ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ಧವಾಗಿರುವ ಪ್ರದೇಶ ರಾಜಮಂಡ್ರಿ. ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ತೆಲುಗಿನ ಮೊಟ್ಟಮೊದಲ ಕವಿ 'ಆದಿಕವಿ' ಎಂದೇ ಪ್ರಸಿದ್ಧನಾದ ನನ್ನಯ್ಯನವರು ಹುಟ್ಟಿ ಬೆಳೆದು ಪ್ರವರ್ಧಮಾನಕ್ಕೆ ಬಂದ ಪಟ್ಟಣ ಇದು. ತೆಲುಗು ಭಾಷೆಯ ಸಾಹಿತ್ಯವೂ ಕೂಡ ಜನ್ಮ ತಳೆದದ್ದು ಇಲ್ಲಿಯೇ. ವೇದ ಪರಂಪರೆ ಮತ್ತು ವೇದದ ಮೌಲ್ಯಗಳ ನಿಷ್ಠೆಗೆ ರಾಜಮಂಡ್ರಿ ಇವತ್ತಿಗೂ ಹೆಸರುವಾಸಿಯಾಗಿದೆ.
ಅನಾದಿಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಆಚರಣೆಗಳು ಈ ನಗರದಲ್ಲಿ ಇನ್ನೂ ಜೀವಂತವಾಗಿದ್ದು, ಅಪರೂಪದ ಕಲಾ ಪ್ರಕಾರಗಳು, ಸಾಂಸ್ಕೃತಿಕ ವಿಶೇಷಗಳಿಂದಾಗಿ ರಾಜಮಂಡ್ರಿ ಗಮನ ಸೆಳೆಯುತ್ತದೆ. ಆಂಧ್ರ ಪ್ರದೇಶದ ಜನನಿಬಿಡ ಪ್ರದೇಶಗಳ ಪೈಕಿ ರಾಜಮಂಡ್ರಿ ಎಂಟನೇ ಸ್ಥಾನ. ವಿಸ್ತೀರ್ಣದಲ್ಲಿ ನಾಲ್ಕನೇ ಸ್ಥಾನ. ಸ್ಥಳೀಯ ಸರ್ಕಾರ ರಾಜಮಂಡ್ರಿಯನ್ನು 'ಸಂಸ್ಕೃತಿಯ ಅದ್ಧೂರಿ ನಗರ' ಎಂದೂ ಕರೆದಿದೆ. ಚಾಲೂಕ್ಯರ ಆಳ್ವಿಕೆಯಲ್ಲಿ ಉಚ್ಛ್ರಾಯ ಸ್ಥಿತಿಗೆ ಬಂದ ಈ ನಗರವನ್ನು ಶ್ರೀ ರಾಜರಾಜ ನರೇಂದ್ರ ಎಂಬ ಅರಸನು ನಿರ್ಮಿಸಿರುವುದಾಗಿ ಹೇಳುತ್ತವೆ ಇತಿಹಾಸದ ದಾಖಲೆಗಳು. ಬ್ರಿಟೀಷ್ ಆಳ್ವಿಕೆಯ ಸಂದರ್ಭದಲ್ಲಿ ಮದ್ರಾಸ್ ಪ್ರಾಂತ್ಯದ ಒಂದು ಭಾಗವಾಗಿದ್ದ ರಾಜಮಂಡ್ರಿ 1823 ರಿಂದ ಪ್ರತ್ಯೇಕ ಜಿಲ್ಲೆಯಾಗಿ ಬದಲಾಯಿತು. ಗೋದಾವರಿ ನದಿ ಇಲ್ಲಿನ ಜೀವದಾಯಿನಿ. ಇದು ರಾಜ್ಯದ ರಾಜಧಾನಿ ಹೈದರಾಬಾದ್ನಿಂದ 400 ಕಿಲೋಮೀಟರುಗಳಷ್ಟು ದೂರದಲ್ಲಿದೆ. ಆಂಧ್ರಪ್ರದೇಶದ ಜನ್ಮಸ್ಥಳ ಎಂದೂ ಈ ನಗರವನ್ನು ಕರೆಯುತ್ತಾರೆ. ಇದಕ್ಕೆ ಕಾರಣ ಇಲ್ಲಿನ ಅಧಿಕೃತ ಭಾಷೆಯ ಉಗಮ ಇಲ್ಲಿಯೇ ಆಗಿರುವುದು ಎಂದು ವಿವರಿಸುತ್ತದೆ ಆಂಧ್ರಪ್ರದೇಶದ ಅಧಿಕೃತ ಮೂಲಗಳು.
