ಸುತ್ತಲೂ ಹಸಿರು ಹಸಿರಾದ ಸಸ್ಯ ಸಂಪತ್ತು, ಮನಸ್ಸಿನ ಒತ್ತಡವನ್ನು ಹೊಡಿದೋಡಿಸುವಂತಹ ಮಾದಕ ಪರಿಸರ, ಉತ್ಸಾಹವನ್ನು ಬಡಿದೆಬ್ಬಿಸುವ ತಾಜಾ ಗಾಳಿ, ಚಹಾ, ಏಲಕ್ಕಿಗಳ ಸುಗಂಧ ಪಸರಿಸಿರುವ ವಾತಾವರಣ, ಇವುಗಳ ಜೊತೆ "ಚೆರ್ರಿ ಆನ್ ಟಾಪ್" ಅನ್ನುವ ಹಾಗೆ ಪ್ರಸನ್ನಗೊಳಿಸುವ ಮೇಘಗಳ ಸೌಮ್ಯ ನರ್ತನ, ಇವೇ ಮೇಘಮಲೈ ಎಂಬ ಪುಟ್ಟ ಗಿರಿಧಾಮದ ಪರಿಚಯ.
ಎಲ್ಲ ವಯಾಯಕಾಮ್ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ
ಹೌದು, ಮೇಘಗಳ ಬೆಟ್ಟ ಎಂಬ ಅರ್ಥ ನೀಡುವ ಮೇಘಮಲೈ ಸಮುದ್ರ ಮಟ್ಟದಿಂದರು ಸುಮಾರು 1,500 ಮೀ ಗಳಷ್ಟು ಎತ್ತರದಲ್ಲಿ ನೆಲೆಸಿರುವ ಅದ್ಭುತ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿರುವ ಒಂದು ಪುಟ್ಟ ಸುಂದರ ಗಿರಿಧಾಮ. ಈ ಗಿರಿಧಾಮವು ತಮಿಳುನಾಡು ರಾಜ್ಯದ ತೇಣಿ ಜಿಲ್ಲೆಯಲ್ಲಿ ಕಂಡುಬರುವ ಸುಂದರ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ನೆಲೆಸಿದೆ.
ವಿಶೇಷ ಲೇಖನ : ತೇಣಿಯ ಸೌಂದರ್ಯದ ಏಣಿ ಏರುತ್ತ...
ಅಷ್ಟೊಂದು ವಾಣಿಜ್ಯೀಕರಣ ಇಲ್ಲದ, ಪ್ರಾಕೃತಿಕ ಸೊಬಗಿನಿಂದ ಸಂಪದ್ಭರಿತವಾಗಿರುವ ಈ ಪುಟ್ಟ ಗಿರಿಧಾಮ ಭೇಟಿ ನೀಡುವವರಿಗೆ ತನ್ನ ಕಲ್ಮಶರಹಿತ ವಾತಾವರಣದಿಂದ ವಿಸ್ಮಯಗೊಳಿಸುವುದಲ್ಲದೆ ಸ್ವರ್ಗಕ್ಕೆ ಬಂದೇವೇನೋ ಅನ್ನುವಷ್ಟರ ಮಟ್ಟಿಗೆ ಸಂತಸ ಕರುಣಿಸುತ್ತದೆ.
ಮೇಘಮಲೈ ಪರಿಚಯ:
ಇದೊಂದು ಪ್ರಕೃತಿ ಸಹಜ ಸುಂದರ ಪ್ರದೇಶವಾಗಿದ್ದು, ಹೆಚ್ಚಿನ ಭೂಪ್ರದೇಶವು ಯಾವುದೆ ರೀತಿಯ ಮಾನವನ ಹಿಡಿತಕ್ಕೆ ಒಳಗಾಗದೆ ಇರುವುದರಿಂದ ಪ್ರಕೃತಿಯ ಸೊಬಗು ಹೆಚ್ಚಿನ ಮೆರುಗನ್ನು ನೀಡುತ್ತದೆ. ಅಲ್ಲದೆ ಈ ಗಿರಿಧಾಮವು ಚಹಾ ತೋಟಗಳು, ಏಲಕ್ಕಿ ಹಾಗೂ ಕರಿ ಮೆಣಸಿನ ತೋಟಗಳಿಂದ ಸ್ಂಪದ್ಭರಿತವಾಗಿದೆ.
