ಭಾರತವು ತನ್ನ ಶ್ರೀಮಂತ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಮತ್ತು ಧಾರ್ಮಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲ, ಇದು ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿದೆ. ಇಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಮತ್ತು ಅತ್ಯಂತ ಭವ್ಯವಾದ ದೇವಾಲಯಗಳಿವೆ. ಬಹುತೇಕರಿಗೆ ತಿಳಿಯದ ವಿಚಾರವೆಂದರೆ ಭಾರತವು ಶತಮಾನಗಳ ಹಿಂದೆಯೇ ವಾಸ್ತುಶಿಲ್ಪವನ್ನು ಕರಗತ ಮಾಡಿಕೊಂಡಿತ್ತು. ಎಷ್ಟರ ಮಟ್ಟಿಗೆ ಅಂದರೆ ಇಂದಿನ ಕಾಲದಲ್ಲಿ ಯಾರೂ ಕೂಡ ಕಟ್ಟುವ ಯೋಚನೆ ಮಾಡದಂತಹ ದೇವಾಲಯಗಳು ಇಲ್ಲಿ ನಿರ್ಮಾಣವಾಗಿವೆ. ಹಾಗಾಗಿ ಇಂದು ನಾವು ಸಾವಿರ ವರ್ಷಗಳ ಹಿಂದೆಯೇ ನಿರ್ಮಿಸಲಾದ ದೇಶದ ಕೆಲವು ದೇವಾಲಯಗಳ ಪಟ್ಟಿ ಕೊಡುತ್ತಿದ್ದೇವೆ. ಈ ದೇವಾಲಯಗಳು ತನ್ನ ವಾಸ್ತುಶಿಲ್ಪ ಮತ್ತು ಕರಕುಶಲತೆಗೆ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ ಎಂದರೆ ತಪ್ಪಾಗಲಾರದು.
ವಿರೂಪಾಕ್ಷ ದೇವಾಲಯ
ಕರ್ನಾಟಕದ ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಶಿವನ ರೂಪವಾದ ವಿರೂಪಾಕ್ಷನಿಗೆ ಅರ್ಪಿತವಾದ ಈ ದೇವಾಲಯವನ್ನು ಕ್ರಿ.ಶ. ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಉತ್ತರಾಖಂಡದ ಬದರಿನಾಥ
ಪ್ರಸಿದ್ಧ ಬದರಿನಾಥ ದೇವಾಲಯದ ಬಗ್ಗೆ ಯಾರಿಗೆ ಗೊತ್ತಿಲ್ಲ. ದೇವಾಲಯವು ಉತ್ತರಾಖಂಡದ ಬದರಿನಾಥ ನಗರದಲ್ಲಿದೆ. ಚಾರ್ ಧಾಮ್ ಯಾತ್ರೆಯಲ್ಲಿ ಈ ದೇವಾಲಯವನ್ನೂ ಸೇರಿಸಲಾಗಿದೆ. ಕೆಲವು ಐತಿಹಾಸಿಕ ವರದಿಗಳ ಪ್ರಕಾರ, ದೇವಾಲಯವು 8 ನೇ ಶತಮಾನದವರೆಗೂ ಬೌದ್ಧ ದೇವಾಲಯವಾಗಿತ್ತು, ನಂತರ ಆದಿ ಶಂಕರಾಚಾರ್ಯರು ಹಿಂದೂ ದೇವಾಲಯವನ್ನಾಗಿ ಪರಿವರ್ತಿಸಿದರು. ಇದು ವಿಷ್ಣುವಿಗೆ ಸಮರ್ಪಿತವಾಗಿದೆ.
ಶ್ರೀ ರಂಗನಾಥ ಸ್ವಾಮಿ ದೇವಾಲಯ
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಭವ್ಯವಾದ ಮತ್ತು ಸುಂದರವಾದ ವೈಷ್ಣವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು 6 ನೇ ಮತ್ತು 9 ನೇ ಶತಮಾನದ ನಡುವೆ ಸ್ಥಾಪಿಸಲಾಗಿದೆ ಎಂದು ನಂಬಲಾಗಿದೆ. 156 ಎಕರೆಗಳಲ್ಲಿ ಹರಡಿರುವ ಈ ದೇವಾಲಯವು ವಿಶ್ವದಲ್ಲೇ ಅತ್ಯಂತ ದೊಡ್ಡ ಹಿಂದೂ ದೇವಾಲಯವೆಂದು ಪರಿಗಣಿಸಲಾಗಿದೆ. ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ. ಆರನೇ ಮತ್ತು ಒಂಬತ್ತನೇ ಶತಮಾನದ ನಡುವೆ ನಿರ್ಮಿಸಲಾಗಿದೆ. ದೇವಸ್ಥಾನವು 156 ಎಕರೆಗಳಷ್ಟು ವಿಸ್ತಾರವಾಗಿದೆ.

ಬೃಹದೀಶ್ವರ ದೇವಾಲಯ
ಬೃಹದೀಶ್ವರ ದೇವಸ್ಥಾನವನ್ನು ಪೆರಿಯ ಕೋವಿಲ್, ರಾಜರಾಜೇಶ್ವರ ದೇವಸ್ಥಾನ ಅಥವಾ ರಾಜರಾಜೇಶ್ವರಂ ಎಂದೂ ಕರೆಯುತ್ತಾರೆ. ಶಿವನಿಗೆ ಸಮರ್ಪಿತವಾದ ಬೃಹದೀಶ್ವರ ದೇವಾಲಯವನ್ನು ಮಹಾನ್ ಚೋಳ ದೊರೆ ರಾಜರಾಜ ಚೋಳ I ನಿರ್ಮಿಸಿದನು. ಈ ದೇವಾಲಯವು ತಮಿಳುನಾಡಿನ ತಂಜಾವೂರಿನಲ್ಲಿದೆ. ಇದರ ನಿರ್ಮಾಣವು ಕ್ರಿ.ಶ.1010 ರಲ್ಲಿ ಪೂರ್ಣಗೊಂಡಿತು ಎಂದು ಹೇಳಲಾಗುತ್ತದೆ. ಇದು ದಕ್ಷಿಣ ಭಾರತದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ದ್ರಾವಿಡ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ.
ಅಂಬರೇಶ್ವರ ಶಿವ ದೇವಾಲಯ
ಮುಂಬೈ ನಗರದಲ್ಲಿ ಇರುವ ಈ ದೇವಾಲಯವನ್ನು ಅಂಬರೇಶ್ವರ ಶಿವ ದೇವಾಲಯ ಎಂದೂ ಕರೆಯುತ್ತಾರೆ. ದೇವಾಲಯವನ್ನು ಕ್ರಿ.ಶ 1060 ರಲ್ಲಿ ನಿರ್ಮಿಸಲಾಯಿತು. ಪಾಂಡವರು ಬಂಡೆಯನ್ನು ಕತ್ತರಿಸಿ ದೇಗುಲ ನಿರ್ಮಿಸಿದರು ಎಂಬ ಪ್ರತೀತಿಯಿದೆ. 11 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ದೇವಾಲಯವು ವಡ್ವಾನ್ ನದಿಯ ದಡದಲ್ಲಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ದೇವಾಲಯದಲ್ಲಿ ಅಪಾರ ಸಂಖ್ಯೆಯ ಭಕ್ತರು ಸೇರುತ್ತಾರೆ.
ಆದಿ ಕುಂಭೇಶ್ವರ ದೇವಾಲಯ
ಶಿವನಿಗೆ ಅರ್ಪಿತವಾದ ಆದಿ ಕುಂಭೇಶ್ವರ ದೇವಾಲಯವು ತಮಿಳುನಾಡಿನ ಕುಂಭಕೋಣಂನಲ್ಲಿದೆ. 30,181 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ದೇವಾಲಯವನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣದಲ್ಲಿ ಅನೇಕ ಸಭಾಂಗಣಗಳಿವೆ. ಇವುಗಳಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಿಸಿದ ಹದಿನಾರು ಕಂಬಗಳ ಸಭಾಂಗಣ ಅತ್ಯಂತ ಪ್ರಸಿದ್ಧವಾಗಿದೆ. ಈ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ 27 ನಕ್ಷತ್ರ ಚಿಹ್ನೆಗಳು ಮತ್ತು 12 ರಾಶಿಚಕ್ರ ಚಿಹ್ನೆಗಳನ್ನು ದೊಡ್ಡ ಕಲ್ಲಿನ ಮೇಲೆ ಕೆತ್ತಲಾಗಿದೆ.

ಸೋಮನಾಥ ದೇವಾಲಯ
ಸೋಮನಾಥ ದೇವಾಲಯವು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಎಂದು ನಂಬಲಾಗಿದೆ. ಇದು ಗುಜರಾತ್ನ ಪಶ್ಚಿಮ ಕರಾವಳಿಯಲ್ಲಿರುವ ಸೌರಾಷ್ಟ್ರದ ವೆರಾವಲ್ ಬಳಿಯ ಪ್ರಭಾಸ್ ಪಟಾನ್ನಲ್ಲಿದೆ. ಶಿವನಿಗೆ ಅರ್ಪಿತವಾದ ಈ ದೇವಾಲಯವನ್ನು ಏಳನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಪ್ರಾಚೀನ ಕಾಲದ ಈ ದೇವಾಲಯವು ವಿದೇಶಿ ಆಕ್ರಮಣಕಾರರಿಂದ ಅನೇಕ ಬಾರಿ ನಾಶವಾಯಿತು, ಆದರೆ ಪ್ರತಿ ಬಾರಿ ದೇವಾಲಯವನ್ನು ಪುನರ್ನಿರ್ಮಿಸಲಾಯಿತು.
ದ್ವಾರಕಾಧೀಶ ದೇವಾಲಯ
ಗುಜರಾತಿನ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು 'ಜಗತ್ ಮಂದಿರ' ಎಂದೂ ಕರೆಯುತ್ತಾರೆ. ಇದು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ದೇವಾಲಯವು ಐದು ಅಂತಸ್ತಿನ ಎತ್ತರವನ್ನು ಹೊಂದಿದೆ ಮತ್ತು ಅದರ ಮುಖ್ಯ ದೇವಾಲಯವು 72 ಸ್ತಂಭಗಳ ಬೆಂಬಲದ ಮೇಲೆ ನಿಂತಿದೆ. ದೇವಾಲಯವು 500 ಅಲ್ಲ, 1000 ಅಲ್ಲ, ಬರೋಬ್ಬರಿ 2500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಮೂಲ ದೇವಾಲಯವನ್ನು ಕೃಷ್ಣನ ಮೊಮ್ಮಗನು ನಿರ್ಮಿಸಿದನು. ಈಗ ಇದು ಚಾರ್ ಧಾಮ್ ಯಾತ್ರೆಯ ಭಾಗವಾಗಿದೆ. ದ್ವಾರಕಾಧೀಶ ದೇವಾಲಯದಲ್ಲಿ ಶ್ರೀಕೃಷ್ಣನನ್ನು ಪ್ರಮುಖವಾಗಿ ಪೂಜಿಸಲಾಗುತ್ತದೆ. ಈ ದೇವಾಲಯವನ್ನು ಪುರಾತತ್ತ್ವ ಶಾಸ್ತ್ರದ ಸಂಗತಿಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಕೈಲಾಸ ದೇವಾಲಯ
ಮಹಾರಾಷ್ಟ್ರದ ಎಲ್ಲೋರಾದಲ್ಲಿರುವ ಕೈಲಾಸ ದೇವಾಲಯವನ್ನು ಬೆಟ್ಟ ಗುಡ್ಡಗಳನ್ನು ಕತ್ತರಿಸಿ ನಿರ್ಮಿಸಲಾಗಿದೆ. ಭಾರತದಲ್ಲಿ ಅತ್ಯಂತ ದೊಡ್ಡ ಬಂಡೆಯಿಂದ ಕತ್ತರಿಸಿ ನಿರ್ಮಿಸಿದ ದೇವಾಲಯಗಳಲ್ಲಿ ಇದು ಒಂದಾಗಿದೆ. ಅದರ ಗಾತ್ರ, ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳಿಂದಾಗಿ ಇದು ದೇಶದ ಅತ್ಯಂತ ಗಮನಾರ್ಹವಾದ ಗುಹಾಂತರ ದೇವಾಲಯಗಳಲ್ಲಿ ಒಂದಾಗಿದೆ. ಇದು ಎಂಟನೇ ಶತಮಾನದಲ್ಲಿ ಪೂರ್ಣಗೊಂಡಿದೆ ಎಂದು ನಂಬಲಾಗಿದೆ. ದೇವಾಲಯವು ಕೈಲಾಸ ಪರ್ವತವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ರಾವಣನ ಗಮನಾರ್ಹ ಶಿಲ್ಪವನ್ನು ಒಳಗೊಂಡಿದೆ.


Click it and Unblock the Notifications


















