ಹಿಂದು, ಬೌದ್ಧ ಹಾಗೂ ಗ್ರೀಕ್ ಸಂಸ್ಕೃತಿಗಳಲ್ಲಿ ಅಪ್ಸರೆಯರ ಕುರಿತು ಉಲ್ಲೇಖವಿರುವುದನ್ನು ಗಮನಿಸಬಹುದು. ಆಗಸದಲ್ಲಿ ಹರಡಿರುವ ಮೇಘಗಳ ಹಾಗೂ ಜುಳು ಜುಳು ಎಂದು ಪ್ರಶಾಂತವಾಗಿ ಹರಿಯುವ ಜಲದ ಸ್ತ್ರೀತನವನ್ನು ಪ್ರತಿನಿಧಿಸುವ ಕನ್ಯಾಮಣಿಗಳು ಈ ಅಪ್ಸರೆಯರು. ಒಂದು ಕ್ಷಣ ನೋಡಿದರೂ ಸಾಕು ಮನುಷ್ಯ ತನ್ನನ್ನೆ ತಾನು ಮರೆಯುವಂತೆ ಮಾಡುವಂತಹ ಸೌಂದರ್ಯವತಿಯರು ಈ ಅಪ್ಸರೆಯರು.
ಪುರಾಣ-ಪುಣ್ಯ ಕಥೆಗಳಲ್ಲಿ ಸಾಮಾನ್ಯವಾಗಿ ಹೇಳಿರುವಂತೆ ಆಗಸದಲ್ಲಿ ವಿಹರಿಸುತ್ತ ತಮಗಿಷ್ಟವಾಗುವ ಸ್ಥಳದಲ್ಲಿ ವಿಶ್ರಮಿಸುವ ಈ ಸುಂದರ ಕನ್ಯೆಯರು ಆಯ್ಕೆ ಮಾಡಿಕೊಳ್ಳುವ ಸ್ಥಳ ಅಂತಿಂಥದ್ದಲ್ಲ. ಇಂತಹ ಅಪ್ಸರೆಯರೆ ಆಯ್ಕೆ ಮಾಡಿಕೊಂಡಿರುವ ಸ್ಥಳವಾದರೂ ಹೇಗಿರಬಹುದು ಎಂದೆನಿಸದೆ ಇರಲಾರದು. ಹೌದು, ಖಂಡಿತವಾಗಿಯೂ ಮನಸ್ಸು ಪ್ರಸನ್ನಗೊಳ್ಳುವ, ಅತ್ಯದ್ಭುತ ಪ್ರಕೃತಿ ಸೌಂದರ್ಯದ ತಾಣಗಳೆ ಆಗಿರುತ್ತವೆ.
ಕರ್ನಾಟಕದ ಅತಿ ಸುಂದರ ಕಡಲತೀರವಿದು!
ಅಂತಹ ಒಂದು ಸ್ಥಳದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಆ ತಾಣವಿರುವುದು ಕರ್ನಾಟಕದಲ್ಲೆ ಎಂದಾಗ ಹೆಮ್ಮೆಯಾಗದೆ ಇರಲಾರದು. ಇಲ್ಲಿ ಪ್ರಕೃತಿ ದೇವಿಯು ತಾನಾಗಿಯೆ ಇಷ್ಟಪಟ್ಟು ತನ್ನ ಮನೆಯನ್ನು ಬಹು ಅಚ್ಚುಕಟ್ಟಾಗಿ ಸಿಂಗರಿಸಿಕೊಂಡಿರಬಹುದೆಂದನಿಸಿದರೆ ತಪ್ಪಿಲ್ಲ. ವಾಣಿಜ್ಯ ಜಗತ್ತಿನ ಸ್ಪರ್ಶ ಇರದೆ ಇರುವುದು ಈ ಸ್ಥಳದ ಮತ್ತೊಂದು ಮಹತ್ತರ ಲಕ್ಷಣ. ಆದರೆ ಇದನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗಬೇಕಾದುದು ಪ್ರವಾಸಿಗರ ಆದ್ಯತೆಯಾಗಬೇಕು.
ಹಾಗಾದರೆ ಬನ್ನಿ, ಆ ತಾಣ ಯಾವುದು, ಅದು ಎಲ್ಲಿದೆ ಹಾಗೂ ಅಲ್ಲಿನ ಪ್ರಕೃತಿ ಸೌಂದರ್ಯ ಎಂಥದ್ದು ಎಂಬುದರ ಕುರಿತು ಸ್ಲೈಡುಗಳ ಮೂಲಕ ತಿಳಿಯಿರಿ. ಇನ್ನೊಂದು ವಿಷಯ ಈ ತಾಣಕ್ಕೆ ಯಾವ ಕಾಲದಲ್ಲೂ ಭೇಟಿ ನೀಡಬಹುದಾದರೂ ಮಳೆಗಾಲ ಹಾಗೂ ನಂತರದ ಸಮಯದಲ್ಲಿ ಇಲ್ಲಿನ ಸಸ್ಯ ಹಾಗೂ ಜಲರಾಶಿ ಅಪ್ಸರೆಯಂತಹ ಜೀವ ಕಳೆಯನ್ನೆ ಪಡೆಯುತ್ತವೆ. ನೀವೂ ಒಮ್ಮೆ ನೋಡಿ ಬನ್ನಿ.
ಮೂರು ಪಟಗಳನ್ನು ಹೊರತುಪಡಿಸಿ ಲೇಖನದಲ್ಲಿ ಬಳಸಲಾದ ಎಲ್ಲ ಚಿತ್ರಗಳಿಗೆ/ಪಟಗಳಿಗೆ ಚಿತ್ರಕೃಪೆ : Brunda Nagaraj
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇದಕ್ಕಂಟಿಕೊಂಡಿರುವ ಹಿನ್ನಿಲೆಯಂತೆ ಸ್ವತಃ ಸ್ವರ್ಗದ ಅಪ್ಸರೆಯರೆ ವಿಹರಿಸುತ್ತಿರುವಾಗ ಈ ಕೊಳವನ್ನು ನೋಡಿ ಸಂತಸಗೊಂಡರಲ್ಲದೆ ಇದರ ಸುತ್ತಮುತ್ತಲಿನ ರಮಣೀಯ ಪರಿಸರ ನೋಡಿ ಮೂಕವಿಸ್ಮಿತರಾದರು ಹಾಗೂ ಈ ಕೊಳದಲ್ಲಿ ತಮಗಿಷ್ಟವಾಗುವ ತನಕ ಮಿಂದರು. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: wikipedia
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಹೀಗಾಗಿ ಈ ಸ್ಥಳಕ್ಕೆ ಅಪ್ಸರಕೊಂಡ ಎಂಬ ಹೆಸರು ಬಂದಿದೆ. ಅಪ್ಸರಕೊಂಡವು ಅಕ್ಷರಶಃ ಅತ್ಯದ್ಭುತ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಅತಿ ಸುಂದರ ಸ್ಥಳವಾಗಿದೆ.
ಚಿತ್ರಕೃಪೆ: Isroman.san
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಪ್ಸರಕೊಂಡವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿದೆ. ಹೊನ್ನಾವರ ಪಟ್ಟಣದಿಂದ ಕೇವಲ ಏಳು ಕಿ.ಮೀ ಗಳಷ್ಟು ದೂರವಿರುವ ಈ ಅದ್ಭುತ ಅಪ್ಸರಕೊಂಡ ಸ್ಥಳವು ಒಮ್ಮೆಯಾದರೂ ನೋಡಲೇಬೇಕಾದ ಸ್ಥಳವೆಂದರೂ ತಪ್ಪಲ್ಲ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಈ ಒಂದು ಸ್ಥಳದಲ್ಲಿ ನೋಡಲು ಏನೇನಿಲ್ಲ...ವಿಶಾಲವಾಗಿ ಚಾಚಿರುವ ಅರಬ್ಬಿ ಸಮುದ್ರ, ಸುಶ್ರಾವ್ಯವಾಗಿ ಕೇಳಿ ಬರುವ ಪಕ್ಷಿಗಳ ಸಿಹಿಯಾದ ಧ್ವನಿ, ಹಚ್ಚ ಹಸಿರಿನಿಂದ ನಳ ನಳಿಸುವ ದಟ್ಟ ಗಿಡ ಮರಗಳು, ಒಂದೆಡೆ ಬೆಟ್ಟ, ಇನ್ನೊಂದೆಡೆ ಜಲಪಾತ. ಪ್ರಶಾಂತಮಯವಾದ ಪರಿಸರ ಹಾಗೂ ಸೇವಿಸಲು ಶುದ್ಧವಾದ ಗಾಳಿ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಈ ರೀತಿಯಾಗಿ ಅಪ್ಸರಕೊಂಡವು ಭೆಟಿ ನೀಡುಗರ ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. ಒಮ್ಮೆ ಭೇಟಿ ನೀಡಿದರೆ ಸಾಕು ಮತ್ತೆ ಮತ್ತೆ ಭೇಟಿ ನೀಡಬೇಕೆಂಬ ಆಸೆಗಳು ಪ್ರತಿ ಭೇಟಿಯಲ್ಲೂ ನಿಮ್ಮ ಮನದಾಳದಲ್ಲಿ ಮೂಡಿದರೆ ತಪ್ಪಲ್ಲ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಪ್ಸರೆಯರ ಕೊಳವೆಂದೆ ಪ್ರಖ್ಯಾತವಾಗಿದೆ ಅಪ್ಸರಕೊಂಡದಲ್ಲಿರುವ ಸುಂದರ ಕೊಳ. ಈ ಕೊಳದ ಅಂದ-ಚೆಂದಕ್ಕೆ ಹೆಚ್ಚಿನ ಮೆರುಗು ಬರಲು ಮುಖ್ಯ ಕಾರಣ ಇಲ್ಲಿರುವ 50 ಅಡಿಗಳಷ್ಟು ಎತ್ತರದ ಸುಂದರ ಜಲಪಾತ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇನ್ನೂ ವಿಶೇಷವೆಂದರೆ ಈ ಜಲಪಾತದ ನೀರು. ದೊಡ್ಡದಾದ ಗಿಡ ಮರಗಳ ಬೇರುಗಳ ಮೂಲಕ ಸುಂದರವಾಗಿ ಹರಿಯುತ್ತ, ಜುಳು ಜುಳು ಎಂದು ಕಿವಿಗಳಿಗೆ ಇಂಪಾದ ಕಂಪನ್ನುಂಟು ಮಾಡುತ್ತ ಹರಿಯುವ ಈ ನೀರು ಸಾಕಷ್ಟು ಪರಿಶುದ್ಧತೆಯಿಂದ ಕೂಡಿದೆ.
ಚಿತ್ರಕೃಪೆ: Sudarshana
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಕೊಳದಲ್ಲಿ ನೀರು ಹಾಗೂ ಅದರ ತಳ ಸ್ಪಷ್ಟವಾಗಿ ಗೋಚರಿಸುವುದು ಈ ನೀರಿನ ಸ್ಪಷ್ಟತೆಗೆ ಸಾಕ್ಷಿಯಾಗಿದೆ. ಅಲ್ಲದೆ ತಂಪಾಗಿರುವ ಈ ನೀರಿನಲ್ಲಿ ಕಾಲುಗಳನ್ನು ಇಟ್ಟಾಗ ಒಂದು ರೀತಿಯಲ್ಲಿ ಮೈಯಲ್ಲೆಲ್ಲ ವಿದ್ಯುತ್ ಸಂಚಾರ ಆದ ಹಾಗೆ ಅನುಭವವಾಗುತ್ತದೆ. ಹೆದರ ಬೇಡಿ ನೈಜ ವಿದ್ಯುತ್ ಅಲ್ಲ, ಆ ರೀತಿಯಾಗಿ ರೋಮಾಂಚನದ ಅನುಭವವು ಬಹು ತೀವ್ರವಾಗಿರುತ್ತದಷ್ಟೆ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಪ್ಸರಕೊಂಡವನ್ನು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಒಂದು ಪ್ರವಾಸಿ ಧಾಮವನ್ನಾಗಿ ಮಾಡಿ ಸಾಕಷ್ಟು ಅಭಿವೃದ್ಧಿಗೊಳಿಸಿದೆ. ಇಲ್ಲಿ ಅಭಿವೃದ್ಧಿ ಎಂದರೆ ಸಾಕಷ್ಟು ಕಟ್ಟಡ ರಚನೆಗಳು ಅಂತ ಏನಿಲ್ಲ. ಎಷ್ಟು ಸಾಧ್ಯವೊ ಅಷ್ಟು ಇದನ್ನು ನೈಜವಾಗಿಯೆ ಇಡಲಾಗಿರುವುದು ಮತ್ತೊಂದು ವಿಶೇಷ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಪ್ರವೇಶ ಶುಲ್ಕವಿದ್ದು ಇದು ಅತಿ ಕಡಿಮೆ ಎಂದರೆ ಒಬ್ಬರಿಗೆ ಐದು ರುಪಾಯಿಗಳಷ್ಟಿದೆ. ಆದರೆ ಒಂದೊಮ್ಮೆ ಒಳ ಹೊಕ್ಕರೆ ಸಿಗುವ ಆನಂದ, ಪ್ರಕೃತಿ ಮಾತೆಯ ಆರೈಕೆ ಮಾತ್ರ ಲಕ್ಷ ರುಪಾಯಿ ಕೊಟ್ಟರೂ ಸಿಗದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಲ್ಲದೆ ಅಪ್ಸರಕೊಂಡ ಕಡಲ ತೀರವು ನಯನಮನೋಹರವಾದ ತಾಣವಾಗಿದೆ. ಅಪ್ಸರಕೊಂಡ ಬೆಟ್ಟವಿದ್ದು ಅದನ್ನು ಹತ್ತಿ ಅಲ್ಲಿಂದ ಸುತ್ತಮುತ್ತಲಿನ ಪರಿಸರದ ಹಾಗೂ ಅರಬ್ಬಿ ಸಮುದ್ರದ ಕಡಲ ಕಿನಾರೆಯ ನೋಟಗಳನ್ನು ಅದ್ಭುತವಾಗಿ ಸವಿಯಬಹುದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಒಂದೆಡೆ ವಿಶಾಲ ಸಮುದ್ರವಿದ್ದರೆ, ಇನ್ನೊಂದೆಡೆ ಹಸಿರಾಗಿ ಹಾಸಿಗೆಯಂತೆ ಹರಡಿರುವ ಹೊಲಗದ್ದೆಗಳು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಸ್ವರ್ಗ ಎಂದರೆ ಇದೇನಾ ಎಂದು ನಮ್ಮನ್ನೆ ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇಂತಹ ನಯನಮನೋಹರವಾದ ದೃಶ್ಯಾವಳಿಗಳನ್ನು ಅಪ್ಸರಕೊಂಡ ಬೆಟ್ಟದ ಮೇಲಿರುವ ವೀಕ್ಷಣಾ ಗೊಪುರಗಳಿಂದ ಸವಿಯಬಹುದು. ಹೀಗೆ ಬೆಟ್ಟದಿಂದ ಕೇಳೆಗಿಳಿದು ಅಪ್ಸರಕೊಂಡ ಕೊಳ ಹಾಗೂ ಜಲಪಾತಕ್ಕೆ ಭೇಟಿ ನೀಡಬಹುದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಬೆಟ್ಟ ಏರುವುದಾಗಲಿ, ಇಳಿಯುವುದಾಗಲಿ ಕಷ್ಟಕರವೇನಿಲ್ಲ. ಮೆಟ್ಟಿಲುಗಳನ್ನು, ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದ್ದು ನಿರಾಯಾಸವಾಗಿ ಹತ್ತಬಹುದು ಹಾಗೂ ಇಳಿಯಬಹುದು. ಮತ್ತೊಂದು ಅಂಶವೆಂದರೆ ಇಲ್ಲಿಂದ ಸೂರ್ಯಾಸ್ತದ ನೋಟವು ಸಾಕಷ್ಟು ಮನಮೋಹಕವಾಗಿದೆ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇನ್ನೂ ಈ ತಾಣಕ್ಕೆ ಭೇಟಿ ನೀಡುವವರು ಆಸ್ಥಿಕರಾಗಿದ್ದರೆ ನಿಮ್ಮ ಸಂತಸ ಇನ್ನಷ್ಟು