ಚಾರ್ಮಡಿ ಘಾಟ್ ದ್ವಿಚಕ್ರ ವಾಹನ ಚಲಾಯಿಸುವುದಕ್ಕಾಗಲಿ, ಸೈಕಲ್ ತುಳಿಯಲಿಕ್ಕಾಗಲಿ ಹೇಳಿ ಮಾಡಿಸಿದಂತಹ ಅದ್ಭುತವಾದ ಘಟ್ಟ ಪ್ರದೇಶ. ಆದರೆ ಜಾಗರೂಕತೆಯಿಂದ ಚಲಿಸಬೇಕಾದುದು ಅಷ್ಟೆ ಅವಶ್ಯಕ. ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ ಈ ಘಟ್ಟ ಪ್ರದೇಶವು ಜೀವ ಕಳೆ ತುಂಬಿಕೊಂಡಿರುತ್ತದೆ. ಅಲ್ಲಲ್ಲಿ ರೂಪಗೊಂಡಿರುವ ಚಿಕ್ಕ ಪುಟ್ಟ ಜಲಪಾತಗಳು ಸಾಗುವಾಗ ನಿಮ್ಮನ್ನು ಆನಂದಗೊಳಿಸಲು ಹಾತೊರೆಯುತ್ತಿರುತ್ತವೆ.
ದೇಶೀಯ ವಿಮಾನು ಸೀಟು ಕಾಯ್ದಿರಿಸುವಿಕೆಯ ಮೇಲೆ ಐಬಿಬೊದಿಂದ 200 ರೂ. ಗಳಷ್ಟು ನೇರ ಕಡಿತ ಪಡೆಯಿರಿ
ಚಿತ್ರಕೃಪೆ: Pradam
ಆದರೆ ಮಳೆಗಾಲದ ಸಂದರ್ಭದಲ್ಲಿ ಪರಿಸ್ಥಿಯ ಅವಲೋಕನ ಮಾಡಿಕೊಂಡು ಇಲ್ಲಿಗೆ ತೆರಳುವುದು ಉತ್ತಮ. ಏಕೆಂದರೆ ಕೆಲವೊಮ್ಮೆ ಅತಿ ಮಳೆಯಿಂದ ಭೂಕುಸಿತ ಉಂಟಾಗಿ ರಸ್ತೆಯು ಮುಚ್ಚಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಈ ಘಟ್ಟ ರಸ್ತೆಯು ಪಶ್ಚಿಮ ಘಟ್ಟದ ಅಸಾಧಾರಣ ಪ್ರಕೃತಿ ಸೌಂದರ್ಯವನ್ನು ಅನಾವರಣಗೊಳಿಸುತ್ತದೆ. ಪ್ರತಿಯೊಂದು ದೃಶ್ಯಾವಳಿಗಳು ಮನದಲ್ಲಿ ಅಚ್ಚೊತ್ತಿದಂತೆ ಮೂಡಿಬಿಡುತ್ತವೆ.
ಚಿತ್ರಕೃಪೆ: Jayaprakash B R
ಮೂಲತಃ ಚಾರ್ಮಡಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಹಳ್ಳಿ ಪ್ರದೇಶವಾಗಿದೆ. ಪಶ್ಚಿಮ ಘಟ್ಟದ ಒಂದು ಭಾಗವಾಗಿರುವ ಈ ಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯನ್ನು ಚಿಕ್ಕಮಗಳೂರಿನೊಂದಿಗೆ ಬೆಸೆಯುವ ವಾಹನ ಚಲಾಯಿಸಬಹುದಾದ ರಸ್ತೆಯನ್ನು ಹೊಂದಿದ್ದು ಈ ರಸ್ತೆಯನ್ನು ಚಾರ್ಮಡಿ ಘಾಟ್ ಎಂದು ಕರೆಯಲಾಗುತ್ತದೆ. ಈ ಘಟ್ಟಕ್ಕೆ ಹತ್ತಿರದಲ್ಲಿರುವ ಸ್ಥಳಗಳು ಚಾರ್ಮಡಿ, ಕೊಟ್ಟಿಗೆಹಾರ ಹಾಗೂ ಬಣಕಲ್.
