ಬೈದ್ಯನಾಥ ದೇವಾಲಯವು ಭಾರತದ 12 ಜ್ಯೋರ್ತಿಲಿಂಗಗಳಲ್ಲಿ ಒಂದು. ಜಾರ್ಖಂಡ್ನ ಪ್ರಮುಖ ಸ್ಥಳಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಈ ದೇವಾಲಯದ ನಿರ್ಮಾಣದ ಹಿಂದೆ ಒಂದು ಪ್ರಸಿದ್ಧ ಕತೆಯಿದೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಲಿಂಗವನ್ನು ನೀಡುತ್ತಾನೆ. ಅದನ್ನು ರಾವಣನು ತನ್ನ ರಾಜ್ಯಕ್ಕೆ ಹಾದಿಯಲ್ಲಿ ಎಲ್ಲಿಯೂ ನಿಲ್ಲದೆ ತೆಗೆದುಕೊಂಡು ಹೋಗಬೇಕಾಗಿರುತ್ತದೆ.
ದೇವತೆಗಳಿಗೆ ತಮ್ಮ ಶತ್ರುವು ಪವಿತ್ರ ಲಿಂಗವನ್ನು ತೆಗೆದುಕೊಂಡು ಹೋಗುವುದು ಇಷ್ಟವಾಗುವುದಿಲ್ಲ. ಆದ್ದರಿಂದ ವಿಷ್ಣುವು ಬ್ರಾಹ್ಮಣನ ವೇಷದಲ್ಲಿ ಬಂದು ರಾವಣನು ಲಿಂಗವನ್ನು ಬೀಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಹೀಗಾಗಿ ಆ ಲಿಂಗವು ದಿಯೋಘರ್ನಲ್ಲಿ ಉಳಿಯಿತು.
ಈ ದೇಗುಲವು 1569ರಲ್ಲಿ ಸ್ಥಾಪನೆಯಾಯಿತು. ಕಳೆದು ಹೋಗಿದ್ದ ಲಿಂಗವನ್ನು ಬೈಜು ಎಂಬ ವ್ಯಕ್ತಿ ಪತ್ತೆ ಹಚ್ಚಿದನಂತೆ. ಹಾಗಾಗಿ ಇದಕ್ಕೆ ಬೈದ್ಯನಾಥ ದೇವಾಲಯವೆಂದು ಹೆಸರು. ಇದು ಶಕ್ತಿಪೀಠಗಳಲ್ಲಿ ಒಂದು.ನವಲಖಾ ದೇಗುಲ ಕೂಡ ಇದರ ಹತ್ತಿರದಲ್ಲಿದೆ.
ಪ್ರತಿವರ್ಷವೂ ಜಾರ್ಖಂಡ್ನಲ್ಲಿ ಶ್ರಾವಣಿ ಜಾತ್ರೆ ನಡೆಯುತ್ತದೆ. 30 ದಿನಗಳ ಈ ಹಬ್ಬದ ಸಮಯದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಿವಭಕ್ತರು ಶಿವಲಿಂಗಕ್ಕೆ ಪವಿತ್ರತೀರ್ಥದ ಅಭಿಷೇಕ ಮಾಡುತ್ತಾರೆ.
ಈ ಸಮಯದಲ್ಲಿ ಇಲ್ಲಿ ಹಲವು ಬಗೆಯ ಸಿಹಿ ತಿಂಡಿಗಳ ಸಣ್ಣ ಅಂಗಡಿಗಳು ಇರುತ್ತವೆ. ಇಲ್ಲಿನ ಪೇಡ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ಸಮಯದಲ್ಲಿ ದೇವಾಲಯವು ಬೆಳಗ್ಗೆ 4 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ.