ಕರ್ನಾಟಕದ ಸುಂದರ ಪ್ರವಾಸಿ ಸ್ಥಳಗಳ ಪೈಕಿ ಉಡುಪಿಯೂ ಸಹ ಒಂದು. ಕೇವಲ ಕಡಲ ತೀರಗಳಿಂದಾಗಿ ಮಾತ್ರವೆ ಅಲ್ಲದೆ ದೇವಾಲಯಗಳಿಂದಾಗಿಯೂ ಅತಿ ಹೆಚ್ಚು ಮಹತ್ವ ಪಡೆದ ಕ್ಷೇತ್ರವಾಗಿ ಹೆಸರುವಾಸಿಯಾಗಿದೆ. ಅದಕ್ಕಾಗಿಯೆ ಇದನ್ನು ದೇವಾಲಯಗಳ ನಗರ ಎಂತಲೂ ಸಹ ಕರೆಯುತ್ತಾರೆ.
ಕೃಷ್ಣ ಮಠ ಹೊರತು ಪಡಿಸಿದರೆ ಇಲ್ಲಿ ಇನ್ನೂ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಇನ್ನೊಂದು ವಿಶೇಷವೆಂದರೆ, ಉಡುಪಿಯ ಎಂಟು ದಿಕ್ಕುಗಳಲ್ಲಿ ಎಂಟು ಮಹತ್ವದ ದೇವಾಲಯಗಳು ಸ್ಥಿತವಿದ್ದು ಅವುಗಳಲ್ಲಿ ನಾಲ್ಕು ದೇವಾಲಯಗಳು ಶಿವನ ಮಡದಿಯ ವಿವಿಧ ರೂಪಗಳಿಗೆ ಮುಡಿಪಾಗಿದ್ದರೆ ಉಳಿದ ನಾಲ್ಕು ದೇವಾಲಯಗಳು ಶಿವನ ಮಗನಿಗೆ ಮುಡಿಪಾದ ದೇವಾಲಯಗಳಾಗಿವೆ.
ಇವುಗಳನ್ನು ಉಡುಪಿಯ ಶಕ್ತಿಪೀಠಗಳೆಂದೂ ಸಹ ಕರೆಯಲಾಗುತ್ತದೆ. ಉಡುಪಿಗೆ ಭೇಟಿ ನೀಡುವ ಸಾಕಷ್ಟು ಜನರು ಈ ಎಲ್ಲ ಶಕ್ತಿಪೀಠಗಳನ್ನು ನೋಡಲು ಬಯಸುತ್ತಾರೆ. ಹಾಗಾದರೆ ಉಡುಪಿಯ ಆ ಎಂಟು ಪವಿತ್ರ ದೇವಾಲಯಗಳು ಯಾವುವು ಎಂಬುದನ್ನು ಪ್ರಸ್ತುತ ಲೇಖನದ ಮೂಲಕ ತಿಳಿಯೋಣ.
ವಿ.ಸೂ. : ಲೇಖನದಲ್ಲಿ ಬಳಸಲಾಗಿರುವ ಚಿತ್ರಗಳು ದುರ್ಗೆಯ ವಿವಿಧ ರೂಪಗಳನ್ನು ವ್ಯಕ್ತಗೊಳಿಸುವ ಸಾಂದರ್ಭಿಕ ಚಿತ್ರಗಳು ಮಾತ್ರ ಆಗಿವೆ ಹೊರತು ತಿಳಿಸಲಾಗಿರುವ ದೇವಾಲಯದಲ್ಲಿರುವ ರೂಪಗಳಲ್ಲ.

ವೇದಾಚಲ
ಮಣಿಪಾಲದ ಪಶ್ಚಿಮಕ್ಕೆ ಈ ದುರ್ಗೆಯ ದೇವಾಲಯವಿದ್ದು ಇಂದ್ರಾಣಿ ಪಂಚದುರ್ಗಾ ರೂಪದಲ್ಲಿ ಈ ದೇವಿಯನ್ನು ಆರಾಧಿಸಲಾಗುತ್ತದೆ. ಉಡುಪಿ ನಗರ ಕೇಂದ್ರದಿಂದ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಈ ದೇವಾಲಯವಿದೆ.
ಚಿತ್ರಕೃಪೆ: Loveonce