ಚಿತ್ರಕೃಪೆ: Sivaraj.mathi
ಮೇಘಮಲೈ ಪರಿಚಯ:
ಈ ಗಿರಿಧಾಮವು ಇನ್ನೂ ಅಷ್ಟೊಂದಾಗಿ ಹೆಸರುವಾಸಿಯಾಗಿರದ ಕಾರಣ ಹೆಚ್ಚಿನ ಜನದಟ್ಟನೆ ಕಂಡುಬರುವುದಿಲ್ಲ, ಕಾರಣ ಸಂಚಾರಿ ವಾಹನಗಳು ದೊರೆಯುವುದು ಕಷ್ಟಸಾಧ್ಯ. ಆದ್ದರಿಂದ ನಡಿಗೆಯ ಮೂಲಕ ಹಾಯಾದ ವಿಹಾರಕ್ಕೆ ಇದು ಆದರ್ಶಮಯ ಎಂದೇ ಹೇಳಬಹುದು.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ಈ ಪ್ರದೇಶವು ತಮಿಳುನಾಡು-ಕೇರಳ ಗಡಿಯ ಬಳಿಯಲ್ಲಿ ನೆಲೆಸಿರುವುದರಿಂದ ಪೆರಿಯಾರ್ ಹುಲಿ ಅಭಯಾರಣ್ಯ ಹಾಗೂ ನಸುಬೂದು ಬಣ್ಣದ ಅಳಿಲುಧಾಮದ ಬಳಿಯಿರುವುದರಿಂದ ತಮಿಳುನಾಡು ಅರಣ್ಯ ಇಲಾಖೆಯು ಇದನ್ನು ಮೇಘಮಲೈ ವನ್ಯಜೀವಿಧಾಮವನ್ನಾಗಿ ಮಾಡುವ ಯೋಚನೆಯಲ್ಲಿದೆ. ಇದರಿಂದ ಸ್ಥಳೀಯ ಜೀವ ಸಂಕುಲವು ಸಂರಕ್ಷಿಸಲ್ಪಟ್ಟಂತಾಗುತ್ತದೆ.
ಚಿತ್ರಕೃಪೆ: Sivaraj.mathi
ಮೇಘಮಲೈ ಪರಿಚಯ:
ಮೇಘಮಲೈ ಭೂಭಾಗವು ಹೆಚ್ಚಾಗಿ ಸುರುಳಿಗಳಾಕಾರದಲ್ಲಿರುವ ಬೆಟ್ಟಗಳಿಂದ ಕೂಡಿದ್ದು ನಿತ್ಯ ಹರಿದ್ವರ್ಣದ ಕಾಡುಗಳನ್ನು ಹೊಂದಿದೆ. ಬೆಟ್ಟಗಳ ಕೆಳಭಾಗವು ಬಳ್ಳಿಗಳ, ಗಿಡಮರಗಳಿಂದ ಕೂಡಿದ್ದರೆ, ಮೇಲೆ ಏರಿದಂತೆ ಚಹಾ ತೋಟಗಳು ಹಾಗೂ ಇತರೆ ದೊಡ್ಡ ಗಿಡಮರಗಳನ್ನು ಹೊದ್ದು ನಿಂತಿದೆ.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ತೇಣಿ ಜಿಲ್ಲೆಯ ಕುಂಬಂನಲ್ಲಿರುವ ಪ್ರಖ್ಯಾತ ಸುರುಳಿ ಜಲಪಾತದ ರೂವಾರಿಯಾದ ಸುರುಳಿ ನದಿಯು ಮೇಘಮಲೈ ಬೆಟ್ಟ ಪ್ರದೇಶಗಳಲ್ಲೆ ಉಗಮಗೊಳ್ಳುತ್ತದೆ. ಆದ್ದರಿಂದ ಕುಂಬಂಗೆ ಭೇಟಿ ನೀಡುವವರು ಮೇಘಮಲೈ ಆನ್ನೂ ಇಲ್ಲವೆ ಮೇಘಮಲೈಗೆ ಭೇಟಿ ನೀಡುವವರು ಕುಂಬಂನ ಸುರುಳಿ ಜಲಪಾತಕ್ಕೂ ಭೇಟಿ ನೀಡಬಹುದು. ಇವುಗಳು ಒಂದಕ್ಕೊಂದು ಕೇವಲ 40 ಕಿ.