ಹೈದರಾಬಾದ್ ಅನೇಕ ವಿಷಯಗಳಿಗೆ ಹೆಸರುವಾಸಿ. ಹೈದರಾಬಾದಿ ಬಿರಿಯಾನಿ, ಪಾನ್, ಮತ್ತು ಐತಿಹಾಸಿಕ ಸ್ಥಳಗಳು ಮಾತ್ರವಲ್ಲದೆ ಇಲ್ಲಿ ಒಂದೇ ಒಂದು ದಿನದಲ್ಲಿ ನೀವು ನಗರದಲ್ಲಿ ಅನ್ವೇಷಿಸಬಹುದಾದ ಮತ್ತು ನಿಮ್ಮ ಸಮಯವನ್ನು ಕಳೆಯಬಹುದಾದ ಅನೇಕ ಸ್ಥಳಗಳಿವೆ.
ಇತ್ತೀಚೆಗಷ್ಟೇ ಉದಯವಾದ ಹೊಸ ರಾಜ್ಯ ತೆಲಂಗಾಣ ಮತ್ತು ಹೈದರಾಬಾದ್ ಇಲ್ಲಿಗೆ ಬರುವ ಸಂದರ್ಶಕರನ್ನು ಸುಂದರವಾಗಿ ಸ್ವಾಗತಿಸುತ್ತದೆ. ಇದರ ಒಂದು ತುಣುಕನ್ನು ನಿಮಗಾಗಿ ಇಲ್ಲಿ ಪರಿಚಯಿಸುತ್ತಿದ್ದೇವೆ. ಹಾಗೂ, ಹೈದರಾಬಾದಿನಲ್ಲಿ ನೀವು ಒಂದು ದಿನದ ಪ್ರವಾಸವನ್ನು ಸಂತೋಷದಾಯಕವಾಗಿ ಮತ್ತು ಸುಖಕರವಾಗಿ ಮಾಡಬೇಕಾದಲ್ಲಿ ಈ ಕೆಳಗೆ ಕೆಲವು ಸ್ಥಳಗಳ ಪಟ್ಟಿ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇವೆ.
ನೀವು ಹೈದರಾಬಾದಿನಲ್ಲಿದ್ದು ಒಂದು ದಿನದ ಪ್ರವಾಸವನ್ನು ಮಾಡಬೇಕೆಂದಿದ್ದಲ್ಲಿ, ಅದಕ್ಕೆ ಅನುಕೂಲವಾಗುವಂತೆ ಈ ಪಟ್ಟಿಯು 5 ವಿಷಯಗಳನ್ನೊಳಗೊಂಡ ಮಾಹಿತಿಯನ್ನು ನೀಡುತ್ತದೆ. ಹೊಸದಾಗಿ ಹೈದರಾಬಾದಿಗೆ ಪ್ರಯಾಣ ಮಾಡುವವರಿಗೆ ಈ ಪಟ್ಟಿಯನ್ನು ಅನುಸರಿಸುವುದು ಅನುಕೂಲಕರ. ಆದುದರಿಂದ ಈ ಪಟ್ಟಿಯನ್ನು ಒಮ್ಮೆ ನೋಡಿ ಹಾಗೂ ನಿಮ್ಮ ಮುಂದಿನ ಪ್ರವಾಸವನ್ನು ಕೈಗೊಳ್ಳಿ.
ಗೋಲ್ಕಂಡಾ ಕೋಟೆಯ ಸೌಂದರ್ಯತೆಯನ್ನು ನೋಡಿ ಆನಂದಿಸಿ
ನಗರ ವೀಕ್ಷಣೆ ಮಾಡಲು ಹೋಗುವಾಗಲೇ ಗೋಲ್ಕಂಡಾ ಕೋಟೆಗೆ ಭೇಟಿ ನೀಡಬಹುದಾಗಿದೆ. ಈ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 390ಅಡಿ ಎತ್ತರದಲ್ಲಿದ್ದು, ಸುತ್ತಲೂ ಯುದ್ದ ಭೂಮಿಯಿಂದ ಸುತ್ತುವರೆದಿದೆ.
ಶತ್ರುಗಳಿಂದ ರಕ್ಷಣೆಯ ಸಲುವಾಗಿ ಮತ್ತು ಸೇನೆಯ ಸಲುವಾಗಿ ಕಾಕತೀಯ ರಾಜರು ಈ ಕೋಟೆಯನ್ನು ನಿರ್ಮಿಸಿದ್ದಾರೆ. ನಂತರ ಇದನ್ನು ರಾಣಿ ರುದ್ರಮಾ ದೇವಿಯವರು ಪುನರ್ ನಿರ್ಮಾಣ ಮಾಡಿ ಪುನರ್ರಚಿಸಿದರು. ಐತಿಹಾಸಿಕ ಗತಕಾಲದ ಅಂಶಗಳು ಮತ್ತು ಈ ಕೋಟೆಯು ಒಂದು ಕಾಲದಲ್ಲಿ ಕೊಹಿನೂರ್ ವಜ್ರದ ನೆಲೆಯಾಗಿತ್ತು ಎನ್ನುವ ಅಂಶಗಳು ಈ ಸ್ಥಳಕ್ಕೆ ನಿಮ್ಮನ್ನು ಭೇಟಿ ಕೊಡಲು ಪ್ರೇರೇಪಿಸುತ್ತದೆ.
ವಾಸ್ತವವಾಗಿ ಗೋಲ್ಕಂಡಾ ಪ್ರದೇಶವು ವಜ್ರಗಳಿಗೆ ಹೆಸರುವಾಸಿಯಾಗಿದ್ದು ಈ ಮಾರುಕಟ್ಟೆಯು ಗೋಲ್ಕಂಡಾ ಮಾರುಕಟ್ಟೆ ಎಂದೇ ಪ್ರಸಿದ್ದಿ ಹೊಂದಿತ್ತು ಮತ್ತು ಈ ಮಾರುಕಟ್ಟೆಯಲ್ಲಿ ವಜ್ರದ ವ್ಯಾಪಾರಿಗಳು ತಮ್ಮ ವ್ಯಾಪಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಪ್ರಸಿದ್ದ ಸ್ಥಳ ಇದಾಗಿತ್ತು.
ಈ ಕೋಟೆಯು ಅತೀ ಎತ್ತರದಲ್ಲಿ ಇರುವುದರಿಂದ ಇಲ್ಲಿ ಇಡೀ ನಗರದ ಸುಂದರ ಚಿತ್ರಣವನ್ನು ಕಾಣಬಹುದಾಗಿದೆ. ಮತ್ತು ಇದು ಈ ಅರಮನೆಗೆ ಒಂದು ಸುಂದರ ಮೆರುಗನ್ನು ನೀಡುತ್ತದೆ. ಸೇನೆಯ ಪ್ರಾಮುಖ್ಯತೆಯ ಹೊರತಾಗಿ ಗೋಲ್ಕಂಡಾ ವಜ್ರಗಳಿಗೂ ಹೆಸರುವಾಸಿಯಾಗಿದೆ. ಈ ಪ್ರದೇಶವು ಅತ್ಯಂತ ಸುಂದರವಾದ ವಜ್ರಗಳ ಇತಿಹಾಸವನ್ನೇ ಜಗತ್ತಿಗೆ ಪರಿಚಯಿಸಿದೆ.
ಸುಂದರವಾದ ಸಾಲಾರ್ ಜಂಗ್ ಮ್ಯೂಸಿಯಂನ ಅನ್ವೇಷಣೆ ಮಾಡಿ
ಈ ಕಲಾ ವಸ್ತು ಸಂಗ್ರಹಾಲಯವನ್ನು ಅನೇಕ ಇತಿಹಾಸ ಪ್ರಿಯರು ಅದರ ಐತಿಹಾಸಿಕ ಮಹತ್ವಕ್ಕಾಗಿ ಮಾತ್ರವಲ್ಲದೆ ಈ ವಸ್ತು ಸಂಗ್ರಹಾಲಯದ ಅದ್ಬುತ ವಾಸ್ತು ಶಿಲ್ಪಗಳಿಗಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇತಿಹಾಸವನ್ನು ಇಷ್ಟಪಡದೇ ಇರುವವರಾದರೂ ಸಹ ಇಲ್ಲಿಯ ಭವ್ಯವಾದ ವಾಸ್ತುಶಿಲ್ಪ ಸೌಂದರ್ಯಕ್ಕೆ ಮಾರು ಹೋಗದೇ ಇರಲು ಸಾಧ್ಯವಿಲ್ಲ. ಈ ಕಲಾ ವಸ್ತುಸಂಗ್ರಹಾಲಯವನ್ನು ಮುಸಿ ನದಿಯ ಬಳಿಯ ದಾರುಶಿಫಾದಲ್ಲಿದೆ.
ದೇಶದ ಪ್ರಮುಖ ಮೂರು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿರುವ ಈ ಸ್ಥಳವು ಸುಂದರವಾದ ಶಿಲ್ಪಗಳು, ವರ್ಣಚಿತ್ರಗಳು, ಪಿಂಗಾಣಿ ಮತ್ತು ರತ್ಯಗಂಬಳಿಗಳನ್ನು ತನ್ನಲ್ಲಿ ಹೊಂದಿದೆ. ಇವುಗಳನ್ನು ವಿಶ್ವದ ಮೂಲೆ ಮೂಲೆಗಳಿಂದ ಇಲ್ಲಿಗೆ ತರಲಾಗುತ್ತದೆ.
ಇದು ವಿಶ್ವದ ಅತಿದೊಡ್ಡ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಈ ಬಿಳಿ ಅಮೃತ ಶಿಲೆಯ ಎತ್ತರವಾದ ಕಟ್ಟಡದ ಆವರಣವು ನಗುತ್ತಾ ಇಲ್ಲಿಗೆ ಭೇಟಿ ಕೊಡುವವರನ್ನು ಸ್ವಾಗತಿಸುತ್ತದೆ. ಅರಮನೆಯ ಐತಿಹಾಸಿಕ ಮಹತ್ವವೆಂದರೆ ಇದು 1 ನೇ ಶತಮಾನದಷ್ಟು ಹಳೆಯದಾಗಿದೆ.
ನವಾಬ್ ಮೀರ್ ಯೂಸುಫ್ ಅಲಿ ಖಾನ್ ರವರು ಇಷ್ಟು ಸುಂದರವಾದ ಮತ್ತು ಅಮೂಲ್ಯವಾದ ವಸ್ತುಗಳನ್ನು ಹೊಂದಿರುವ ಸುಂದರವಾದ ವಸ್ತು ಸಂಗ್ರಹಾಲಯವನ್ನು ರಚಿಸಲು ಹಲವಾರು ವರ್ಷಗಳನ್ನು ತೆಗೆದುಕೊಂಡಿದ್ದರೆನ್ನಲಾಗುತ್ತದೆ. ಅಷ್ಟು ಮಾತ್ರವಲ್ಲದೆ ಇಲ್ಲಿ ಹಳೆಯ ಕಾಲದ ಸನ್ ಡಯಲ್ ಮತ್ತು ಗಡಿಯಾರಗಳ ಅಮೂಲ್ಯ ಸಂಗ್ರಹವನ್ನು ಕೂಡ ನೀವು ನೋಡಬಹುದಾಗಿದೆ
ಬಿರ್ಲಾ ಮಂದಿರದಲ್ಲಿ ಶಾಂತತೆಯನ್ನು ಪಡೆಯಿರಿ
ಬಿರ್ಲಾ ಮಂದಿರದ ಶಾಖೆಗಳನ್ನು ದೇಶಾದ್ಯಂತ ಕಾಣಬಹುದು ಆದ್ದರಿಂದ ನೀವು ಇಲ್ಲಿಯ ಭಕ್ತರಾಗಿದ್ದರೆ ಮತ್ತು ಹೈದರಾಬಾದ್ ಅನ್ನು ಅನ್ವೇಷಿಸಲು ನಿಮಗೆ ಕೇವಲ 24 ಗಂಟೆಗಳ ಸಮಯವಿದ್ದರೆ, ಹೈದರಾಬಾದ್ನ ಬಿರ್ಲಾ ಮಂದಿರವನ್ನು ಭೇಟಿ ಮಾಡಲು ನಾವು ಶಿಫಾರಸು ಮಾಡುತ್ತೇವೆ.
