ಬಹಳಷ್ಟು ಜನರು ಮದುವೆ ವಯಸ್ಸು ಆದರೂ ಮದುವೆಯಾಗದೆ ಹಾಗೆಯೇ ಇದ್ದಾರೆ, ಹೆತ್ತವರಿಗಂತೂ ತಮ್ಮ ಮಕ್ಕಳ ಮದುವೆಯದ್ದೇ ಚಿಂತಿಯಾಗಿರುತ್ತದೆ. ಸರಿಯಾದ ಸಮಯಕ್ಕೆ ಮದುವೆಯಾಗದೆ ಇರುವುದಕ್ಕೂ ಹಲವು ಕಾರಣಗಳಿರಬಹುದು. ಜಾತಕದಲ್ಲಿನ ಸಮಸ್ಯೆ, ಸರಿಯಾದ ವರ ಅಥವಾ ವಧು ದೊರೆಯದೇ ಇರುವುದು ಹೀಗೆ ಬೇರೆ ಬೇರೆ ಕಾರಣಗಳಿರಬಹುದು. 30 ವರ್ಷವಾದರೂ ಕಂಕಣ ಭಾಗ್ಯ ಕೂಡಿಬರದ ಯುವಕ, ಯುವತಿಯರಿಗೆ ವಿವಾಹ ಭಾಗ್ಯ ಒದಗಬೇಕಾದರೆ ನೀವು ತಂಜಾವೂರಿನಲ್ಲಿರುವ ಈ ಮೂರು ದೇವಾಲಯಗಳಿಗೆ ಭೇಟಿ ನೀಡಿ.

ತಿರುವೆಲ್ವಿ ಕುಡಿ
ವೇಲ್ವಿ ಅಂದರೆ ಹೋಮ, ಕುಡಿ ಅಂದರೆ ಗುಡಿ ಎಂದರ್ಥ. ಶಿವ ಪಾರ್ವತಿಯರು ಮದುವೆಯಾದ ಸಂದರ್ಭ ಹೋಮ ನಡೆಸಿದ್ದು ಇದೇ ಸ್ಥಳದಲ್ಲಂತೆ. ಹಾಗಾಗಿ ಈ ದೇವಸ್ಥಾನಕ್ಕೆ ತಿರುವೆಲ್ವಿ ಕುಡಿ ಎಂಬ ಹೆಸರು ಬಂದಿದೆ.

ಕಲ್ಯಾಣ ಸುಂದರೇಶ್ವರ
ಮದುವೆ ವಿಳಂಬವಾಗುತ್ತಿರುವವರು, ಇನ್ನೂ ಮದುವೆಯಾಗದವರು ಈ ದೇವಸ್ಥಾನಕ್ಕೆ ಹೋದರೆ 1 ವರ್ಷದೊಳಗಾಗಿ ವಿವಾಹ ಭಾಗ್ಯ ಕೂಡಿ ಬರುತ್ತದಂತೆ. ಇಲ್ಲಿನ ದೇವರನ್ನು ಕಲ್ಯಾಣ ಸುಂದರೇಶ್ವರ ಎನ್ನುತ್ತಾರೆ. ಹಾಗೆಯೇ ಮನವಾಲೇಶ್ವರ ಎಂದೂ ಕರೆಯುತ್ತಾರೆ.

ಸ್ವಯಂಭೂ ಶಿವಲಿಂಗ
ಈ ದೇವಾಲಯದಲ್ಲಿ ಕಾಣಬಹುದಾದ ಶಿವನ ಮೂರ್ತಿಯು ಸ್ವತಃ ತಾನೇ ಪ್ರಕಟವಾಗಿದ್ದು ಎಂದು ಹೇಳಲಾಗುತ್ತದೆ, ಆದ್ದರಿಂದ ಇದನ್ನು ಸ್ವಯಂಭೂ ಎಂದು ಕರೆಯಲಾಗುತ್ತದೆ. ಪೂರ್ವಾಭೀಮುಖವಾಗಿರುವ ಈ ವಿಗ್ರಹವನ್ನು ಪೂಜಿಸಲು ಭಕ್ತರು ದೇಶದ ಮೂಲೆಮೂಲೆಗಳಿಂದ ಬರುತ್ತಾರೆ.

ಹೆತ್ತವರ ಜೊತೆ ಹೋಗಿ ಪ್ರಾರ್ಥಿಸಿ
ಈ ದೇವಸ್ಥಾನದ ವಿಶೇಷತೆ ಎಂದರೆ ವಿವಾಹವಾಗದೇ ಇರುವ ಹುಡುಗ ಅಥವಾ ಹುಡುಗಿ ತನ್ನ ಹೆತ್ತವರ ಜೊತೆ ಬಂದು ಈ ದೇವಸ್ಥಾನದಲ್ಲಿ ಪ್ರಾರ್ಥಿಸಬೇಕು. ಹೀಗೆ ಕ್ರಮೇಣ ಮಾಡುವುದರಿಂದ ಶೀಘ್ರವೇ ವಿವಾಹವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ತಲುಪುವುದು ಹೇಗೆ?
ಮಯಿಲಾಡುದೊರೆಯಿಂದ ಕುಂಭಕೋಣಂ ಮಾರ್ಗದಲ್ಲಿ 3 ಕಿ.ಮೀ ದೂರದಲ್ಲಿರುವ ಕುತ್ತಾಳಂನ ಈಶಾನ್ಯ ಭಾಗದಲ್ಲಿದೆ ಈ ತಿರುವೆಲ್ವಿ ಕುಡಿ.

