ಭಾರತೀಯ ಸಂಸ್ಖೃತಿಯಲ್ಲಿ ಪೂಜೆ ಹವನಗಳನ್ನು ಸಂಸ್ಕೃತಿಯ ಮೂಲ ತತ್ವ ಎನ್ನಲಾಗುತ್ತದೆ. ಭಾರತದಲ್ಲಿ ಅಸಂಖ್ಯಾತ ದೇವಿ ದೇವತೆಗಳ ಪೂಜೆ ಮಾಡುವ ಏಕೈಕ ದೇಶವೆಂದರೆ ಅದು ಭಾರತ. ಪೂಜೆ ವಿಧಿ ವಿಧಾನಗಳ ಬಗ್ಗೆಯೂ ಭಾರತದಲ್ಲಿ ಅನೇಕ ನಿಯಮಗಳನ್ನು ಅನುಸರಿಸಲಾಗುತ್ತದೆ. ನಾವಿಂದು ಹೇಳುತ್ತಿರುವುದು ಹಿಮಾಚಲ ಪ್ರದೇಶದಲ್ಲಿರುವ ದೇವಿಯ ಮಂದಿರದ ಬಗ್ಗೆ. ಇಲ್ಲಿ ಗಂಡ ಹೆಂಡತಿ ಜೊತೆಯಾಗಿ ದರ್ಶನ ಮಾಡಬಾರದಂತೆ.

ಒಂದು ವಿಶೇಷ ಸಂಪ್ರದಾಯ
ಈ ಮಂದಿರವು ಶಿಮ್ಲಾದ ರಾಮ್ಪುರ ಎನ್ನುವ ಸ್ಥಳದಲ್ಲಿದೆ. ಇಲ್ಲಿರುವ ದುರ್ಗೆಯ ಮಂದಿರಕ್ಕೆ ಗಂಡ ಹೆಂಡತಿಯರು ಜೊತೆಯಾಗಿ ಹೋಗಬಾರದಂತೆ. ಮಂದಿರದ ಒಳಗೆ ಗಂಡ ಹೆಂಡಿತಿಯರು ಜೊತೆಯಾಗಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ದುರ್ಗೆಯ ದರ್ಶನಕ್ಕೆ ಇಬ್ಬರೂ ಬೇರೆ ಬೇರೆಯಾಗಿಯೇ ಪ್ರವೇಶಿಸಬೇಕು. ಬಹಳ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಶ್ರಾಯಿ ಕೋಟಿ ಮಾತಾ ಮಂದಿರ
ಈ ಮಂದಿರವು ಹಿಮಾಚಲ ಪ್ರದೇಶದಲ್ಲಿ ಶ್ರಾಯಿ ಕೋಟಿ ಮಾತ ಮಂದಿರ ಎನ್ನುವ ಹೆಸರಿನಿಂದ ಪ್ರಖ್ಯಾತಿ ಹೊಂದಿದೆ. ಇಲ್ಲಿ ದಂಪತಿಗಳು ಜೊತೆಯಾಗಿ ದೇವಿಯ ದರ್ಶನ ಮಾಡಬಾರದು. ಒಂದು ವೇಳೆ ಇಬ್ಬರು ಜೊತೆಯಾಗಿ ದರ್ಶನ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಒಂದುವೇಳೆ ಹಾಗೆ ಮಾಡಿದ್ದಲ್ಲಿ ಆ ದಂಪತಿಗಳು ಖಾಯಂ ಆಗಿ ದೂರವಾಗಿ ಬಿಡುತ್ತಾರೆ. ಹಾಗಾಗಿ ಯಾರೂ ಕೂಡಾ ತಿಳಿದೋ ತಿಳಿಯದೆಯೋ ಆ ಸಾಹಸಕ್ಕೆ ಕೈ ಹಾಕೋದಿಲ್ಲ.

ಇದಕ್ಕೆ ಕಾರಣವೇನು?
ಈ ಪರಂಪರೆಗೆ ಒಂದು ಐತಿಹಾಸಿ ಕಾರಣವಿದೆ ಎನ್ನಲಾಗುತ್ತದೆ. ಶಿವನು ಗಣೇಶ ಹಾಗೂ ಕಾರ್ತೀಕೇಯನಿಗೆ ಜಗತ್ತನ್ನು ಸುತ್ತಿ ಬರಲು ಹೇಳಿದಾಗ ಕಾರ್ತೀಕೇಯ ತನ್ನ ವಾಹನದಲ್ಲಿ ಕುಳಿತು ಇಡೀ ಜಗತ್ತನ್ನು ಸುತ್ತಲು ಹೊರಟ. ಆದರೆ ಗಣೇಶ ಮಾತ್ರ ಎಲ್ಲಿಗೂ ಹೋಗದೆ ತನ್ನ ತಂದೆ ತಾಯಿಯನ್ನೇ ಸುತ್ತು ಬಂದ. ನನ್ನ ಪಾಲಿಗೆ ನನ್ನ ತಂದೆ ತಾಯಿಯರೇ ಇಡೀ ಜಗತ್ತು ಎಂದ.ಇದನ್ನು ಕೇಳಿ ಶಿವ ಹಾಗೂ ಪಾರ್ವತಿ ಬಹಳ ಸಂತೋಷಗೊಂಡಿದ್ದರು.

ಪಾರ್ವತಿಯ ಕೋಪ
ಕಾರ್ತೀಕೇಯ ಜಗತ್ತನ್ನು ಸುತ್ತಿ ಬರುವಷ್ಟರಲ್ಲಿ ಗಣೇಶನಿಗೆ ವಿವಾಹವಾಗಿತ್ತು. ಇದನ್ನು ಕಂಡು ಕಾರ್ತೀಕೇಯನಿಗೆ ಕೋಪ ಬಂದಿತ್ತು. ತಾನು ವಿವಾಹವಾಗುವುದಿಲ್ಲ ಎಂದು ಅದೇ ಕ್ಷಣ ನಿರ್ಧರಿಸಿದ್ದ. ಇದನ್ನು ಕೇಳಿ ಪಾರ್ವತಿಗೆ ಬಹಳ ಕೋಪ ಬಂದಿತ್ತು. ಆಗ ಆಕೆ ಯಾವುದೇ ಪತಿ ಪತ್ನಿ ಈ ದೇವಾಲಯಕ್ಕೆ ಜೊತೆಯಾಗಿ ದರ್ಶನಕ್ಕೆ ಆಗಮಿಸುತ್ತಾರೋ ಅವರು ಬೇರೆ ಬೇರೆಯಾಗುತ್ತಾರೆ ಎಂದು ಶಾಪವಿತ್ತಳು ಎಂದು ಹೇಳಲಾಗುತ್ತಿದೆ.

ಪ್ರಯಾಣಿಸುವುದು ಹೇಗೆ?
ಶಿಮ್ಲಾ ತಲುಪಿದ ನಂತರ ನರ್ಕಂಡ್ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು. ಶಿಮ್ಲಾದಿಂದ ವಾಹನದ ಮೂಲಕವೂ ಹೋಗಬಹುದು. ಇಲ್ಲವಾದಲ್ಲಿ ರೈಲು ಅಥವಾ ವಿಮಾನದ ಮೂಲಕವೂ ಶಿಮ್ಲಾಕ್ಕೆ ತಲುಪಬಹುದು. ವಿಮಾನಕ್ಕಾಗಿ ಚಂಡೀಗಡ್, ದೆಹಲಿ ಏರ್ಪೋರ್ಟ್ನಿಂದಲೂ ಬರಬಹುದು.


Click it and Unblock the Notifications
