1993 ರಲ್ಲಿ
ಹನ್ನೊಂದನೇಯ ಶತಮಾನದ ದೇವಸ್ಥಾನ ಇದಾಗಿದ್ದು 1993 ರಲ್ಲಿ ನೇಪಾಳ ದೇಶದ ಪಶುಪತಿನಾಥ ದೇವಾಲಯ ಮಾಜಿ ಮುಖ್ಯ ಅರ್ಚಕರಾದ ರಾವಲ್ ಪದ್ಮನಾಭಶಾಸ್ತ್ರಿಯವರ ಸಲಹೆಯಂತೆ ಮರು ನವೀಕರಣಗೊಳಿಸಲಾಗಿದೆ. ಇಂದ್ರಾಲಿ, ಕುಂಜಿಬೆಟ್ಟು ಎಂಬಲ್ಲಿ ಈ ದೇವಾಲಯವಿದೆ
ಚಿತ್ರಕೃಪೆ: Loveonce

ಬೈಲೂರು
ಉಡುಪಿ ನಗರ ಕೇಂದ್ರದಿಂದ ಕೇವಲ ಎರಡು ಕಿ.ಮೀ ಗಳಷ್ಟು ದೂರದಲ್ಲಿ ಹದಿಮೂರನೇಯ ಶತಮಾನದ ಈ ಪ್ರಾಚಿನ ದುರ್ಗಾ ದೇವಿಯ ದೇವಾಲಯವು ಸ್ಥಿತವಿದೆ. ಬಳಪದಿಂದ ತಯಾರಿಸಲಾದ ಮಹಿಷಾಸುರಮರ್ದಿನಿ ದೇವಿಯ ವಿಗ್ರಹವು ಮೂರು ಅಡಿಗಳಷ್ಟು ಎತ್ತರ ಹೊಂದಿದೆ.
ಚಿತ್ರಕೃಪೆ: Jonoikobangali

ಉಪಯುಕ್ತ ಮಾಹಿತಿ
ಮಹಿಷಾಸುರನನ್ನು ತನ್ನ ತ್ರಿಶೂಲದಿಂದ ಸಂಹರಿಸುತ್ತಿರುವ ಭಂಗಿಯಲ್ಲಿ ದೇವಿ ನೆಲೆಸಿದ್ದು ನೋಡಲು ಆಕರ್ಷಕವಾಗಿದೆ. ದೇವಾಲಯವು ದೇವಾಲಯಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿ ನೀಡುವ ಫಲಕವನ್ನು ಹೊಂದಿದ್ದು ಬಡಗುಬೆಟ್ಟು, ಬೈಲೂರು ಇಲ್ಲಿ ದೇವಸ್ಥಾನವಿದೆ.
ಚಿತ್ರಕೃಪೆ: soumik barua

ಕನ್ನಾರ್ಪಾಡಿ
ಈ ಪ್ರದೇಶದಲ್ಲಿ ಹಿಂದೆ ಕನ್ನಾರ್ ಎಂಬ ಬ್ರಾಹ್ಮಣ ಕುಟುಂಬವೊಂದು ವಾಸ ಮಾಡುತ್ತಿತ್ತು ಹಾಗಾಗಿ ಇದಕ್ಕೆ ಕನ್ನಾರ್ಪಾಡಿ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿ ಜಯದುರ್ಗೆಯ ದೇವಸ್ಥಾನವಿದ್ದು ಅಲ್ಲಿ ಜಯದುರ್ಗಾ ವನಶಂಕರಿಯ ರೂಪದಲ್ಲಿ ನೆಲೆಸಿರುವುದನ್ನು ಕಾಣಬಹುದು.
ಚಿತ್ರಕೃಪೆ: VedSutra

ಕಡೆಯಾಲಿ
ಮೊದಲಿಗೆ ಇದು ಕಡೆ ಹಳ್ಳಿ ಎಂದು ಕರೆಯಲ್ಪಡುತ್ತಿತ್ತು. ಆ ಹೆಸರೆ ಕ್ರಮೇಣವಾಗಿ ಕಡೆಯಾಲಿ ಎಂದು ಪರಿವರ್ತಿತವಾಗಿದೆ ಎನ್ನಲಾಗಿದೆ. ಮಹಿಷಮರ್ದಿನಿಯ ಅತಿ ಪುರಾತನ ದೇವಾಲಯವು ಇಲ್ಲಿದೆ.
ಚಿತ್ರಕೃಪೆ: Loveonce

