ತೆಲಂಗಾಣ ರಾಜ್ಯದ ಪ್ರಮುಖ ನಗರ ಪ್ರದೇಶವಾದ ಹೈದರಾಬಾದ್ ನಗರದ ಪ್ರವಾಸಿ ಆಕರ್ಷಣೆಗಳಲ್ಲೊಂದಾದ ಒಸ್ಮಾನ್ ಸಾಗರ ಕೆರೆಯ ದಡದಲ್ಲಿ ನೆಲೆಸಿರುವ ಬಾಲಾಜಿ ಅಥವಾ ವೆಂಕಟೇಶ್ವರನ ದೇವಸ್ಥಾನವು ಒಂದು ಜನಪ್ರೀಯ ದೇವಸ್ಥಾನವಾಗಿದ್ದು, ಹೈದರಾಬಾದಿನಲ್ಲಿರುವ ಅತಿ ಪುರಾತನ ದೇವಾಲಯಗಳ ಪೈಕಿ ಒಂದಾಗಿದೆ. ಈ ದೇವಸ್ಥಾನವು ಭಕ್ತಾದಿಗಳಿಗೆಂದು ಪ್ರತಿದಿನ ಬೆಳಿಗ್ಗೆ ಆರರಿಂದ ಸಾಯಂಕಾಲ ಆರು ಘಂಟೆಯವರೆಗೆ ತೆರೆದಿರುತ್ತದೆ.
ವಿಶೇಷ ಲೇಖನ : ಹೈದರಾಬಾದ್ ನಗರದ ಆಕರ್ಷಣೆಗಳು
ಭಕ್ತ ರಾಮದಾಸರ ಮಾವಂದಿರಾಗಿದ್ದ ಮಾದಣ್ಣ ಹಾಗೂ ಅಕ್ಕಣ್ಣರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ವಿಸಾ ಕರುಣಿಸುವ ಬಾಲಾಜಿ ದೇವಸ್ಥಾನ ಎಂತಲೆ ಪ್ರಸಿದ್ಧಿ ಪಡೆದಿದೆ. ವಿಶೇಷವೆಂದರೆ ಈ ದೇವಸ್ಥಾನವು ಭಕ್ತರಿಂದ ಯಾವುದೆ ರೀತಿಯ ಕಾಣಿಕೆಗಳನ್ನಾಗಲಿ, ದೇಣಿಗೆಯನ್ನಾಗಲಿ ಪಡೆಯುವುದಿಲ್ಲ. ಅಲ್ಲದೆ ಇಲ್ಲಿ ದೇವರ ಹುಂಡಿಯೂ ಸಹ ಇರಿಸಲಾಗಿಲ್ಲ. ಸ್ವತಂತ್ರವಾಗಿ ಸರ್ಕಾರದೊಂದಿಗೆ ಹೋರಾಡಿ ಸರ್ಕಾರದ ನಿಯಂತ್ರಣಕ್ಕೂ ಇದು ಒಳಪಟ್ಟಿಲ್ಲ. ಎಂತಹ ಗಣ್ಯ ವ್ಯಕ್ತಿಯಾದರೂ ಸರಿ ವಿಶೇಷವಾದ ಪ್ರವೇಶ ಇಲ್ಲವೆ ಇಲ್ಲ.

ಚಿಲ್ಕೂರು ಬಾಲಾಜಿ ದೇವಸ್ಥಾನ ಗೋಪುರ
ಚಿತ್ರಕೃಪೆ: Adityamadhav83
ದೇವಸ್ಥಾನದ ಹಿನ್ನಿಲೆ:
ಒಂದೊಮ್ಮೆ ತಿರುಪತಿ ವೆಂಕಟೇಶ್ವರನ [ಏಳು ಬೆಟ್ಟಗಳ ಒಡೆಯ ತಿಮ್ಮಪ್ಪ] ಪರಮ ಭಕ್ತನಿದ್ದನು. ಪ್ರತಿ ವರ್ಷವೂ ತಪ್ಪದೆ ತಿರುಮಲಕ್ಕೆ ತೆರಳಿ ಬಾಲಾಜಿಯ ದರುಶನ ಪಡೆಯುತ್ತಿದ್ದನು. ಒಮ್ಮೆ ಅನಾರೋಗ್ಯ ಉಂಟಾಗಿ ತಿರುಪತಿಗೆ ಭೇಟಿ ನೀಡಲು ಅವನಿಂದ ಸಾಧ್ಯವಾಗಲಿಲ್ಲ. ಇದರಿಂದ ಅವನ ಮನಸ್ಸು ಬಹಳ ಚಡಪಡಿಸ ತೊಡಗಿತು. ಇದನ್ನರಿತ ವೆಂಕಟೇಶ್ವರನು ಅವನ ಕನಸಿನಲ್ಲಿ ಬಂದು "ಚಿಂತಿಸಬೇಡ ನಾನಿಲ್ಲೆ ಇರುವೆ" ಎಂದು ಹೇಳಿ ಒಂದು ಸ್ಥಳದ ಕುರಿತು ಹೇಳಿದನು.

ಶ್ರೀದೇವಿ ಭೂದೇವಿ ಸಮೇತನಾಗಿರುವ ಚಿಲ್ಕೂರು ಬಾಲಾಜಿ
ಮರುದಿನ ಆತನು ಆ ಸ್ಥಳಕ್ಕೆ ತೆರಳಿದಾಗ ಮಣ್ಣಿನ ದಿಬ್ಬವೊಂದು ಕಾಣಿಸಿತು. ತನ್ನಲ್ಲಿರುವ ಉಪಕರಣದಿಂದ ಅದನ್ನು ಅಗೆಯುವಾಗ ಅದರೊಳಗಿದ್ದ ಬಾಲಾಜಿಯ ಮೂರ್ತಿಯ ಗದ್ದ ಹಾಗೂ ಎದೆಗೆ ತಾಕಿ ಅದರಿಂದ ರಕ್ತ ಚಿಮ್ಮ ತೊಡಗಿತು. ಆಗ ಆಕಾಶವಾಣಿಯೊಂದು ಉಂಟಾಗಿ ಹಸುವಿನ ಹಾಲಿನಿಂದ ಈ ದಿಬ್ಬವನ್ನು ಮುಚ್ಚು ಎಂದು ಹೇಳಿತು. ಅದರಂತೆ ಆ ಭಕ್ತನು ಮಾಡಿದಾಗ ಬಾಲಾಜಿಯ ವಿಗ್ರಹವು ಶ್ರೀದೇವಿ ಹಾಗೂ ಭೂದೇವಿಯರೊಂದಿಗೆ ಸ್ವಯಂ ಉದ್ಭವಗೊಂಡಿತು.

ಚಿಲ್ಕೂರು ಪ್ರವೇಶಿಸುತ್ತಿರುವ ಹಾಗೆ ಕಂಡುಬರುವ ಆಂಜನೇಯನ ದೇವಸ್ಥಾನ
ಚಿತ್ರಕೃಪೆ: Sunjay.kodaru
ನಂತರ ಈ ವಿಗ್ರಹಕ್ಕೆ ದೇವಸ್ಥಾನವನ್ನು ನಿರ್ಮಿಸಲಾಯಿತು. ಅಂದಿನಿಂದ ಈ ದೇವಾಲಯವು ಪ್ರಾಮುಖ್ಯತೆಯನ್ನು ಪಡೆದಿದ್ದು ಯಾರಿಗೆ ತಿರುಪತಿ ತಿರುಮಲಕ್ಕೆ ಹೊರಡಲಾಗುವುದಿಲ್ಲವೊ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಏನಿಲ್ಲವೆಂದರೂ ಪ್ರತಿ ವರ್ಷವೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಮತ್ತೊಂದು ವಿಷಯವೆಂದರೆ ಯಾರೆ ತಮ್ಮ ಇಷ್ಟಾರ್ಥವನ್ನು ಬಾಲಾಜಿಗೆ ತಿಳಿಸಿ ಹನ್ನೊಂದು ಪ್ರದಕ್ಷಿಣೆಗಳನ್ನು ಹಾಕಿದರೆ ಸಾಕು ಅವರ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ. ನಂತರ ಅವರು ಮತ್ತೆ ಇಲ್ಲಿಗೆ ತೆರಳಿ 108 ಪ್ರದಕ್ಷಿಣೆಗಳನ್ನು ಹಾಕಬೇಕು.

