ಈಕೆ ಶಕ್ತಿ ದೇವಿಯಾದ ಪಾರ್ವತಿಯ ಅವತಾರವೆಂದೆ ಹೇಳಲಾಗುತ್ತದೆ. ಈಕೆ ನೆಲೆಸಿರುವ ಆ ಪ್ರದೇಶದ ಅಧಿ ದೇವತೆ ಹಾಗೂ ಆ ಊರನ್ನು ಕಾಯುತ್ತಾಳೆ ಎಂಬ ನಂಬಿಕೆಯಿದೆ. ಆ ಊರಿನಲ್ಲಿ ಈಕೆಗೆ ನಡೆದು ಕೊಳ್ಳುವ ಭಕ್ತರ ಸಂಖ್ಯೆ ಅಪಾರ. ಸರವರೂ ಈ ದೇವಿಯನ್ನು ಅತ್ಯಂತ ಭಕ್ತಿ-ಶೃದ್ಧೆಗಳಿಂದ ಪೂಜಿಸುತ್ತಾರೆ.
ಈ ದೇವಿಯ ಕೃಪೆ ದೊರೆತರೆ ಎಲ್ಲ ಕೆಲಸಗಳಲ್ಲಿಯೂ ಗೆಲುವು ಶತಸಿದ್ಧ ಎಂದೆ ಭಕ್ತರು ನಂಬುತ್ತಾರೆ. ಈಕೆಯೆ ವೆಕ್ಕಾಳಿ ಅಮ್ಮ. ಈಕೆ ನೆಲೆಸಿರುವ ದೇವಾಲಯವನ್ನು ವೆಕ್ಕಾಳಿ ಅಮ್ಮನವರ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯವೂ ತಮಿಳುನಾಡಿನ ತಿರುಚಿರಾಪಳ್ಳಿಯ ವರೈಯೂರು ಎಂಬಲ್ಲಿದೆ.

ಚಿತ್ರಕೃಪೆ: TRYPPN
ಈ ದೇವಾಲಯದ ಅತಿ ವಿಶಿಷ್ಟ ಅಂಶವೆಂದರೆ ಅಮ್ಮನವರು ನೆಲೆಸಿರುವ ಗರ್ಭ ಗೃಹದ ಮೇಲೆ ಯಾವುದೆ ಛಾವಣಿಯಿಲ್ಲದಿರುವುದು. ಅರೆ ಇದೇನು ಎಂಬ ಆಶ್ಚರ್ಯ ನಿಮಗಾದರೂ ಸಹ ಇದು ಸತ್ಯ. ಏಕೆಂದರೆ ಯಾವ ರೀತಿಯ ಛಾವಣಿ ಕಟ್ಟಿದರೂ ಸಹ ಅದು ಉಳಿಯುವುದಿಲ್ಲವೆಂಬ ನಂಬಿಕೆಯಿದೆ. ಇದಕ್ಕೆ ಮುಖ್ಯ ಕಾರಣ ಈ ದೇವಿಯು ಪ್ರವಹಿಸುವ ಅಪಾರವಾದ ಶಕ್ತಿ ಎನ್ನಲಾಗಿದೆ.
ಹೌದು, ಸಮಾನ್ಯವಾಗಿ ಎಲ್ಲ ಶಕ್ತಿ ದೇವಾಲಯಗಳಲ್ಲಿ ದೇವಿಯು ನೆಲೆಸಿರುವ ಭಂಗಿ ಒಂದೆಯಾಗಿ ಕಂಡುಬರುತ್ತದೆ. ಆದರೆ ಇಲ್ಲಿ ವೆಕ್ಕಾಳಿ ಅಮ್ಮನವರು ವಿಶಿಷ್ಟವಾದ ಭಂಗಿಯಲ್ಲಿ ನಿಂತಿದ್ದಾಳೆ. ತನ್ನ ಬಲಗಾಲಿನಿಂದ ರಾಕ್ಷಸನನ್ನು ತುಳಿದು ನಿಂತಿರುವ ಭಂಗಿ ವಿಶೇಷವಾಗಿದೆ.

ಚಿತ್ರಕೃಪೆ: TRYPPN
ಅಲ್ಲದೆ, ಹಿಂದು ಪೌರಾಣಿಕತೆಯ ಪ್ರಕಾರ, ಈ ರೀತಿಯ ಭಂಗಿಯಲ್ಲಿ ನಿಂತಾಗ ಸಾಕಷ್ಟು ಶಕ್ತಿಯು ಬೇಕಾಗುತ್ತದೆಂದು ವಿವರಿಸಲಾಗಿದೆ. ನಟರಾಜನು ನೃತ್ಯ ಮಾಡುತ್ತ ತನ್ನ ಕಾಲುಗಳ ಪಥವನ್ನು ಬದಲಿಸಿದಾಗ ಈ ದೇವಿಯು ಭೂಸ್ಥಿರತೆಯನ್ನು ಕಾಪಾಡುವ ಉದ್ದೇಶದಿಂದ ಹೆಚ್ಚು ಶಕ್ತಿಯು ಉದ್ಭವಿಸುವ ಭಂಗಿಯಲ್ಲಿ ನಿಂತಿರುವಳೆಂದು ಹೇಳಲಾಗುತ್ತದೆ.
ಹಾಗಾಗಿ ಆಕೆ ನಿಂತ ಸ್ಥಳದಲ್ಲಿ ಶಕ್ತಿಯ ಅಪಾರ ಸಂಗ್ರಹವಿರುವುದರಿಂದ ಮೇಲೆ ಕಟ್ಟಲಾಗುವ ಯಾವ ಛಾವಣಿಯು ಅದನ್ನು ತಡೆಯಲಾಗದೆ ಮುರಿದು ಬೀಳುತ್ತವೆಂದು ನಂಬಲಾಗಿದೆ. ಇದಕ್ಕೆ ಪೂರಕವೆಂಬಂತೆ ಬಹು ಹಿಂದೆ ಅನೇಕ ಬಾರಿ ಇಲ್ಲಿನ ಗರ್ಭಗೃಹದ ಮೇಲೆ ಛಾವಣಿ ನಿರ್ಮಿಸಿದರೂ ಅವು ಉಳಿಯಲಾಗಲಿಲ್ಲವಂತೆ!

ಚಿತ್ರಕೃಪೆ: TRYPPN
ಹಾಗಾಗಿ ಇಲ್ಲಿನ ದೇವಾಲಯದ ಗರ್ಭಗೃಹದ ಮೇಲೆ ಇಂದಿಗೂ ಯಾವ ಛಾವಣಿಯೂ ಇಲ್ಲದಿರುವುದನ್ನು ಗಮನಿಸಬಹುದು. ಅಲ್ಲದೆ ಇನ್ನೊಂದು ವಿಶೇಷತೆ ಏನೆಂದರೆ ಈ ದೇವಾಲಯವು ಉತ್ತರಕ್ಕೆ ಮುಖ ಮಾಡಿರುವುದು. ಈ ರೀತಿಯ ದೇವಿಯ ದೇವಾಲಯವು ಉತ್ತರ ದಿಕ್ಕಿಗೆ ಮುಖ ಮಾಡಿರುವುದರಿಂದ ಜಯದ ನಿಶ್ಚಿತತೆ ಇರುತ್ತದೆಂದು ಭಾವಿಸಲಾಗಿದೆ.
ಹಿಂದೆ ಚೋಳರ ಕಾಲದಲ್ಲಿಯೆ ನಿರ್ಮಿತವಾದ ದೇವಾಲಯ ಇದಾಗಿದೆ ಎಂದು ನಂಬಲಾಗಿದ್ದರೂ ಅದಕ್ಕೆ ಸಂಬಂಧಿಸಿದಂತೆ ಯಾವುದೆ ಅಧಿಕೃತ ಮಾಹಿತಿಯ ದಾಖಲೆಗಳಿಲ್ಲ. ಅಲ್ಲದೆ ಚೋಳರು ತಾವು ಮಾಡುತ್ತಿದ್ದ ಪ್ರತಿ ಕದನಕ್ಕಿಂತ ಮುಂಚೆ ಈ ದೇವಿಯ ದರ್ಶನ ಪಡೆದುಕೊಂಡು ವಿಜಯ ಸಾಧಿಸುತ್ತಿದ್ದರಂತೆ.

ಚಿತ್ರಕೃಪೆ: TRYPPN
ಹಾಗಾಗಿ ಇಂದಿಗೂ ಅನೇಕ ಜನ ಭಕ್ತರು ತಮ್ಮ ತಮ್ಮ ಕಾರ್ಯಗಳಲ್ಲಿ ವಿಜಯಲಕ್ಷ್ಮಿ ಒಲಿಯಲೆಂದು ಬಯಸಿ ಈ ದೇವಿಯ ದರ್ಶನ ಪಡೆಯ ಬಯಸುತ್ತಾರೆ. ಈ ರೀತಿಯಾಗಿ ಈ ಶಕ್ತಿ ದೇವತೆಯು ಇಡಿ ತಿರುಚಿರಾಪಳ್ಳಿಯಲ್ಲೆ ಸಾಕಷ್ಟು ಪ್ರಸಿದ್ಧತೆಗಳಿಸಿದ ಶಕ್ತಿ ದೇವತೆಯಾಗಿ ಧಾರ್ಮಿಕಾಸಕ್ತರ, ಪ್ರವಾಸಿಗರ ಗಮನ ಸೆಳೆಯುತ್ತಾಳೆ.
ಇನ್ನೂ ದೇವಾಲಯಕ್ಕೆ ಸಂಬಂಧಿಸಿದಂತೆ ದೇವಿಗೆ ಪ್ರತಿ ಆರು ಬಾರಿ ವಿವಿಧ ಪೂಜೆಗಳನ್ನು ನೆರವೇರಿಸಲಾಗುತ್ತದೆ. ಅಲ್ಲದೆ ವಾರ್ಷಿಕವಾಗಿ ಆರು ಬಾರಿ ಈ ದೇವಿಯ ವಿವಿಧ ಉತ್ಸವಗಳನ್ನು ಬಲು ಅದ್ದೂರಿಯಾಗಿ ಆಚರಿಸಲಾಗುತ್ತದೆ. ದೇವಾಲಯವು ಬಂಗಾರದ ರಥವನ್ನು ಹೊಂದಿದೆ ಹಾಗೂ ದೇವಿಯ ಉತ್ಸವ ಮೂರ್ತಿಯನ್ನು ಇದರಲ್ಲಿ ಮೆರವಣಿಗೆಗೆ ಒಯ್ಯಲಾಗುತ್ತದೆ.

ಚಿತ್ರಕೃಪೆ: TRYPPN
ತಿರುಚಿರಪಾಳ್ಳಿಯು ಬೆಂಗಳೂರಿನಿಂದ 350 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಬೆಂಗಳೂರಿನಿಂದ ರೈಲು ಲಭ್ಯವಿದೆ. ಅಲ್ಲದೆ ವೆಕ್ಕಾಳಿಅಮ್ಮನವರ ದೇವಾಲಯವಿರುವ ವರೈಯೂರು ತಿರುಚಿರಾಪಳ್ಳಿಯಿಂದ ಹನ್ನೊಂದು ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬಸ್ಸುಗಳು ಹಾಗೂ ರಿಕ್ಷಾಗಳು ದೊರೆಯುತ್ತವೆ.
ಸ್ತ್ರೀಶಕ್ತಿಗೆ ಮುಡಿಪಾಗಿರುವ ಕರ್ನಾಟಕದ ಸುಂದರ ದೇವಾಲಯಗಳು
ದ.ಭಾರತದಲ್ಲಿ ತೀರ್ಥಯಾತ್ರೆ ಮಾಡಬಹುದಾದ ಕ್ಷೇತ್ರಗಳು


Click it and Unblock the Notifications















