ಇದನ್ನು "ಮಂಕಿ ಟೆಂಪಲ್" ಅಥವಾ ಕೋತಿ ದೇವಾಲಯ ಎಮ್ತಲೂ ಕರೆಯುತ್ತಾರೆ. ಅರೆ, ಇದೇನಪ್ಪಾ ದುರ್ಗಾ ದೇವಿಯ ದೇವಾಲಯವನ್ನು ಈ ರೀತಿಯಾಗಿ ಎಲ್ಲಿಯಾದರೂ ಕರೆಯುವುದುಂಟಾ ಎಂದೆನಿಸಬಹುದು. ಆದರೆ ಗೊಂದಲ ಪಡಬೇಡಿ. ಈ ದೇವಾಲಯದ ಕಲ್ಯಾಣಿಯ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾನರಗಳ ದೊಡ್ಡ ಅಡ್ಡೆಯಿದೆ. ಹಾಗಾಗಿ ಇದನ್ನು ಆ ರೀತಿ ಕರೆಯುತ್ತಾರಷ್ಟೆ!
ವಾರಣಾಸಿಯ ಇತರೆ ಪ್ರಮುಖ ದೇವಾಲಯಗಳು
ಇನ್ನೂ ಈ ದೇವಾಲಯವು ವರಾಣಸಿಯಲ್ಲಿರುವ ಪ್ರಮುಖ ಹಾಗೂ ಭೇಟಿ ನೀಡಲೇಬೇಕಾದ ದೇವಾಲಯಗಳ ಪೈಕಿ ಒಂದಾಗಿದೆ. ಶಕ್ತಿಯ ರೂಪವಾದ ದುರ್ಗಾ ದೇವಿಯು ನೆಲೆಸಿರುವ ಪುಣ್ಯ ಸ್ಥಳವಾಗಿದೆ ಈ ದೇವಾಲಯ. ಈ ದೇವಾಲಯದ ಮೂಲದ ಕುರಿತು ದೇವಿ-ಭಾಗವತ ಪುರಾಣದಲ್ಲಿ ಉಲ್ಲೇಖಿಸಲಾಗಿದ್ದು ಪ್ರಸ್ತುತ ದೇವಾಲಯ ರಚನೆಯು 18 ನೇಯ ಶತಮಾನದಲ್ಲಿ ಬಂಗಾಳದ ರಾಣಿಯೊಬ್ಬರಿಂದ ನಿರ್ಮಿಸಲ್ಪಟ್ಟಿದೆ.
ಚಿತ್ರಕೃಪೆ: Henk Kosters
ಈ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಚಲಿತದಲ್ಲಿರುವ ಇನ್ನೊಂದು ಕುತೂಹಲಕರ ಅಂಶವೆಂದರೆ ಇಲ್ಲಿ ಪ್ರತಿಷ್ಠಾಪಿತವಾಗಿರುವ ದುರ್ಗಾ ದೇವಿಯ ವಿಗ್ರಹವು ಮಾನವ ನಿರ್ಮಿತ ಮೂರ್ತಿಯೆ ಅಲ್ಲವಂತೆ! ಸ್ವಯಂ ಆಗಿ ಪ್ರಕಟವಾಗಿರುವ ದುರ್ಗೆಯ ವಿಗ್ರಹ ಇದೆಂದು ತಲೆ ತಲಾಂತರದಿಂದ ನಂಬಲಾಗಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಪ್ರಚಲಿತದಲ್ಲಿರುವ ದಮ್ತಕಥೆಯ ಪ್ರಕಾರ, ಒಂದೊಮ್ಮೆ ಕಾಶಿ ಮಹಾರಾಜನು ತನ್ನ ಮಗಳಿಗಾಗಿ ಸ್ವಯಂವರವನ್ನು ಏರ್ಪಡಿಸಿದ್ದನು. ಇದರಲ್ಲಿ ಅಯೋಧ್ಯೆಯ ದೊರೆಯಾದ ಧ್ರಿವ ಸಂಧಿ ರಾಜನ ಇಬ್ಬರೂ ಪುತ್ರರು ಪಾಲ್ಗೊಂಡಿದ್ದರು. ಧ್ರಿವ ಸಂಧಿಗೆ ಇಬ್ಬರು ಪತ್ನಿಯರಿದ್ದು ಮನೋರಮಾ ಮೊದಲ ಪತ್ನಿಯಾಗಿದ್ದು ಆಕೆಯಿಂದ ಹುಟ್ಟಿದ ಪುತ್ರ ಸುದರ್ಶನನಾಗಿದ್ದನು.
