ನಾವು ಸಾಮನ್ಯವಾಗಿ ಬೆಳಗ್ಗೆದ್ದರೆ ದೇವಾಲಯದ ಬಗ್ಗೆ ಕೇಳುತ್ತಿರುತ್ತೇವೆ, ನೋಡುತ್ತಿರುತ್ತೇವೆ. ಒಂದೊಂದು ದೇವಾಲಯ ತನ್ನದೇ ಆದ ಮಹತ್ವವನ್ನು, ಮಹಿಮೆಯನ್ನು ಹೊಂದಿರುತ್ತದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿಗೂ ದೇವರಂತೆ ಕಾಣುವ ಒಂದು ಪಾರಿಪಾಠವಿದೆ. ಹಾಗಾಗಿಯೇ ಪ್ರಾಣಿ, ಪಕ್ಷಿ, ವಸ್ತು ಎನ್ನದೇ ಎಲ್ಲರನ್ನು ಕೈಮುಗಿಯುವ ಆಧ್ಯಾತ್ಮಿಕವಾದ ಸಂಸ್ಕಾರ ನಮ್ಮ ಭಾರತದ ದೇಶದ ಪ್ರಜೆಗಳಿಗೆ ಇದೆ.
ನೀವು ಕರ್ನಾಟಕದಲ್ಲಿಯೇ ಇರುವ ನಾಯಿಗಳ ದೇವಾಲಯವನ್ನು ಕೂಡ ಕೇಳಿದ್ದೀರ ಆದರೆ ಕೇರಳದಲ್ಲಿ ಇರುವೆಗಳಿಗೆ ಮೀಸಲಾದ ಒಂದು ದೇವಾಲಯ ನಿರ್ಮಾಣ ಮಾಡಿದ್ದಾರೆ ಎಂಬುದರ ಬಗ್ಗೆ ನಿಮಗೆ ಗೊತ್ತೆ? ಏನು ಇರುವೆಗಳಿಗೂ ದೇವಾಲಯವೇ? ಎಂದು ಉದ್ಗಾರ ತೆಗೆಯಬೇಡಿ.. ಹೌದು ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೆ ಇರುವೆಗಳ ಸ್ಥಳ ಪುರಾಣ ಇರುವುದು.
ಪ್ರಸ್ತುತ ಲೇಖನದಲ್ಲಿ ಇರುವೆಗಳ ಮಹಿಮೆಯ ಬಗ್ಗೆ ಹಾಗು ಸ್ಥಳ ಪುರಾಣಗಳ ಬಗ್ಗೆ ತಿಳಿಯೋಣ.
ಎಲ್ಲಿದೆ?
ಈ ವಿಚಿತ್ರವಾದ ದೇವಾಲಯ ಇರುವುದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತೊಟ್ಟದ ಎಂಬ ಸ್ಥಳದಲ್ಲಿ. ಇದು ಭಾರತದಲ್ಲಿಯೇ ಏಕೈಕ ಇರುವೆ ದೇವಾಲಯ ಎಂದರೆ ತಪ್ಪಾಗಲಾರದು. ಇದೊಂದು ಆಶ್ಚರ್ಯವಾದ ಸಂಗತಿಯಾದರು ಇದು ನಿಜ.
ದೇವಾಲಯ
ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯಕ್ಕೆ ಗೋಪುರ ಇಲ್ಲ. ಸಾಮಾನ್ಯವಾಗಿ ದೇವಾಲಯ ಎಂದ ಕೊಡಲೇ ನಮ್ಮ ಕಣ್ಣಮುಂದೆ ಹಾದು ಹೋಗುವುದು ಅದ್ಭುತ ದೇವತಾ ಶಿಲ್ಪಗಳನ್ನು ಹೊಂದಿರುವ ಗೋಪುರಗಳು. ಆದರೆ ಈ ದೇವಾಲಯದಲ್ಲಿ ಯಾವುದೇ ರೀತಿಯ ಗೋಪುರವಾಗಲೀ, ಗೋಡೆಗಳಾಗಲೀ ಇಲ್ಲ. ಆದರೂ ಇದೊಂದು ದೇವಾಲಯವಾಗಿದೆ.
ಉರುಂಬಚನ್ ಕೊಟ್ಟಂ
ಈ ದೇವಾಲಯವನ್ನು "ಉರುಂಬಚನ್ ಕೊಟ್ಟಂ" ಎಂದು ಕರೆಯುತ್ತಾರೆ. ಮಲಯಾಳಂನಲ್ಲಿ ಉರುಬ ಎಂದರೆ ಇರುವೆ ಹಾಗು ಅಚನ್ ಎಂದರೆ ಪಿತಾ ಅಥವಾ ತಂದೆ ಎಂಬ ಅರ್ಥವಾಗಿದೆ. ಹಾಗಾಗಿ ಈ ದೇವಾಲಯವು ಇರುವೆಗಳ ಪಿತನಿಗೆ ಸಮರ್ಪಿತವಾದ ದೇವಾಲಯ.
ಭಕ್ತರು
ಇರುವೆಗಳ ಕಾಟದಿಂದ ಬಳಲಿ ಬೆಂಡಾದವರು ಹಾಗು ಇರುವೆಗಳ ಕಡಿತಕ್ಕೆ ಒಳಗಾದವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರಂತೆ. ಕೇವಲ ಇವರೇ ಅಲ್ಲದೇ ಸಾಮಾನ್ಯರು ಕೂಡ ತಮಗೆ ಎಂದಿಗೂ ಇರುವೆಗಳ ಕಾಟ ಉಂಟಾಗಬಾರದು ಎಂದು ಭೇಟಿ ನೀಡುತ್ತಾರಂತೆ.
ನಂಬಿಕೆ
ಹೀಗೆ ಇರುವೆಗಳ ಪಿತನನ್ನು ಬೇಡಿಕೊಂಡು ಹೋದವರ ಮನೆಯಲ್ಲಿ ಇರುವೆಗಳ ತೊಂದರೆ ಶಾಶ್ವತವಾಗಿ ನಿಂತಿದೆ ಎಂದು ಹೇಳುತ್ತಾರೆ ಕೆಲವು ಭಕ್ತರು.
ನೈವೇದ್ಯ
ಈ ದೇವಾಲಯಕ್ಕೆ ಬರುವ ಭಕ್ತರು ತೆಂಗಿನ ಕಾಯಿಯನ್ನು ಒಡೆದು ಅದರಲ್ಲಿನ ನೀರನ್ನು ಇರುವೆಗಳಿಗೆ ನೈವೇದ್ಯವಾಗಿ ಸರ್ಮಪಿಸುತ್ತಾರೆ. ಈ ದೇವಾಲಯವು ದುಂಡಾಕಾರದಂತೆ ಇರುವ ಒಂದು ಕಟ್ಟೆಯಾಗಿದೆ.
ಕಮಾನು
ಈ ಮೊದಲೇ ಹೇಳಿದಂತೆ ಈ ಇರುವೆಗಳ ದೇವಾಲಯಕ್ಕೆ ಯಾವುದೇ ರೀತಿಯ ಗೋಪುರ ಇಲ್ಲ. ದೇವಾಲಯಕ್ಕೆ ಸ್ವಲ್ಪ ದೂರದಲ್ಲಿ ಕಮಾನುವಿನ ಮೇಲೆ ಮಲಯಾಳಂ ಭಾಷೆಯಲ್ಲಿ ದೇವಾಲಯ ಎಂದು ಬರೆದಿದೆ. ಆಗಲೇ ನಿಮಗೆ ಓ. ಇಲ್ಲಿ ದೇವಾಲಯವಿದೆ ಎಂದು ತಿಳಿಯುತ್ತದೆ.
ಸ್ಥಳ ಪುರಾಣ
ಈ ದೇವಾಲಯದ ಸ್ಥಳ ಪುರಾಣ ಎಲ್ಲಾ ದೇವತೆಗಳಿಗಿಂತಲೂ ವಿಭಿನ್ನವಾಗಿದೆ. ಅದೇನೆಂದರೆ ಈ ದೇವಾಲಯವಿರುವ ಸ್ಥಳದಲ್ಲಿ ಬಡಿಗನೊಬ್ಬ ಇದ್ದನಂತೆ. ಆತ ಗಣೇಶ ದೇಗುಲ ಎಂದು ಒಂದು ಹಲಗೆಯನ್ನು ಕೆತ್ತಿ ಅಲ್ಲಿಯೇ ನೆಟ್ಟಿದನಂತೆ.
ಮರು ದಿನ
ಮರುದಿನ ಆತ ನೆಟ್ಟಿದ್ದ ಹಲಗೆ ಅಲ್ಲಿ ಇರಲಿಲ್ಲವಂತೆ ಬದಲಾಗಿ ಅಲ್ಲೊಂದು ಇರುವೆಗಳ ದೊಡ್ಡದಾದ ಹುತ್ತವೇ ನಿರ್ಮಾಣವಾಗಿತ್ತಂತೆ. ಆ ಸ್ಥಳದಿಂದ ಕೆಲವೆ ಅಡಿಯಷ್ಟು ದೂರದಲ್ಲಿ ಗಣೇಶನ ಫಲಕವು ಬಿದ್ದತಂತೆ.
ದೇವಾಲಯ ನಿರ್ಮಾಣ
ಇದೊಂದು ದೈವ ಸಂಕೇತ ಎಂದು ತಿಳಿದ ಗ್ರಾಮದ ಜನರು ಇರುವೆಗಳಿಗೆ ಒಂದು ಕಟ್ಟೆಯಾಕಾರದಲ್ಲಿ ದೇವಾಲಯವನ್ನು ನಿರ್ಮಾಣ ಮಾಡಿದರಂತೆ. ಇನ್ನೂ ಆ ಫಲಕ ಬಿದ್ದ ಸ್ಥಳದಲ್ಲಿ ಗಣೇಶನ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಇಂದು ಆ ದೇವಾಲಯವನ್ನು ಉದಯಮಂಗಲಂ ಗಣೇಶ ದೇವಾಲಯ ಎಂದು ಕರೆಯುತ್ತಾರೆ.
ನಂಬಿಕೆ
ಇದೊಂದು ಮೂಢ ನಂಬಿಕೆಯೊ ಅಥವಾ ಅವರ ಭಕ್ತಿಯೊ ತಿಳಿಯದು. ಅವರವರ ನಂಬಿಕೆ ಬಿಟ್ಟಿದ್ದು ಎಂದು ಲೇಖನ ಮುಗಿಸೋಣ...
ತಲುಪುವ ಬಗೆ ಹೇಗೆ?
ಕೇರಳದ ಕಣ್ಣೂರು-ತಲಕೇರಿ ರಸ್ತೆ ಮಾರ್ಗದಲ್ಲಿ ಕಣ್ಣೂರಿನಿಂದ ಸುಮಾರು 8 ಕಿ.ಮೀ ದೂರದಲ್ಲಿ ತೊಟ್ಟದ ಎಂಬ ಸ್ಥಳವಿದೆ. ಅಲ್ಲಿ ಈ ಉರಂಬಚನ್ ದೇವಾಲಯವಿದೆ. ಇದರ ಸಮೀಪದಲ್ಲಿಯೇ ಮಾಹಿಮಾನ್ವಿತ ದೇವತಾ ಮೂರ್ತಿಯಾದ ಗಣೇಶನ ದೇವಾಲಯವಿದೆ. ಪ್ರತಿ ದಿನ ರಾತ್ರಿ ಈ ದೇವಾಲಯದ ಕಟ್ಟೆಯ ಮೇಲೆ ದೀಪಗಳನ್ನು ಬೆಳಗಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ವಿಷೇಶವಾದ ಉತ್ಸವ ಕೂಡ ಇಲ್ಲಿ ಇರುತ್ತದೆ ಎಂತೆ.