'ದೇಶ ಸುತ್ತಿ ನೋಡು..ಕೋಶ ಓದಿ ನೋಡು' ಯಾರಪ್ಪಾ ಕೇಳಿಲ್ಲಾ ಇದನ್ನ? ಹೌದು, ಇದು ಕನ್ನಡದ ಪ್ರಖ್ಯಾತ ನಾಣ್ಣುಡಿ, ಎಲ್ಲರಿಗೂ ಚಿರಪರಿಚಿತವೆ. ಅಕ್ಷರಶಃ ಇದರ ನೇರವಾದ ಅರ್ಥವೆಂದರೆ, "ಜ್ಞಾನದ ಮಟ್ಟ, ವ್ಯಾವಹಾರಿಕ ಕುಶಲತೆಗಳನ್ನು ಹೆಚ್ಚಿಸಿಕೊಳ್ಳಲು ಕೇವಲ ಬುಕ್ಸ್ ಗಳನ್ನು ಓದಿದರೆ ಮಾತ್ರ ಸಾಲ್ದು, ಆವಾಗಾವಾಗ ಟೈಮ್ ಸಿಕ್ಕಾಗ್ಲೆಲ್ಲಾ ಜುಮ್ಮೆಂದು ಸುತ್ತಾಡ್ಲೂ ಬೇಕು ಸ್ವಾಮಿ" ಎಂದು. ಈಗಂತೂ ಸಾಲಾಗಿ ಬರುವ ಹಬ್ಬ, ರಜೆ ಹಾಗು ಪ್ರವಾಸದ ಸಮಯ.
ಈ ಲೇಖನದ ನೇರವಾದ ಉದ್ದೇಶ ಅಂದ್ರೆ ನಿಮಗೊಂದಿಷ್ಟು ನೋಡಲು ಯೋಗ್ಯವಾದ ಸ್ಥಳಗಳ ಕುರಿತು ಸಂಕ್ಷೀಪ್ತ ಮಾಹಿತಿ ಕೊಡೋದು. ಒಂದೊಮ್ಮೆ ನಿಮ್ಮ ನೆಂಟ್ರೊ, ಫ್ರೆಂಡ್ಸ್ ಗೊ ಕೇಳಿ ನೋಡಿ; ಎಲ್ಲಿಗ್ ಹೋಗ್ತಾ ಇದ್ದಿರಾ ಈ ಸಲ ಅಂತ, ಎಲ್ರೂ ಗಬ ಗಬನೆ ಒಂದೆ ಉಸಿರಿನಲ್ಲಿ ಹತ್ತು ಹಲವು ಸ್ಥಳಗಳನ್ನು ಪಟಕ್ ಅಂತ ಹೇಳಿ ಬಿಡ್ತಾರೆ. ಅವುಗಳಲ್ಲಿ ಮಿಸ್ ಆಗಲ್ಲದ ಸ್ಥಳಗಳೆಂದರೆ ಕೊಡಗು, ಕುದುರೆಮುಖ, ಗೋಕರ್ಣ, ಧರ್ಮಸ್ಥಳ, ಕೊಲ್ಲೂರು, ಮುರುಡೇಶ್ವರ, ಮಂಗಳೂರು, ಮುನ್ನಾರ್, ತೆಕ್ಕಡಿ, ಊಟಿ, ಕೊಡೈಕ್ಕೆನಲ್ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.
ಹೌದು, ಸಿಸ್ಸಂಶಯವಾಗಿ ಇವೆಲ್ಲವೂ ಅದ್ಭುತ ಸ್ಥಳಗಳೆ. ಆದರೆ ಇವೆಲ್ಲವುಗಳ ಹೊರತಾಗಿ ನಮ್ಮ ಸುತ್ತ ಮುತ್ತಲಿನ ಸ್ಥಳಗಳನ್ನು ಕುಲಂಕುಶವಾಗಿ ನೋಡಿದರೆ, ಹಲವು ಸ್ಥಳಗಳು ತಮ್ಮಲ್ಲೆ ಕೌತುಕಮಯ, ಆಸಕ್ತಿಭರಿತ ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವುದು ನಮ್ಮ ಗಮನಕ್ಕೆ ಬರುತ್ತದೆ. ಇಂತಹ ಸ್ಥಳಗಳು ನಮ್ಮ ಜ್ಞಾನವೆಂಬ ಎಂಜಿನ್ ಗೆ ಫುಯೆಲ್ ಅನ್ನು ಒದಗಿಸುವುದು ಮಾತ್ರವಲ್ಲದೆ, ಭಾಷಾಭಿಮಾನ ಹೆಚ್ಚಿಸಿಕೊಂಡು ನಮ್ಮ ನಾಡು ನುಡಿ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಲು ಸಹಕಾರಿಯಾಗಿವೆ. ಹಾಗಾದರೆ ಬನ್ನಿ ನಮ್ಮಲ್ಲಿರುವ ಹಲವಾರು ಸ್ಥಳಗಳ ಪೈಕಿ ಆಸಕ್ತಿದಾಯಕ ಕೆಲವು ಸ್ಥಳಗಳ ಕುರಿತು ನಿಮಗೊಂದಿಷ್ಟು ಕ್ವೀಕ್ ಪರಿಚಯ ಇಲ್ಲಿದೆ.

