ದಶೇರಾ ಅಥವಾ ದಸರಾ ಎಂದು ಕರೆಯಲಾಗುವ ಈ ವೈಭವೋಪೇತವಾದ ಹಬ್ಬವನ್ನು ಭಾರತದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ
ಅದೇ ರೀತಿ ಕುಲುವಿನಲ್ಲಿಯೂ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಬೇರೆ ಕಡೆಗಿಂತ ಸ್ವಲ್ಪ ಭಿನ್ನ ವಾಗಿ ಆಚರಿಸಲಾಗುತ್ತದೆ. ಬೇರೆಲ್ಲಾ ಕಡೆ ಹತ್ತನೆ ದಿವಸ ಅಂದರೆ ವಿಜಯದಶಮಿಯಂದು ಈ ಹಬ್ಬವು ಕೊನೆಗೊಂಡರೆ ಕುಲ್ಲುವಿನಲ್ಲಿ ಈ ಹಬ್ಬವು ಪ್ರಾರಂಭವಾಗುತ್ತದೆ. ಈ ದಿನದಂದು ರಘುನಾಥ್ ಜೀ (ವಿಷ್ಣು ದೇವರ ರೂಪ) ದೇವರನ್ನು ಪೂಜಿಸಲಾಗುತ್ತದೆ ಮತ್ತು ಕುಲ್ಲು ಕಣಿವೆಯಲ್ಲಿ ಈ ಹಬ್ಬವು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ.
ಕುಲುವಿನಲ್ಲಿಯ ದಶೇರಾ ಹಬ್ಬದ ಆಚರಣೆಯ ಇತಿಹಾಸವು 16ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನು ಆಳುತ್ತಿದ್ದ ರಾಜಾ ಜಗತ್ ಸಿಂಗ್ ಕಾಲದ್ದಾಗಿದೆ. ದಂತ ಕಥೆಗಳ ಪ್ರಕಾರ ರಾಜಾ ಜಗತ್ ಸಿಂಗ್ ಗೆ ಒಬ್ಬ ಬ್ರಾಹ್ಮಣನಲ್ಲಿ ಸುಂದರವಾದ ಮುತ್ತುಗಳಿರುವ ವಿಷಯ ತಿಳಿಯಿತು ಅದನ್ನು ತನ್ನದಾಗಿಸಿಕೊಳ್ಳಬೇಕೆಂದು ರಾಜನು ಬಯಸಿದನು ಆದರೆ ದುರ್ಗಾದತ್ತ (ಬ್ರಾಹ್ಮಣ) ನಲ್ಲಿದ್ದ ಮುತ್ತುಗಳೆಂದರೆ ಕೇವಲ ಜ್ಞಾನದ ಮುತ್ತುಗಳಾಗಿದ್ದು ಬೇರೇನೂ ಅವನಲ್ಲಿ ಇರಲಿಲ್ಲ ಆದರೂ ರಾಜನು ಅದನ್ನು ತನಗೆ ಕೊಡೆಂದು ದುರ್ಗಾದತ್ತನನ್ನು ಹಿಂಸಿಸುತ್ತಿದ್ದನು.

ಅವನ ಹಿಂಸೆಯನ್ನು ತಾಳಲಾರದೆ ದುರ್ಗಾದತ್ತನು ರಾಜನನ್ನು ಶಪಿಸುತ್ತಾನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರ ನಂತರ ರಾಜನಿಗೆ ತಿನ್ನುವ ಊಟದಲ್ಲಿ ಹುಳವನ್ನೂ ಕುಡಿಯುವ ನೀರಿನಲ್ಲಿ ರಕ್ತ ಕಾಣಲಾರಂಭಿಸುತ್ತದೆ.
ಶಾಪದಿಂದ ಜರ್ಜರಿತನಾದ ರಾಜನಿಗೆ ಒಬ್ಬ ಪುಣ್ಯ ಪುರುಷನು ಪರಿಹಾರವನ್ನು ನೀಡುತ್ತಾನೆ ಅದರಂತೆ ಅಯೋಧ್ಯೆಯಿಂದ ರಾಮ ದೇವರ ಮೂರ್ತಿಯನ್ನು ತರಲು ಸೂಚಿಸುತ್ತಾನೆ ಅದರ ಪ್ರಕಾರ ರಾಜನು ಇನ್ನೊಬ್ಬ ಬ್ರಾಹ್ಮಣನಿಂದ ಅಯೋಧ್ಯೆಯಿಂದ ರಾಮನ ವಿಗ್ರವನ್ನು ತರಲು ಕಳಿಸುತ್ತಾನೆ. ಬ್ರಾಹ್ಮಣನು ರಾಮನ (ರಗುನಾಥ) ಪ್ರತಿಮೆಯನ್ನು ಕದಿಯುವಲ್ಲಿ ಯಶಸ್ವಿಯಾಗುತ್ತಾನೆ ಮತ್ತು ಅದನ್ನು ಕುಲುಗೆ ತರುತ್ತಾನೆ. ರಾಜಾ ಜಗತ್ ಸಿಂಗ್ ಈ ದೇವರನ್ನು ಪ್ರತಿಷ್ಠಾಪಿಸಿ ದೇವರನ್ನು ಪೂಜಿಸುತ್ತಾರೆ.
ಹೀಗೆ ರಾಜನು ಶಾಪದಿಂದ ವಿಮೋಚನೆಗೊಳ್ಳುತ್ತಾನೆ. ಇಂದು, ಇದೇ ದೇವರನ್ನು ದಸರಾ ಸಮಯದಲ್ಲಿ ರಥ ಯಾತ್ರೆ ಮಾಡಲಾಗುತ್ತದೆ.

