ಕಾಲಡಿ ಎಂಬುದು ಪೆರಿಯಾರ್ ನದಿಗೆ ಸಮೀಪದಲ್ಲಿ ನೆಲೆಗೊಂಡಿರುವ ಒಂದು ಹಳ್ಳಿಯಾಗಿದೆ. ಈ ಹಳ್ಳಿಯು ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿ ನೆಲೆಸಿದೆ. ಈ ಊರು ಆದಿ ಶಂಕರರು ಜನಿಸಿದ ಊರು. ಆದಿ ಶಂಕರರ ಅನುಯಾಯಿಗಳು ಮತ್ತು ಭಾರತ ಮೂಲೆ ಮೂಲೆಯಿಂದ ಬರುವ ಯಾತ್ರಾರ್ಥಿಗಳಿಗೆ ಈ ಊರು ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇಲ್ಲಿ 1910 ರಲ್ಲಿ ಆದಿ ಶಂಕರರ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ಕಾಲಡಿ ಎಂದರೆ ಹೆಜ್ಜೆಗುರುತು ಎಂದರ್ಥ. ಈ ಊರು ಮೊದಲಿಗೆ ಸಸಲಂ ಎಂದು ಕರೆಯಲ್ಪಡುತ್ತಿತ್ತು. ಕಾಲಡಿ ದೇಗುಲದ ಶತಮಾನೋತ್ಸವವನ್ನು 2010 ರಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಅಲ್ಲದೆ ಮಾಧ್ಯಮಗಳಲ್ಲಿ ಇದು ಸಂಪೂರ್ಣವಾಗಿ ಬಿತ್ತರಗೊಂಡಿತು.
ಕುತೂಹಲಕರ ದಂತಕತೆ
ಆದಿ ಶಂಕರ ಮತ್ತು ಅವರ ಮಾತೃಶ್ರೀಯವರ ಕುರಿತಾದ ಒಂದು ಪೂರ್ವದ ದಂತಕತೆಗೆ ಈ ಊರು ಸಾಕ್ಷಿಯಾಗಿದೆ. ಪೆರಿಯಾರ್ ನದಿಯು ಮೊದಲಿಗೆ ಪೂರ್ಣ ನದಿ ಎಂದು ಕರೆಯಲ್ಪಡುತ್ತಿತ್ತು. ಇದು ಶಂಕರರು ಮತ್ತು ಅವರ ತಾಯಿ ನೆಲೆಸಿದ್ದ ಸ್ಥಳದಿಂದ ತುಂಬಾ ದೂರದಲ್ಲಿ ಹರಿಯುತ್ತಿತ್ತು. ಒಮ್ಮೆ ಶಂಕರರ ತಾಯಿಯು ಪ್ರತಿದಿನದಂತೆ ಅಂದು ಸಹ ಸ್ನಾನಮಾಡಲು ಹೋಗುವಾಗ ತಲೆಸುತ್ತು ಬಂದು ಕುಳಿತುಬಿಟ್ಟರು. ಆಗ ನಿಸ್ಸಹಾಯಕರಾದ ಶಂಕರರು ಭಗವಾನ್ ಕೃಷ್ಣನನ್ನು ಪ್ರಾರ್ಥಿಸಿದರು. ಆಗ ಶ್ರೀ ಕೃಷ್ಣನು ಅವರ ಮೊರೆಗೆ ಓಗೊಟ್ಟು ಬಂದನು.’ ತನ್ನ ಕಾಲಿನ ಹೆಜ್ಜೆಗುರುತು ಎಲ್ಲಿದೆಯೊ ಅಲ್ಲಿಂದ ನದಿ ಹರಿಯುತ್ತದೆ’ ಎಂದು ಶ್ರೀ ಕೃಷ್ಣನು ಶಂಕರರಿಗೆ ಹೇಳಿದನು. ಅದರ ಪರಿಣಾಮವಾಗಿ ಶಂಕರರ ಉದ್ಯಾನವನದ ಬಳಿಯಲ್ಲಿ ನದಿಯು ಹರಿಯಲು ಪ್ರಾರಂಭಿಸಿತು.
ನಂತರ ಶಂಕರರು ಶ್ರೀ ಕೃಷ್ಣನಿಗಾಗಿ ಇಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು, ಅಲ್ಲದೆ ಕೃಷ್ಣನಿಗಾಗಿ ಅಚ್ಯುತ ಅಷ್ಟಕಂ ಎಂಬ ಪ್ರಸಿದ್ಧ ಸ್ತೋತ್ರವನ್ನು ಪಠಿಸಿದರು. ಈ ಸ್ಥಳದ ಪ್ರಮುಖ ಆಕರ್ಷಣೆಗಳಲ್ಲಿ ರಾಮಕೃಷ್ಣ ಆಶ್ರಮ, ಕಲ್ಲಿಲ್ ದೇವಿ ದೇವಾಲಯ, ಶೃಂಗೇರಿ ಮಠದ ಸಂಕೀರ್ಣ, ಮಹಾದೇವ ದೇವಾಲಯ, ವನಮೂರ್ತಿ ದೇವಾಲಯ, ಕುಳುಪ್ಪಿಲ್ಲಿಕ್ಕವೆ ಜಲದುರ್ಗ ದೇವಾಲಯಗಳು ಸೇರಿವೆ.
ಕಾಲಡಿಗೆ ಹೋಗಲು ಅತ್ಯುತ್ತಮ ಅವಧಿ
ಕಾಲಡಿಯಲ್ಲಿ ಆಗಸ್ಟ್ ನಿಂದ ಮಾರ್ಚ್ ವರೆಗಿನ ಅವಧಿಯು ತಂಪಾಗಿ, ಆಹ್ಲಾದಕರವಾಗಿರುವುದರಿಂದ ಈ ಅವಧಿಯು ಕಾಲಡಿಗೆ ಹೋಗಲು ಅತ್ಯುತ್ತಮ ಕಾಲವಾಗಿದೆ. ಕಾಲಡಿಯು ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ದಕ್ಷಿಣ ಭಾರತದ ಹಲವು ನಗರಗಳೊಂದಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ.