ಸಾಮಾನ್ಯವಾಗಿ ಒರಿಸ್ಸಾದ ಪುರಿ ಜಗನ್ನಾಥ ದೇವಾಲಯ ಹಿಂದುಗಳ ಪಾಲಿಗೆ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರ. ಆದರೆ ಕೆಲವು ಕಾರಣಾಂತರಗಳಿಂದಾಗಿ ದಕ್ಷಿಣ ಭಾರತದ ಅನೇಕ ಭಕ್ತಾದಿಗಳಿಗೆ ಅಲ್ಲಿಯ ವರೆಗೆ ಹೋಗುವುದು ತುಸು ಕಷ್ಟ. ಇಂತಹ ಸಂಕಷ್ಟದ ಸ್ಥಿತಿಯನ್ನು ನಿವಾರಿಸುವ ಉದ್ದೇಶದಿಂದಾಗಿಯೆ ಚೆನ್ನೈನಲ್ಲಿ ಜಗನ್ನಾಥ ದೇವಾಲಯವನ್ನು ನಿರ್ಮಿಸಲಾಗಿದೆ. ಚೆನ್ನೈನ ರೆಡ್ಡಿ ಕುಪ್ಪಂ ರಸ್ತೆಯಲ್ಲಿ ನೆಲೆಸಿರುವ ಈ ದೇವಾಲಯದಲ್ಲಿ ಜಗನ್ನಾಥ, ಸುಭದ್ರಾ ಮತ್ತು ಬಲರಾಮರ ವಿಗ್ರಹಗಳನ್ನು ಕಾಣಬಹುದಾಗಿದೆ. ಇವುಗಳಲ್ಲದೆ ಯೋಗನರಸಿಂಹ ದೇವರ ವಿಗ್ರಹವೂ ಕೂಡ ಇಲ್ಲಿದ್ದು, ಶಿವ, ಗಣೇಶ, ವಿಮಲಾ ದೇವಿ ಮತ್ತು ಗಜಲಕ್ಷ್ಮಿಯರನ್ನೂ ಪೂಜಿಸಲಾಗುತ್ತದೆ.
ಕಪ್ಪು ಗ್ರಾನೈಟ್ ಹಾಗು ಬಿಳಿ ಅಮೃತಶಿಲೆಗಳನ್ನು ಬಳಸಿ ನಿರ್ಮಿಸಲಾಗಿರುವ ಈ ದೇವಾಲಯದ ರಚನೆಯು ಮೂಲ ಪುರಿ ಜಗನ್ನಾಥ ದೇವಾಲಯವನ್ನೆ ಹೋಲುತ್ತದೆ. ಇದಕ್ಕಾಗಿ ಗ್ರಾನೈಟ್ ಅನ್ನು ಕಾಂಚಿಪುರಂ ನಿಂದಲೂ, ಅಮೃತ ಶಿಲೆಯನ್ನು ರಾಜಸ್ಥಾನದಿಂದಲೂ ಆಮದು ಮಾಡಿಕೊಳ್ಳಲಾಗಿದೆ. ಪುರಿಜಾಗನ್ನಾಥ ದೇವಾಲಯದ ವಿಗ್ರಹವನ್ನು ಕೆತ್ತಲು ಬಳಸಲಾದ ಬೇವಿನ ಮರದ ಕಟ್ಟಿಗೆಯನ್ನೆ, ಈ ದೇವಸ್ಥಾನದ ವಿಗ್ರಹಗಳ ಕೆತ್ತನೆಗೂ ಸಹ ಬಳಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ತನ್ನ ಸುತ್ತಲೂ ಹಸಿರಿನಿಂದ ಕೂಡಿದ ಉದ್ಯಾನವನ್ನು ಹೊಂದಿದ್ದು, ವರ್ಷಪೂರ್ತಿ ಬಣ್ಣ ಬಣ್ಣದ ಹೂಗಳಿಂದ ತುಂಬಿ ತುಳುಕುತ್ತಿರುತ್ತದೆ. ಅಷ್ಟೆ ಅಲ್ಲ, ಈ ಉದ್ಯಾನದ ಹೂಗಳನ್ನು ದೇವಸ್ಥಾನದ ವಿಗ್ರಹಗಳ ಪೂಜೆಗೂ ಬಳಸಲಾಗುತ್ತದೆ.