ನಮ್ಮ ನಾಡಿನ ಚಿನ್ನದ ಜಿಲ್ಲೆ ಕೋಲಾರ. ಇದು ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮದ ವಿಚಾರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಈ ತಾಣದಲ್ಲಿ ಅನೇಕ ಗಿರಿಧಾಮಗಳು, ದೇವಾಲಯಗಳು ಹಾಗೂ ಐತಿಹಾಸಿಕ ಸ್ಮಾರಕಗಳಿರುವುದನ್ನು ಕಾಣಬಹುದು. ಮೊದಲು ಇದನ್ನು ಕೋಲಾಹಲಪುರ ಎಂದು ಕರೆಯುತ್ತಿದ್ದರು. ಬರಬರುತ್ತಾ ಕೋಲಾರ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ.
ಕೋಲಾರದ ಸುತ್ತ ಮುತ್ತಲಿನ ಜಾಗದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಗಂಗರ ಮೊದಲ ರಾಜಧಾನಿ ಕೋಲಾರವಾಗಿತ್ತು. ಒಟ್ಟಿನಲ್ಲಿ ಈ ಜಿಲ್ಲೆಯನ್ನು ಚೋಳರು ಹಾಗೂ ವಿಜಯನಗರ ಅರಸರು ಆಳಿದ್ದರು ಎನ್ನಲಾಗುತ್ತದೆ. ಬೆಂಗಳೂರಿನಿಂದ 69 ಕಿ.ಮೀ. ದೂರದಲ್ಲಿರುವ ಈ ಊರಿಗೆ ಬರಲು 1.45 ತಾಸು ಬೇಕಾಗುವುದು. ಬೆಂಗಳೂರಿನಿಂದ ಅನೇಕ ಬಸ್ಗಳ ವ್ಯವಸ್ಥೆ ಇರುವುದರಿಂದ ಇಲ್ಲಿಗೆ ಬರುವುದು ಸುಲಭ. ಸ್ವಂತ ವಾಹನದಲ್ಲಿ ಇಲ್ಲಿಗೆ ಬಂದರೆ, ಕೋಲಾರ ಜಿಲ್ಲೆಯಲ್ಲಿರುವ ಅನೇಕ ತಾಣಗಳಿಗೆ ಭೇಟಿ ನೀಡಬಹುದು. ಅಕ್ಟೋಬರ್ ನಿಂದ ಮೇ ತಿಂಗಳ ವರೆಗೆ ಪ್ರವಾಸ ಬೆಳೆಸಲು ಸೂಕ್ತ ಕಾಲ. ಕೋಲಾರದಲ್ಲಿ ನೋಡಬಹುದಾದಂತಹ ಪ್ರಮುಖ ಸ್ಥಳಗಳು ಈ ಕೆಳಗಿನಂತಿವೆ.
ಅಂತರಗಂಗೆ
ಕೋಲಾರದಿಂದ 4 ಕಿ.ಮೀ. ಹಾಗೂ ಬೆಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ಅಂತರಗಂಗೆ ಶತಶೃಂಗ ಪರ್ವತ ಶ್ರೇಣಿಯಲ್ಲಿ ಬರುತ್ತದೆ. ಭಗೀರಥನ ತಪಸ್ಸಿನ ಫಲವಾಗಿ ಸುರಲೋಕದಿಂದ ಭೂಲೋಕಕ್ಕೆ ಬಂದು, ಶಿವನ ಜಡೆಯಿಂದ ಮರು ಹುಟ್ಟು ಪಡೆದು ಹರಿವ ಗಂಗೆ, ಕಲ್ಲಿನ ಬಸವನ ಬಾಯಿಯಿಂದ ಭೂ ಸ್ಪರ್ಶ ಮಾಡಿದ ಪವಿತ್ರ ಕ್ಷೇತ್ರವಿದು ಎಂದು ಹೇಳಲಾಗುತ್ತದೆ. ಇಲ್ಲಿ ವರ್ಷವಿಡೀ ನೀರಿನ ಹರಿವು ಇರುವುದರಿಂದ ಸ್ಥಳೀಯರು ಕುಡಿಯುವ ನೀರಿಗೆ ಇಲ್ಲಿಗೆ ಬರುತ್ತಾರೆ. ಬೆಟ್ಟದ ಮೇಲಿರುವ ಈ ತಾಣ ಪ್ರವಾಸಿಗರಿಗೊಂದು ಪವಿತ್ರ ಆಕರ್ಷಣಾ ಕ್ಷೇತ್ರ.
PC: wikipedia.org
ಸೋಮೇಶ್ವರ ದೇಗುಲ
ಕೋಲಾರ ನಗರದ ಮಧ್ಯ ಭಾಗದಲ್ಲಿ ಸೋಮೇಶ್ವರ ದೇಗುಲ ಬರುತ್ತದೆ. ಉತ್ತಮ ವಾಸ್ತು ಶಿಲ್ಪ, ಕಲಾಕೃತಿಯನ್ನು ಒಳಗೊಂಡಿರುವ ಈ ದೇಗುಲದಲ್ಲಿ ಈಶ್ವರನನ್ನು ಆರಾಧಿಸಲಾಗುತ್ತದೆ. ಇಲ್ಲಿ ಮುಖ ಮಂಟಪ, ಕಲ್ಯಾಣ ಮಂಟಪ, ಸುಂದರವಾದ ಕಂಬಗಳನ್ನು ಕಾಣಬಹುದು. ಬೆಳಗ್ಗೆ 7 ರಿಂದ 11 ಘಂಟೆ ಸಂಜೆ 5 ರಿಂದ 8 ಘಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ.
PC: wikimedia.org
ಬುದಿಕೋಟೆ
ಬಂಗಾರಪೇಟೆಯಿಂದ 12 ಕಿ.ಮೀ. ದೂರದಲ್ಲಿರುವ ಇದು ಚಿಕ್ಕ ಗ್ರಾಮ. ಟಿಪ್ಪು ಸುಲ್ತಾನನ ತಂದೆ ಹೈದರಾಲಿಯು ಹುಟ್ಟಿದ ಊರು ಎನ್ನಲಾಗುತ್ತದೆ. ಇಲ್ಲಿ ಆಂಜನೇಯ ದೇಗುಲವಿದೆ.
PC: wikipedia.org
ಅವನಿ ಬೆಟ್ಟ
ಕೋಲಾರದ ಮುಳಬಾಗಿಲಿನಿಂದ 12 ಕಿ.ಮೀ.ದೂರದಲ್ಲಿರುವ ಅವನಿ ಬೆಟ್ಟ ಚಾರಣಕ್ಕೊಂದು ಸುಂದರ ತಾಣ. ಬೆಟ್ಟದಲ್ಲಿ ಜಾಂಬವ ಗುಹೆ, ಬೆಟ್ಟದ ಬುಡದಲ್ಲಿ ರಾಮ ಲಿಂಗೇಶ್ವರ ದೇಗುಲ ಹಾಗೂ ತುದಿಯಲ್ಲಿ ಸೀತಾ-ಪಾರ್ವತಿಯ ದೇಗುಲಗಳಿವೆ. ಈ ಪವಿತ್ರ ಕ್ಷೇತ್ರದಲ್ಲಿ ವಾಲ್ಮೀಕಿಯ ಆಶ್ರಮವೂ ಇತ್ತು. ಲವ-ಕುಶರ ಜನ್ಮಸ್ಥಳವಾದ ಇದು ಚಾರಣಕ್ಕೆ ಸೂಕ್ತ ಸ್ಥಳ.
PC: wikipedia.org
ಕೋಲಾರ ಕೆ.ಜಿ.ಎಫ್
ಕೋಲಾರದಿಂದ 30 ಕಿ.ಮೀ. ದೂರದಲ್ಲಿರುವ ಇದನ್ನು ಚಿನ್ನದ ಗಣಿ ಪ್ರದೇಶ ಎನ್ನುತ್ತಾರೆ. ಭಾರತದಲ್ಲಿ ಇರುವ ಚಿನ್ನದ ಗಣಿ ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಈ ಪ್ರದೇಶಕ್ಕೆ ಪ್ರವಾಸಿಗರು ಬಂದು, ಸ್ಥಳವನ್ನು ವೀಕ್ಷಿಸಬಹುದು. ಈ ಊರು ರೇಷ್ಮೆ ಹಾಗೂ ಉಣ್ಣೆಗೂ ಹೆಸರುವಾಸಿ.
PC: wikipedia.org
ಕೋಟಿ ಲಿಂಗೇಶ್ವರ
ಕೆ.ಜಿ.ಎಫ್ ನಿಂದ 5 ಕಿ.ಮೀ. ದೂರದಲ್ಲಿರುವ ಕೋಟಿ ಲಿಂಗೇಶ್ವರವು 15 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಒಂದು 108 ಅಡಿ ಎತ್ತರದ ಶಿವಲಿಂಗ ಹಾಗೂ 35 ಅಡಿ ಎತ್ತರದ ಬಸವನನ್ನು ನೋಡಬಹುದು. ಜೊತೆಗೆ ವಿವಿಧ ಗಾತ್ರದ ಸಾವಿರಾರು ಶಿವಲಿಂಗಗಳಿವೆ.
PC: wikipedia.org
ಕುರುಡುಮಲೆ
ಮುಳುಬಾಗಿಲಿನಿಂದ 7 ಕಿ.ಮೀ. ದೂರದಲ್ಲಿರುವ ಈ ದೇಗುಲ ಚೋಳರ ಶೈಲಿಯ ಶಿಲ್ಪಕಲೆಯನ್ನು ಒಳಗೊಂಡಿದೆ. 108 ಅಡಿ ಎತ್ತರದ ಏಕಶಿಲಾ ಗಣಪತಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸುಂದರ ವಾಸ್ತು ಶಿಲ್ಪಗಳನ್ನು ಒಳಗೊಂಡಿರುವ ಈ ದೇಗುಲ ನಯನ ಮನೋಹರವಾಗಿದೆ. ಮೊದಲು ಕೂಡುಮಲೆ ಎಂದಿರುವುದು, ಬರಬರುತ್ತ ಕುರುಡುಮಲೆ ಎಂದಾಯಿತು ಎನ್ನಲಾಗುತ್ತದೆ.
PC: wikipedia.org