ಇದೊಂದು ಅದ್ಭುತ ದಂತಕಥೆಯುಳ್ಳ ಕ್ಷೇತ್ರ. ಇಲ್ಲಿಯೆ ಬಹು ಹಿಂದೆ ಪಾಂಡವರಲ್ಲೊಬ್ಬನಾದ ಅರ್ಜುನನು ಶಿವನನ್ನು ಕುರಿತು ಘೋರ ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿಕೊಂಡು ಅವನಿಂದ ಪಾಶುಪತಾಸ್ತ್ರವನ್ನು ಪಡೆದ ಭವ್ಯ ಕ್ಷೇತ್ರವಿದು. ಅಲ್ಲದೆ ಬಲು ಮುಖ್ಯವಾಗಿ ಕನಕದುರ್ಗಾ ಶಾಶ್ವತವಾಗಿ ನೆಲೆಸಿರುವ ಪುಣ್ಯ ಕ್ಷೇತ್ರವಿದು.
ಶಿವಪುರಾಣದಲ್ಲಿರುವ 4 ಆದಿ ಶಕ್ತಿಪೀಠಗಳು
ಒಂದೊಮ್ಮೆ ಈ ಪ್ರದೇಶವು ಸಾಕಷ್ಟು ಮೊನಚಾಗಿತ್ತು ಹಾಗೂ ಎಲ್ಲಿ ನೋಡಿದರಲ್ಲಿ ಬೆಟ್ಟಗಳು, ಗುಡ್ಡಗಳು ಹಾಗೂ ಬಂಡೆಗಳಿಂದ ಆವೃತವಾಗಿತ್ತು. ಹಾಗಾಗಿ ಜನರಿಲ್ಲದೆ ನಿರ್ಜನವಾಗಿತ್ತು. ಇದರಿಂದ ಜನರು ಕಷ್ಟಗೊಳಗಾಗಿದ್ದರು. ಈ ಪ್ರದೇಶದಲ್ಲಿ ಕೃಷ್ಣಾ ನದಿಯಿದ್ದರೂ ಅದು ಸುಗಮವಾಗಿ ಹರಿಯಲು ಬೆಟ್ಟ ಬಂಡೆಗಳು ಅಡೆ ತಡೆ ಉಂಟುಮಾಡಿದ್ದವು.
ಚಿತ್ರಕೃಪೆ: Adityamadhav83
ಹೀಗಿರುವಾಗ ಎಲ್ಲರೂ ಶಿವನ ಮೊರೆ ಹೋಗಲಾಗಿ ಶಿವನು, ಆ ಪ್ರದೇಶದಲ್ಲಿ ಅಲ್ಲಲ್ಲಿ ರಂಧ್ರಗಳನ್ನು, ಸುರಂಗಗಳನ್ನು (ಬೆಜ್ಜಂ) ಮಾಡಿ ಕೃಷ್ಣೆಯು ತನ್ನ ಪೂರ್ಣ ವೈಭವದಿಂದ ಸುಗಮವಾಗಿ ಹರಿಯುವಂತೆ ಮಾಡಿದನು. ಇದರಿಂದ ಈ ಪ್ರದೇಶಕ್ಕೆ ಬೆಜವಾಡಾ ಎಂಬ ಹೆಸರು ಬಂದಿತೆನ್ನಲಾಗಿದೆ. ತೆಲುಗುವಿನಲ್ಲಿ ಬೆಜ್ಜಂ ಎಂದರೆ ಕೊರೆದು ರಂಧ್ರ ಮಾಡುವುದೆಂದಾಗುತ್ತದೆ.
ಚಿತ್ರಕೃಪೆ: Srikar Kashyap
ಅಲ್ಲದೆ ಒಂದೊಮ್ಮೆ ಇಲ್ಲಿನ ಬೆಟ್ಟ ಪ್ರದೇಶವೊಂದರಲ್ಲಿ ರಾಕ್ಷಸರ ಉಪಟಳ ಜಾಸ್ತಿಯಾಗಿ ಎಲ್ಲರೂ ಕಷ್ಟಗಳನ್ನು ಅನುಭವಿಸುತ್ತಿದ್ದರು. ಪರಿಸ್ಥಿತಿ ಹೀಗಿರುವುದನ್ನು ಗಮನಿಸಿದ ಇಂದ್ರಕಿಲದ್ರಿ ಎಂಬ ಮುನಿಯು ದೇವಿಯ ಶಕ್ತಿ ಮಾತೆಯ ಕುರಿತು ಬೆಟ್ಟದ ಮೇಲೆ ಕಠಿಣವಾದ ತಪಸ್ಸು ಮಾಡಿದ. ಇದರಿಂದ ಪ್ರಸನ್ನಳಾದ ಕನಕ ದುರ್ಗಾದೇವಿಯು ಇಂದ್ರಕಿಲಾದ್ರಿಗೆ ವರವನ್ನು ಬೇಡಿಕೊಳ್ಳಲು ಹೇಳಿದಳು.
