ನೀವು ಬೆಂಗಳೂರಿನಲ್ಲೇ ವಾಸಿಸುತ್ತಿದ್ದರೆ ಅಥವಾ ಬೆಂಗಳೂರಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ವಿಶೇಷವಾಗಿ ಹನುಮಂತನ ಭಕ್ತರಾಗಿದ್ದರೆ ಈ ಲೇಖನ ನಿಮಗಾಗಿಯೇ. ಏಕೆಂದರೆ ಬಹುತೇಕರಿಗೆ ಬೆಂಗಳೂರಿನಲ್ಲೇ ಇದ್ದರೂ, ಬೆಂಗಳೂರಿಗೆ ಹೊಸಬರಾಗಿದ್ದರೆ ಹನುಮಂತನ ದೇವಸ್ಥಾನಗಳು ಎಲ್ಲಿವೆ ಎಂಬ ಮಾಹಿತಿ ಇರುವುದಿಲ್ಲ. ಆದರೆ ಅನೇಕರಿಗೆ ಗೊತ್ತಿರದ ಸಂಗತಿಯೆಂದರೆ ಬೆಂಗಳೂರಿನಲ್ಲಿ ಭಜರಂಗಬಲಿಯ ಅನೇಕ ದೇವಸ್ಥಾನಗಳಿವೆ. ಇವೆಲ್ಲವೂ ಸಾಕಷ್ಟು ಜನಪ್ರಿಯತೆ ಗಳಿಸಿವೆ. ಮತ್ತೇಕೆ ತಡ..ಹನುಮನ ದರುಶನಕೆ ಕಾಯುತಿರುವವರು ಒಮ್ಮೆ ಇಲ್ಲಿಗೆ ಭೇಟಿ ಕೊಡಿ...
ಹನುಮನನ್ನು ಶಕ್ತಿ, ಧೈರ್ಯ ಮತ್ತು ಭಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಏನಾದರೂ ತೊಂದರೆಗಳಿಗೆ ಸಿಲುಕಿದಾಗ ಶಕ್ತಿ ಕೊಡು ಎಂದು ತಕ್ಷಣ ಹನುಮನನ್ನು ಪ್ರಾರ್ಥಿಸುತ್ತಾರೆ ಭಕ್ತರು. ಭಜರಂಗಬಲಿ ಪ್ರತಿಯೊಬ್ಬರ ತೊಂದರೆಗಳನ್ನು ನಿವಾರಿಸುವುದಲ್ಲದೆ, ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತಾನೆ. ಹಾಗಾದರೆ ಬನ್ನಿ ಬೆಂಗಳೂರಿನಲ್ಲಿರುವ ಶಕ್ತಿಶಾಲಿ ಹನುಮಾನ್ ದೇವಾಲಯಗಳು ಯಾವುವು, ಅವು ಯಾವ ಸ್ಥಳದಲ್ಲಿವೆ ನೋಡೋಣ...

ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ
1972 ರಲ್ಲಿ ನಿರ್ಮಿಸಲಾದ ಈ ದೇವಾಲಯವು ಬೆಂಗಳೂರಿನ ಜಯನಗರದಲ್ಲಿದೆ. ದೇವಾಲಯಕ್ಕೆ ಹೋಗುವ ದಾರಿ ಎತ್ತರದ ಪ್ರದೇಶದಲ್ಲಿದೆ. ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ ಇಲ್ಲಿನ ನೋಟ ನಿಮಗೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಇಲ್ಲಿ ಜನರು ದರ್ಶನದ ಜೊತೆಗೆ ನೈಸರ್ಗಿಕ ಸೌಂದರ್ಯ ಮತ್ತು ಪ್ರಶಾಂತತೆ ಅನುಭವಿಸುತ್ತಾರೆ. ಈ ದೇವಾಲಯವು ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇಲ್ಲಿ ಕೂರಲು ಆಸನ, ಪಾರ್ಕಿಂಗ್ ಮತ್ತು ಇತರ ಸೌಲಭ್ಯಗಳು ಸಹ ಭಕ್ತರಿಗೆ ಲಭ್ಯವಿರುತ್ತವೆ. ದೇವಾಲಯವು 5 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ. ದೇವಾಲಯದ ಪ್ರಮುಖ ಹಬ್ಬವೆಂದರೆ ಹನುಮಾನ್ ಜಯಂತಿ. ಇದು 12 ದಿನಗಳ ಉತ್ಸವವಾಗಿದೆ. ಇದನ್ನು ಡಿಸೆಂಬರ್ನಲ್ಲಿ ಬಹಳಷ್ಟು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸಾವಿರಾರು ಭಕ್ತಾದಿಗಳಿಗೆ ಮಹಾಪ್ರಸಾದವನ್ನು ನೀಡುವುದರೊಂದಿಗೆ ಯಜ್ಞಗಳು, ಅಭಿಷೇಕ ಮತ್ತು ಪೂಜಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.
ದರ್ಶನದ ಸಮಯ
ಬೆಳಗ್ಗೆ: 8:00 ಗಂಟೆಯಿಂದ 11:30
ಸಂಜೆ: 5:00 ಗಂಟೆಯಿಂದ 8:30

ಶ್ರೀ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ
ಅಷ್ಟಭುಜಾಕೃತಿಯಲ್ಲಿ ನಿರ್ಮಿಸಲಾದ ಬೆಂಗಳೂರಿನ ಈ ಹನುಮಾನ್ ದೇವಾಲಯವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪ್ರತಿಷ್ಠಾಪಿಸಿದರು. ದೇವಾಲಯವು ಬೆಂಗಳೂರಿನ ಗಿರಿ ನಗರದಲ್ಲಿದೆ. ಇಲ್ಲಿಗೆ ಬರುವ ಭಕ್ತರು ಹನುಮಂತನನ್ನು ಪೂಜಿಸುವುದರಿಂದ ತಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ನಂಬಿರುವ ಕಾರಣ ಈ ದೇವಾಲಯಕ್ಕೆ ಕಾರ್ಯ ಸಿದ್ಧಿ ಎಂದೂ ಕರೆಯುತ್ತಾರೆ. ಈ ದೇವಸ್ಥಾನಕ್ಕೆ ಬರುವ ಭಕ್ತರು ತೆಂಗಿನಕಾಯಿ ಕಟ್ಟುತ್ತಾರೆ. ತೆಂಗಿನಕಾಯಿ ಕಟ್ಟುವ ಪದ್ಧತಿಯು ಪ್ರಸಿದ್ಧವಾಗಿದೆ. ಏಕೆಂದರೆ ತೆಂಗಿನಕಾಯಿ ಕಟ್ಟುವುದರಿಂದ ಭಕ್ತರ ಸಮಸ್ಯೆಗಳು ಪರಿಹಾರವಾಗುತ್ತವೆ ಮತ್ತು ಅವರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ದೇವಾಲಯದ ವಾಸ್ತುಶಿಲ್ಪ, ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಆಚರಣೆಗಳು ಈ ಪ್ರದೇಶದ ಹೆಗ್ಗುರುತಾಗಿದೆ. ಹನುಮಾನ್ ಜಯಂತಿ ಸಮಯದಲ್ಲಿ ದೇವಾಲಯವನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಜೊತೆಗೆ ವಿಶೇಷ ಆಚರಣೆಗಳು, ಪ್ರಾರ್ಥನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರು ನಗರದ ವಿವಿಧ ಭಾಗಗಳಿಂದ ಸ್ಥಳೀಯ ಬಸ್ಸುಗಳು, ಆಟೋ-ರಿಕ್ಷಾಗಳು ಅಥವಾ ಟ್ಯಾಕ್ಸಿಗಳ ಮೂಲಕ ದೇವಾಲಯವನ್ನು ತಲುಪಬಹುದು.
ದರ್ಶನ ಸಮಯ
ಬೆಳಗ್ಗೆ: 6:00 ಗಂಟೆಯಿಂದ 12:00
ಸಂಜೆ: 5:30 ಗಂಟೆಯಿಂದ 8:30

ವರ್ತೂರು ಮುಖ್ಯರಸ್ತೆಯಲ್ಲಿದೆ ಬೃಹತ್ ಹನುಮಾನ್ ಪ್ರತಿಮೆ
ಬೆಂಗಳೂರಿನ ವರ್ತೂರು ಮುಖ್ಯರಸ್ತೆಯಲ್ಲಿರುವ ಈ ದೇವಾಲಯವು ಸಹ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿ 14 ಅಡಿ ಎತ್ತರದ ಹನುಮಾನ್ ಜಿಯ ಬೃಹತ್ ಪ್ರತಿಮೆಯಿದೆ. ಇದು ಭಕ್ತರ ಪ್ರಮುಖ ಆಕರ್ಷಣೆಯಾಗಿದ್ದು, ದೇವಸ್ಥಾನದ ಪ್ರಾಂಗಣದಲ್ಲಿ ನವಗ್ರಹಗಳನ್ನು ಕಣ್ತುಂಬಿಕೊಳ್ಳಬಹುದು. ಭಕ್ತರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ದೇಗುಲವು ವರ್ತೂರು ಮುಖ್ಯ ರಸ್ತೆಯಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಸಾಕಷ್ಟು ಸುಲಭವಾಗಿದೆ. ಪ್ರತಿ ಮಂಗಳವಾರ ಮತ್ತು ಶನಿವಾರದಂದು ಇಲ್ಲಿ ಹನುಮಾನ್ ಜಿಯ ವಿಶೇಷ ಪೂಜೆ ಮತ್ತು ಆರತಿ ಮಾಡಲಾಗುತ್ತದೆ.
ದರ್ಶನದ ಸಮಯ
ಬೆಳಗ್ಗೆ: 6:00 ಗಂಟೆಯಿಂದ 12:00
ಸಂಜೆ: 5:00 ಗಂಟೆಯಿಂದ 9:00


Click it and Unblock the Notifications

















