ಅಂಬಸಮುದ್ರ ಪಟ್ಟಣದ ಪಕ್ಕದಿಂದಲೇ ಹಾದುಹೋಗುವ ನದಿಯ ನೀರು ದೂರದಿಂದ ಕೊಂಚ ಕೆಂಪಗಿದೆ. ನಮ್ಮ ತುಂಗಾನದಿಯ ನೀರಿನಂತೆಯೇ ಅತಿ ಸಿಹಿಯಾಗಿರುವ ಈ ನದಿಯ ನೀರಿನ ರುಚಿಗೆ ಅದರಲ್ಲಿ ಕರಗಿರುವ ತಾಮ್ರದ ಅಂಶ ಕಾರಣ ಎಂದು ನಂಬಲಾಗಿದೆ. ಹಲವಾರು ಗಿಡಮೂಲಿಕೆ ಹಾಗೂ ವಸಸ್ಪತಿಗಳ ಆಗರವಾದ ಪೋಧಿಗೈ ಬೆಟ್ಟಗಳಿಂದ ಹಾದು ಬರುವ ಈ ನೀರಿನಲ್ಲಿ ಹಲವು ರೋಗಹರ ಅಂಶಗಳಿವೆ ಎಂದೂ ಜನರು ನಂಬುತ್ತಾರೆ. ಉಗಮಸ್ಥಾನದಿಂದ ಸಮುದ್ರ ಸೇರುವವರೆಗೆ ಸುಮಾರು ನೂರಾಇಪ್ಪತ್ತೈದು ಕಿ.ಮೀ ಕ್ರಮಿಸುವ ಈ ನದಿಗೆ ಏಳು ಕಡೆ ಅಣೆಕಟ್ಟುಗಳನ್ನು ಕಟ್ಟಿ ಒಂಭತ್ತು ಕಾಲುವೆಗಳ ಮೂಲಕ ನೀರನ್ನು ಕೃಷಿ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಅಲ್ಲದೇ ಮೂರು ಕಡೆ ಜಲಪಾತವಾಗಿಯೂ ಧುಮುಕುತ್ತದೆ. ವಾನತೀರ್ಥಂ (40 ಅಡಿ), ಕಲ್ಯಾಣತೀರ್ಥಂ ಮತ್ತು ಅಗಸ್ತಿಯರ್ (ನೂರು ಮೀಟರ್) ಹೆಸರಿನ ಈ ಜಲಪಾತಗಳು ಸಹಾ ಪ್ರೇಕ್ಷಣೀಯವಾಗಿವೆ.