ದೇವರ ಸ್ವಂತ ನಾಡೆನಿಸಿರುವ ಕೇರಳದಲ್ಲಿ ಕೇವಲ ನೈಸರ್ಗಿಕ ಸಂಪತ್ತನ್ನು ಹೊಂದಿದ ಸ್ಥಳಗಳು ಮಾತ್ರವಲ್ಲದೆ ಇಲ್ಲಿ ಅನೇಕ ಪ್ರಾಚೀನ ಸೌಂದರ್ಯತೆಗಳು ದೇವಾಲಯಗಳು, ಅರಮನೆಗಳು ಮತ್ತು ಕೋಟೆಗಳ ರೂಪದಲ್ಲಿಯೂ ಇವೆ. ತಿರುನವಯ ದೇವಾಲಯವು ಇಂತಹ ಪ್ರಾಚೀನ ಸೌಂದರ್ಯತೆಗಳಲ್ಲಿ ಒಂದಾಗಿದ್ದು ಸಹಸ್ರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ.
1.ಪೊನ್ನಣಿ ನದಿಯ ದಡದಲ್ಲಿರುವ ದೇವಾಲಯ
PC- Ssriram mt
ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಣಿ ನದಿಯ ದಡದಲ್ಲಿ ಈ ದೇವಾಲಯವು ನೆಲೆಸಿದ್ದು ಈ ದೇವಾಲಯವು ವಿಷ್ಣು ದೇವರಿಗೆ ಸಮರ್ಪಿತವಾದುದಾಗಿದೆ. ಇಲ್ಲಿ ವಿಷ್ಣು ದೇವರನ್ನು ನವಮುಕುಂದ ಎಂಬ ರೂಪದಲ್ಲಿ ಪೂಜಿಸಲಾಗುತ್ತಿದ್ದು ದೇವರ ಪ್ರತಿಮೆಯನ್ನು ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡಲಾಗಿದೆ ಮತ್ತು ಇದನ್ನು ಒಂಬತ್ತನೇ ವಿಗ್ರಹ ಎಂದು ನಂಬಲಾಗಿದೆ. ಮೊದಲ ಎಂಟು ವಿಗ್ರಹಗಳು ಭೂಮಿಯಡಿಯಲ್ಲಿ ಮುಳುಗಿ ಹೋಗಿದ್ದು ಒಂಬತ್ತನೆ ವಿಗ್ರಹವು ಒತ್ತಾಯ ಪೂರ್ವಕವಾಗಿ ಮುಳುಗುವುದರಿಂದ ನಿಂತಿದೆ ಎಂದು ಹೇಳಲಾಗುತ್ತದೆ. ಆದುದರಿಂದ ಈ ವಿಷ್ಣುವಿನ ಒಂಬತ್ತನೆ ವಿಗ್ರಹವನ್ನು ಅಂತಿಮವಾಗಿ ಸ್ಥಾಪನೆ ಮಾಡಿ ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ. ಮಧ್ಯಕಾಲೀನ ಅವಧಿಯಲ್ಲಿ, ಈ ದೇವಾಲಯದಲ್ಲಿ ಮಾಮಾಂಕಮ್ ಉತ್ಸವವನ್ನು ಆಚರಿಸುತ್ತಿದ್ದ ಪ್ರಮುಖ ಸ್ಥಳವಾಗಿತ್ತು.
ಇದೊಂದು ವ್ಯಾಪಾರ ಮತ್ತು ಧಾರ್ಮಿಕತೆಯನ್ನು ಒಳಗೊಂಡ ಉತ್ಸವವಾಗಿದ್ದು, ಇದನ್ನು ಪ್ರತೀ 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಈ ದೇವಾಲಯವು ಕೇರಳ ರಾಜ್ಯದ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಂದು ಈ ದೇವಾಲಯವು ಹಿಂದೂ ಭಕ್ತರಿಂದ ಹೆಚ್ಚಾಗಿ ಭೇಟಿ ಕೊಡಲ್ಪಡುತ್ತದೆ ಆದುದರಿಂದ ಕೇರಳದ ಈ ದೇವಾಲಯವು ವೈಷ್ಣವರಿಗೆ ಪ್ರಮುಖ ಯಾತ್ರಿ ಸ್ಥಳವೆನಿಸಿದೆ. ಈ ದೇವಾಲಯದಲ್ಲಿ ಲಕ್ಷ್ಮಿ ದೇವಿಯು ದೇವ ಗಜೇಂದ್ರ ಹಾಗೂ ವಿಷ್ಣು ದೇವರ ಜೊತೆಗೆ ಆರಾಧಿಸಲ್ಪಡುವ ಸ್ಥಳವೆಂದು ಹೇಳಲಾಗುತ್ತದೆ. ಆದುದರಿಂದ ಇದು ಒಂದು ಪ್ರಮುಖ ಧಾರ್ಮಿಕ ಸ್ಥಳವೆಂದು ಗುರುತಿಸಲ್ಪಡುತ್ತಿದೆ.
2. ಗರ್ಭಗುಡಿಯ ರಚನೆಯ ಸೌಂದರ್ಯತೆ
PC- Ssriram mt
ದೇವಾಲಯದ ಈಗಿರುವ ವಾಸ್ತುಶಿಲ್ಪವು ರಾಜ್ಯದ ಇನ್ನಿತರ ದೇವಾಲಯಗಳಂತೆ ಸ್ಥಳೀಯ ಅಂದರೆ ಕೇರಳ ಶೈಲಿಯಲ್ಲಿದೆ. ಮಾಪಿಲ್ಲ ಬಂಡಾಯಗಾರರು ಮತ್ತು ಟಿಪ್ಪು ಸುಲ್ತಾನನ ಅನೇಕ ಆಕ್ರಮಣದ ಸಮಯದಲ್ಲಿ ಹಲವಾರು ಮೂಲ ಕಟ್ಟಡಗಳ ಜೊತೆ ಈ ದೇವಾಲಯದ ಮೂಲ ಕಟ್ಟಡವೂ ಕೆಡವಲ್ಪಟ್ಟಿದೆ. ದೇವಾಲಯದ ಸಂಕೀರ್ಣವನ್ನು ಮರ, ಗ್ರಾನೈಟ್, ಲ್ಯಾಟೈಟ್ ಮತ್ತು ಟೆರಾಕೋಟಾ ಅಂಚುಗಳಿಂದ ನಿರ್ಮಿಸಲಾಗಿದೆ ಮತ್ತು ಇದು ಆಯತಾಕಾರದ ಗೋಡೆಯಿಂದ ಸುತ್ತುವರೆದಿದೆ. ದೇವಾಲಯದ ಮುಖ್ಯ ಭಾಗಗಳನ್ನು ಕೇರಳದ ಮೂಲ ನಿವಾಸಿಗಳ ಶೈಲಿಯಲ್ಲಿ ವಾಸ್ತುಶಿಲ್ಪವನ್ನು ಮರು ನಿರ್ಮಾಣ ಮಾಡಲಾಗಿದ್ದರೂ ಕೂಡ ಪೊನ್ನಣಿ ನದಿ ದಡದಲ್ಲಿರುವ ಈ ದೇವಾಲಯವು ಕೇರಳದ ಇನ್ನಿತರ ದೇವಾಲಯಗಳಿಂದ ವಿಭಿನ್ನ ಹಾಗೂ ಪ್ರತ್ಯೇಕವಾಗಿದೆ.
ಪ್ರತೀ ವರ್ಷ ಈ ದೇವಾಲಯದಲ್ಲಿ ಭೇಟಿ ಕೊಡುವ ಸಾವಿರಾರು ಜನ ಭಕ್ತರನ್ನು ಆಕರ್ಷಿಸುವ ಪ್ರಮುಖ ಅಂಶವೆಂದರೆ ಇಲ್ಲಿಯ ಮುಖ್ಯ ದೇವರಾದ ನವಮುಕುಂದನ ವಿಗ್ರಹ. ಈ ದೇವರ ವಿಗ್ರಹವು ನೀರಿನಿಂದ ಭೂಮಿಯೊಳಗೆ ಕೊಚ್ಚಿ ಹೋಗುವುದನ್ನು ಬಲವಂತವಾಗಿ ತಡೆದು ನಿಲ್ಲಿಸುವಂತೆ ವಿಗ್ರಹವನ್ನು ಮೊಣಕಾಲಿನ ವರೆಗೆ ನೆಲದಲ್ಲಿ ಹೂಳಲಾಗಿದೆ.
3. ತಿರುನವಯ ದೇವಾಲಯದ ಮಹತ್ವ
PC- Jamstechs
ತಿರುನವಯ ದೇವಾಲಯವು ಒಂದು ಅತ್ಯಂತ ದೊಡ್ಡ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವುಳ್ಳದ್ದಾಗಿದೆ. ಪೊನ್ನಣಿ ನದಿಯ ದಂಡೆಯ ಮೇಲಿರುವ ಈ ದೇವಾಲಯವು ವೈಷ್ಣವರಿಗೆ ಪ್ರಮುಖವಾದ ಸ್ಥಳವಾಗಿದೆ ಇದನ್ನು ಕೇರಳದ ಕಾಶಿ ಎಂದು ಕೂಡಾ ಕರೆಯಲಾಗುತ್ತದೆ. ಆದುದರಿಂದ ನೀವು ಇಲ್ಲಿ ಹಲವಾರು ಜನರು ಇಲ್ಲಿ ಸತ್ತು ಹೋದ ಆತ್ಮಗಳಿಗೆ ಪ್ರಾರ್ಥನೆ ಮಾಡುತ್ತಾರೆ ಮತ್ತು ಅವರ ಬೂದಿಯನ್ನು ಪೊನ್ನಣಿ ನದಿಯ ಪವಿತ್ರ ನೀರಿನಲ್ಲಿ ಬಿಡುತ್ತಾರೆ. ಪೊನ್ನಣಿ ನದಿ ನೀರಿನಲ್ಲಿ ಸ್ನಾನ ಮಾಡಿದರೆ ಪ್ರತಿಯೊಬ್ಬರೂ ತಮ್ಮ ಪಾಪಗಳನ್ನು ಕಳೆದುಕೊಳ್ಳಬಹುದು ಎಂದೂ ಹೇಳಲಾಗುತ್ತದೆ.
4. ತಿರುನವಯ ದೇವಾಲಯಕ್ಕೆ ಭೇಟಿ ಕೊಡಲು ಉತ್ತಮ ಸಮಯ
PC- Ssriram mt
ಬೇಸಿಗೆಯಲ್ಲಿ ಬಿಸಿ ಮತ್ತು ಆರ್ದ್ರತೆಯು ಇರುವುದರಿಂದ ತಿರುನವಯ ದೇವಾಲಯಕ್ಕೆ ಬೇಸಿಗೆಯ ಸಮಯದಲ್ಲಿ ಭೇಟಿ ಕೊಡುವುದು ಸೂಕ್ತವಲ್ಲ. ನೀವು ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಆರಾಮದಾಯಕವಾಗಿ ಅನ್ವೇಷಣೆ ಮಾಡಬೇಕೆಂದಿರುವಿರಾದಲ್ಲಿ ಈ ದೇವಾಲಯಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅದು ಅಕ್ಟೋಬರ್ ತಿಂಗಳಿನಿಂದ ಏಪ್ರಿಲ್ ತಿಂಗಳ ಕೊನೆಯವರೆಗೆ.
5. ತಿರುನವಯ ದೇವಾಲಯಕ್ಕೆ ತಲುಪುವುದು ಹೇಗೆ ?
ವಾಯು ಮಾರ್ಗ: ನೀವು ಕೋಜೀಕೋಡ್ ವಿಮಾನ ನಿಲ್ದಾಣಕ್ಕೆ ನೇರವಾಗಿ ವಿಮಾನದ ಮೂಲಕ ತಲುಪಬಹುದು ನಂತರ ಅಲ್ಲಿಂದ ಒಂದು ಬಾಡಿಗೆ ಕ್ಯಾಬ್ ಮೂಲಕ ತಿರುನವಯ ದೇವಾಲಯಕ್ಕೆ ಹೋಗಬಹುದು ಇದು ನಿಲ್ದಾಣದಿಂದ ಸುಮಾರು 43ಕಿ.ಮೀ ದೂರದಲ್ಲಿದೆ.
ರೈಲು ಮೂಲಕ : ತಿರುನವಯ ದೇವಾಲಯಕ್ಕೆ ಹತ್ತಿರದಲ್ಲಿರುವ ಮುಖ್ಯ ರೈಲ್ವೇ ನಿಲ್ದಾಣವೆಂದರೆ ಅದು ತಿರೂರ್ ರೈಲ್ವೇ ನಿಲ್ದಾಣವಾಗಿದ್ದು ಇದು ಸುಮಾರು 11 ಕಿ.ಮೀ ಅಂತರದಲ್ಲಿದೆ. ನೀವು ಒಮ್ಮೆ ನಿಲ್ದಾಣಕ್ಕೆ ತಲುಪಿದ ನಂತರ ಇಲ್ಲಿಂದ ಬಾಡಿಗೆ ವಾಹನದ ಮೂಲಕ ತಿರುನವಯ ದೇವಾಲಯಕ್ಕೆ ತಲುಪಬಹುದು.
ರಸ್ತೆಯ ಮೂಲಕ: ತಿರುನವಯ ದೇವಸ್ಥಾನವನ್ನು ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಹತ್ತಿರದ ನಗರಗಳು ಅಥವಾ ಪಟ್ಟಣಗಳಿಂದ ನೇರ ಬಸ್ಸಿನ ಮೂಲಕ ಪ್ರಯಾಣ ಮಾಡಬಹುದು ಅಥವಾ ತಿರುನವಯ ದೇವಸ್ಥಾನಕ್ಕೆ ಬಾಡಿಗೆ ಕ್ಯಾಬ್ ಮೂಲಕವೂ ಪ್ರಯಾಣಿಸಬಹುದಾಗಿದೆ.