ಜಾಸ್ತಿಯಾಗಬಹುದು. ಏಕೆಂದರೆ ಅಪ್ಸರಕೊಂಡದಲ್ಲಿ ದೇವರ ಸನ್ನಿಧಾನಗಳೂ ಸಹ ಇರುವುದು ಇದಕ್ಕೆ ಮುಖ್ಯ ಕಾರಣ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇಲ್ಲಿ ಗಣೇಶನಿಗೆ ಮುಡಿಪಾದ ಉಮಾಂಬ ಮಹಾಗಣಪತಿ ಹಾಗೂ ವಿಷ್ಣುವಿಗೆ ಮುಡಿಪಾದ ಉಗ್ರ ನರಸಿಂಹ ದೇವರುಗಳ ದೇವಾಲಯವಿದೆ. ನೈಸರ್ಗಿಕವಾದ ಕಾಡಿನ ಪರಿಸರದಲ್ಲಿ ರಮ್ಯವಾಗಿ ಗೋಚರಿಸುವ ಈ ದೇವಾಲಯ ಸಾಕಷ್ಟು ಧನಾತ್ಮಕ ಪ್ರಭಾವವನ್ನು ಭೇಟಿ ನೀಡಿದವರಿಗೆ ನೀಡುತ್ತದೆ ಎಂದರೆ ತಪ್ಪಾಗಲಾರದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಇಲ್ಲಿ ಸಾಕಷ್ಟು ಪುರಾತನವಾದ ನೈಸರ್ಗಿಕ ಗುಹೆಗಳನ್ನು ಕಾಣಬಹುದಾಗಿದ್ದು ಅದ್ಭುತ ಅನುಭವ ನೀಡುತ್ತದೆ. ಹಿಂದೆ ಈ ಗುಹೆಗಳಲ್ಲಿ ಸಾಧು ಸಂತರು ತಪಸ್ಸು ಮಾಡುತ್ತಿದ್ದರೆನ್ನಲಾಗಿದೆ. ಅಲ್ಲದೆ ಈ ಗುಹೆಗಳು ದೇವಾಲಯದೊಂದಿಗೆ ಸಂಪರ್ಕ ಹೊಂದಿವೆ ಎನ್ನಲಾಗಿದೆ. ಇಂದು ಈ ಗುಹೆಗಳಲ್ಲಿ ಪ್ರವೇಶಿಸಲು ಅನುಮತಿಯಿಲ್ಲ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಲ್ಲದೆ ಇಲ್ಲಿ ನಾಗಬನ/ನಾಗವನವೂ ಸಹ ಇದ್ದು ಈ ಸ್ಥಳವು ಸಾಕಷ್ಟು ಆಕರ್ಷಕವಾಗಿದೆ. ಇನ್ನೊಂದು ವಿಚಾರವೆಂದರೆ ಕೊಳದ ನೀರಿನಲ್ಲಿ ಹೋಗಬಹುದಾಗಿದ್ದು ಇಲ್ಲಿ ಗದ್ದಲ-ಗಲಾಟೆಗಳನ್ನು ಮಾಡುವ ಹಾಗಿಲ್ಲ. ಏಕೆಂದರೆ ಸಾಕಷ್ಟು ಗಿಡ-ಮರಗಳ ಪೊದೆಗಳಲ್ಲಿ ಹಾವುಗಳ ವಾಸವಿದ್ದು ಗಲಾಟೆ-ಗದ್ದಲಗಳು ಅಪಾಯವನ್ನು ಆಹ್ವಾನಿಸಬಹುದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಲ್ಲದೆ ಪಾಂಡವರು ವನವಾಸದ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದಾಗ ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿಯ ಒಂದು ಗುಹೆಯಲ್ಲಿ ವಾಸಿಸಿದ್ದರೆಂಬ ಪ್ರತೀತಿಯಿದೆ. ಇದನ್ನು ಪಾಂಡವರ ಗುಹೆ ಎಂದು ಕರೆಯುತ್ತಾರೆ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಸಾಕಷ್ಟು ಪ್ರಕೃತಿ ಶ್ರೀಮಂತಿಕೆಯಿಂದ ಕೂಡಿರುವ ಅಪ್ಸರಕೊಂಡ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರೊಂದಿಗೆ ಭೇಟಿ ನೀಡಲು ಅತಿ ಯೋಗ್ಯವಾದ ತಾಣವಾಗಿದೆ. ಬಹುವಾಗಿ ಅನ್ವೇಷಿಸಲ್ಪಡದ ಕಾರಣ ಇದು ಇನ್ನೂ ಇತರೆ ಪ್ರಖ್ಯಾತ ಪ್ರವಾಸಿ ತಾಣಗಳಂತೆ ಕಲ್ಮಶಗೊಂಡಿಲ್ಲ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಆದರೆ ಇಲ್ಲಿರುವ ನಿರ್ಮಲತೆಯನ್ನು, ಪರಿಶುದ್ಧತೆಯನ್ನು ಹೀಗೆಯೆ ಮುಂದುವರೆಸಿಕೊಂಡು ಹೋಗಬೇಕಾಗಿರುವುದು ಈ ಸ್ಥಳಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಅಂತರ್ಮನದಲ್ಲಿಯೆ ಮೂಡಬೇಕು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಅಪ್ಸರಕೊಂಡವು ಬೆಂಗಳೂರಿನಿಂದ 481 ಕಿ.ಮೀ, ಮಂಗಳೂರಿನಿಂದ 175 ಕಿ.ಮೀ, ಉಡುಪಿಯಿಂದ 122 ಕಿ.ಮೀ ಹಾಗೂ ಹೊನ್ನಾವರ ಪಟ್ಟಣದಿಂದ ಕೇವಲ 6 ಕಿ.ಮೀ ಗಳಷ್ಟು ದೂರವಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ಭೇಟಿ ನೀಡಲು ಇಚ್ಛಿಸುವವರು ಹೊನ್ನಾವರಕ್ಕೆ ತಲುಪಿ ನಂತರ ಅಲ್ಲಿಂದ ಸುಲಭವಾಗಿ ದೊರೆಯುವ ರಿಕ್ಷಾ ಹಾಗೂ ಬಸ್ಸುಗಳ ಮೂಲಕ ಅಪ್ಸರಕೊಂಡಕ್ಕೆ ಭೇಟಿ ನೀಡಬಹುದು.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಆದರೆ ಗಮನವಿರಲಿ, ಅಪ್ಸರಕೊಂಡದಲ್ಲಿ ಉಳಿಯುವುದಕ್ಕಾಗಲಿ ಅಥವಾ ಊಟ-ತಿಂಡಿಗಳಿಗಾಗಲಿ ಯಾವುದೆ ಹೋಟೆಲುಗಳಿರುವುದಿಲ್ಲ. ಆದಾಗ್ಯೂ ಚಿಕ್ಕ ಪುಟ್ಟ ಕುರುಕಲು ತಿಂಡಿಗಳು, ಚಹಾ-ಕಾಫಿ ದೊರೆಯುವ ಪೆಟ್ಟಿಗೆ ಅಂಗಡಿಗಳಿವೆ.
ಮನಸ್ಸು ಪ್ರಸನ್ನಗೊಳಿಸುವ ಅಪ್ಸರಕೊಂಡ:
ಆದರೆ ಹೊನ್ನಾವರ ಪಟ್ಟಣ ಕೇಂದ್ರದಲ್ಲಿ ಸಾಕಷ್ಟು ಹೋಟೆಲುಗಳು, ಲಾಡ್ಜುಗಳು ದೊರೆಯುತ್ತವೆ. ಅಲ್ಲದೆ ಬೇರೆ ಬೇರೆ ನಗರಗಳಿಂದ ಹೊನ್ನಾವರವನ್ನು ಸುಲಭವಾಗಿ ತಲುಪಬಹುದಾಗಿದೆ. ಆದ್ದರಿಂದ ಆಪ್ಸರಕೊಂಡಕ್ಕೆ ಭೆಟಿ ನೀಡಲಿಚ್ಛಿಸುವವರು ಹೊನ್ನಾವರಕ್ಕೆ ತೆರಳಿದರೆ ಸೂಕ್ತ. ಇದರಿಂದ ಅಪ್ಸರಕೊಂಡ ಅನ್ವೇಷಿಸಲು ಸಾಕಷ್ಟು ಸಮಯಾವಕಾಶ ನಿಮಗೆ ದೊರೆಯುತ್ತದೆ. ಮುಂದಿನ ಸ್ಲೈಡುಗಳಲ್ಲಿ ಅಪ್ಸರೆಯಂತಿರುವ ಅಪ್ಸರಕೊಂಡ ಸೌಂದರ್ಯವನ್ನು ನಿಮ್ಮ ಕಣ್ಣಾರೆ ಸವಿಯಿರಿ.