ರಾಜಮಂಡ್ರಿ ಚಾಲೂಕ್ಯ ಅರಸು ಮನೆತನದವರ ಆಳ್ವಿಕೆಯಲ್ಲಿತ್ತು. ಶ್ರೀ ರಾಜರಾಜ ನರೇಂದ್ರಮ್ ಈ ಪಟ್ಟಣವನ್ನು ಸ್ಥಾಪಿಸಿದ ಎಂದು ನಂಬಲಾಗಿದೆ. ಆರಂಭಿಕ ದಿನಗಳಲ್ಲಿ ರಾಜಮಹೇಂದ್ರಿ ಅಥವಾ ರಾಜ ಮಹೇಂದ್ರವರಮ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. 1983 ನೇ ಇಸ್ವಿಯಲ್ಲಿಯೇ ಈ ಪಟ್ಟಣಕ್ಕೆ ವಿಜಯವಾಡ ಮೂಲಕ ರೈಲು ಸಂಪರ್ಕ ಕಲ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಹಲವಾರು ಶೈಕ್ಷಣಿಕ ಕೇಂದ್ರಗಳು ಇಲ್ಲಿ ಪ್ರಾರಂಭವಾದವು. ಸ್ರಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡವರು ಒಂದೆಡೆ ಸೇರುತ್ತಿದ್ದ ಸ್ಥಳವೂ ಇದಾಗಿತ್ತು. ಭಾರತೀಯ ಪತ್ರಿಕೆ 'ಹಿಂದೂ' ವನ್ನು ಪ್ರಾರಂಭಿಸಿದ ಆರು ಜನರಲ್ಲಿ ರಾಜಮಂಡ್ರಿ ಸುಬ್ಬರಾವ್ಕೂಡ ಒಬ್ಬರು. ಆಂಧ್ರಪ್ರದೇಶದ ಪಿತಾಮಹ ಎಂದೇ ಹೆಸರಾಗಿರುವ ಕುಂದುಕೂರಿ ವೀರೇಶಲಿಂಗಮ್ ಪಂತಲು ಅವರು ಕೂಡ ರಾಜಮಂಡ್ರಿ ಮೂಲದವರೇ ಆಗಿದ್ದಾರೆ. ಆಗಿನ ಕಾಲದಲ್ಲಿ ರಾಜಮಂಡ್ರಿ ಸುಧಾರಕಗೃಹ ಚಟುವಟಿಕೆಗಳನ್ನು ನಡೆಸುವ ಪ್ರಮುಖ ಕೇಂದ್ರವಾಗಿತ್ತು. ಪಂತಲು ಅವರು ರಾಜಮಂಡ್ರಿಯಲ್ಲಿ 1890 ರಲ್ಲಿ ಪುರಭವನವನ್ನು ನಿರ್ಮಿಸಿ ಸಾಂಸ್ಕೃತಿಕ, ಕಲಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದರು. ಬಳಿಕ ರಾಜಮಂಡ್ರಿ ಲಿಲತಕಲೆಗಳ ತವರೂರಾಗಿ ಬದಲಾಯಿತು. ಆಂಧ್ರ ಕಲಾಪರಂಪರೆ ಎಂಬ ಹೊಸ ಪರಂಪರರೆಯೇ ಸೃಷ್ಠಿಯಾಯಿತು. ಈ ಕ್ರಾಂತಿಕಾರಕ ಬದಲಾವಣೆಯನ್ನು ಜಾರಿಗೆ ತಂದ ಕೀರ್ತಿ ಸಲ್ಲುವುದು ಡಮೆರ್ಲ ರಾಮರಾವ್ ಅವರಿಗೆ. ಅವರು ಬಿಡಿಸುತ್ತಿದ್ದ ವರ್ಣಚಿತ್ರಗಳು ಭಾರತದ ಮೊಟ್ಟಮೊದಲ ನಗ್ನ ವರ್ಣ ಕಲಾಕೃತಿಗಳು ಎಂಬ ಕೀರ್ತಿಗೂ ಪಾತ್ರವಾಗಿವೆ. ವರ್ಣಚಿತ್ರಕಲೆಯಲ್ಲಿ ಇವರು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರ ಜತೆಗೆ ಸಾಕಷ್ಟು ಹೊಸ ತಂತ್ರಗಳನ್ನೂ ಕಂಡುಕೊಂಡರು. ಇದರ ಪರಿಣಾಮವಾಗಿ ರಾಜಮಂಡ್ರಿಯಲ್ಲಿ ಚಿತ್ರಕಲಾಶಾಲೆ ಪ್ರಾರಂಭವಾಯಿತು. ನೂರಾರು ಜನ ವಿದ್ಯಾರ್ಥಿಗಳು ಇವರ ಬಳಿ ಕಲಾ ತರಬೇತಿಯನ್ನು ಪಡೆದರು. ಈಗ ಈ ಕಲಾಶಾಲೆಯಲ್ಲಿ ಡಮೆರ್ಲ ರಾಮರಾವ್ ಅವರ ಕಲಾಕೃತಿಗಳನ್ನು ಸಂರಕ್ಷಿಸಿಡಲಾಗಿದ್ದು, ಸಾರ್ವಜನಿಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕವಾಗಿ ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ರಾಜಮಂಡ್ರಿಗೆ ಬಂದಾಗ ನೀವು ನೋಡಲೇ ಬೇಕಾದ ಸ್ಥಳಗಳ ಪೈಕಿ ಈ ಕಲಾಶಾಲೆ ಪ್ರಮುಖವಾದದ್ದು.
ರಾಜಮಂಡ್ರಿಯು, ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಸ್ಥಳವಾಗಿದೆ. ಆರ್ಯಭಟ ವಿಜ್ಞಾನ ಮತ್ತು ತಂತ್ರಜ್ಞಾನ ಸೊಸಾಯಿಟಿಯು, ದೀನರು ಮತ್ತು ಬಡ ವರ್ಗದವರ ಸರ್ವತೋಮುಖ ಏಳಿಗೆಗೆ ವೈಜ್ಞಾನಿಕ ವಿಧಾನಗಳನ್ನು ಹುಡುಕುತ್ತಿರುವ ಸಂಸ್ಥೆಯಾಗಿದೆ. ಇವೆಲ್ಲವುಗಳ ಜತೆಗೆ ಹಲವಾರು ದೇವಾಲಯಗಳನ್ನೂ ಇದು ಹೊಂದಿದ್ದು, ಧಾರ್ಮಿಕ ನಂಬಿಕೆಯ ಜನರನ್ನೂ ಇದು ಸೆಳೆಯುತ್ತದೆ. ಪ್ರತಿ ವರ್ಷ ಇಲ್ಲಿ ನಡೆಯುವ ವಿಶೇಷ ಧಾರ್ಮಿಕ ಉತ್ಸವಗಳಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಮೂಲಕ ಭಕ್ತಿ ಭಾವದಲ್ಲಿ ಮೈ ಮರೆಯುತ್ತಾರೆ. ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ಬಾಲತ್ರಿಪುರಸುಂದರಿ ದೇವಾಲಯಗಳು ವಿಶೇಷ ಉತ್ಸವಗಳಿಗೆ ಹೆಸರಾಗಿವೆ. ಗೌತಮಿಘಾಟ್ ಎಂದೂ ಕರೆಯಲ್ಪಡುವ ಇಸ್ಕಾನ್ ಭಕ್ತರನ್ನು ಸೆಳೆಯುವ ಇನ್ನೊಂದು ಪ್ರಮುಖ ಭಕ್ತಿ ಕೇಂದ್ರವಾಗಿದೆ. ಇಷ್ಟೆಲ್ಲ ವಿಶೇಷತೆಗಳ ಕಾರಣದಿಂದಾಗಿ ರಾಜಮಂಡ್ರಿಯನ್ನು ಆಂಧ್ರಪ್ರದೇಶದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗಿದೆ. ದೇಶದ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆ ಹಾಗೂ ರೈಲು ಸಂಪರ್ಕ ಸುಗಮವಾಗಿದೆ. ರಾಜಮಂಡ್ರಿಯ ವಿಮಾನ ನಿಲ್ದಾಣ, ಸೀಮಿತ ಸ್ಥಳಗಳೊಂದಿಗೆ ಮಾತ್ರ ಸಂಪರ್ಕ ಹೊಂದಿದದ್ದು, ಚೆನ್ನೈ, ಮಧುರೈ, ವಿಜಯವಾಡ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಿಗೆ ಮಾತ್ರ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ಬೇಸಿಗೆಯಲ್ಲಿ ತಾಪಮಾನ ಅಸಹನೀಯ ಮಟ್ಟಕ್ಕೆ ಹೆಚ್ಚಾಗಿರುತ್ತದೆ. 34 ರಿಂದ 48 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತಿದ್ದ ಸಾಮಾನ್ಯ ತಾಪಮಾನ ಬೇಸಿಗೆಯ ಸಮಯದಲ್ಲಿ 51 ಡಿಗ್ರಿ ಸೆಲ್ಶಿಯಸ್ ಗಡಿ ದಾಟುತ್ತದೆ. ಹಾಗಾಗಿ ರಾಜಮಂಡ್ರಿ ಭೇಟಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳು ಉತ್ತಮವಾಗಿವೆ.