ್ಪೆಗಲ್ಲು ಎನ್ನಲಾಗಿದೆ. ಇದೂ ಸಹ ಪ್ರವಾಸಿಗರ ನೋಡಬಯಸುವ ಕೌತುಕಮಯ ರಚನೆಯಾಗಿದೆ. ರಘನಾಥ ದೇವಾಲಯ ಹಾಗೂ ಮಹಾರಾಜ ಜೈಪುರ್ ಅರಮನೆಗಳೂ ಸಹ ಬೆಟ್ಟದ ಮೇಲೆ ನಕ್ಕಿ ಕೆರೆಯ ಬಳಿಯಲ್ಲೆ ಇವೆ.
ವಿಶೇಷ ಲೇಖನ : ವಿಸ್ಮಯಕರ ಕಲ್ಲಿನ ರಚನೆಗಳು
ಚಿತ್ರಕೃಪೆ: zilvinas.saltys
ಇನ್ನುಳಿದಂತೆ ಮೌಂಟ್ ಅಬುವಿನಲ್ಲಿ ಬಂಡೆಯಲ್ಲಿ ಕೆತ್ತಲಾದ ಅಧರ್ ದೇವಿ ದೇವಾಲಯ, ಗುರು ಶಿಖರದ ಮೇಲೆ ನಿರ್ಮಾಣಗೊಂಡಿರುವಂತಹ ಪುಣ್ಯಕ್ಷೇತ್ರವಾದ ದತ್ತಾತ್ರೇಯ ದೇವಾಲಯ ಸೇರಿದಂತೆ ಇತರೆ ಕೆಲವು ಹಿಂದೂ ದೇವಾಲಯಗಳಿಗೂ ಈ ಪರ್ವತವು ಮನೆಯಾಗಿದೆ. ಅಲ್ಲದೆ ಬ್ರಹ್ಮ ಕುಮಾರಿ ಪಂಥದ ಮಹಿಳಾ ಸಂನ್ಯಾಸಿಯರ ವಿಶ್ವ ಕೇಂದ್ರ ಕಾರ್ಯಾಲಯವು ಇಲ್ಲಿದ್ದು, ಇದು ಅದೇ ಪಂಥದ ವಿಶ್ವದ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಕೂಡ ಹೌದು. ಆದುದರಿಂದ ಈ ಸ್ಥಳಕ್ಕೆ ಬ್ರಹ್ಮಕುಮಾರಿ ಪಂಥದ ಮಹಿಳಾ ಸದಸ್ಯರು ಸದಾ ಭೇಟಿ ನೀಡುತ್ತಿರುತ್ತಾರೆ.
ಚಿತ್ರಕೃಪೆ: Selmer van Alten
ಮೌಂಟ್ ಅಬು ಪರ್ವತದ ತುದಿಯಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ ಎಂಬ ನಂಬಿಕೆಯೂ ಇದೆ. ಮೌಂಟ್ ಅಬುವಿನ ಹೊರಗಡೆ ಜಗತ್ ಎಂಬಲ್ಲಿರುವ ಬಂಡೆಯ ಸೀಳಿನಲ್ಲಿ ದುರ್ಗಾ ದೇವಾಲಯಮತ್ತು ಅಂಬಿಕಾ ಮಾತಾ ದೇವಾಲಯವಿದೆ. ಅಲ್ಲದೆ ಮೌಂಟ್ ಅಬು ತನ್ನ ಅತ್ಯಾಕರ್ಷಕವಾದ ಸೂರ್ಯಾಸ್ತ ನೋಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿಗೆ ಅತಿ ಸಮೀಪವಿರುವ ರೈಲು ನಿಲ್ದಾಣ 27 ಕಿ.ಮೀ ದೂರವಿರುವ ಅಬು ರಸ್ತೆ. ಭಾರತೀಯ ರೈಲ್ವೆಯ ದೆಹಲಿ, ಪಾಲಂಪುರ್ ಮತ್ತು ಅಹ್ಮದಾಬಾದ್ ನಡುವಿನ ಪ್ರಮುಖ ಮಾರ್ಗದಲ್ಲೇ ಈ ನಿಲ್ದಾಣವಿದೆ. ಆಅದ್ದರಿಂದ ಇಲ್ಲ್ಗೆ ಸುಲಭವಾಗಿ ತೆರಳಬಹುದಾಗಿದೆ.