ಮೀ ಗಳಷ್ಟು ಅಂತರದಲ್ಲಿ ಮಾತ್ರವೆ ನೆಲೆಸಿವೆ. ಕುಂಬಂನಲ್ಲಿರುವ ಸುರುಳಿ ಜಲಪಾತ.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ಇನ್ನೂ ಮೇಘಮಲೈ ಕಾಡುಗಳು ಸಾಕಷ್ಟು ವೈವಿಧ್ಯಮಯ ಜೀವ ಜಂತುಗಳಿಗೆ ಖಾಯಂ ಆಶ್ರಯ ತಾಣವಾಗಿದೆ. ಸಸ್ತನಿಗಳು, ಸರಿಸೃಪಗಳು, ಚಿಟ್ಟೆಗಳು ಹೀಗೆ ಅಪರೂಪದ ಕೆಲ ಜೀವ ವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಅಪರೂಪದ ಭಾರತೀಯ ಹಾರ್ನ್ ಬಿಲ್ ಹಕ್ಕಿಗಳನ್ನೂ ಸಹ ಇಲ್ಲಿ ಕಾಣಬಹುದು.
ಚಿತ್ರಕೃಪೆ: Kalyanvarma
ಮೇಘಮಲೈ ಪರಿಚಯ:
ಸಾಮಾನ್ಯವಾಗಿ ಇಲ್ಲಿ ಕಂಡುಬರುವ ಕೆಲವು ಜೀವಿಗಳೆಂದರೆ, ಆನೆಗಳು, ಹುಲಿ, ಚಿರತೆ, ಜಿಂಕೆ, ಸಾಂಬಾರು, ಕಾಡುಹಂದಿ, ನೀಲ್ಗಿರಿ ಲಂಗೂರ್ ಕೋತಿ, ಕರಡಿ, ಆಟರ್ ಮುಂತಾದವುಗಳು.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ಅಳಿವಿನಂಚಿನಲ್ಲಿರುವ ಅಪರೂಪದ ಬೂದು ಬಣ್ಣದ ದೊಡ್ಡ ಗಾತ್ರದ ಅಳಿಲುಗಳು ಮೇಘಮಲೈ ಕಾಡುಗಳಲ್ಲಿ ಕಂಡುಬರುತ್ತವೆ. ವನ್ಯಜೀವಿ ಛಾಯಾಗ್ರಾಹಕರಿಗೆ ಇದೊಂದು ಸುವರ್ಣ ಅವಕಾಶ ಒದಗಿಸುವ ಸ್ಥಳವಾಗಿದೆ ಎಂದರೂ ತಪ್ಪಾಗಲಾರದು. ದೊಡ್ಡ ಗಾತ್ರದ ಬೂದು ಬಣ್ಣದ ಅಳಿಲಿನ ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Steve Garvie
ಮೇಘಮಲೈ ಪರಿಚಯ:
ಜಗತ್ತಿನಲ್ಲಿಯೆ ಅಪರೂಪ ಎಂದು ಹೇಳಬಹುದಾದ "ಸಲೀಂ ಅಲಿ ಫ್ರುಟ್ ಬ್ಯಾಟ್" ಇಲ್ಲಿ ಕಂಡುಬರುತ್ತದೆ. ಇದೊಂದು ಹಣ್ಣುಗಳನ್ನು ತಿಂದು ಬದುಕುವ ಶಾಖಾಹಾರಿ ಬಾವಲಿಯಾಗಿದೆ. ಇದು ಭಾರತದಲ್ಲಿ ಕೇವಲ ಇಲ್ಲಿನ
ಬೆಟ್ಟ ಪ್ರದೇಶಗಳಲ್ಲಿ ಮಾತ್ರವೆ ಕಂಡುಬರುತ್ತದೆ. ಹಣ್ಣು ಬಾವಲಿಯ ಒಂದು ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Mnolf
ಮೇಘಮಲೈ ಪರಿಚಯ:
ಆರ್ನೆಟ್ಟಾ ವಿಂಧಿಯಾನಾ ಎಂಬ ಭಾರತಕ್ಕೆ ಸೀಮಿತವಾದ ವಿಶಿಷ್ಟ ಚಿಟ್ಟೆಯೂ ಸಹ ಇಲ್ಲಿ ಕಂಡುಬರುತ್ತದೆ. ಈ ರೀತಿಯಾಗಿ ಮೇಘಮಲೈ ಕೇವಲ ಸಾಮಾನ್ಯ ಪ್ರವಾಸಿಗರಿಗೆ ಮಾತ್ರವಲ್ಲದೆ ಕೀಟ ಲೋಕದ ಸಂಶೋಧಕರಿಗೂ ಕೂಡ ನೆಚ್ಚಿನ ತಾಣವಾಗಿದೆ.
ಚಿತ್ರಕೃಪೆ: Ravi Vaidyanathan
ಮೇಘಮಲೈ ಪರಿಚಯ:
ಮೇಘಮಲೈ ಬೆಟ್ಟದಲ್ಲಿ ಸುಮಾರು ಆರು ಆಣೆಕಟ್ಟುಗಳನ್ನು ನೋಡಬಹುದಾಗಿದ್ದು ಅವುಗಳಲ್ಲಿ ಮನಲಾರ್ ಜಲಾಶಯವು ಪ್ರಸಿದ್ಧವಾಗಿದೆ. ಮನಲಾರ್ ಜಲಾಶಯದಿಂದ ಆಳವಾದ ಕುಂಬಂ ಕಣಿವೆಯ ನೋಟವು ಬಲು ವಿಹಂಗಮವಾಗಿ ಗೋಚರಿಸುತ್ತದೆ. ಮನಲಾರ್ ಜಲಾಶಯ.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ಕುಂಬಂ ಕಣಿವೆಯ ಅದ್ಭುತ ನೋಟ. ಮನಲಾರ್ ಜಲಾಶಯ ತಾಣದಿಂದ ನೋಡಿದಾಗ ಕಂಡುಬರುವ ದೃಶ್ಯ.
ಚಿತ್ರಕೃಪೆ: Mprabaharan
ಮೇಘಮಲೈ ಪರಿಚಯ:
ವೆಲ್ಲಿಮಲೈ, ಮೇಘಮಲೈನ ಹೃದಯ ಭಾಗದಲ್ಲಿರುವ ಸುಂದರ ಬೆಟ್ಟ. ಬೆಳ್ಳಿ ಗುಡ್ಡ ಎಂಬರ್ಥ ನೀಡುವ ಈ ಗಿರಿಯು ತನ್ನ ಸುತ್ತಲೂ ಶ್ವೇತ ವರ್ಣದ ಮೇಘಗಳಿಂದ ಸುತ್ತುವರೆದಿದ್ದು ಅದ್ಭುತವಾಗಿ ಕಂಡುಬರುತ್ತದೆ. ಈ ಒಂದು ಬೆಟ್ಟ ಪ್ರದೇಶದಿಂದಲೆ ವೈಗೈ ನದಿಯು ಉಗಮಗೊಳ್ಳುತ್ತದೆ.
ಚಿತ್ರಕೃಪೆ: Vinoth Chandar
ಮೇಘಮಲೈ ಪರಿಚಯ:
ಹೀಗೆ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ, ಪ್ರಕೃತಿ ಸಹ ಸುಂದರತೆಯನ್ನು ಮೈದುಂಬಿಕೊಂಡಿರುವ, ಜೈವಿಕ ಪ್ರವಾಸೋದ್ಯಮಕ್ಕೆ ಉತ್ತಮ ಉದಾಹರಣೆಯಾಗಿರುವ ಮೇಘಮಲೈ ಸ್ಥಳವು ತನ್ನನ್ನರಸುತ್ತ ಬರುವ ಪ್ರವಾಸಿಗರ ಮೈಮನ ತಣಿಸಲು ಹವಣಿಸುತ್ತ ನಿಂತಿದೆ.
ಚಿತ್ರಕೃಪೆ: Vinoth Chandar
ಮೇಘಮಲೈ ಪರಿಚಯ:
ಬೆಂಗಳೂರಿನಿಂದ ಸುಮಾರು 490 ಕಿ.ಮೀ ಗಳಷ್ಟು ದೂರದಲ್ಲಿರುವ ಮೇಘಮಲೈಗೆ ತೆರಳಲು ಎರಡು ಆಯ್ಕೆಗಳಿವೆ. ಒಂದು ತೇಣಿಯ ಚಿನ್ನಮನೂರಿನ ಮೂಲಕವಾದರೆ ಇನ್ನೊಂದು ಮಾರ್ಗವು ಅದೇ ತೇಣಿಯ ಅಂಡಿಪೆಟ್ಟೈ ಮೂಲಕವಾಗಿದೆ. ಮದುರೈ ಮತ್ತು ದಿಂಡುಕ್ಕಲ್ ನಿಂದ ಅಂಡಿಪೆಟ್ಟೈ ಹಾಗೂ ತೇಣಿಯನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಚಿನ್ನಮನೂರಿನ ಮೂಲಕ ಮಾರ್ಗವು ಅತ್ಯಂತ ಸುಂದರವಾಗಿದೆ.
ಚಿತ್ರಕೃಪೆ: Vinoth Chandar
ಮೇಘಮಲೈ ಪರಿಚಯ:
ಮದುರೈನಿಂದ ತೇಣಿಯು 76 ಕಿ.ಮೀ ದೂರವಿದೆ. ಮತ್ತೊಂದು ಗಮನದಲ್ಲಿಡ ಬೇಕಾದ ಅಂಶವೆಂದರೆ ತಂಗಲು ಕೇವಲ ಅರಣ್ಯ ಇಲಾಖೆಯ ವಸತಿಗೃಹ ಹಾಗೂ ಪಂಚಾಯಿತಿಯ ವಿಶ್ರಾಂತಿ ಗೃಹ ಮಾತ್ರವೆ ಲಭ್ಯವಿದೆ. ಮುಂಚಿತವಾಗಿಯೆ ಅನುಮತಿ ಹಾಗೂ ಕಾಯ್ದಿರಿಸುವಿಕೆ ಕಡ್ಡಾಯ. ಚಿನ್ನಮನೂರು ಹಾಗೂ ಮೇಘಮಲೈ ಮಧ್ಯದಲ್ಲಿ ಸಿಗುವ ಚೆಕ್ ಪೊಸ್ಟ್ ನಲ್ಲಿ ತಂಗಲು ಅನುಮತಿ ಪಡೆಯಬೇಕು ಹಾಗೂ ಈ ಚೆಕ್ ಪೊಸ್ಟ್ ಅನ್ನು ಸಂಜೆ ಐದು ಗಂಟೆಯ ಮುಂಚೆಯೆ ತಲುಪಿ.
ಚಿತ್ರಕೃಪೆ: Vinoth Chandar