ಈ ಅಮೃತ ಶಿಲೆಯ ದೇವಾಲಯವು ಬೆಟ್ಟದ ಮೇಲೆ ನಿಂತಿದ್ದು ಹೆಮ್ಮೆಯಿಂದ ತನ್ನ ಭಕ್ತರನ್ನು ಬರಮಾಡಿಕೊಳ್ಳುತ್ತದೆ. ನೀವು ಧಾರ್ಮಿಕ ಮನೋಭಾವ ಇಲ್ಲದೇ ಇರುವವರಾದರೂ ಸಹ ಈ ಎತ್ತರವಾದ ದೇವಾಲಯದ ಮೇಲ್ಭಾಗದಿಂದ ನೋಟವನ್ನು ಪರಿಶೀಲಿಸುವ ಸಲುವಾಗಿಯಾದರೂ ಹೋಗಬಹುದಾಗಿದೆ.
ಚಾರ್ ಮಿನಾರ್ ನ ಲಾಡ್ ಬಜಾರ್ ನಲ್ಲಿ ಸ್ವಲ್ಪ ಅಡ್ಡಾಡಿ
ಹಳೆಯ ನಗರ ಹಾಗೂ ಚಾರ್ ಮಿನಾರ್ ಗೆ ಹತ್ತಿರದಲ್ಲಿ ಈ ರಾತ್ರಿ ಮಾರುಕಟ್ಟೆಯಿದ್ದು, ಇಲ್ಲಿ ರುಚಿಕರವಾದ ಆಹಾರದಿಂದ ಹಿಡಿದು ಅಗ್ಗದ ಬಟ್ಟೆಯವರೆಗೆ ಎಲ್ಲವನ್ನೂ ಹೊಂದಿರುವ ಸುಂದರವಾದ ಅಂಗಡಿಗಳ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ.
ರಂಜಾನ್ ಹಬ್ಬಗಳ ಸಮಯದಲ್ಲಿ ಈ ಪ್ರದೇಶವು ಸಾಕಷ್ಟು ಉತ್ಸಾಹಭರಿತವಾಗಿರುತ್ತದೆ. ಬೇರೆ ದಿನಗಳಲ್ಲಿಯೂ ಸಹ ಜನರು ಹೋಗಿ ಬಂದು ಮಾಡುತ್ತಿರುವುದರಿಂದ ಸಾಕಷ್ಟು ಜೀವಂತಿಕೆಯಿಂದ ಕೂಡಿರುತ್ತದೆ.
ಇಲ್ಲಿ ಖರೀದಿ ಮಾಡುವುದೆಂದರೆ ಅದು ಸ್ವರ್ಗವೇ ಸರಿ ಎನ್ನುವ ಅನುಭವವನ್ನು ನೀಡುತ್ತದೆ. ಈ ಸ್ಥಳವು ಪ್ರತಿಯೊಬ್ಬ ವ್ಯಾಪಾರ ಮಾಡುವವರ ಕನಸಿನ ಸ್ಥಳವೆಂದೇ ಹೇಳಬಹುದಾಗಿದೆ ಏಕೆಂದರೆ ಇಲ್ಲಿ ನೀವು ಮನಸ್ಸು ಬಿಚ್ಚಿ ಚೌಕಾಸಿ ಮಾಡಬಹುದಾಗಿದೆ.
ಈ ಮಾರುಕಟ್ಟೆಯು ಚಾರ್ ಮಿನಾರ್ ನಷ್ಟು ಹಳೆಯದಾಗಿರುವುದರಿಂದ ಇಲ್ಲಿಯ ನೀವು ಕೇವಲ ಶಾಪಿಂಗ್ ಮಾಡಿದುದನ್ನು ಮಾತ್ರವಲ್ಲದೆ ಇಲ್ಲಿಯ ಸುಂದರ ನೆನಪನ್ನು ಕೂಡ ಮನೆಗೆ ಕೊಂಡೊಯ್ಯ ಬಹುದಾಗಿದೆ.
ಈ ಮಾರುಕಟ್ಟೆಯಲ್ಲಿ ವರ್ಣರಂಜಿತ ಮನೆಗೆ ಬೇಕಾಗುವ ವಸ್ತುಗಳನ್ನು ಹೊಂದಿದೆ, ಆದರೆ, ನಾವು ಇಲ್ಲಿ ಬಳೆಗಳನ್ನು ಖರೀದಿಸಲು ನಿಮಗೆ ನಾವು ಶಿಫಾರಸು ಮಾಡುತ್ತೇವೆ. ಏಕೆಂದರೆ ಇಲ್ಲಿ ಅತ್ಯುತ್ತಮವಾದ ಬಳೆಗಳನ್ನು ಖರೀದಿಸಬಹುದಾಗಿದೆ ಅಲ್ಲದೆ ಮನೆಗೆ ಬೇಕಾಗುವ ವರ್ಣರಂಜಿತ ತೋರಣಗಳ ಸಾಲುಗಳು, ಇತ್ಯಾದಿಗಳನ್ನು ಇಲ್ಲಿ ಕಾಣಬಹುದಾಗಿದ್ದು ಇಲ್ಲಿ ಅಡ್ಡಾಡುವವರಿಗೆ ಅವುಗಳು ಹೊಳೆಯುತ್ತಾ ತಮ್ಮದೇ ಆದ ಛಾಪನ್ನು ಮೂಡಿಸುತ್ತವೆ.
ಈ ಮಾರುಕಟ್ಟೆಯಲ್ಲಿ ಮತ್ತೊಂದು ಖರೀದಿ ಮಾಡಬಹುದಾದ ವಸ್ತುವೆಂದರೆ ಕಿವಿಯ ಆಭರಣಗಳು, ಹಬ್ಬಕ್ಕೆ ಪೂರ್ವದಲ್ಲಿ ಆಭರಣಗಳ ಶಾಪಿಂಗ್ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ. ಏಕೆಂದರೆ ಮಾರುಕಟ್ಟೆಯಲ್ಲಿ ವ್ಯಾಪಕವಾದ ಶ್ರೇಣಿಯಲ್ಲಿ ಕುಂದನ್ ಆಭರಣಗಳ ಸಂಗ್ರಹವನ್ನು ನಿಮಗೆ ನೀಡುತ್ತದೆ.
ಈ ಮಾರುಕಟ್ಟೆಯಲ್ಲಿ ಮತ್ತೊಂದು ತೆಗೆದುಕೊಂಡು ಹೋಗಲೇ ಬೇಕಾದ ವಸ್ತುವೆಂದರೆ ಇಟ್ಟಾರ್. ನೀವು ಇಲ್ಲಿಯವರೆಗೆ ಬಂದು ಇಲ್ಲಿಯ ಸುಂದರವಾದ ಈ ಎಲ್ಲಾ ವಸ್ತುಗಳನ್ನು ಖರೀದಿಸದೇ ಇದ್ದರೆ ಏನು ಪ್ರಯೋಜನ ? ಪಟ್ಟಿಯ ಕೊನೆಯಲ್ಲಿ ಬರುವ ಇಲ್ಲಿ ಖರೀದಿಸುವ ವಸ್ತುವೆಂದರೆ ಅದು ಚಪ್ಪಲಿಗಳು. ಅಲಂಕಾರಿಕ ಚಪ್ಪಲಿಗಳನ್ನು ಇಲ್ಲಿ ಕಾಣದಿದ್ದರೂ ಇವು ಅಗ್ಗದ ಮತ್ತು ಬಾಳಿಕೆ ಬರುವಂತಹವುಗಳಾಗಿರುವುದರಿಂದ ನೀವು ಬಯಸಿದಷ್ಟು ಇಲ್ಲಿ ಖರೀದಿಸಬಹುದಾಗಿದೆ.
ಹುಸೇನ್ ಸಾಗರ್ ನಲ್ಲಿ ಒಂದು ಸೆಲ್ಫಿ ತೆಗೆದುಕೊಳ್ಳಿ.
ನಮ್ಮದೇ ಆದ ಸ್ಟಾಚೂ ಆಫ್ ಲಿಬರ್ಟಿಯ ಬಗ್ಗೆ ಇಲ್ಲಿ ಮಾತಾಡೋಣ ಹುಸೇನ್ ಸಾಗರ್ ಮಧ್ಯದಲ್ಲಿರುವ ಬುದ್ದನ ಪ್ರತಿಮೆಯ ಬಗ್ಗೆ ಹೇಳುತ್ತಿದ್ದೇವೆ. ಹುಸೇನ್ ಸಾಗರ್ ಹೃದಯಾಕಾರದ ಸರೋವರವಾಗಿದ್ದು ಇದು ಸುಮಾರು 5.7 ಕಿ.ಮೀ ಪ್ರದೇಶದಲ್ಲಿ ಆವರಿಸಿಕೊಂಡಿದೆ.
ಇದನ್ನು ಗೋಲ್ಕೊಂಡಾ ಸಾಮ್ರಾಜ್ಯದ ಆಡಳಿತಗಾರನಾಗಿದ್ದ ಕುತುಬ್ ಶಾ ವಾಲಿ ನಿರ್ಮಿಸಿದ್ದನು. ಇಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು 1992 ರಲ್ಲಿ ನಿರ್ಮಿಸಲಾಯಿತು ಆದರೆ ಇದು ಕಣ್ಣುಗಳಿಗೆ ಒಂದು ಹಬ್ಬವನ್ನು ನೀಡುವ ತಾಣವಾಗಿದೆ.
ಪ್ರತಿಮೆಯು ರಾತ್ರಿಯಲ್ಲಿ ಬೆಳಗಿಸಲಾಗುತ್ತದೆ, ಬುದ್ಧನ ಪ್ರತಿಮೆಯ ಸೌಂದರ್ಯತೆಯನ್ನು ಗುಲಾಬಿ ಮತ್ತು ಹಳದಿ ಬಣ್ಣದ ಬೆಳಕು ಇನ್ನೂ ಮೆರುಗನ್ನು ನೀಡುತ್ತದೆ. ತೆಲಂಗಾಣದ ಎರಡನೇ ವಾರ್ಷಿಕೋತ್ಸವದಂದು, ಭಾರತದ 3 ಕೋಟಿ ಮೌಲ್ಯದ ಅತಿದೊಡ್ಡ ಧ್ವಜವನ್ನು ಹುಸೇನ್ ಸಾಗರ್ ಬಳಿ ಹಾರಿಸಲಾಯಿತು.
ಇಲ್ಲಿಯ ಬೇಕರಿಗಳಲ್ಲಿ ಸ್ನಾಕ್ ನ ರುಚಿ ಸವಿಯಿರಿ
ಹೈದರಾಬಾದ್ ಕೇವಲ ಬಿರಿಯಾನಿಗೆ ಪ್ರಸಿದ್ದಿಯನ್ನು ಪಡೆದಿದೆ ಎಂದು ನೀವು ಭಾವಿಸಿದರೆ ಅದು ತಪ್ಪಾಗಬಹುದು. ಹೈದರಾಬಾದಿಗಳು ಬೇಕರಿ ತಿನಿಸುಗಳಿಗೂ ಪ್ರಸಿದ್ದಿಯನ್ನು ಪಡೆದಿದ್ದಾರೆ. ರುಚಿಕರವಾದ ಉಸ್ಮೇನಿಯಾ ಬಿಸ್ಕತ್ತುಗಳು, ಕುಕ್ಕೀಸ್ ಗಳು, ಮತ್ತು ವಿವಿಧ ಸಿಹಿ ತಿಂಡಿಗಳು ಇತ್ಯಾದಿಗಳನ್ನು ತಿನ್ನುತ್ತಾ ನಿಮ್ಮ 24 ಗಂಟೆಗಳ ಪ್ರವಾಸವನ್ನು ಸಿಹಿ ನೆನಪುಗಳೊಂದಿಗೆ ಕೊನೆಗೊಳ್ಳುವಂತೆ ಮಾಡುತ್ತದೆ.