ಚಿತ್ರಕೃಪೆ: AKS.9955
ಎರಡನೇಯ ಪತ್ನಿ ಲೀಲಾವತಿಯಾಗಿದ್ದು ಆಕೆಗೆ ಹುಟ್ಟಿದ ಮಗ ಸತ್ರಜೀತ್ ಆಗಿದ್ದನು. ಆದರೆ ಧ್ರಿವ ಸಂಧಿ ಬೇಟೆಗಿ ಹೋದಾಗ ಹತನಾಗಿ ಎರಡನೇಯ ಪತ್ನಿಯ ಅಪ್ಪನಾದ ಯತ್ರಜೀತ್ ಆ ಸಾಮ್ರಾಜ್ಯವನ್ನು ನೋಡುತ್ತಿದ್ದನು ಹಾಗೂ ಮನೋರಮೆ ಹಾಗೂ ಆಕೆಯ ಪುತ್ರನನ್ನು ಕೊಲ್ಲಲು ಸಂಚು ರೂಪಿಸಿದ್ದನು. ಇದನ್ನರಿತಿದ್ದ ಮನೋರಮೆ ಕಾಡಿಗೆ ಹೋಗಿ ಮಗನನ್ನು ಬೆಳೆಸಿದ್ದಳು.
ಸುದರ್ಶನ ಚಿಕ್ಕಂದಿನಿಂದಲೂ ವೈಷ್ಣವಿ ಮಾತೆಯ ಭಕ್ತನಾಗಿದ್ದನು ಹಾಗೂ ಸದಾ ಆಕೆಯ ನಾಮಸ್ಮರಣೆ ಮಾಡುತ್ತಿದ್ದನು. ಹೀಗಿರುವ ಸಂದರ್ಭದಲ್ಲಿ ದೊಡ್ಡವನಾದಾಗ ಸ್ವಯಂವರದಲ್ಲಿ ಅವನೂ ಪಾಲ್ಗೊಂಡಿದ್ದನು. ಇತ್ತ ಕಾಶಿ ದೊರೆ ಹಾಗೂ ಪುತ್ರಿಗೆ ಯತ್ರಜೀತ್ ಹೆದರಿಸಿದ್ದನು, ತನ್ನ ಮೊಮ್ಮಗ ಸತ್ರಜೀತ್ ನೊಂದಿಗೆಯೆ ಮದುವೆಯಾಗಬೇಕೆಂದು ಆದೇಶಿಸಿದ್ದನು.
ದುರ್ಗಾ ಕುಂಡ, ಚಿತ್ರಕೃಪೆ: AKS.9955
ಆದರೆ, ಕಾಶಿ ರಾಜನ ಪುತ್ರಿಯಾದ ಶಶಿಕಲೆಗೆ ಸುದರ್ಶನನಲ್ಲಿ ಪ್ರೇಮಾಂಕುರವಾಗಿತ್ತು. ಈ ಮೊದಲು ಸುದರ್ಶನನ ದೈವ ಭಕ್ತಿ, ಉತ್ತಮ ವ್ಯಕ್ತಿತ್ವದ ಕುರಿತು ಅವಳು ಬಹಳ ಕೇಳಿದ್ದಳು. ಹೀಗಾಗಿ ಅಪ್ಪ ಎಷ್ಟು ಹೇಳಿದರೂ ಅವಳ ಅಪ್ಪನ ಮಾತು ಕೇಳದೆ ಸುದರ್ಶನನನ್ನೆ ಮದುವೆಯಾಗುವ ಹಟ ಹಿಡಿದಳು.
ಕೊನೆಗೆ ಅಪ್ಪನು ಅವಳ ಮನಸ್ಸನ್ನು ಅರ್ಥೈಸಿಕೊಂಡು ಗುಪ್ತವಾಗಿ ಆ ರಾತ್ರಿಯಂದೆ ಸುದರ್ಶನನ ಜೊತೆ ಅವಳ ವಿವಾಹ ಕಾರ್ಯವನ್ನು ಸಂಪನ್ನಗೊಳಿಸಿದನು. ಇದರ ವಿಷಯ ಎಲ್ಲೆಡೆ ಹರಡುತ್ತಿದ್ದಂತೆಯೆ ಯತ್ರಜೀತ್ ಕಾಶಿಗೆ ತನ್ನ ಸೈನ್ಯ ಸಮೇತ ಸುದರ್ಶನ ಹಾಗೂ ಕಾಶಿ ರಾಜನನ್ನು ಕೊಲ್ಲಲು ಬಂದನು.
ಚಿತ್ರಕೃಪೆ: Benjamin
ಹೀಗೆ ಘೋರವಾದ ಯುದ್ಧ ನಡೆಯುವ ಸಂದರ್ಭದಲ್ಲಿ ಯತ್ರಜೀತ್ ಗೆಲ್ಲುವ ಅವಕಾಶ ಹೆಚ್ಚಾಯಿತು. ಇದರಿಂದ ವಿಚಲಿತಗೊಂಡ ಸುದರ್ಶನ ತನ್ನ ಇಷ್ಟ ದೇವಿಯಾದ ದುರ್ಗೆ ಅಥವಾ ವೈಷ್ಣವಿ ದೇವಿಯ ಕುರಿತು ಮನದಲ್ಲಿ ಅತಿ ಭಕ್ತಿಯಿಂದ ಪ್ರಾರ್ಥಿಸಿದನು. ಪ್ರಸನ್ನಳಾದ ದೇವಿಯು ಆಕಾಶದಲ್ಲೆ ಎಲ್ಲರ ಮುಂದೆ ಪ್ರತ್ಯಕ್ಷಳಾಗಿ ಯತ್ರಜೀತ್ ಹಾಗೂ ಸತ್ರಜೀತ್ ರನ್ನು ಕ್ಷಣದಲ್ಲೆ ಕೊಂದು ಬೀಸಾಡಿದಳು.
ಅಧ್ಯಾತ್ಮಿಕ ರಾಜಧಾನಿ ಕಾಶಿಗೊಂದು ಭೇಟಿ
ಇದರಿಂದ ಯತ್ರಜೀತ್ ನ ಸೈನ್ಯ ದಿಕ್ಕಾಪಾಲಾಗಿ ಓಡಿ ಹೋಯಿತು. ಕೊನೆಗೆ ಕಾಶಿ ರಾಜ ಹಾಗೂ ಸುದರ್ಶನನಿಗೆ ವಿಜಯ ಒಲಿಯಿತು. ದೇವಿಯು ಅವರ ನಿಷ್ಠೆಗೆ ಮೆಚ್ಚಿ ವರದಾನ ಕೇಳಲು ಹೇಳಿದಾಗ ಅವರು ದೇವಿಯನ್ನು ಕುರಿತು ಕಾಶಿಯಲ್ಲೆ ನೆಲೆಸಿ ಈ ರಾಜ್ಯ ಹಾಗೂ ನಮ್ಮನ್ನು ಸದಾ ರಕ್ಷಿಸುವ ಕುರಿತು ಪ್ರಾರ್ಥಿಸಿದರು. ಅಂದಿನಿಂದ ದುರ್ಗೆಯು ಇಲ್ಲಿ ನೆಲೆಸಿರುವಳೆಂದು ಹೇಳಲಾಗುತ್ತದೆ.