ಭೇಟಿಯ ಸಮಯ
ಈ ದೇವಸ್ಥಾನವು ಬೆಳಗ್ಗೆ 7 ಗಂಟೆಯಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 7 ಗಂಟೆಯ ವರೆಗೆ ಭಕ್ತರಿಗಾಗಿ ತೆರೆದಿರುತ್ತದೆ.

ಕೀಳ ಕಬೀಸ್ಥಳಂ
ಬಹಳಷ್ಟು ಜನರಿಗೆ ಮದುವೆಯ ವಯಸ್ಸು ಮೀರಿ ಹೋಗಿದೆ. 30 ವರ್ಷ ಆದರೂ ಮದುವೆಯಾಗದವರು ಅನೇಕರಿದ್ದಾರೆ. ಅಂತಹವರು ಇಲ್ಲಿಗೆ ಹೋದ್ರೆ 3ತಿಂಗಳಲ್ಲಿ ಕಲ್ಯಾಣ ಭಾಗ್ಯ ಕೂಡಿಬರುತ್ತದಂತೆ.

ಏಕಾಂಬರೇಶ್ವರ
ಇಲ್ಲಿನ ಮುಖ್ಯ ದೇವರನ್ನು ಏಕಾಂಬರೇಶ್ವರ ಎಂದು ಕರೆಯುತ್ತಾರೆ. ಏಕಾಂಬರೇಶ್ವರನ ಪತ್ನಿಯನ್ನು ಕಾಮಾಕ್ಷಿ ಎಂದು ಕರೆಯುತ್ತಾರೆ.

90ದಿನದಲ್ಲಿ ಮದುವೆ
ವಿವಾಹವಾಗಲು ಬಯಸುವವರು ಈ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ 90ದಿನಗಳಲ್ಲಿ ವಿವಾಹ ಕೂಡಿ ಬರುತ್ತದಂತೆ.

ಗಾಜಿನ ಬಳೆಗಳ ಮಾಲೆ
ಇಲ್ಲಿನ ವಿಶೇಷತೆ ಎಂದರೆ ವಿವಾಹವಾಗದಿರುವ ಮಹಿಳೆಯರು ಗಾಜಿನ ಬಳೆಗಳ ಮಾಲೆಯನ್ನು ಮಾಡಿ ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತದೆ.

ತಲುಪುವುದು ಹೇಗೆ?
ತಂಜಾವೂರಿನಿಂದ ಕುಂಭಕೋಣಂಗೆ ಹೋಗುವ ದಾರಿಯಲ್ಲೆ ಪಾಪನಾಶಂ ಎನ್ನುವ ಸ್ಥಳ ಸಿಗುತ್ತದೆ. ಅಲ್ಲಿಂದ 2 ಕಿ.ಮೀ ದೂರದಲ್ಲೇ ಈ ಕೀಳ ಕಭೀಸ್ಥಳಂ ದೇವಾಲಯವಿದೆ.

ತಿರುಕರು ಕುಡಿ
ತಿರುಕರು ಕುಡಿ ದೇವಸ್ಥಾನವನ್ನು ಸರ್ಗುಣ ಲಿಂಗೇಶ್ವರ ದೇವಸ್ಥಾನ ಎನ್ನುತ್ತಾರೆ. ಈ ದೇವರನ್ನು ಮರುದಾ ನಲ್ಲೂರು ಬ್ರಹ್ಮಪುರೀಶ್ವರ ಎಂದೂ ಕರೆಯುತ್ತಾರೆ. ಸರ್ಗುಣ ಲಿಂಗೇಶ್ವರನ ಪತ್ನಿಯನ್ನು ಕಲ್ಯಾಣಿ ಎನ್ನುತ್ತಾರೆ. ಈ ದೇವರನ್ನು ಪ್ರಾರ್ಥಿಸಿದರೆ ಕಲ್ಯಾಣ ಭಾಗ್ಯ ಪ್ರಾಪ್ತಿಯಾಗುತ್ತದೆ.

ತಲುಪುವುದು ಹೇಗೆ?
ಈ ದೇವಾಲಯಕ್ಕೆ ತಲುಪಬೇಕಾದರೆ ಕುಂಭಕೋಣಂನಿಂದ ನಿಡಾಮಂಗಳಂಗೆ ಹೋಗಬೇಕು. ಈ ದಾರಿಯಲ್ಲಿ ಸಾಕೋಟೈನಿಂದ 2 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.


Click it and Unblock the Notifications

















