ಭಾರತ ದೇಶವು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಕೇಂದ್ರಾಡಳಿತ ಪ್ರದೇಶ ಒಂದು ಆಡಳಿತಾತ್ಮಕ ವಿಭಾಗವಾಗಿದೆ. ಕೇಂದ್ರಾಡಳಿತ ಪ್ರದೇಶಗಳು ಇತರೆ ರಾಜ್ಯಗಳಲ್ಲಿ ಆರಿಸಿ ಬಂದ ಭಿನ್ನ ಸರ್ಕಾರಗಳಂತಿರದೆ ಕೇಂದ್ರ ಸರ್ಕಾರದಿಂದಲೆ ನಿರ್ವಹಿಸಲ್ಪಡುತ್ತದೆ. ಆದ್ದರಿಂದ ಇವುಗಳನ್ನು ಕೇಂದ್ರಾಡಳಿತ ಪ್ರದೇಶಗಳೆನ್ನಲಾಗುತ್ತದೆ. ಕೇಂದ್ರಾಡಳಿತ ಪ್ರದೇಶಗಳೂ ಸಹ ಶಾಸಕಾಂಗ ಹಾಗು ಮುಖ್ಯ ಮಂತ್ರಿಯನ್ನು ಹೊಂದಬಹುದಾಗಿದೆ. ಸಾಮಾನ್ಯವಾಗಿ ಭಾರತದ ರಾಷ್ಟ್ರಪತಿಯು ಈ ಕೇಂದ್ರಾಡಳಿತ ಪ್ರದೇಶಗಳಿಗೆ ಆಡಳಿತಗಾರ ಹಾಗು ಲೆಫ್ಟಿನೆಂಟ್ ಗವರ್ನರ್ ಅನ್ನು ನೇಮಿಸುತ್ತಾರೆ. ಅಯ್ಯೊ ಸಾಕು ಬಿಡ್ರಿ ಇಷ್ಟೊಂದು ಪುರಾಣ ಸಾಕು ಸಾಮಾನ್ಯ ಜ್ಞಾನಕ್ಕೆ. ನಮಗೆ ಬೇಕಾಗಿರುವುದು ಇಲ್ಲಿ ಏನೇನೂ ನೋಡಬಹುದಾಗಿರುವುದರ ಕುರಿತು.
ಭಾರತದಲ್ಲಿರುವ ಏಳು ಕೇಂದ್ರಾಡಳಿತ ಪ್ರದೇಶಗಳೆಂದರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಚಂಡೀಗಢ್, ದಾದ್ರಾ ಹಾಗು ನಗರ್ ಹವೇಲಿ, ದಮನ್ ಮತ್ತು ದೀವ್, ದೆಹಲಿ, ಲಕ್ಷದ್ವೀಪ ಹಾಗು ಕೊನೆಯದಾಗಿ ಪಾಂಡಿಚೆರಿ. ಬನ್ನಿ ಈ ಲೇಖನದ ಮೂಲಕ ಈ ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಡಬಹುದಾದ ಏಳು ಆಸಕ್ತಿಕರ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯೋಣ.
1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:
ಭಾರತದ ಆಗ್ನೇಯ ದಿಕ್ಕಿಗೆ ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರಗಳ ಮಧ್ಯೆ ನೆಲೆಸಿರುವ ಈ ದ್ವೀಪಗಳು ಭಾರತದ ಅಂಗವಾಗಿದ್ದು 1956 ರಲ್ಲಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲ್ಪಟ್ಟಿದೆ. ಪೋರ್ಟ್ ಬ್ಲೇರ್ ಇದರ ರಾಜಧಾನಿಯಾಗಿದ್ದು ದೇಶಗಳಾದ ಥೈಲ್ಯಾಂಡ್ ಹಾಗು ಇಂಡೊನೇಷಿಯಾಗಳಿಗೆ ಈ ದ್ವೀಪಗಳು ಹತ್ತಿರದಲ್ಲಿವೆ. ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಇದೊಂದು ಅದ್ಭುತ ಪ್ರವಾಸಿ ದ್ವೀಪಗಳಾಗಿವೆ. ಹಡುಗು ಹಾಗು ವಿಮಾನದಿಂದ ಸುಲಭವಾಗಿ ತಲುಪಬಹುದಾದ ಈ ದ್ವೀಪಗಳಲ್ಲಿ ಹ್ಯಾವ್ಲಾಕ್, ಬ್ಯಾರನ್ ಐಲ್ಯಾಂಡ್, ಸೆಲ್ಯೂಲರ್ ಜೈಲ್, ಹವಳದ ದಿಬ್ಬಗಳು, ಬಾರಾಟಾಂಗ್ ನಂತಹ ಹಲವು ಆಕರ್ಷಣೆಗಳಿವೆ.
ಚಿತ್ರಕೃಪೆ
ಹ್ಯಾವ್ಲಾಕ್ ಐಲ್ಯಾಂಡ್:
ಅಂಡಮಾನ್ ದ್ವೀಪ ಗುಚ್ಛದಲ್ಲಿ ಬರುವ ಈ ಐಲ್ಯಾಂಡ್ 113.93 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಲ್ಲಿ ಹರಡಿದೆ. ರಾಜಧಾನಿ ನಗರ ಪೋರ್ಟ್ ಬ್ಲೇರ್ ನ ಈಶಾನ್ಯ ದಿಕ್ಕಿಗೆ ಸುಮಾರು 57 ಕಿ.ಮೀ ದೂರದಲ್ಲಿ ನೆಲೆಸಿದೆ.
ಚಿತ್ರಕೃಪೆ
ಹ್ಯಾವ್ಲಾಕ್ ಐಲ್ಯಾಂಡ್
ಹ್ಯಾವ್ಲಾಕ್ ಐಲ್ಯಾಂಡ್ ನ ಮತ್ತೊಂದು ಚಿತ್ರ. ಪ್ರಶಾಂತತೆಯ ಭಾವದಲ್ಲಿ...ಮುಳುಗಿದ ಸುಂದರ ಪರಿಸರ.
ಚಿತ್ರಕೃಪೆ
ಸೆಲ್ಯೂಲರ್ ಜೈಲ್:
ಕಾಲಾಪಾನಿ ಎಂತಲೂ ಕರೆಯಲಾಗುವ ಈ ಸೆಲ್ಯೂಲರ್ ಜೈಲು ಇಂದು ಅಂಡಮಾನ್ ನ ಒಂದು ಪ್ರವಾಸಿ ಆಕರ್ಷಣೆ. ಹಿಂದೆ ಬ್ರಿಟೀಷರು ಸ್ವಾತಂತ್ರ್ಯ ಹೋರಾಟಗಾರರನ್ನು ಹಿಡೀದಿಡಲು ಈ ಜೈಲನ್ನು ಉಪಯೋಗಿಸುತ್ತಿದ್ದರು. ಕೆಲವು ಹೆಸರಾಂತ ವ್ಯಕ್ತಿಗಳಾದ ವೀರ್ ಸಾವರ್ಕರ್, ಬಟುಕೇಶ್ವರ ದತ್ತ ಮುಂತಾದವರನ್ನು ಇಲ್ಲಿ ಬಂಧಿಸಿಡಲಾಗಿತ್ತು. ಇಂದು ಇದು ಒಂದು ಭವ್ಯ ರಾಷ್ಟ್ರೀಯ ಸ್ಮಾರಕವಾಗಿದೆ. ಚಿತ್ರದಲ್ಲಿ ಕಾಣುತ್ತಿರುವುದು ವೀರ್ ಸಾವರ್ಕರ್ ರನ್ನು ಇಟ್ಟಿದ್ದ ಜೈಲು ಕೋಣೆ.
ಚಿತ್ರಕೃಪೆ: Aliven Sarkar
2. ಚಂಡೀಗಢ್:
ಉತ್ತರ ಭಾರತದಲ್ಲಿರುವ ಚಂಡೀಗಢ್ ಕೇಂದ್ರಾಡಳಿತ ಪ್ರದೇಶವಾಗಿರುವುದು ಅಲ್ಲದೆ ಪಂಜಾಬ್ ಹಾಗು ಹರ್ಯಾಣ ರಾಜ್ಯಗಳಿಗೆ ರಾಜಧಾನಿಯಾಗಿಯೂ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಭಾರತದ ಯೋಜಿತ ನಗರ ಎಂಬ ಹೆಮ್ಮೆ, ಕೀರ್ತಿಗಳಿಗೂ ಈ ನಗರ ಪಾತ್ರವಾಗಿದೆ. ಇಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಕಾಣಬಹುದು. ಚಿತ್ರದಲ್ಲಿರುವುದು ತೆರೆದ ಕೈ ಸ್ಮಾರಕ.
ಚಿತ್ರಕೃಪೆ
ಸುಖನಾ ಕೆರೆ:
ಈ ಸುಂದರ ಕೃತಕ ಕೆರೆ ಚಂಡೀಗಢ್ ನಗರದ ಒಂದು ಅವಿಭಾಜ್ಯ ಅಂಗವಾಗಿದೆ. ಈ ಕೆರೆ ಪ್ರದೇಶದಲ್ಲಿ ಹಲವು ಉತ್ಸವಗಳನ್ನೂ ಕೂಡ ಆಯೋಜಿಸಲಾಗುತ್ತದೆ. ಮಳೆಗಾಲದ ಸಮಯದಲ್ಲಿ ಆಚರಿಸಲಾಗುವ ಮಾವಿನ ಮೇಳವು ಇಲ್ಲಿ ಪ್ರಮುಖವಾದದ್ದು.
ಚಿತ್ರಕೃಪೆ: Shahnoor Habib Munmun
ಜಾಕೀರ್ ಹುಸೈನ್ ಗುಲಾಬಿ ತೋಟ:
ಚಂಡೀಗಢ್ ನಗರದ ಈ ಬೃಹತ್ ಗುಲಾಬಿ ಹೂಗಳ ಉದ್ಯಾನವು ಏಷಿಯಾದಲ್ಲೆ ಬೃಹತ್ತಾದ ಗುಲಾಬಿ ತೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1967 ರಲ್ಲಿ ನಿರ್ಮಿಸಲಾದ ಈ ಉದ್ಯಾನಕ್ಕೆ ಭಾರತದ ರಾಷ್ಟ್ರಪತಿಗಳಾಗಿದ್ದ ಜಾಕೀರ್ ಹುಸೈನ್ ಅವರ ಗೌರವಸೂಚಕವಾಗಿ ಜಾಕೀರ್ ಹುಸೈನ್ ರೋಸ್ ಗಾರ್ಡನ್ ಎಂಬ ಹೆಸರನ್ನು ಇಡಲಾಗಿದೆ.
ಚಿತ್ರಕೃಪೆ: Shahnoor Habib Munmun
ರಾಕ್ ಗಾರ್ಡನ್/ ಕಲ್ಲೊದ್ಯಾನ
ಚಂಡೀಗಢ್ ದಲ್ಲಿರುವ ಈ ರಾಕ್ ಗಾರ್ಡನ್ ಕೈಗಾರಿಕೆ ಹಾಗು ಮನೆಯಿಂದ ಎಸೆಯಲಾದ ವ್ಯರ್ಥ ಅಥವಾ ಹಾಳಾದ ವಸ್ತುಗಳಿಂದ ಕಲಾತ್ಮಕವಾಗಿ ರಚಿಸಲಾದ ಕಲಾಕೃತಿಗಳ ಉದ್ಯಾನವಾಗಿದೆ. 40 ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಇದೊಂದು ನೋಡಲೇಬೇಕಾದ ಉದ್ಯಾನವಾಗಿದೆ.
ಚಿತ್ರಕೃಪೆ
3. ದಾದ್ರಾ ಮತ್ತು ನಗರಹವೇಲಿ:
ಪಶ್ಚಿಮ ಭಾರತದ ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಮಧ್ಯೆ ನೆಲೆಸಿರುವ ಈ ಕೇಂದ್ರಾಡಳಿತ ಪ್ರದೇಶದ ಸುಮಾರು 43% ಭಾಗವು ಅರಣ್ಯ ಪ್ರದೇಶದಿಂದ ಕೂಡಿದೆ. ಸಿಲ್ವಾಸಾ ನಗರ ಈ ಪ್ರದೇಶದ ರಾಜಧಾನಿ ನಗರವಾಗಿದೆ. ಸಸ್ಯ ಸಂಪತ್ತು ಹಾಗು ವನ್ಯ ಸಂಪತ್ತು ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ.