ಚಿತ್ರಕೃಪೆ: Sridhar1000
ಇದರಿಂದ ಸಂತಸಗೊಂಡ ಋಷಿಯು ದೇವಿಯನ್ನು ಕುರಿತು ತನ್ನ ಶಿರದಲ್ಲಿ ಶಾಶ್ವತವಾಗಿ ನೆಲೆಸಬೇಕೆಂದೂ ಇಲ್ಲಿನ ಜನರಿಗೆ ರಾಕ್ಷಸರಿಂದ ಮುಕ್ತಿ ಕೊಡಿಸಬೆಕೆಂದು ಕೇಳಿದ. ಹಾಗಾಗಿ ಋಷಿಯು ಬೆಟ್ಟದ ರುಪ ತಳೆದು ನಿಂತ ಹಾಗೂ ಆ ಬೆಟ್ಟದ ಮೇಲೆ ದೇವಿಯು ಶಾಶ್ವತವಗಿ ನೆಲೆಸಿದಳು. ಅದೆ ವಿಜಯವಾಡಾ ಪ್ರದೇಶ ಹಾಗೂ ಆ ಬೆಟ್ಟವೆ ಇಂದ್ರಕಿಲಾದ್ರಿ ಬೆಟ್ಟ ಹಾಗೂ ಅದರ ಮೇಲಿದೆ ಕನಕ ದುರ್ಗೆಯ ದೇವಾಲಯ.
ವಿಜಯವಾಡಾ ನಗರ, ಚಿತ್ರಕೃಪೆ: vijay chennupati
ಇನ್ನೊಂದು ದಂತಕಥೆಯ ಪ್ರಕಾರ, ಅರ್ಜುನನು ತಾನು ಗೆಲ್ಲಬೇಕೆಂಬ ಮಹದಾಸೆಯಿಂದ ಈ ಬೆಟ್ಟದ ಮೇಲೆಯೆ ಶಿವನನ್ನು ಕುರಿತು ಘೋರವಾದ ತಪಸ್ಸನ್ನಾಚರಿಸಿದ್ದ. ಇದರಿಂದ ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ಅರ್ಜುನನಿಗೆ ದರ್ಶನ ನೀಡಿ ಅವನು ವಿಜಯಿಯಾಗುವಂತೆ ಹರಸಿ ಪಾಶುಪತಾಸ್ತ್ರವನ್ನು ಅವನಿಗೆ ನೀಡಿದ್ದ. ಹೀಗೆ ಅರ್ಜುನನು ಇಲ್ಲಿ ವಿಜಯವನ್ನು ಸಾಧಿಸಿದ್ದರಿಂದ ಇದಕ್ಕೆ ವಿಜಯವಾಡಾ ಎಂಬ ಹೆಸರು ಬಂದಿತೆಂದೂ ಸಹ ಹೇಳಲಾಗುತ್ತದೆ.
ಚಿತ್ರಕೃಪೆ: Os Rúpias
ಮತ್ತೊಂದು ದಂತಕಥೆಯ ಪ್ರಕಾರ, ಪಾರ್ವತಿ ದೇವಿಯು ಸಮಸ್ತ ದೇವರಿಗೆ ಕಂಟಕನಾಗಿ, ಲೋಕದಲ್ಲೆಲ್ಲ ಹಾಹಾಕಾರ ಎಬ್ಬಿಸಿ ಕ್ರೌರ್ಯತೆಯಿಂದ ಮೆರೆಯುತ್ತಿದ್ದ ಮಹಿಷಾಸುರನನ್ನು ಇಲ್ಲಿಯೆ ಸಂಹರಿಸಿದ್ದಳೆಂಬ ಪ್ರತಿತಿಯೂ ಇದೆ. ಹಾಗಾಗಿ ವಿಜಯವಾಡಾದ ಇಂದ್ರಕಿಲಾದ್ರಿ ಬೆಟ್ಟದ ಮೇಲಿರುವ ದುರ್ಗೆಯ ದೇವಾಲಯವು ಸಾಕಷ್ಟು ಪ್ರಸಿದ್ಧವಾಗಿದೆ ಹಾಗೂ ನವರಾತ್ರಿಗಳನ್ನು ಇಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತದೆ.
ಕೆಲವು ಪ್ರಸಿದ್ಧ ರೇಣುಕಾ ಎಲ್ಲಮ್ಮನ ದೇವಾಲಯಗಳು
ಹಲವಾರು ಶಿವಸ್ತುತಿ, ಶಿವಲೀಲೆ ಹಾಗೂ ಪೌರಾಣಿಕ ಗ್ರಂಥಗಳಲ್ಲಿ ಈ ದೇವಾಲಯದ ಕುರಿತು ಉಲ್ಲೇಖಿಸಲಾಗಿದೆ. ನಿತ್ಯವೂ ಸಾಕಷ್ಟು ಭಕ್ತಾದಿಗಳಿಂದ ಭೇಟಿ ನೀಡಲ್ಪಡುವ ಈ ದೇವಾಲಯದಲ್ಲಿ ದಸರಾ ಹಾಗೂ ನವರಾತ್ರಿಯ ಸಂದರ್ಭಗಳಂದು ಜನಸಾಗರವೆ ನೆರೆದಿರುತ್ತದೆ. ವಿಜಯವಾಡಾ ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಈ ದೇವಾಲಯವನ್ನು ಬಸ್ಸು ಹಾಗೂ ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದು.