ಭಾರತ ದೇಶದಲ್ಲಿ ದೇವಾಲಯಗಳ ಸಂಖ್ಯೆ ಹೆಚ್ಚಿದ್ದು, ಬಹುತೇಕ ದೇವಾಲಯಗಳು ತಮ್ಮ ವಿಶೇಷತೆಗಾಗಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ನಂಬಿಕೆಯನ್ನು ಹೊಂದಿದೆ. ಆ ನಂಬಿಕೆ ಕೇಳಿದ ಜನರು ಬೆರಗಾಗುವುದು ಸಹಜ. ಇಂತಹ ಒಂದು ವಿಶಿಷ್ಟವಾದ ನಂಬಿಕೆಯುಳ್ಳ ದೇವಾಲಯವು ಉತ್ತರಾಖಂಡದಲ್ಲಿ ಅಸ್ತಿತ್ವದಲ್ಲಿದೆ. ಉತ್ತರಾಖಂಡವು ನಿಗೂಢ ಮತ್ತು ಆಕರ್ಷಣೆಯಿಂದ ತುಂಬಿರುವ ಧಾರ್ಮಿಕ ಸ್ಥಳಗಳನ್ನು ಹೊಂದಿರುವ ದೇವ ಭೂಮಿ ಎಂದು ಕೂಡ ಕರೆಯಲ್ಪಡುತ್ತದೆ. ಅಂತಹ ಒಂದು ನಿಗೂಢ ದೇವಾಲಯವು ಉತ್ತರಾಖಂಡದಲ್ಲಿದ್ದು, ಇಲ್ಲಿ ಯಾವುದೇ ಭಕ್ತರನ್ನು ಸ್ತ್ರೀ ಆಗಿರಬಹುದು ಅಥವಾ ಪುರುಷ ಆಗಿರಬಹುದು ದೇವಾಲಯದ ಒಳಗೆ ಅನುಮತಿಸಲಾಗುವುದಿಲ್ಲ.
ಹಾಗಾದರೆ ದೇವಸ್ಥಾನದಲ್ಲಿ ದೇವರನ್ನು ಹೇಗೆ ಪೂಜಿಸಲಾಗುತ್ತದೆ ಎಂದು ನೀವು ಯೋಚಿಸುತ್ತಿರಬೇಕು. ವಿಶೇಷವೆಂದರೆ ಇಲ್ಲಿ ಭಕ್ತರಿಗೆ ಮಾತ್ರವಲ್ಲದೆ ದೇವಾಲಯದ ಅರ್ಚಕರಿಗೂ ದೇವರ ದರ್ಶನಕ್ಕೆ ಅವಕಾಶವಿಲ್ಲ. ಅರ್ಚಕರೂ ಸಹ ಕಣ್ಣುಮುಚ್ಚಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ. ಇಲ್ಲಿ ಅವರನ್ನು ಹೊರತುಪಡಿಸಿ ಯಾರೂ ಪ್ರವೇಶಿಸುವಂತಿಲ್ಲ. ದೂರದ ಪ್ರದೇಶಗಳಿಂದ ಸಹ ಜನರು ಈ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಬನ್ನಿ, ಈ ದೇವಾಲಯದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ...

ವಾನ್ ಎಂಬ ಸ್ಥಳದಲ್ಲಿದೆ ದೇವಾಲಯ
ಈ ದೇವಾಲಯವು ಉತ್ತರಾಖಂಡದ ಚಮೋಲಿ ಜಿಲ್ಲೆಯ ದೇವಲ್ ಎಂಬ ಬ್ಲಾಕ್ನಲ್ಲಿರುವ ವಾನ್ ಎಂಬ ಸ್ಥಳದಲ್ಲಿದೆ. ಈ ಸ್ಥಳದಲ್ಲಿ ಲಾತು ದೇವರನ್ನು ಪೂಜಿಸಲಾಗುತ್ತದೆ, ಉತ್ತರಾಖಂಡದಲ್ಲಿ ಇದನ್ನು ದೇವಸ್ಥಳ್ ಲಾತು ಮಂದಿರ ಎಂದು ಕರೆಯಲಾಗುತ್ತದೆ. ಇಲ್ಲಿನ ಸ್ಥಳೀಯ ಜನರು, ಪುರಾಣಗಳ ಪ್ರಕಾರ, ಉತ್ತರಾಖಂಡದ ಪ್ರಧಾನ ದೇವತೆಯಾದ ನಂದಾದೇವಿಯ ಸಹೋದರನೆಂದು ನಂಬಲಾದ ಲಾತು ದೇವರಿಗೆ ಈ ಸ್ಥಳವನ್ನು ಸಮರ್ಪಿಸಲಾಗಿದೆ. ಗ್ರಾಮಸ್ಥರು ಲಾತು ದೇವರನ್ನು ತಮ್ಮ ಪ್ರಧಾನ ದೇವರೆಂದು ಪರಿಗಣಿಸುತ್ತಾರೆ. ಭಕ್ತನು ಶುದ್ಧ ಹೃದಯದಿಂದ ಬಯಸಿದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಅವರು ನಂಬುತ್ತಾರೆ. ಲಾತು ದೇವತಾ ದೇವಾಲಯವು ಬೆಳಗ್ಗೆ 8:00 ರಿಂದ ಸಂಜೆ 06:00 ರವೆರೆಗೆ ತೆರೆದಿರುತ್ತದೆ.

ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ
ದೇವಸ್ಥಾನದ ದ್ವಾರಗಳನ್ನು ವರ್ಷಕ್ಕೊಮ್ಮೆ ಮಾತ್ರ ತೆರೆಯಲಾಗುತ್ತದೆ. ವೈಶಾಖ ಮಾಸದ ಹುಣ್ಣಿಮೆಯಂದು ದೇವಾಲಯದ ದ್ವಾರ ತೆರೆಯುತ್ತದೆ. ಈ ದಿನದಂದು ದೇವಾಲಯದ ಅರ್ಚಕರೂ ಸಹ ದೇವರ ಅಸಾಧಾರಣ ರೂಪದಿಂದ ಭಯಪಡದಂತೆ ಕಣ್ಣು ಮತ್ತು ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ದೇವರನ್ನು ಪೂಜಿಸುತ್ತಾರೆ. ಭಕ್ತರು ದೂರದಿಂದಲೇ ದೇವರ ದರ್ಶನ ಮಾಡುತ್ತಾರೆ. ದೇವಾಲಯದ ದ್ವಾರಗಳು ತೆರೆದ ನಂತರ, ವಿಷ್ಣು ಸಹಸ್ರನಾಮ ಮತ್ತು ಭಗವತಿ ಚಂಡಿಕಾ 'ಪಥ' (ಪ್ರಾರ್ಥನೆಗಳು) ಮಾಡಲಾಗುತ್ತದೆ. ಮಾರ್ಗಶೀಶ ಅಮವಾಸ್ಯೆಯಂದು ದೇವಾಲಯದ ದ್ವಾರಗಳನ್ನು ಮುಚ್ಚಲಾಗುತ್ತದೆ.

ನಾಗಮಣಿಯೊಂದಿಗೆ ನಾಗರಾಜ
ಸಾಮಾನ್ಯ ಜನರಿಗೆ ಪ್ರವೇಶಿಸಲು ಸಾಧ್ಯವಾಗದ ಈ ದೇವಾಲಯದಲ್ಲಿ ನಾಗರಾಜ (ಹಿಂದೂ ಪುರಾಣಗಳಲ್ಲಿ ಸರ್ಪ ರಾಜ) ಅಮೂಲ್ಯವಾದ ರತ್ನದೊಂದಿಗೆ ನೈಜ ರೂಪದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಇದನ್ನು 'ನಾಗ ಮಣಿ' ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ಇದನ್ನು ಸಾಮಾನ್ಯ ಜನರು ನೋಡುವುದಕ್ಕೆ ಬರುವುದಿಲ್ಲ. ಒಂದು ವೇಳೆ ಜನರು ಮಣಿಯನ್ನು ನೋಡಿದರೆ, ಅದರ ಬೆರಗುಗೊಳಿಸುವ ಬೆಳಕಿನಿಂದ ದೃಷ್ಟಿ ಕಳೆದುಕೊಳ್ಳುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ. ಹಾಗೆಯೇ ನಾಗರಾಜನ ವಿಷಕಾರಿ ವಾಸನೆಯು ದೇವಾಲಯದ ಆವರಣವನ್ನು ಪ್ರವೇಶಿಸುವವರನ್ನು ಕೊಲ್ಲುತ್ತದೆ.
ಪುರೋಹಿತರು ಸಹ ನಾಗರಾಜನ ರೂಪವನ್ನು ನೋಡುವುದಿಲ್ಲ. ಅವರು ಕಣ್ಣುಮುಚ್ಚಿ ಬಾಗಿಲು ತೆರೆದು ಪೂಜೆ ಮಾಡುತ್ತಾರೆ. ಅಷ್ಟೇ ಅಲ್ಲ, ತಮ್ಮ ಬಾಯಿಯ ವಾಸನೆ ದೇವರಿಗೆ ಬಾರದಂತೆ ಅಥವಾ ನಾಗರಾಜನ ವಿಷದ ವಾಸನೆ ಪೂಜಾರಿಯ ಮೂಗಿಗೆ ಬರದಂತೆ ಬಾಯಿಗೆ ಬಟ್ಟೆ ಕಟ್ಟುತ್ತಾರೆ. ಭಕ್ತರು ದೇವಾಲಯದ ಬಾಗಿಲಿನಿಂದ 75 ಅಡಿ ದೂರದಲ್ಲಿ ತಮ್ಮ ಕಾಣಿಕೆಗಳನ್ನು ನೀಡಬಹುದು.

ದೇವಸ್ಥಾನದಲ್ಲಿ ಜಾತ್ರೆ ಆಯೋಜನೆ
ಪ್ರತಿ 12 ವರ್ಷಗಳಿಗೊಮ್ಮೆ ಶ್ರೀ ನಂದಾದೇವಿಯ ಪವಿತ್ರ ಮೆರವಣಿಗೆಯನ್ನು ಇಲ್ಲಿ ನಡೆಸಲಾಗುತ್ತದೆ. ದಂತಕಥೆಯ ಪ್ರಕಾರ, ಹೇಮಕುಂಡದವರೆಗೆ ನಡೆಸುವ ಈ ಮೆರವಣಿಗೆಯಲ್ಲಿ ಲಾತು ದೇವರು ನಂದಾದೇವಿಯನ್ನು ಸ್ವಾಗತಿಸುತ್ತಾನೆ ಎಂದು ಪುರಾಣ ಹೇಳುತ್ತದೆ. ಪ್ರತಿ ವರ್ಷ, ಲಾತು ದೇವತಾ ದೇವಸ್ಥಾನದಲ್ಲಿ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಉತ್ತರಾಖಂಡದ ಈ ನಿಗೂಢ ದೇವಾಲಯಕ್ಕೆ ಜನರು ತಮ್ಮ ಇಚ್ಛೆಯೊಂದಿಗೆ ಬರುತ್ತಾರೆ. ಇಲ್ಲಿ ಬಯಸಿದ ಬಯಕೆಗಳು ಖಂಡಿತವಾಗಿಯೂ ಈಡೇರುತ್ತವೆ ಎಂದು ಹೇಳಲಾಗುತ್ತದೆ.

ದೇವಾಲಯಕ್ಕೆ ತೆರಳುವುದು ಹೇಗೆ?
ನೀವು ದೆಹಲಿಯಿಂದ ಪ್ರಯಾಣಿಸುತ್ತಿದ್ದರೆ, ಚಮೋಲಿ ಸುಮಾರು 465 ಕಿಮೀ ದೂರವಿದೆ. ಬಸ್ಸು ನಿಮ್ಮನ್ನು ಋಷಿಕೇಶದ ಮೂಲಕ ಚಮೋಲಿಗೆ ಕರೆದೊಯ್ಯುತ್ತದೆ. ಮತ್ತೊಂದೆಡೆ, ವಿಮಾನದಲ್ಲಿ ಪ್ರಯಾಣ ಮಾಡುವವರು ದೆಹಲಿಯಿಂದ ಪಂತನಗರ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ನಂತರ, ಬಸ್ ಅಥವಾ ಟ್ಯಾಕ್ಸಿ ಸಹಾಯದಿಂದ ಚಮೋಲಿಯನ್ನು ತಲುಪಬಹುದು. ರೈಲಿನಲ್ಲಿ ಹರಿದ್ವಾರ ಅಥವಾ ಋಷಿಕೇಶ ರೈಲು ನಿಲ್ದಾಣಕ್ಕೆ ಹೋದ ನಂತರ, ನೀವು ಬಸ್ಸಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ಲಾತು ದೇವರ ದೇವಾಲಯವು ಚಮೋಲಿಯಿಂದ 27 ಕಿಮೀ ದೂರದಲ್ಲಿದೆ. ನೀವು ಸ್ಥಳೀಯ ದೇವಾಲಯಗಳ ದೇವರ ದರ್ಶನ ಪಡೆಯುತ್ತಾ ಇಲ್ಲಿಗೆ ತಲುಪಬಹುದು.


Click it and Unblock the Notifications
