ಭೀಮೇಶ್ವರಿ: ಒಂದು ಸಖತ್ ಫಿಶಿಂಗ್ ಕಮ್ ಅಡ್ವೆಂಚರ್ ಕ್ಯಾಂಪ್
ಮಂಡ್ಯ ಜಿಲ್ಲೆಯ ಭೀಮೇಶ್ವರಿ ಗ್ರಾಮ ಸುಂದರ ಜಲಪಾತದಿಂದ ಹೆಸರಾಗಿದೆಯಷ್ಟೇ ಅಲ್ಲದೆ ಸುಂದರ ಪರಿಸರದಲ್ಲಿರುವ ನೈಸರ್ಗಿಕ ತಾಣವೆನಿಸಿಕೊಂಡಿದೆ. ಇಂದು ಭೀಮೇಶ್ವರಿ ಎಲ್ಲರ ನೆಚ್ಚಿನ ಸಾಹಸಕ್ರೀಡಾ ಸ್ಥಳವಾಗಿ ರೂಪುಗೊಂಡಿದೆ. ಬೆಂಗಳೂರಿನ ನೈರುತ್ಯ ಭಾಗಕ್ಕೆ ಕನಕಪುರ ಮಾರ್ಗವಾಗಿ 100 ಕಿ.ಮೀ. ದೂರದಲ್ಲಿರುವ ಭೀಮೇಶ್ವರಿ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗವೆಂಬಂತಿದೆ. ಇದರ ವೈಶಿಷ್ಟ್ಯತೆಯೆಂದರೆ ಫಿಶಿಂಗ್ ಕ್ಯಾಂಪ್. ವಿವಿಧ ಜಾತಿಯ ಮೀನುಗಳನ್ನು ಹಿಡಿಯಿರಿ ಮಸ್ತ್ ಮಜಾ ಮಾಡಿರಿ. ಆದರೆ ಮುಖ್ಯವಾಗಿ ಗಮನದಲ್ಲಿಡಬೇಕಾದ ಅಂಶವೆಂದರೆ ಹಿಡಿದ ಮೀನುಗಳನ್ನು ಮರಳಿ ಮತ್ತೆ ನದಿಗೆ ಬಿಡುವುದು. ಇದರಿಂದ ಮೀನುಗಳ ಸಂತತಿಯೂ ಕ್ಷಿಣಿಸದು, ಮೀನು ಹಿಡಿದೆವಪ್ಪ..ಎಂಬ ಸಂತೃಪ್ತಿಯೂ ನಿಮ್ಮದು. ಏನಂತಿರಿ?
ಕುರುಡುಮಲೆ ಗಣಪತಿ ದೇವಾಲಯ:
ಕೋಲಾರ ಜಿಲ್ಲೆಯಲ್ಲಿರುವ ಮುಳುಬಾಗಲ ತಾಲೂಕಿನ ಕುರುಡುಮಲೆ, ಮುಳುಬಾಗಲ ಪಟ್ಟಣದಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಇಲ್ಲಿ ಗಣೇಶ ಹಾಗು ಸೋಮೇಶ್ವರ ದೇವಾಲಯಗಳಿದ್ದು, ಇಲ್ಲಿನ ಗಣೇಶನನ್ನು ನಾಡಿನಲ್ಲೆ ಅತಿ ಶಕ್ತಿಯುತನಾದ ಗಣಪನೆಂದು ನಂಬಲಾಗಿದೆ. ಅಷ್ಟೆ ಏಕೆ, ಇದನ್ನು ಸ್ವತಃ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರೆ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಂಡಿದ್ದಾರೆ ಎಂದೂ ಕೂಡ ನಂಬಲಾಗಿದೆ. ಇಂದಿಗೂ, 14 ಅಡಿ ಎತ್ತರವಿರುವ ಇಲ್ಲಿನ ಗಣಪತಿ ವಿಗ್ರಹವನ್ನು ದರ್ಶಿಸಿದ ಬಳಿಕವೆ ಹಲವು ಭಕ್ತ ಜನರು ತಂತಮ್ಮ ಹೊಸ ಕೆಲಸ ಕಾರ್ಯಗಳನ್ನು ಪ್ರಾರಂಭಿಸುತ್ತಾರೆ. ಇದರಿಂದ ಹಿಡಿದ ಕೆಲಸ/ಕಾರ್ಯಗಳು ಕೈಗೂಡುತ್ತವೆ ಎಂಬುದು ಪ್ರತೀತಿ. ವಿಜಯನಗರದ ಅರಸರಿಂದ ಈ ದೇವಾಲಯ ನಿರ್ಮಾಣವಾಗಿದೆ.

ನಾಮದ ಚಿಲುಮೆ:
ತುಮಕೂರು ಜಿಲ್ಲೆಯ ಹತ್ತಿರವಿರುವ ದೇವರಾಯನ ದುರ್ಗದಲ್ಲಿರುವ ಆಸಕ್ತಿದಾಯಕ ಆಕರ್ಷಣೆಯೆಂದರೆ ನಾಮದ ಚಿಲುಮೆ. ಇದೊಂದು ನೈಸರ್ಗಿಕವಾಗಿ ಉತ್ಪತ್ತಿಯಾದ ನೀರಿನ ಚಿಲುಮೆಯಾಗಿದ್ದು, ಜಯಮಂಗಲಿ ನದಿಯ ಮೂಲವೆಂದು ಇದನ್ನು ಪರಿಗಣಿಸಲಾಗಿದೆ. ಇದರ ಹಿಂದಿರುವ ಆಸಕ್ತಿದಾಯಕ ವಿಷಯವೆಂದರೆ, ಒಂದೊಮ್ಮೆ ಶ್ರೀ ರಾಮ, ಲಕ್ಷ್ಮಣ ಮತ್ತು ಸೀತೆ ವನವಾಸವನ್ನು ಅನುಭವಿಸುತ್ತಿದ್ದಾಗ ಇಲ್ಲಿಗೆ ಬಂದಿದ್ದರಂತೆ. ಎಂದಿನಂತೆ ರಾಮನು ಹಣೆಯ ಮೆಲೆ ತಿಲಕ/ನಾಮವನ್ನು ಇಟ್ಟುಕೊಳ್ಳಲು ನೀರಿಗಾಗಿ ಹುಡುಕಿದನಂತೆ.
ಎಲ್ಲೂ ನೀರು ದೊರೆಯದಿದ್ದಾಗ ಕೊನೆಯಲ್ಲಿ ಅಲ್ಲಿದ್ದ ಒಂದು ಬಂಡೆಗೆ ಬಾಣವನ್ನು ಬಿಟ್ಟ. ಇದರಿಂದ ಬಂಡೆಗಲ್ಲಿನಲ್ಲಿ ರಂಧ್ರವುಂಟಾಗಿ ನೀರು ಚಿಮ್ಮ ತೊಡಗಿತು. ಆದ್ದರಿಂದಲೆ ಇದನ್ನು ನಾಮದ ಚಿಲುಮೆ ಎನ್ನಲಾಗುತ್ತದೆ. ವರ್ಷದ ಎಲ್ಲ ದಿನಗಳಲ್ಲೂ ಈ ನೀರನ್ನು ನೋಡಬಹುದಾಗಿದ್ದು, ಭಕ್ತರು ಇದನ್ನು ಪವಿತ್ರ ತೀರ್ಥವೆಂದೆ ನಂಬುತ್ತಾರೆ.
ಕೈವಾರದ ಭೀಮಲಿಂಗೇಶ್ವರ ದೇಗುಲ:
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬರುವ ಕೈವಾರದಲ್ಲಿರುವ ಕೌತುಕಮಯ ತಾಣ ಈ ಭೀಮಲಿಂಗೇಶ್ವರ ದೇವಸ್ಥಾನ. ಈ ದೇವಸ್ಥಾನದ ಹಿಂದಿರುವ ಆಸಕ್ತಿದಾಯಕ ದಂತಕಥೆಯೆಂದರೆ, ಮಹಾಭಾರತದ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಒಂದು ವರ್ಷಗಳ ಕಾಲ ಕೈವಾರ(ಅಂದಿನ ಏಕಚಕ್ರಪುರ)ದಲ್ಲಿ ನೆಲೆಸಿದ್ದರಂತೆ. ಆ ಸಮಯದಲ್ಲಿ ಇಲ್ಲಿ ಬಕಾಸುರ ಎಂಬ ರಾಕ್ಷಸನ ಅತಿಶಯ ಉಪಟಳವಿದ್ದು, ಭೀಮನು ಅವನನ್ನು ಸಂಹರಿಸಿದನು.
ಇದರಿಂದ ಬ್ರಹ್ಮಹತ್ಯಾ ದೋಷಕ್ಕೆ ಭಾಜನನಾದ ಭೀಮನು ಶಾಪದಿಂದ ಮುಕ್ತಿ ಹೊಂದಲು ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಾ-ಪುನಸ್ಕಾರಗಳನ್ನು ಕೈಗೊಂಡನಂತೆ. ಆದ್ದರಿಂದ ಈ ದೇವಾಲಯ ಭೀಮಲಿಂಗೇಶ್ವರ ದೇವಾಲಯ ಎಂಬ ಹೆಸರು ಪಡೆದುಕೊಂಡಿದೆ.
ನೃತ್ಯಗ್ರಾಮ:
ನೋಡಿ, ಇಂದು ನಾವು ಪಾಪ್, ರ್ಯಾಪ್, ಹಿಪ್ ಹಾಪ್ ನಂಥ ಹಲವಾರು ಬಾಡಿ ಕಸರತ್ತುಗಳ ನೃತ್ಯಗಳನ್ನು ನೋಡುತ್ತಿದ್ದೆವೆ, ಖುಷಿ ಪಡುತ್ತಿದ್ದೆವೆ. ಇರಲಿ ಸಂತೋಷ. ಆದರೆ ಇವುಗಳ ಥಳುಕು ಬಳುಕುಗಳ ನಡುವೆ, ನಮ್ಮ ಸನಾತನ ಸಂಸ್ಕೃತಿಯ ಹಲವು ಲಕ್ಷಣಗಳಲ್ಲೊಂದಾದ ಹಾಗು ಅನನ್ಯತೆಯನ್ನು ಹೊಂದಿರುವ ಶಾಸ್ತ್ರೀಯ ನೃತ್ಯ ಪ್ರಕಾರಗಳು, ಭಾರತಕ್ಕೆ ಜಗತ್ತಿನಲ್ಲೆ ವಿಶೀಷ್ಟ ಸ್ಥಾನವನ್ನು ಒದಗಿಸುವುದಕ್ಕೆ ಅಗಾಧ ಪ್ರಮಾಣದಲ್ಲಿ ಕೊಡುಗೆ ನೀಡಿದ್ದು, ಅವುಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿದ್ದರೆ ಹೇಗೆ? ಆದ್ದರಿಂದ ಇವುಗಳನ್ನು ಉಳಿಸಿ, ಬೆಳೆಸಿ ಮತ್ತು ಪೋಷಿಸುವ ಜವಾಬ್ದಾರಿಯೂ ನಮ್ಮದಾಗಿರಬೇಕು.

ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟ ಒಡಿಸ್ಸಿ ನೃತ್ಯಗಾರ್ತಿ ಪ್ರೋತಿಮಾ ಗೌರಿಯವರು ಬೆಂಗಳೂರಿನಿಂದ 30 ಕಿ.ಮೀ ದೂರದಲ್ಲಿರುವ ಹೆಸರಘಟ್ಟ ಕೆರೆಗೆ ಹತ್ತಿರದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಳ ಆಧುನಿಕ ಗುರುಕುಲವಾದ ನೃತ್ಯಗ್ರಾಮವನ್ನು ಸ್ಥಾಪಿಸಿದ್ದಾರೆ. ಪುರಾತನ ಕಾಲದ ಗುರುಕುಲದ ವಾತಾವರಣವನ್ನು ಅತಿ ಸಹಜವಾಗಿ ಇಲ್ಲಿ ಸೃಷ್ಟಿಸಲಾಗಿದ್ದು, ಭೇಟಿ ನೀಡಿದ ಯಾರಿಗಾದರೂ ಸರಿ, ಕೊಂಚ್ ಹೊತ್ತು ಅವರ ಎಲ್ಲ ಚಿಂತೆಗಳನ್ನು ಬ್ಯಾಕ್ ಆಫ್ ಮಾಡುತ್ತ ಆ ಸಮಯದಲ್ಲಿ ವಿಹರಿಸುತ್ತಿದ್ದೆವೆಂಬ ಭಾಸವನ್ನು ತಂದು ಕೊಡುವಲ್ಲಿ ಯಶಸ್ವಿಯಾಗುತ್ತದೆ. ಇದೊಂದು ರೆಸಿಡೆನ್ಶಿಯಲ್ ಸ್ಕೂಲ್ ಆಗಿದ್ದು, ಹಲವಾರು ಶಾಸ್ತ್ರೀಯ ನೃತ್ಯಗಳ ತರಬೇತಿ ವಿವಿಧ ಸ್ತರಗಳಲ್ಲಿ ಲಭ್ಯವಿದೆ.
ಅಂತರಗಂಗೆ:
ಶತಶೃಂಗ ಪರ್ವತ ಶ್ರೇಣಿಗಳಲ್ಲಿ ನೆಲೆಸಿರುವ ಅಂತರಗಂಗೆಯು ಕರ್ನಾಟಕದ ಕೋಲಾರಿನಿಂದ 2 ಮೈಲುಗಳಷ್ಟು ದೂರದಲ್ಲಿದ್ದು, ಬೆಂಗಳೂರಿಗೆ 70 ಕಿ.ಮೀ ಅಂತರದಲ್ಲಿದೆ. ಈ ತಾಣವು ಖ್ಯಾತವಾಗಿರುವುದು ಗುಡ್ಡದ ತುದಿಯಲ್ಲಿರುವ ದೇವಾಲಯದಿಂದಾಗಿ. ಸರಿ..ಏನಪ್ಪಾ ಇದೆ ಅಂಥ ವಿಶೇಷ ಈ ದೇವಸ್ಥಾನದಲ್ಲಿ...ಅಂತ ನೀವ್ ಕೇಳ್ಬಹುದು. ವಿಶೇಷ ಇದೆ ಸ್ವಾಮಿ. ಈ ದೇವಾಲಯದಲ್ಲಿರುವ ಕಲ್ಲಿನ ಬಸವ ವಿಗ್ರಹದ ಬಾಯಿಯಿಂದ ನೀರು ಚಿಮ್ಮುತ್ತಿದ್ದು, ಕೊಳವೊಂದು ಸದಾ ಹರಿಯುತ್ತಲಿರುತ್ತದೆ. ಭೂಗರ್ಭದ ಒಳಗಿನಿಂದ ಹರಿಯುವ ಈ ನೀರನ್ನು ಮಾರ್ಮಿಕವಾಗಿ ಅಂತರ ಗಂಗೆಯೆಂದು ಕರೆಯಲಾಗಿದೆ. ಅಷ್ಟೆ ಅಲ್ಲ, ನೀವು ಟ್ರೆಕ್ಕಿಂಗ್ ಮಾಡುವ ಮನೋಭಾವವುಳ್ಳವರಾಗಿದ್ದರೆ ಅದನ್ನು ಕೂಡ ನೀವು ಇಲ್ಲಿ ಸಾಕಾರಗೊಳಿಸಿಕೊಳ್ಳಬಹುದು.
ಮೇಲೆ ವಿವರಿಸಿದೆಲ್ಲವೂ ಆಕರ್ಷಣೆಗಳ ಕೇವಲ ಕ್ವಿಕ್ ಪರಿಚಯ ಅಷ್ಟೆ. ಇಲ್ಲಿಗೆ ಭೇಟಿ ನೀಡಿದಾಗ ಮಾತ್ರವೆ ವಸ್ತುಸ್ಥಿತಿಗಳ ನೈಜರೂಪವು ಕಣ್ಣಿಗೆ ಕಟ್ಟುತ್ತದೆ. ಸಾಮಾನ್ಯವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದ ಜನರು ರಾಜ್ಯದ ಇತರೆ ಭಾಗಗಳ ಜನರಿಗೆ ಹೋಲಿಸಿದಾಗ ಸ್ವಲ್ಪ ಹೆಚ್ಚಿನ ಮಟ್ಟಿಗೆ ದುಡ್ಡನ್ನೆನೊ ಗಳಿಸುತ್ತಾರೆ ಆದರೆ ಜೊತೆ ಜೊತೆಯಾಗಿ "ಪ್ರೆಷರ್" ಎಂಬ ಬೋನಸ್ ಕೂಡ ಪಡೆಯುತ್ತಾರೆ. ಈ ಪ್ರೆಷರ್ ಅನ್ನು ರಿಲೀಸ್ ಮಾಡಲು ಈ ವಾರಾಂತ್ಯದ ರಜಾತಾಣಗಳು ಖಂಡಿತವಾಗಿಯೂ ಪ್ರಮುಖ ಪಾತ್ರವಹಿಸುತ್ತವೆ.


Click it and Unblock the Notifications



