ಅಂದಿನಿಂದಲೂ ರಘುನಾಥ್ ಜಿ ದೇವರನ್ನು ಕುಲು ಕಣಿವೆಯ ಪ್ರಧಾನ ದೇವತೆ ಎಂದು ಪರಿಗಣಿಸಲಾಗಿದೆ. ಕುಲುವಿನಲ್ಲಿ ದಸರಾ ವಿಜಯದಶಮಿಯಂದು ಆರಂಭವಾಗಿ ಏಳು ದಿನಗಳ ಕಾಲ ನಡೆಯುತ್ತದೆ.
ಈ ಸಮಯದಲ್ಲಿ ಎಲ್ಲರೂ ಕುಲುವಿನತ್ತ ಆಕರ್ಷಿತರಾಗುತ್ತಾರೆ. ಕುಲುವಿನ ಜನರೆಲ್ಲರೂ ಈ ದಿನದಂದು ದಾಲ್ಪುರ್ ಮೈದಾನದಲ್ಲಿ ಒಟ್ಟು ಸೇರಿ ರಘುನಾಥಜೀಯ ಮೆರವಣಿಗೆಯನ್ನು ವೀಕ್ಷಿಸುತ್ತಾರೆ.
ದಸರಾ ಸಮಯವು ಇಲ್ಲಿಯ ಜನರಿಗೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಮಯವೂ ಆಗಿದ್ದು, ಅಂತರಾಷ್ಟ್ರೀಯ ಸಾಂಸ್ಕೃತಿಕ ಹಬ್ಬವೂ ಕೂಡಾ ಇಲ್ಲಿಯ ಕಲಾ ಕೇಂದ್ರದಲ್ಲಿ (ಬಯಲು ರಂಗಮಂದಿರ) ಆಯೋಜಿಸಲಾಗುತ್ತದೆ.
ಈ ಏಳು ದಿನಗಳ ಕಾಲ ನಡೆಯುವ ಹಬ್ಬವು ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತದೆ ಮತ್ತು ಇಲ್ಲಿ ನಡೆಯುವ ಜಾತ್ರೆಯೂ ಸಹ ಚಟುವಟಿಕೆಗಳ ಮಿಶ್ರಣವಾಗಿದ್ದು ಕುಲು ಜನರಿಗೆ ವಿನೋದ ಮತ್ತು ಆತ್ಮೀಯತೆಯನ್ನು ನೀಡುವ ಹಬ್ಬವೆನಿಸಿದೆ.

ಹಬ್ಬದ ಕಾರ್ಯಕ್ರಮಗಳು ಕುಲುವಿನ ರಾಜವಂಶದಿಂದ ಹಡಿಂಬಾ ದೇವಿಯನ್ನು ಸ್ವಾಗತಿಸುವ ಮೂಲಕ ಪ್ರಾರಂಭವಾಗುತ್ತದೆ. ನಂತರ ರಘುನಾಥ್ ಜಿ ದೇವರ ವಿಗ್ರವನ್ನು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯು ಪ್ರಾರಂಭವಾಗುತ್ತದೆ. ಮೆರವಣಿಗೆಯಲ್ಲಿ ಭಾಗವಹಿಸಲು ಅನೇಕ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಪಲ್ಲಕ್ಕಿಗಳಲ್ಲಿ ಸಾಗಿಸಲಾಗುತ್ತದೆ.
ಕುಲುವಿನಲ್ಲಿ ನಡೆಯುವ ದಶೇರಾ ಹಬ್ಬವು ವೈಭವೋಪೇತವಾದ ಹಬ್ಬವಾಗಿದ್ದು ಇದು ಅಸಂಖ್ಯಾತ ಪ್ರವಾಸಿಗರನ್ನೂ ಆಕರ್ಷಿಸುತ್ತದೆ. ಪ್ರಯಾಣಿಕರು ಕುಲು ಮನಾಲಿಗೆ ಅಕ್ಟೋಬರ್ ತಿಂಗಳಲ್ಲಿ ಪ್ರಯಾಣಿಸುವುದಾದಲ್ಲಿ ಈ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆನಂದಿಸಬಹುದಾಗಿದೆ.
ಇದು ಹಿಮಾಚಲ ಪ್ರದೇಶದ ಪ್ರಸಿದ್ಧ ತಾಣವೆನಿಸಿರುವ ಕುಲುವಿನ ಮತ್ತೊಂದು ಆಕರ್ಷಕ ಭಾಗವಾಗಿದೆ!


Click it and Unblock the Notifications

















