ಮುಂದಂತುರೈ-ಕಾಲಕಾಡ್ ಹುಲಿ ಧಾಮದ ನಡುವೆ ಇರುವ ಈ ಅಣೆಕಟ್ಟು ಅಭಯಾರಣ್ಯದ ಒಂದು ಭಾಗವೂ ಹೌದು. ಗಾತ್ರಕ್ಕೆ ಹೋಲಿಸಿದರೆ ಇತರ ಅಣೆಕಟ್ಟುಗಳಿಗಿಂತ ತೀರಾ ಚಿಕ್ಕದಿರುವ ಈ ಸ್ಥಳದ ಆಕರ್ಷಣೆ ಎಂದರೆ ದೋಣಿವಿಹಾರ. ಹದಿನೈದು ಜನರು ಕುಳಿತುಕೊಳ್ಳಬಹುದಾದ ದೋಣಿಯಲ್ಲಿ ಅರ್ಧ ಘಂಟೆಯ ಒಂದು ಸುತ್ತು ಬರಲು ಅರಣ್ಯ ಇಲಾಖೆ ವಿಧಿಸುವುದು ಮುನ್ನೂರು ರೂಪಾಯಿಗಳು. ಆದರೆ ಈ ಮಾರ್ಗದಲ್ಲಿ ಅಣೆಕಟ್ಟಿನ ಹಿನ್ನೀರಿಗೆ ಧುಮುಕುವ ವಾಣಿತೀರ್ಥಂ ಜಲಪಾತ ವಿಶೇಷ ಆಕರ್ಷಣೆ. ಜಲಪಾತಕ್ಕೆ ಸಾಧ್ಯವಾದಷ್ಟು ಹತ್ತಿರ ಹೋಗುವ ದೋಣಿ ಜಲಪಾತದ ತುಂತುರಿನಿಂದ ನಿಮ್ಮನ್ನು ತೋಯಿಸುವುದನ್ನು ಅನುಭವಿಸುವುದೇ ವಿಶಿಷ್ಟ ಅನುಭವ. ಈ ನೀರಿನಲ್ಲಿ ಮೊಸಳೆಗಳಿರುವುದರಿಂದ ಎಲ್ಲಿಯೂ ಈಜಿಗೆ ಆಸ್ಪದವಿಲ್ಲ.