ಅಲೇವೂರು
ಉಡುಪಿ ನಗರದ ಆಗ್ನೇಯಕ್ಕೆ ಐದು ಕಿ.ಮೀ ದೂರದಲ್ಲಿರುವ ಅಲೇವೂರು ಎಂಬಲ್ಲಿ ದುರ್ಗಾಪರಮೇಶ್ವರಿಯ ಈ ದೇವಾಲಯವಿದೆ. ದೇವಿಯ ಈ ಸನ್ನಿಧಿಯಲ್ಲಿ ಕೊಲ್ಲೂರು ಮೂಕಾಂಬಿಕೆಯು ಶಿವಲಿಂಗದ ರೂಪದಲ್ಲಿ ನೆಲೆಸಿದ್ದಳೆಂದು ನಂಬಲಾಗುತ್ತದೆ.
ಚಿತ್ರಕೃಪೆ: Jonoikobangali

ಶಕ್ತಿಪೀಠ
ಇದು ಉದ್ಯಾವರ ಶಕ್ತಿಪೀಠ ಎಂತಲೆ ಕರೆಯಲ್ಪಡುತ್ತದೆ. ಹಿಂದೆ ಉದಯಪುರ ಎಂದು ಕರೆಯಲ್ಪಡುತ್ತಿದ್ದ ಇದು ಅಲೂಪ ರಾಜ್ಯದ ರಾಜಧಾನಿಯಾಗಿತ್ತು. ಈ ಶಕ್ತಿಪೀಠವು ಮೂಲತಃ ಸಪ್ತಮಾತೃಕೆಯರ ದೇವಾಲಯವಾಗಿದ್ದು ಶಂಭುಕಲ್ಲು ದೇವಾಲಯದ ಬಳಿ ಸ್ಥಿತವಿದೆ.
ಚಿತ್ರಕೃಪೆ: Loveonce

ಸಂತಕಟ್ಟೆ
ಉಡುಪಿಯಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಪುತ್ತೂರು ಎಂಬಲ್ಲಿರುವ ಸಂತಕಟ್ಟೆಯಲ್ಲಿ ಭಗವತಿ ದೇವಿಯ ಈ ದೇವಾಲಯವಿದೆ. ಇರುವ ದಾಖಲೆಗಳಿಂದ ತಿಳಿದುಬರುವ ವಿಷಯವೆಂದರೆ ಈ ದೇವಾಲಯವು ಋಷಿ ಪರಶುರಾಮರಿಂದ ನಿರ್ಮಿಸಲ್ಪಟ್ಟಿದೆ ಎಂದು.
ಚಿತ್ರಕೃಪೆ: Elishams

ಹೆರ್ಗಾ
ಉಡುಪಿಯಿಂದ ಎಂಟು ಕಿ.ಮೀ ದೂರದಲ್ಲಿರುವ ಹಾಗೂ ಪರ್ಕಲಾ ಜಂಕ್ಷನ್ ನಿಂದ ಮೂರು ಕಿ.ಮೀ ದೂರದಲ್ಲಿರುವ ಹೆರ್ಗಾ ಎಂಬಲ್ಲಿ ದುರ್ಗಾದೇವಿಯ ಈ ದೇವಾಲಯವಿದೆ.
ಚಿತ್ರಕೃಪೆ: Saumyart

ಅಂಬಲ್ಪಾಡಿ
ಉಡುಪಿಯಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಅಂಬಲ್ಪಾಡಿಯಲ್ಲಿ ಮಹಾಕಾಳಿ ದೇವಾಲಯವಿದೆ. ಹಿಂದೆ ಇದು ಅಮ್ಮನ ಪಾಡಿ ಎಂದು ಕರೆಯಲ್ಪಡುತ್ತಿತ್ತು. ತದನಂತರ ಅಂಪ್ಬಲ್ಪಾಡಿಯಾಗಿ ಜನಾರ್ದನ ಮಹಾಕಾಳಿಯ ದೇವಾಲಯಕ್ಕೆ ಆಸರೆಯಾಯಿತು.
ಚಿತ್ರಕೃಪೆ: Bnkkhan


Click it and Unblock the Notifications
















