ಜ್ಯೊತಿಷ್ಯದ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಜೀವನವು ಅವನ ಗೃಹ ಗತಿಗಳ ಮೇಲೆ ಅವಲಂಬಿತವಾಗಿರುತ್ತದೆ. 9 ಗೃಹಗಳು ತಮ್ಮದೆ ಆದ ವಿಶೀಷ್ಟ ಪ್ರಭಾವವನ್ನು ಬೀರುವುದರಿಂದ ಮನುಷ್ಯ ಯಶಸ್ಸು ಹಾಗು ಸೋಲುಗಳನ್ನು ಕಾಣುತ್ತಿರುತ್ತಾನೆ. ಆದಷ್ಟು ಅಡೆ ತಡೇಗಳಿರಲಾರದೆ ಸಂತಸದ ಜೀವನ ಸಾಗಿಸಲು ನವಗ್ರಹ ಶಾಂತಿಯನ್ನು ಮಾಡಿಸುತ್ತಿರುತ್ತಾರೆ. ನವಗ್ರಹ ದೇವಸ್ಥಾನವನ್ನು ಪ್ರತಿಯೊಂದು ದೇವಾಲಯದಲ್ಲಿ ಸಾಮಾನ್ಯವಾಗಿ ಕಾಣಬಹುದು. ಆದರೆ ಪ್ರತಿಯೊಂದು ಗೃಹಕ್ಕೂ ಪ್ರತ್ಯೇಕವಾಗಿ ಮೀಸಲಾದ, ತಮ್ಮದೆ ಆದ ಪ್ರಭಾವವುಳ್ಳ ನವಗ್ರಹ ದೇವಸ್ಥಾನಗಳು ಕಂಡುಬರುವುದು ತಮಿಳು ನಾಡಿನ ವಿವಿಧ ಪ್ರದೇಶದಲ್ಲಿ.
ಆ ಒಂಬತ್ತು ತಾಣಗಳೆಂದರೆ ತಿಂಗಳೂರು (ಚಂದ್ರ), ಅಲಂಗುಡಿ (ಗುರು), ತಿರುನಾಗೇಶ್ವರಂ (ರಾಹು), ಸೂರಿಯಾನರ್ ಕೋವಿಲ್ (ಸೂರ್ಯ), ಕಂಜನೂರ್ (ಶುಕ್ರ), ವೈತೀಶ್ವರನ್ ಕೋವಿಲ್ (ಮಂಗಳ), ತಿರುವೆಂಕಾಡು (ಬುಧ), ಕೀಳ್ಪೆರುಂಪಳ್ಳಂ (ಕೇತು), ತಿರುನಳ್ಳಾರ್ (ಶನಿ).
ಈ ಒಂಭತ್ತು ಗೃಹ ತಾಣಗಳ ಒಂದು ಕ್ರಮಬದ್ಧವಾದ ಪ್ರವಾಸ ಲೇಖನ ನಿಮ್ಮ ಅನುಕೂಲಕ್ಕಾಗಿ.
ಕುಂಭಕೋಣಂ ಪಟ್ಟಣವು ಒಂಬತ್ತು ನವಗ್ರಹಗಳ ತಾಣಗಳ ಪೈಕಿ ನಾಲ್ಕು ತಾಣಗಳಿಗೆ ಹತ್ತಿರವಿರುವುದರಿಂದ ಮೊದಲು ಅದನ್ನು ಆಧಾರ ತಾಣವನ್ನಾಗಿ ಮಾಡಿಕೊಳ್ಳಿ.
ತಿಂಗಳೂರು (ಚಂದ್ರ):
ಮೊದಲಿಗೆ ಪ್ರಯಾಣವನ್ನು ಕುಂಭಕೋಣಂ ನಿಂದ ಪ್ರಾರಂಭಿಸಿ ಸ್ವಾಮಿ ಮಲೈ ಮೂಲಕ ಚಂದ್ರನಿಗೆ ಮೀಸಲಾದ ತಿಂಗಳೂರಿಗೆ ತಲುಪಬೇಕು. ಒಟ್ಟು ಪ್ರಯಾಣ ದೂರ ಸುಮಾರು 35 ಕಿ.ಮೀ ಗಳಷ್ಟು. ಈ ದೇವಸ್ಥಾನದಲ್ಲಿ ಸೋಮ ಅಥವಾ ಚಂದ್ರ ಅಧಿ ದೇವತೆಯಾದರೂ ಕೈಲಾಸನಾಥರ್ ಅಥವಾ ಶಿವನ ವಿಗ್ರಹವನ್ನು ಕಾಣಬಹುದು. ಮೊದಲನೇಯ ಗೃಹ ದರುಶನ ಪಡೆದು ಇಲ್ಲಿಂದ ಮತ್ತೆ ಕುಂಭಕೋಣಂಗೆ ಬರಬೇಕು.
ಅಲಂಗುಡಿ
ಎರಡನೇಯ ತಾಣವಾದ ಅಲಂಗುಡಿಗೆ ನೀಡಮಂಗಳಂ ಮಾರ್ಗವಾಗಿ ತೆರಳಬೇಕು. ಇದು ಕುಂಭಕೋಣಂ ನಿಂದ ಸುಮಾರು 17 ಕಿ.ಮೀ ದೂರದಲ್ಲಿದೆ. ಅಲಂಗುಡಿಯು ಗುರು ಗೃಹಕ್ಕೆ ಮೀಸಲಾದ ದೇವಾಲಯವನ್ನು ಹೊಂದಿದೆ. ಇಲ್ಲಿರುವ ದೇವಾಲಯ ಆಪತ್ಸಹಾಯೇಶ್ವರರ್ ದೇವಾಲಯ ಅಥವಾ ಗುರು ಸ್ಥಳಂ. ಗುರುವಿನ ದರುಶನವನ್ನು ಮಾಡಿ ಇಲ್ಲಿಂದ ಮತ್ತೆ ಕುಂಭಕೋಣಂಗೆ ಮರಳಬೇಕು.
ತಿರುನಾಗೇಶ್ವರಂ (ರಾಹು):
ಮೂರನೇಯ ತಾಣವಾದ ತಿರುನಾಗೇಶ್ವರಂಗೆ ಕೊಲ್ಲುಮಂಗುಡಿ ಮಾರ್ಗವಾಗಿ ತೆರಳಬೇಕು. ಇದು ಕುಂಭಕೋಣಂ ನಿಂದ ಪೂರ್ವ ದಿಕ್ಕಿಗೆ ಕೇವಲ 6 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ರಾಹುವಿಗೆ ಮೀಸಲಾದ ದೇವಸ್ಥಾನ. ದೇವಸ್ಥಾನವು ದೊಡ್ಡದಾಗಿದ್ದು, ದರುಶನಕ್ಕೆ 30 ನಿಮಿಷಗಳ ಸಮಯ ತಗುಲಬಹುದು. ಇಲ್ಲಿಂದ ಮತ್ತೆ ಕುಂಭಕೋಣಂಗೆ ಮರಳಬೇಕು.
ಸೂರಿಯಾನರ್ ಕೋವಿಲ್ (ಸೂರ್ಯ):
ನಾಲ್ಕನೇಯ ತಾಣವಾದ ಸೂರಿಯಾನರ್ ಕೋವಿಲ್ ಗೆ ತೆರಳಬೇಕು. ಇದು ಕುಂಭಕೋಣಂ ನ ಉತ್ತರ ದಿಕ್ಕಿಗೆ 15 ಕಿ.ಮೀ ದೂರದಲ್ಲಿದೆ. ತಂಜಾವೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನವು ಸೂರ್ಯನಿಗೆ ಸಮರ್ಪಿತವಾಗಿದೆ. ದೇವಸ್ಥಾನದಲ್ಲಿ ದರುಶನ ಪಡೆದು ಇಲ್ಲಿಂದ ಐದನೇಯ ತಾಣವಾದ ಕಂಜನೂರಿಗೆ ತೆರಳಬೇಕು. ಇದು ಇಲ್ಲಿಂದ ಕೇವಲ 3 ಕಿ.ಮೀ ಅಂತರದಲ್ಲಿ ನೆಲೆಸಿದೆ.
ಕಂಜನೂರ್ (ಶುಕ್ರ):
ಸೂರಿಯಾನರ್ ನಿಂದ ಆಗ್ನೇಯ ದಿಕ್ಕಿಗೆ ಕಂಜನೂರ್ ಕೇವಲ 3 ಕಿ.ಮೀ ದೂರದಲ್ಲಿದ್ದು, ಶುಕ್ರನಿಗೆ ಮೀಸಲಾದ ದೇವಾಲಯ ಇದಾಗಿದೆ. ಇಲ್ಲಿ ಅಗ್ನೀಶ್ವರರ್ ಅಥವಾ ಶಿವನ ಮೂರ್ತಿಯಿದ್ದು ಪ್ರಧಾನ ದೇವತೆ ಶುಕ್ರವಾಗಿದೆ. ದರುಶನ ಪಡೆದು ನೇರವಾಗಿ ಇಲ್ಲಿಂದ ದಕ್ಷಿಣ ದಿಕ್ಕಿಗೆ ಸುಮಾರು 20 ಕಿ.ಮೀ ದೂರದಲ್ಲಿರುವ ಮೈಲಾಡುತುರೈಗೆ ಬರಬೇಕು.
ವೈತೀಶ್ವರನ್ ಕೋವಿಲ್ (ಮಂಗಳ)
ಸಮಯಾವಕಾಶವಿದ್ದರೆ ಮೈಲಾಡುತುರೈನಲ್ಲಿ ಸ್ವಲ್ಪ ವಿರಮಿಸಿ ನಂತರ ಆರನೇಯ ತಾಣವಾದ ವೈತೀಶ್ವರನ್ ಕೋವಿಲ್ ಗೆ ಸಿರ್ಕಾಳಿ ಮಾರ್ಗವಾಗಿ ತೆರಳಬೇಕು. ಇದು ಮೈಲಾಡುತುರೈನಿಂದ ಕೇವಲ 13 ಕಿ.ಮೀ ದೂರದಲ್ಲಿದೆ. ಈ ದೇವಾಲಯವನ್ನು ಮಂಗಳ ಗೃಹಕ್ಕೆ ಸಮರ್ಪಿಸಲಾಗಿದೆ.
ತಿರುವೆಂಕಾಡು (ಬುಧ):
ವೈತೀಶ್ವರನ್ ಕೋವಿಲ್ ನಿಂದ 5 ಕಿ.ಮೀ ದೂರದಲ್ಲಿರುವ ಸಿರ್ಕಾಳಿಗೆ ತೆರಳಿ ಅಲ್ಲಿಂದ ಆಗ್ನೇಯ ದಿಕ್ಕಿಗೆ 10 ಕಿ.ಮೀ ಚಲಿಸಿ ಏಳನೇಯ ತಾಣವಾದ ತಿರುವೆಂಕಾಡುಗೆ ತಲುಪಬೇಕು. ಬುಧ ಗೃಹಕ್ಕೆ ಸಮರ್ಪಿತವಾದ ಈ ದೇವಾಲಯದ ಆರಾಧಿಸಲ್ಪಡುವ ದೇವತೆ ಶ್ವೇತನಾರಾಯಣೇಶ್ವರರ್. ಬುಧನಿಗೆ ಪ್ರತ್ಯೇಕವಾಗಿರುವ ಸನ್ನಿಧಿಯನ್ನು ಈ ದೇವಾಲಯದಲ್ಲಿ ಕಾಣಬಹುದು.
ಕಿಳ್ಪೆರುಂಪಳ್ಳಂ (ಕೇತು):
ಬುಧನ ದರುಶನದ ನಂತರ ತಿರುವೆಂಕಾಡುವಿನಿಂದ ನೈರುತ್ಯ ದಿಕ್ಕಿಗೆ ಧರ್ಮಕುಲಂ ಮುಖಾಂತರ 8 ಕಿ.ಮೀ ಚಲಿಸಿ ಎಂಟನೇಯ ತಾಣವಾದ ಕಿಳ್ಪೆರುಂಪಳ್ಳಂ ಗೆ ತೆರಳಬೇಕು. ಕೇತುವಿಗೆ ಸಮರ್ಪಿತವಾದ ದೇವಾಲಯ ಇದಾಗಿದೆ. ಇದನ್ನು ನಾಗನಾಥ ಸ್ವಾಮಿ ದೇವಾಲಯ ಅಥವಾ ಕೇತು ಸ್ಥಳಂ ಎಂದು ಕರೆಯುತ್ತಾರೆ. ಇದು ಮತ್ತೊಂದು ಪ್ರಸಿದ್ಧ ಸ್ಥಳ ಪೂಂಪುಹಾರ್ ನಿಂದ ಕೇವಲ 2 ಕಿ.ಮೀ ದೂರದಲ್ಲಿದೆ.
ತಿರುನಳ್ಳಾರ್ (ಶನಿ):
ಕೇತುವಿನ ದರುಶನ ಪಡೆದು ನಂತರ ಕಿಳ್ಪೆರುಂಪಳ್ಳಂ ನಿಂದ ದಕ್ಷಿಣ ದಿಕ್ಕಿಗೆ ಸುಮಾರು 35 ಕಿ.ಮೀ ಚಲಿಸಿ ಪಾಂಡಿಚೆರಿಯ ಕಾರೈಕಾಲ್ ಗೆ ತೆರಳಬೇಕು. ಇಲ್ಲಿಂದ ಉತ್ತರ ದಿಕ್ಕಿಗೆ 6 ಕಿ.ಮೀ ಪಯಣಿಸಿದಾಗ ಒಂಬತ್ತನೇಯ ಗೃಹ ತಾಣವಾದ ತಿರುನಳ್ಳಾರ್ ಗೆ ತೆರಳಬೇಕು. ಇದು ನವಗ್ರಹಗಳಲ್ಲಿ ಪ್ರಭಾವಶಾಲಿಯಾದ ಶನಿ ಗೃಹಕ್ಕೆ ಸಂಭಂದಿಸಿದ ದೇವಾಲಯವಾಗಿದೆ. ಇಲ್ಲಿರುವ ದೇವಾಲಯವನ್ನು ದರ್ಬಾರಣ್ಯೇಶ್ವರ ದೇವಾಲಯ ಅಥವಾ ತಿರುನಳ್ಳಾರ್ ಶನೀಶ್ವರಂ ದೇವಾಲಯ ಎಂದು ಕರೆಯುತ್ತಾರೆ.
ಇಲ್ಲಿಗೆ ನವಗ್ರಹಗಳ ಪ್ರವಾಸ ಸಂಪೂರ್ಣವಾಗುತ್ತದೆ.