krishna janmashtami 2024: ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಆಗಸ್ಟ್ 26 ರಂದು ಬರುತ್ತದೆ. ಜನ್ಮಾಷ್ಟಮಿಯನ್ನು ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣನು ಜನಿಸಿದ ದಿನ. ಆದ್ದರಿಂದ ಇದು ಹಿಂದೂಗಳಲ್ಲಿ, ವಿಶೇಷವಾಗಿ ವೈಷ್ಣವರಲ್ಲಿ ಮಹತ್ವದ ಹಬ್ಬವಾಗಿದೆ. ಈ ಪವಿತ್ರ ದಿನದಂದು ಜನರು ದೇವಸ್ಥಾನಗಳಿಗೆ ತೆರಳಿ ಶ್ರೀಕೃಷ್ಣನನ್ನು ಪೂಜಿಸುತ್ತಾರೆ.
ಅಂದಹಾಗೆ ನೀವು ಈ ಸಂದರ್ಭದಲ್ಲಿ ಪ್ರವಾಸ ಆಯೋಜಿಸಿದರೆ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸುವ ಮತ್ತು ಕೃಷ್ಣನಿಗೆ ಸಮರ್ಪಿತವಾಗಿರುವ ಕೆಲವು ದೇವಾಲಯಗಳಿದ್ದು ಇಲ್ಲಿಗೆ ಭೇಟಿ ನೀಡಿದರೆ ಚೆನ್ನಾಗಿರುತ್ತದೆ. ಈ ದೇವಾಲಯಗಳಲ್ಲಿ ಕೆಲವು ಹಲವಾರು ಶತಮಾನಗಳ ಹಿಂದಿನವು. ಜೊತೆಗೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಕೃಷ್ಣ ದೇವಾಲಯಗಳ ಬಗ್ಗೆ ತಿಳಿದುಕೊಳ್ಳಲು ನಿಮಗೂ ಕುತೂಹಲವಿದ್ದರೆ ಮುಂದೆ ಓದಿ...

ಉಡುಪಿ ಶ್ರೀಕೃಷ್ಣ ಮಠ
ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕೃಷ್ಣ ದೇವಾಲಯಗಳಲ್ಲಿ ಒಂದಾದ ಶ್ರೀ ಕೃಷ್ಣ ಮಠವು ಕೃಷ್ಣನಿಗೆ ಸಮರ್ಪಿತವಾದ ಸುಂದರವಾದ ದೇವಾಲಯವಾಗಿದೆ. ದೇವಾಲಯವು ಉಡುಪಿಯಲ್ಲಿದೆ. ದಾಖಲೆಗಳ ಪ್ರಕಾರ, ಈ ದೇವಾಲಯವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಅವರು ತಮ್ಮ ಇಡೀ ಜೀವನವನ್ನು ದೇವರಿಗೆ ಅರ್ಪಿಸಿದರು ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಕೆಲಸ ಮಾಡಿದರು.
ಇಂದು, ಈ ದೇವಾಲಯವು ಹಿಂದೂ ಭಕ್ತರಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ, ದೇವಾಲಯವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗುತ್ತದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಿನ್ನದ ರಥವೂ ಇದೆ. ನೀವಿಲ್ಲಿಗೆ ಬಂದಾಗ 1000 ವರ್ಷಗಳಿಗಿಂತಲೂ ಹಳೆಯದಾದ, ಸಮೀಪದಲ್ಲಿರುವ ಅನಂತೇಶ್ವರ ದೇವಸ್ಥಾನಕ್ಕೂ ನೀವು ಭೇಟಿ ನೀಡಬಹುದು.

ಬೆಂಗಳೂರಿನ ಇಸ್ಕಾನ್ ದೇವಾಲಯ
ಆಧುನಿಕ ಯುಗದಲ್ಲಿ ನಿರ್ಮಾಣವಾಗಿರುವ ಸುಂದರವಾದ ದೇವಾಲಯಗಳ ಬಗ್ಗೆ ಮಾತನಾಡುವಾಗ, ಇಸ್ಕಾನ್ ದೇವಾಲಯದ ಹೆಸರು ಖಂಡಿತ ಕೇಳಿಬರುತ್ತದೆ. ಸುಂದರವಾದ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಎಲ್ಲಾ ರೀತಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಂಗಳೂರಿನಲ್ಲಿರುವ ಇಸ್ಕಾನ್ ದೇವಾಲಯವು ಕರ್ನಾಟಕದ ಅತ್ಯಂತ ಜನಪ್ರಿಯ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಬೆಂಗಳೂರಿಗೆ ಬರುವ ಪ್ರವಾಸಿಗರು ಇಲ್ಲಿಗೆ ಖಂಡಿತ ಭೇಟಿ ನೀಡುತ್ತಾರೆ. ಈ ದೇವಾಲಯವನ್ನು 1997 ರಲ್ಲಿ ನಿರ್ಮಿಸಲಾಯಿತು.
ಅಂದಿನಿಂದ ಇದು ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಇಡೀ ದೇವಾಲಯವನ್ನು ಮಿನುಗುವ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ಸಮಯದಲ್ಲಿ ದೇವಾಲಯವನ್ನು ನೋಡಲು ಎರಡು ಕಣ್ಣು ಸಾಲದು. ಆದ್ದರಿಂದ ನೀವು ಬೆಂಗಳೂರಿಗೆ ಭೇಟಿ ನೀಡಿದಾಗ ಅಥವಾ ನಗರದ ಸುತ್ತಮುತ್ತ ಇದ್ದರೆ ಮಂತ್ರಮುಗ್ಧಗೊಳಿಸುವ ಇಸ್ಕಾನ್ ದೇವಾಲಯಕ್ಕೆ ಜನ್ಮಾಷ್ಟಮಿಯಂದು ಭೇಟಿ ನೀಡಲೇಬೇಕು.
ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನ
ಪ್ರವಾಸಿಗರು ಹೆಚ್ಚು ಭೇಟಿ ನೀಡುವ ಮತ್ತೊಂದು ಸುಂದರವಾದ ದೇವಾಲಯ ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಾಲಯ. ಇದನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಆದ್ದರಿಂದ ಇದು ಈ ಪ್ರದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕೆಆರ್ಎಸ್ ಜಲಾಶಯದ ದಂಡೆಯ ಮೇಲಿರುವ ಈ ಮೋಡಿಮಾಡುವ ದೇವಾಲಯವು ತನ್ನ ಸಂದರ್ಶಕರಿಗೆ ಹಿತವಾದ ಪರಿಸರವನ್ನು ಒದಗಿಸುತ್ತದೆ.
ನೀವು ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲು ಎದುರುನೋಡುತ್ತಿದ್ದರೆ, ನೀವು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ. ಜೊತೆಗೆ ಹತ್ತಿರದ ಬೃಂದಾವನ ಉದ್ಯಾನವನದ ಸೌಂದರ್ಯವನ್ನು ಅನ್ವೇಷಿಸಬಹುದು ಮತ್ತು ವರ್ಣರಂಜಿತ ವಾತಾವರಣದ ನಡುವೆ ದೈವತ್ವದ ಸಾರವನ್ನು ಅನುಭವಿಸಬಹುದು.
ಮಂಗಳೂರಿನ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ
ಮಂಗಳೂರಿನ ಅತ್ಯಂತ ಜನಪ್ರಿಯ ಕೃಷ್ಣ ದೇವಸ್ಥಾನ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ. ದೇವಸ್ಥಾನವು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸೂಕ್ತವಾದ ಸ್ಥಳವಾಗಿದೆ. ಈ ಹಬ್ಬದ ಸಮಯದಲ್ಲಿ, ದೇವಾಲಯವು ಪ್ರವಾಸಿಗರಿಂದ ತುಂಬಿರುತ್ತದೆ. ಈ ದೇವಾಲಯಕ್ಕೆ ನಗರ ಮತ್ತು ಹತ್ತಿರದ ಪಟ್ಟಣಗಳಿಂದ ಜನರು ಆಗಾಗ್ಗೆ ಭೇಟಿ ನೀಡುತ್ತಾರೆ.

ಹಂಪಿಯ ಬಾಲಕೃಷ್ಣ ದೇವಸ್ಥಾನ
ಬಾಲಕೃಷ್ಣ ದೇವಾಲಯವು 15 ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿತು ಎಂದು ನಂಬಲಾಗಿದೆ. ಇಲ್ಲಿಗೆ ಹೆಚ್ಚಾಗಿ ಇತಿಹಾಸ ಪ್ರೇಮಿಗಳು ಮತ್ತು ಸ್ಥಳೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಕೃಷ್ಣ ಜನ್ಮಾಷ್ಟಮಿಯಂದು ನೀವು ಹಂಪಿಗೂ ಸಹ ಪ್ರವಾಸವನ್ನು ಯೋಜಿಸಬಹುದು. ಇಲ್ಲಿ ಇನ್ನೂ ಸುಂದರವಾದ ಸ್ಥಳಗಳನ್ನು ಅನ್ವೇಷಿಸಬಹುದು. ಒಂದು ಕಾಲದಲ್ಲಿ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದ ಶ್ರೀಕೃಷ್ಣನ ವಿಗ್ರಹವನ್ನು ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನು ಯುದ್ಧದಿಂದ ತಂದನೆಂದು ಹೇಳಲಾಗುತ್ತದೆ. ಪ್ರಸ್ತುತ, ವಿಗ್ರಹವನ್ನು ಚೆನ್ನೈನ ರಾಜ್ಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.


Click it and Unblock the Notifications


















