ಚಹಾ ತೋಟದ ಸೌಂದರ್ಯವೇ ಹಾಗೆ. ಎಲ್ಲರನ್ನೂ ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಉತ್ತರ ಭಾರತದ ಬಹು ಭಾಗಗಳಲ್ಲಿ ಇದನ್ನೇ ಜೀವನೋಪಾಯದ ಬೆಳೆಯನ್ನಾಗಿ ಬೆಳೆಯುತ್ತಾರೆ. ಉತ್ತಮ ಗುಣಮಟ್ಟದ ಇಳುವರಿ ಹೊಂದಿರುವ ಪ್ರದೇಶವೆಂದರೆ ಪಾಲಂಪೂರ್. ಇಲ್ಲಿಯ ಬೆಳೆಯ ಮೊದಲ ಆವಿಷ್ಕಾರ ಬ್ರಿಟಿಷರಿಂದ ಆಯಿತು ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ವಾಣಿಜ್ಯ ವ್ಯಾಪಾರ ಕೇಂದ್ರವಾಗಿ ಬದಲಾಯಿತು.
PC: wikimedia.org
ಇಲ್ಲಿಯ ಸ್ಥಳೀಯ ಭಾಷೆಯ ಪ್ರಕಾರ 'ಪಾಲಂ" ಎಂದರೆ ಅತಿಯಾದ ನೀರು ಎಂದರ್ಥ. ಈ ಪ್ರದೇಶಗಳಿಗೆ ಅನೇಕ ತೊರೆಗಳು ಹರಿದು ಬರುವುದರಿಂದ ಬೆಳೆಯ ಇಳುವರಿಯೂ ಅಧಿಕವಾಗಿರುತ್ತವೆ. ಬೆಟ್ಟ ಪ್ರದೇಶದಲ್ಲಿ ಇರುವುದರಿಂದ ಇಲ್ಲಿ ನಿಂತು ಸುತ್ತಲ ಪ್ರದೇಶವನ್ನು ನೋಡುವುದೇ ಒಂದು ಚೆಂದ. ಒಂದೆಡೆ ಹಿಮಗಳಿಂದ ಆವೃತ್ತವಾಗಿರುವ ಗಿರಿಗಳ ಸಾಲು, ಇನ್ನೊಂದೆಡೆ ಚಹಾ ಬೆಳೆಯಿಂದ ಕೂಡಿರುವ ಬೆಟ್ಟಗಳು. ಇವುಗಳ ಸಂಗಮ ಒಂದು ಸ್ವರ್ಗತಾಣ ಎನಿಸುವುದರಲ್ಲಿ ಸಂದೇಹವಿಲ್ಲ.
PC: wikimedia.org
ಇಲ್ಲಿಗೆ ಬರಲು ಆ ಸಮಯ, ಈ ಸಮಯ ಎನ್ನುವ ತಾರತಮ್ಯವಿಲ್ಲ. ಎಲ್ಲಾ ಕಾಲದಲ್ಲೂ ತಂಪಾದ ವಾತಾವರಣ, ಹಸಿರು ಸಿರಿಯಿಂದ ಕೂಡಿರುವುದರಿಂದ ಪ್ರವಾಸಿಗರು ಬಿಡುವಿನ ಸಮಯದಲ್ಲಿ ಭೇಟಿ ನೀಡಬಹುದು.
ವಿಮಾನ ಮಾರ್ಗ: ಇಲ್ಲಿಗೆ ಹತ್ತಿರದ ನಿಲ್ದಾಣವೆಂದರೆ ಗಗ್ಗಲ್ ವಿಮಾನ ನಿಲ್ದಾಣ. ಇದು ಧರ್ಮಶಾಲದಿಂದ ಸುಮಾರು 25 ಕಿ.ಮೀ. ವ್ಯಾಪ್ತಿಯಲ್ಲಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈ ಸೇರಿದಂತೆ ಅನೇಕ ಕಡೆಯಿಂದಲೂ ವಿಮಾನ ಸಂಪರ್ಕವಿದೆ.
ರೈಲ್ವೆ ಮಾರ್ಗ: ಭಾರತದ ವಿವಿಧೆಡೆಯಿಂದಲೂ ಉತ್ತಮವಾದ ರೈಲ್ವೆ ಸಂಪರ್ಕವನ್ನು ಈ ತಾಣ ಹೊಂದಿದೆ.
ರಸ್ತೆ ಮಾರ್ಗ: ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿರುವ ಪಾಲಂಪೂರ್ ದೆಹಲಿಯಿಂದ 486 ಕಿ.ಮೀ., ಚಂಡೀಘಢದಿಂದ 259 ಕಿ.ಮೀ. ದೂರದಲ್ಲಿದೆ. ಈ ಎರಡು ಪ್ರದೇಶಗಳಿಂದ ಇಲ್ಲಿಗೆ ಬರಲು ಅನೇಕ ಬಸ್ ಸೌಲಭ್ಯಗಳಿವೆ.
PC: wikipedia.org
ಪಾಲಂಪೂರ್ ವಿಶ್ವದಲ್ಲೇ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ತಾಣ ಎನ್ನುವ ಪ್ರಸಿದ್ಧಿಗೆ ಹೆಸರಾಗಿದೆ. ಇದೊಂದು ಸುಂದರವಾದ ಚಾರಣ ತಾಣವೂ ಹೌದು. ಇದನ್ನು ಉತ್ತರ ಭಾರತದ ಚಹಾ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಪುರಾತನ ಕಾಲದ ಪವಿತ್ರ ದೇವಾಲಯಗಳು ಹಾಗೂ ಕಟ್ಟಡಗಳಿರುವುದನ್ನು ನೋಡಬಹುದು.
ಚಹಾ ಉದ್ಯಾನವನ
ಚಹಾದ ರಾಜಧಾನಿಯಾದ ಈ ತಾಣದ ತೋಟಗಳು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ. ಹಚ್ಚ ಹಸುರಿನ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿರುವ ಪಾಲಂಪೂರ್ ಸಹಕಾರಿ ಚಹಾ ಸಂಸ್ಥೆಯಲ್ಲಿ ಚಹಾ ಪುಡಿ ತಯಾರಿಸುವ ವಿಧಾನವನ್ನು ವೀಕ್ಷಿಸಬಹುದು.
PC: wikimedia.org
ತಾಶಿ ಜೊಂಗ್ ಮಠ
ಬೌದ್ಧ ಸನ್ಯಾಸಿಗಳ ಪವಿತ್ರ ಸ್ಥಳವಾದ ಇದು ಅನೇಕ ಟಿಬೆಟ್ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಇಲ್ಲಿ ಕಾಲೇಜು ಹಾಗೂ ರೆಸ್ಟೋರೆಂಟ್ಗಳಿವೆ. ಪಾಲಂಪೂರ್ನಲ್ಲಿ ನೋಡಲೇ ಬೇಕಾದ ಒಂದು ಪವಿತ್ರ ಕ್ಷೇತ್ರವಿದು.
PC: wikimedia.org
ಬಜಿನಾಥ ದೇಗುಲ
ಸುಂದರವಾದ ಈ ದೇಗುಲದಲ್ಲಿ ಶಿವನನ್ನು ಆರಧಿಸಲಾಗುತ್ತದೆ. ಇಲ್ಲಿಯ ವಾಸ್ತುಶಿಲ್ಪವು ಪುರಿಯ ಜಗನ್ನಾಥ ದೇವಸ್ಥಾನವನ್ನು ಹೋಲುತ್ತದೆ. ಅಮರತ್ವ ಸಾಧಿಸಲು ರಾವಣನು ಇಲ್ಲಿಯೇ ಶಿವನನ್ನು ಕುರಿತು ತಪಸ್ಸು ಮಾಡಿದ್ದನು ಎನ್ನುವ ಇತಿಹಾಸವಿದೆ. ಧಾರ್ಮಿಕ ಭಾವನೆಗೆ ಪೂರಕವಾದ ಸುಂದರ ಕಲಾಕೃತಿಯನ್ನು ದೇಗುಲ ಹೊಂದಿದೆ.
PC: wikimedia.org
ನೇವಗಲ್ ಖಾಡ್
ವರ್ಷಪೂರ್ತಿ ಸುಂದರ ಪರಿಸರವನ್ನು ಹೊಂದಿರುವ ಈ ತಾಣ ನಯನ ಮನೋಹರವಾಗಿರುತ್ತದೆ. ಇಲ್ಲಿರುವ ಧೌಲಾಧರ್ ಶ್ರೇಣಿಯಲ್ಲಿ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಇದರ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಈ ತಾಣದಲ್ಲಿ ರಮ್ಯವಾದ ಪ್ರಕೃತಿ ಸೌಂದರ್ಯದ ಜೊತೆಗೆ ಗುಣಮಟ್ಟದ ಊಟ ತಿಂಡಿಯನ್ನು ಹೊಂದಬಹುದು.
PC: wikimedia.org
ಸೌರಭ ವನ ವಿಹಾರ
ಗುಡ್ಡ ಪ್ರದೇಶದಲ್ಲಿರುವ ಈ ವನ ವಿಹಾರದಲ್ಲಿ ಸುಂದರವಾದ ನೋಟ ಹಾಗೂ ನಿರಾಳ ಭಾವವನ್ನು ಹೊಂದಬಹುದು. ಇಲ್ಲಿ ಬಯಲು ರಂಗಭೂಮಿ, ನೀರಿನ ಕೊಳ, ಅಲ್ಲಲ್ಲಿ ಚಿಕ್ಕ ಚಿಕ್ಕ ಛಾವಣಿಯ ಮನೆ ಹಾಗೂ ಮಕ್ಕಳಿಗಾಗಿ ವಿಶೇಷ ಉದ್ಯಾನಗಳಿವೆ.
PC: i.ytimg.com