ಪಾರ್ಥಸಾರಥಿ ದೇವಾಲಯವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿರುವ ದೇವತೆ ಪಾರ್ಥಸಾರಥಿ. ಇದು ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣ ಅರ್ಜುನನ ಸ್ನೇಹಿತನಾಗಿ ಮತ್ತು ಮಾರ್ಗದರ್ಶಿಯಾಗಿ ಸಾರಥಿಯಾಗಿ ಕಾಣಿಸಿಕೊಂಡ ಅವತಾರವೇ ಸಾರಥಿ ಅವತಾರ. ಅರ್ಜುನನನ್ನು ಪಾರ್ಥ ಎಂದು ಕರೆಯುವುದರಿಂದ ಪಾರ್ಥ ಸಾರಥಿ ಎಂದು ಸಂಬೋಧಿಸಲಾಗುತ್ತದೆ. ಅತ್ಯಂತ ಪ್ರಸಿದ್ಧವಾದ ಪುರಾಣದ ಈ ಜೋಡಿಗಳ ಬಗ್ಗೆ ಹೇಳುವುದಕ್ಕಿಂತ ಇಲ್ಲಿಗೆ ಬಂದೇ ಅರಿತುಕೊಳ್ಳಬೇಕು.
ಆದಿ ಶಂಕರರಿಂದ ಪಾರ್ಥಸಾರಥಿ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು ಎಂಬುದು ಗುರುವಾಯೂರಿನ ಜನರ ನಂಬಿಕೆ. ಆದಿ ಶಂಕರರ ದೇವಾಲಯವನ್ನೂ ಇಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಮುಖ್ಯ ದೇವಾಲಯವನ್ನು ಬಹಳ ನಾಜೂಕಾಗಿ ರಥದ ರೀತಿಯಲ್ಲಿ ನಿರ್ಮಿಸಲಾಗಿದೆ. ಪಾರ್ಥಸಾರಥಿ ದೇವಾಲಯದ ಸಮಗ್ರ ರಚನೆ ಮಹೋನ್ನತವಾಗಿದೆ. ದೇವಾಲಯದ ಗೋಡೆಯ ಮೇಲೆ ಮಾಡಲಾಗಿರುವ ಸೂಕ್ಷ್ಮ ಕಲೆ ಹೊಳೆಯುತ್ತಿದ್ದು ನೋಡುಗರನ್ನು ಆಕರ್ಷಿಸುತ್ತದೆ. ಆದ್ದರಿಂದ ಗುರುವಾಯೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ನೀಡಲೇ ಬೇಕು.