ಚೆನ್ನೈ ಬಳಿಯಿರುವ ಮೈಲಾಪೋರ್ ಉಪನಗರದಲ್ಲಿ ನೆಲೆಸಿದೆ ಕಾಪಾಲೀಶ್ವರ್ ದೇವಸ್ಥಾನ. ಈ ದೇವಸ್ಥಾನವು ಶಿವ ಹಾಗು ಆತನ ಪತ್ನಿಯಾದ ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿಶೇಷವಾಗಿ ಪಾರ್ವತಿ ದೇವಿಯನ್ನು ಈ ದೇವಸ್ಥಾನದಲ್ಲಿ ಕರ್ಪಗಂಬಲ್ ಅಥವಾ 'ಆಸೆ ಈಡೇರಿಸುವ ಮರದ ದೇವತೆ' ಯ ರೂಪದಲ್ಲಿ ಪೂಜಿಸಲಾಗುತ್ತದೆ.
ದೇವಸ್ಥಾನಕ್ಕೆ ಈ ಹೆಸರು 'ಕಾಪಾಲಂ' (ಅಂದರೆ ತಲೆ) ಮತ್ತು 'ಈಶ್ವರರ್' (ಶಿವನ ಹೆಸರು) ಎಂಬ ಎರಡು ಪದಗಳಿಂದ ಬಂದಿದೆ. ಪೌರಾಣಿಕ ಹಿನ್ನಿಲೆಯ ಪ್ರಕಾರ, ಒಂದೊಮ್ಮೆ ಶಿವ ಹಾಗು ಬ್ರಹ್ಮ ದೇವರು ಕೈಲಾಸಗಿರಿಯಲ್ಲಿ ಭೇಟಿಯಾದರು. ಆ ಸಂದರ್ಭದಲ್ಲಿ ಬ್ರಹ್ಮದೇವರು ಶಿವನ ಪ್ರಾಧಾನ್ಯತೆಯನ್ನು ಕಡೆಗಾಣಿಸಿದರು. ಇದರಿಂದ ಕುಪಿತನಾದ ಶಿವನು ಬ್ರಹ್ಮನ ಒಂದು ತಲೆ(ಕಾಪಾಲ)ಯನ್ನೆ ಕಿತ್ತು ತೆಗೆದನು. ಇಷ್ಟಾದ ಮೇಲೆ ತನ ತಪ್ಪಿನ ಅರಿವಾದ ಬ್ರಹ್ಮನು ಮೈಲಾಪೋರಕ್ಕೆ ಬಂದು ಒಂದು ಲಿಂಗವನ್ನು ಪ್ರತಿಷ್ಠಾಪಿಸಿದನು.
ಸುಮಾರು 7 ನೇಯ ಶತಮಾನದ ಸಂದರ್ಭದಲ್ಲಿ ಪಲ್ಲವರಿಂದ ಈ ದೇವಾಲಯವು ನೀರ್ಮಾಣವಾಗಿದೆ ಎಂದು ನಂಬಲಾಗಿದೆ. ಇದರಲ್ಲಿ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದಾಗಿದೆ. ಮೂಲ ದೇವಾಲಯವನ್ನು ಇಂದು ಕಾಣಬಹುದಾದ 'ಸ್ಯಾನ್ ಥೋಮ್' ಚರ್ಚಿನ ಸ್ಥಳದಲ್ಲಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ. ಆದರೆ ಇದು ಪೋರ್ಚುಗೀಸರಿಂದ ನಾಶ ಹೊಂದಿತು. ಇಂದು ಕಾಣುತ್ತಿರುವ ಈ ದೇವಸ್ಥಾನವು 16 ನೇಯ ಶತಮಾನದಲ್ಲಿ ವಿಜಯನಗರ ಅರಸರಿಂದ ನಿರ್ಮಿತವಾದ ದೇವಾಲಯವಾಗಿದೆ.