ಪ್ರಾಚೀನ ಕಾಲದಲ್ಲಿ ಕಛ್ ನ ರಣ್ ಅಂದರೆ ಮರುಭೂಮಿಯಲ್ಲಿ ಹರಿದು ಸಮುದ್ರ ಸೇರುವ ಸಿಂಧು ನದಿಯಿಂದಾಗಿ ಮುಳುಗಿದ ಪ್ರದೇಶವೇ ಕಛ್. ಸಂಸ್ಕೃತದಲ್ಲಿ ಕಛ್ ಎಂದರೆ ದ್ವೀಪವೆಂದರ್ಥ. ಈ ಪ್ರದೇಶವು ಮುಖ್ಯಭೂಮಿಯಿಂದ ಪ್ರತ್ಯೇಕಗೊಂಡು ನೀರಿನಲ್ಲಿ ಮುಳುಗಿದ ಪ್ರದೇಶ ಅಂದರೆ ದ್ವೀಪದಂತಾಯಿತು. 1819ರಲ್ಲಿ ಎರಗಿದ ಭೂಕಂಪದಿಂದಾಗಿ ಸ್ಥಳದ ಸ್ವರೂಪವೇ ಬದಲಾಗಿ ಸಿಂಧು ನದಿ ಪಶ್ಚಿಮದ ಕಡೆಗೆ ಹರಿಯಲು ಆರಂಭಿಸಿದ ಪರಿಣಾಮ ರಣ್ ವಿಶಾಲವಾದ ಲವಣಾಂಶಯುಕ್ತ ಮರುಭೂಮಿಯ ನಿಕ್ಷೇಪವಾಯಿತು. ಬೇಸಿಗೆಯಲ್ಲಿ ನೀರು ಬತ್ತಿ ಹೋದಾಗ ರಣ್ ನ ಜವುಗು ಉಪ್ಪಿನ ಪದರಗಳು ಬಿಳಿ ಹಿಮಪಾತದಂತೆ ಕಾಣುತ್ತದೆ.
ಇತಿಹಾಸ
ಕಛ್ ನಲ್ಲಿರುವ ಒಂದು ದ್ವೀಪವಾಗಿರುವ ಖಾದಿರ್ ನಿಂದ ಹರಪ್ಪನ್ ನಾಗರೀಕತೆಗೆ ಸಂಬಂಧಿಸಿದ ಕಲಾಕೃತಿಗಳು ಪತ್ತೆಯಾಗಿದ್ದು, ಇದು ಪುರಾತನ ಭಾರತದಲ್ಲಿ ಕಛ್ ನ ಅಸ್ತಿತ್ವವನ್ನು ತೋರಿಸುತ್ತದೆ. ಕಛ್ ನ್ನು ಮೊದಲು ಸಿಂಧ್ ನ ರಾಜಮನೆತನವಾಗಿದ್ದ ರಾಜಪುತರು ಆಳುತ್ತಿದ್ದರು. ಬಳಿಕ ಜಡೇಜಾ ರಾಜಪುತ ರಾಜ ಖೇಂಗರ್ಜಿ ಆಳುತ್ತಿದ್ದ. ಭುಜ್ ಈ ವೇಳೆ ಕಛ್ ರಾಜ್ಯದ ರಾಜಧಾನಿಯಾಗಿತ್ತು. 1742ರ ಮುಘಲ್ ಆಡಳಿತಾವಧಿಯಲ್ಲಿ ಕಛ್ ನ ರಾಜನಾಗಿದ್ದ ಮೊದಲನೇ ಲಖ್ ಪತ್ಜಿ ಜನಪ್ರಿಯ ಆಯಿನಾ ಮಹಾಲ್ ಅರಮನೆಯನ್ನು ಕಟ್ಟಲು ಆದೇಶಿಸಿದ. ಲಖಪತ್ಜಿ ಸಾಹಿತಿಗಳು, ನೃತ್ಯಗಾರರು ಮತ್ತು ಗಾಯಕರಿಗೆ ಭಾರೀ ಪ್ರೋತ್ಸಾಹ ನೀಡುತ್ತಿದ್ದು, ಈ ವೇಳೆ ಕಛ್ ಸಾಂಸ್ಕೃತಿಕ ವಿಷಯದಲ್ಲಿ ಉತ್ತುಂಗಕ್ಕೇರಿತ್ತು.