ಚಿತ್ರಕೃಪೆ: dnh.nic.in
4. ದಮನ್ ಮತ್ತು ದೀವ್:
450 ಕ್ಕೂ ಅಧಿಕ ವರ್ಷಗಳ ಕಾಲ ಅರೇಬಿಯನ್ ಸಮುದ್ರ ತೀರದ ಈ ಪ್ರದೇಶಗಳು ಪೋರ್ಚುಗೀಸರ ಅಧಿನದಲ್ಲಿತ್ತು. ನಂತರ 1961 ರಲ್ಲಿ ಭಾರತೀಯ ಸೈನ್ಯವು ಇದನ್ನು ಅಧಿಕೃತವಾಗಿ ವಶಪಡಿಸಿಕೊಂಡವು. ದಮನ್ ಹಾಗು ದೀವ್ ಪ್ರದೇಶಗಳು ಒಂದಕ್ಕೊಂದು 640 ಕಿ.ಮೀಗಳಷ್ಟು ಅಂತರದಲ್ಲಿವೆ. ಇಲ್ಲಿನ ಸ್ಮಾರಕಗಳಲ್ಲಿ ಪೋರ್ಚುಗೀಸ್ ವಾಸ್ತುಶೈಲಿಯನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Shakti
5. ದೆಹಲಿ:
ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಇಂಡಿಯಾದ ದೆಹಲಿ ಪ್ರದೇಶವು ಒಂದು ಕೇಂದ್ರಾಡಳಿತ ಪ್ರದೇಶವಾಗಿದ್ದು ದೇಶದ ರಾಜಧಾನಿ ನಗರ ನವದೆಹಲಿಯನ್ನೂ ಸಹ ಒಳಗೊಂಡಿದೆ. ಅಸಂಖ್ಯಾತ ಪ್ರವಾಸಿ ಆಕರ್ಷಣೆಗಳನ್ನು ಈ ಪ್ರದೇಶದಲ್ಲಿ ಕಾಣಬಹುದಾಗಿದೆ. ಈ ಪ್ರವಾಸಿ ಆಕರ್ಷಣೆಗಳ ಚಿತ್ರ ಪ್ರವಾಸ ಇಲ್ಲಿ ಮಾಡಿ.
ಚಿತ್ರಕೃಪೆ
6. ಲಕ್ಷದ್ವೀಪ:
ಈ ಕೇಂದ್ರಾಡಳಿತ ಪ್ರದೇಶವು ಚಿಕ್ಕ ಪುಟ್ಟ ದ್ವೀಪಗಳ ಸಮುಚ್ಛಯವಾಗಿದ್ದು, ಭಾರತದ ನೈರುತ್ಯ ಕರಾವಳಿ ತೀರದಿಂದ ಸುಮಾರು 200 ರಿಂದ 440 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಭೌಗೋಳಿಕವಾಗಿ ಚಿಕ್ಕದಾಗಿರುವ ಈ ಪ್ರದೇಶದಲ್ಲಿ ಯಾವುದೆ ಕೈಗರಿಕೆಗಳನ್ನು ನಡೆಸಲು ಅವಕಾಶವಿಲ್ಲದರ ಪರಿಣಾಮವಾಗಿ ಭಾರತ ಸರ್ಕಾರವು ಇದನ್ನು ಒಂದು ಗಮ್ಯ ಪ್ರವಾಸಿ ತಾಣವನ್ನಾಗಿ ಆದರಿಸಿ ಪ್ರೋತ್ಸಾಹಿಸುತ್ತಿದೆ. ಲಕ್ಷದ್ವೀಪದ ಚಿತ್ರ ಪ್ರವಾಸ ಮಾಡಿ.
ಚಿತ್ರಕೃಪೆ
7. ಪಾಂಡಿಚೆರಿ/ಪುದುಚೆರಿ
ತಮಿಳಿನಲ್ಲಿ ಪುದುಚೆರಿ ಎಂದರೆ ಹೊಸ ಪಟ್ಟಣ ಎಂಬ ಅರ್ಥ ನೀಡುವ ಈ ಪ್ರದೇಶವು ಕೇಂದ್ರಾಡಳಿತ ಪ್ರದೇಶವಾಗಿದೆ. ರಾಷ್ಟ್ರೀಯ ಹಾಗು ಅಂತಾರಾಷ್ಟ್ರಿಯ ಮಟ್ಟದ ಪ್ರವಾಸಿಗರಿಗೆ ಪಾಂಡಿಚೆರಿ ಒಂದು ನೆಚ್ಚಿನ ಪ್ರವಾಸಿ ತಾಣವಾಗಿದೆ. ಇಲ್ಲಿರುವ ಪ್ರವಾಸಿ ಆಕರ್ಷಣೆಗಳ ಕುರಿತು ತಿಳಿಯಿರಿ.
ಚಿತ್ರಕೃಪೆ