ವಿಶೇಷ ಲೇಖನ: ಅನನ್ಯ ಆಕರ್ಷಣೆಯ ಮಂಗಳೂರು
ಚಿತ್ರಕೃಪೆ: Abhijit Shylanath
ಅಧಿಕೃತವಾಗಿ ಚಾರ್ಮಡಿ ಘಾಟ್ ರಸ್ತೆಯು ಚಾರ್ಮಡಿ ಹಳ್ಳಿಯಿಂದ (ಉಜಿರೆಯಿಂದ 11 ಕಿ.ಮೀ) ಪ್ರಾರಂಭವಾಗಿ ಕೊಟ್ಟಿಗೆಹಾರ (ಮುಡಿಗೆರೆಯಿಂದ 14 ಕಿ.ಮೀ) ದಲ್ಲಿ ಸಮಾಪ್ತಗೊಳ್ಳುತ್ತದೆ. ಈ ರಸ್ತೆಯು ರಾಜ್ಯದ ಎರಡು ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡವನ್ನು ಒಂದಕ್ಕೊಂದು ಬೆಸೆಯುತ್ತದೆ.
ವಿಶೇಷ ಲೇಖನ : ಚಿಕ್ಕಮಗಳೂರಿನ ಅದ್ಭುತ ಆಕರ್ಷಣೆಗಳು
ಚಿತ್ರಕೃಪೆ: Abhijit Shylanath
ಚಾರ್ಮಡಿ ಘಟ್ಟ ಪ್ರದೇಶವು ಜೈವಿಕವಾಗಿ ಶ್ರೀಮಂತಭರಿತ ಪ್ರದೇಶವಾಗಿದ್ದು ಅನೇಕ ವೈವಿಧ್ಯಮಯ ಜೀವರಾಶಿಗಳಿಗೆ ಆಶ್ರಯ ತಾಣವಾಗಿದೆ. ಅಷ್ಟೆ ಏಕೆ ಕೆಲವು ಅಪರೂಪದ ಸಸ್ಯಗಳು, ಔಷಧೀಯ ಗುಣವುಳ್ಳ ಸಸ್ಯಗಳನ್ನೂ ಸಹ ಇಲ್ಲಿ ಕಾಣಬಹುದಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದು ಸಂಪತ್ತಿನ ಖಜಾನೆಯಾಗಿದೆ.
ವಿಶೇಷ ಲೇಖನ : ಪಶ್ಚಿಮ ಘಟ್ಟದ ಅನನ್ಯ ಜೀವ ಸಂಕುಲ
ಚಿತ್ರಕೃಪೆ: Abhijit Shylanath
ಚಾರ್ಮಡಿಯು ಎಲ್ಲಾ ಋತುಗಳಲ್ಲೂ ಆಕರ್ಶಿಸುತ್ತದಾದರೂ ಪ್ರಮುಖವಾಗಿ ಮಳೆಗಾಲದ ಸಂದರ್ಭದಲ್ಲಿ ಪ್ರಕೃತಿ ಮಾತೆಯು ಜೀವ ಪಡೆದು ನರ್ತಿಸುತ್ತಿದ್ದಾಳೊ ಏನೊ ಎಂಬಂತೆ ಕಂಗೊಳಿಸುತ್ತದೆ. ರಸ್ತೆಯ ಬದಿಗಳಲ್ಲಿ ರೂಪಗೊಳ್ಳುವ ತಾತ್ಕಾಲಿಕ ಜಲಪಾತಗಳು ಚುಂಬಕದಂತೆ ಸೆಳೆಯುತ್ತವೆ. ಘಟ್ಟದ ತೊಪ್ಪಲಿನಿಂದ ಕಾಡಿನ ಮಧ್ಯದಲ್ಲಿ ಗೋಚರಿಸುವ ಹಾಲಿನಂತಹ ಜಲಧಾರೆ ಮೂಕವಿಸ್ಮಿತರನ್ನಾಗಿಸಿ ಬಿಡುತ್ತದೆ.
ಚಾರ್ಮಡಿ ಘಾಟ್ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಚಿಕ್ಕಮಗಳೂರುಗಳಿಂದ ಕ್ರಮವಾಗಿ 280, 205, 95 ಹಾಗೂ 60 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸುಗಳು ದೊರೆಯುತ್ತವೆ. ಬೆಂಗಳೂರಿನಿಂದ ನೆಲೆಮಂಗಲ, ಹಾಸನ, ಬೇಲೂರು, ಮುಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿಯೂ, ಮೈಸೂರಿನಿಂದ ಹೊಳೆನರಸೀಪುರ, ಹಸನ, ಮುಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿಯೂ, ಹಾಗೂ ಮಂಗಳೂರಿನಿಂದ ಬಂಟವಾಳ, ಗುರುವಾಯನಕೆರೆ, ಬೆಳ್ತಂಗಡಿ, ಚಾರ್ಮಡಿ ಮಾರ್ಗವಾಗಿ ಈ ಘಾಟ್ ಅನ್ನು ತಲುಪಬಹುದು.