1815ರಲ್ಲಿ ಬ್ರಿಟಿಷರು ಭುಜಿಯೊ ದುಂಗರ್ ಬೆಟ್ಟವನ್ನು ವಶಪಡಿಸಿಕೊಂಡಾಗ ಕಛ್ ಬ್ರಿಟಿಷ್ ಜಿಲ್ಲೆಯಾಯಿತು. ಬ್ರಿಟಿಷರ ಆಡಳಿತ ಅವಧಿಯಲ್ಲಿ ಪ್ರಗ್ ಮಹಲ್ ಅರಮನೆ, ರಂಜಿತ್ ವಿಲಾಸ್ ಅರಮನೆ, ಮಾಂಡವಿಯಲ್ಲಿ ವಿಜಯ್ ವಿಲಾಸ್ ಅರಮನೆಗಳನ್ನು ಕಟ್ಟಲಾಯಿತು. ರಾಜಪ್ರಭುತ್ವದ ರಾಜ್ಯವಾಗಿದ್ದ ಕಾರಣ ಕಛ್ ಸ್ವಾತಂತ್ರ್ಯ ಭಾರತಕ್ಕೆ ಸೇರುವ ಮೊದಲು ಬ್ರಿಟಿಷರ ಸಮಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದವು.
ಭೌಗೋಳಿಕತೆ
ಕಛ್ ನ ರಣ್ ನ ಹೊರಭಾಗದಲ್ಲಿ ಪರಿಸರ ಮುಖ್ಯವಾಗಿರುವ ಬನ್ನಿ ಹುಲ್ಲುಗಾವಲನ್ನು ಕಾಣಬಹುದಾಗಿದೆ. ದಕ್ಷಿಣ ಕಛ್ ಕೊಲ್ಲಿಯ ಜತೆ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಕಛ್ ನ ಉತ್ತರ ಮತ್ತು ಪೂರ್ವ ಭಾಗವು ಕಛ್ ನ ಶ್ರೇಷ್ಠ ಮತ್ತು ಸಣ್ಣ ರಣ್ ಗಳಿಂದ ಆವರಿಸಿದೆ. ರಣ್ ಮೂಲತಃ ಜೌಗು ಪ್ರದೇಶ. ಕಛ್ ನಲ್ಲಿರುವ ಎರಡು ಪ್ರಮುಖ ಬಂದರುಗಳಾದ ಕಂಡ್ಲಾ ಮತ್ತು ಮುಂದ್ರಾ ಕೊಲ್ಲಿಗೆ ತುಂಬಾ ಸಮೀಪದಲ್ಲಿದೆ ಮತ್ತು ಸಮುದ್ರ ಮಾರ್ಗವಾಗಿ ಯುರೋಪ್ ಗೆ ತಲುಪಬಹುದು.
ಸಂಸ್ಕೃತಿ
ಸಾಮಾನ್ಯವಾಗಿ ಇಲ್ಲಿ ಬಳಸುವ ಭಾಷೆ ಕಛಿ ಮತ್ತು ಕೆಲವು ಕಡೆ ಗುಜರಾತಿ, ಸಿಂಧಿ ಮತ್ತು ಹಿಂದಿಯನ್ನು ಬಳಸಲಾಗುತ್ತದೆ. ಕಛಿ ಭಾಷೆಗೆ ಯಾವುದೇ ಲಿಪಿಯಿಲ್ಲದ ಹಿನ್ನೆಲೆಯಲ್ಲಿ ಇದನ್ನು ಗುಜರಾತಿ ಲಿಪಿಯಲ್ಲೇ ಬರೆಯಲಾಗುತ್ತದೆ. ಕಛ್ ನಲ್ಲಿ ಹಲವಾರು ಸಮುದಾಯಗಳು ಮತ್ತು ಗುಂಪುಗಳು ನೆಲೆಸಿವೆ. ಮರ್ವಾರ್, ಸಿಂಧ್, ಅಫ್ಘಾನಿಸ್ತಾನದಿಂದ ಬಂದಂತಹ ವಲಸಿಗರು ಮೂಲ ಕಛ್ ನಿವಾಸಿಗಳೊಂದಿಗೆ ಬೆರೆತುಕೊಂಡು ಈ ಗುಂಪನ್ನು ನಿರ್ಮಿಸಿದ್ದಾರೆ.
ಈ ಅಸಾಮಾನ್ಯ ಸಾಂಸ್ಕೃತಿಕ ವೈವಿಧ್ಯ ಮತ್ತು ಕಛ್ ರಣ್ ನ ಅಪೂರ್ವ ಭೌಗೋಳಿಕ ವಿದ್ಯಮಾನವನ್ನು ಅನುಭವಿಸಲು ಗುಜರಾತಿಗೆ ಪ್ರಯಾಣಿಸಿದಾಗ ಇಲ್ಲಿಗೆ ಭೇಟಿ ನೀಡಲೇಬೇಕು.


Click it and Unblock the Notifications