ಅರ್ಚನೆಗೆ ಬೇಕಾಗುವ ಪೂಜಾ ಸಾಮಗ್ರಿಗಳು ದೊರೆಯುವ ಸ್ಥಳ
ಚಿತ್ರಕೃಪೆ: Manu Manohar
ವಿಶೇಷ ಲೇಖನ : ಇಲಿಗಳ ದೇವಾಲಯ
ಈ ದೇವಸ್ಥಾನಕ್ಕೆ ಬರುವವರಲ್ಲಿ ಬಹುತೇಕರು ವಿಸಾಗೆ ಸಂಬಂಧಿಸಿದಂತೆ ಪ್ರಾರ್ಥಿಸುತ್ತಾರೆ ಹಾಗೂ ಈ ನಿಟ್ಟಿನಲ್ಲಿ ಸರ್ವರ ಬೇಡಿಕೆ ಈಡೇರಿಸಲ್ಪಟ್ಟಿದೆ ಎಂದೂ ಸಹ ಹೇಳಲಾಗುತ್ತದೆ. ಆದ್ದರಿಂದ ಈ ಬಾಲಾಜಿಯನ್ನು ಪ್ರೀತಿಯಿಂದ ವಿಸಾ ಬಾಲಾಜಿ ಎಂದು ಕರೆಯಲಾಗಿದೆ. ದೇವಸ್ಥಾನವು ಮೂಲತಃ ಚಿಲ್ಕೂರು ಎಂಬ ಹಳ್ಳಿಯಲ್ಲಿದ್ದು ಹೈದರಾಬಾದ್ ನಗರದಿಂದ ಚಿಲ್ಕೂರು ಬಲಾಜಿ ದೇವಸ್ಥಾನಕ್ಕೆ ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಹೈದರಾಬಾದ್ ನಗರದಿಂದ ಈ ದೇವಸ್ಥಾನವು ಸುಮಾರು 26 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ.
ಒಸ್ಮಾನ್ ಸಾಗರ ಜಲಾಶಯ:
ಇನ್ನು ಇಲ್ಲಿರುವ ಒಸ್ಮಾನ್ ಸಾಗರ ಕರೆಯೂ ಕೂಡ ಸಾಕಷ್ಟು ಜನಪ್ರೀಯತೆಗಳಿಸಿರುವ ಕೆರೆಯಾಗಿದೆ. ಇಲ್ಲಿ ಕಂಡುಬರುವ ಸೂರ್ಯಾಸ್ತದ ನೋಟವು ಎಂತಹವರನ್ನೂ ಸಹ ಬೆರುಗು ಗೊಳಿಸುತ್ತದೆ. ಮೂಲತಃ ಮೂಸಿ ನದಿಗೆ ಕಟ್ಟಲಾದ ಇದು ಒಂದು ಕೃತಕ ಜಲಾಶಯ ಹಾಗೂ ಕೆರೆಯಾಗಿದೆ. ಜಲಾಶಯವು 29 ಚಕಿಮೀ ಗಳಷ್ಟು ವಿಸ್ತೀರ್ಣ ಹೊಂದಿದ್ದರೆ ಕೆರೆಯು 46 ಚಕಿಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಹರಡಿದೆ. ಹೈದರಾಬಾದಿನ ಕೊನೆಯ ನಿಜಾಮನಾಗಿದ್ದ ಒಸ್ಮಾನ್ ಅಲಿ ಖಾನನ ಸಮಯದಲ್ಲಿ ಈ ಜಲಾಶಯ ನಿರ್ಮಾಣವಾದ್ದರಿಂದ ಇದಕ್ಕೆ ಒಸ್ಮಾನ್ ಸಾಗರ ಎಂಬ ಹೆಸರು ನಿಜಾಮನ ಗೌರವಾರ್ಥವಾಗಿ ನೀಡಲಾಗಿದೆ.

ಚಿತ್ರಕೃಪೆ: sankarshan sen
ಇದೊಂದು ಅದ್ಭುತವಾದ ಪ್ರೇಕ್ಷಣೀಯ ಸ್ಥಳವಾಗಿದ್ದು ಕಿರು ಪ್ರವಾಸಕ್ಕೆ ಆದರ್ಶಮಯ ತಾಣವಾಗಿದೆ. ಇಲ್ಲಿರುವ ಉದ್ಯಾನಗಳು, ರಿಸಾರ್ಟುಗಳು, ಮನರಂಜನಾ ಉದ್ಯಾನಗಳು ಪ್ರಮುಖ ಆಕರ್ಷಣೆಗಳಾಗಿವೆ. ಈ ಸರೋವರಕ್ಕೆ ಅಭಿಮುಖವಾಗಿ ನಿಜಾಮನ ಬೇಸಿಗೆ ರಜೆಯ ಅತಿಥಿ ಗೃಹವೊಂದನ್ನು ನಿರ್ಮಿಸಲಾಗಿದೆ. ಪ್ರಸ್ತುತ ತೆಲಾಂಗಣ ರಾಜ್ಯ ಪ್ರವಾಸೋದ್ಯಮ ಇಲಾಖೆಯು ರಿಸಾರ್ಟೊಂದನ್ನು ಈ ಕಟ್ಟಡದಲ್ಲಿ ನಡೆಸುತ್ತಿದೆ. ಇಲ್ಲಿಂದ ಜಲಾಶಯದ ನೋಟವು ಅದ್ಭುತವಾಗಿ ಗೋಚರಿಸುತ್ತದೆ. ಅದರಂತೆ ತಟದ ಮೇಲೆ ಉಪಸ್ಥಿತವಿರುವ ಈ ಕಟ್ಟಡವೂ ಸೊಗಸಾಗಿ ಕಂಡುಬರುತ್ತದೆ.


Click it and Unblock the Notifications
















